ನವದೆಹಲಿ: ಪೇಟಿಎಂ ಷೇರುಗಳ ಮೌಲ್ಯ ಇಳಿಕೆ ಕಾಣಲು ಮಾರುಕಟ್ಟೆಯಲ್ಲಿನ ಅಸ್ಥಿರ ಸ್ಥಿತಿಯೇ ಕಾರಣ ಎಂದು ಸಿಇಒ ವಿಜಯ್ ಶೇಖರ ಶರ್ಮ ಬುಧವಾರ ಹೇಳಿದ್ದಾರೆ.
ಮುಂದಿನ ಒಂದೂವರೆಗೆ ವರ್ಷದಲ್ಲಿ ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ನಂತರದ ಆದಾಯವು ವೆಚ್ಚಕ್ಕೆ ಸರಿಸಮ ಆಗಲಿದೆ ಎಂದು ಅವರು ಅಂದಾಜು ಮಾಡಿದ್ದಾರೆ.
ಬಹುತೇಕ ವಿಶ್ಲೇಷಕರ ಅಂದಾಜನ್ನು ಮೀರಿ, ಮುಂದಿನ ಆರು ತ್ರೈಮಾಸಿಕಗಳಲ್ಲಿ ಈ ಹಂತ ತಲುಪಲಾಗುವುದು. ಬೆಳವಣಿಗೆಗೆ ಸಂಬಂಧಿಸಿದ ಯೋಜನೆಗಳಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ಇದನ್ನು ಸಾಧಿಸಲಾಗುವುದು ಎಂದು ಹೇಳಿದ್ದಾರೆ.
ಯಶಸ್ವಿ, ಲಾಭದಾಯಕ ಕಂಪನಿಯನ್ನು ನಿರ್ಮಿಸಲು ಮತ್ತು ಷೇರುದಾರರಿಗೆ ದೀರ್ಘಾವಧಿಯಲ್ಲಿ ಸಂಪತ್ತು ತಂದುಕೊಡಲು ಪೇಟಿಎಂನ ಇಡೀ ತಂಡವು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.