ಬಾದಾಮಿ: ‘2018ರ ಬಾದಾಮಿ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ನಾನೇ. ಮುಂದೆ ಯಾವುದೇ ಬದಲಾವಣೆಯಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಪ್ರಚಾರ ಕೈಗೊಳ್ಳುವೆ’ ಎಂದು ಡಾ.ದೇವರಾಜ ಪಾಟೀಲ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಸರ್ವೇಯಲ್ಲಿ ಎಐಸಿಸಿಗೆ ನನ್ನ ಹೆಸರು ಹೋಗಿದೆ. ಪಕ್ಷದ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆಯ ಮೇರೆಗೆ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕಿದೆ. ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ತಪ್ಪಿಸಬೇಕು ಎಂಬ ಉದ್ದೇಶ ನನಗೆ ಇಲ್ಲ. ಎಐಸಿಸಿ ಮುಖಂಡರು ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.
‘ಪಕ್ಷದ ಟಿಕೆಟ್ ಸಿಗದಿದ್ದಾಗ ಬೆಂಬಲಿಗರ ಆಕ್ರೋಶ ಸಹಜ. ನಾನೂ ಏನನ್ನು ತಪ್ಪು ಭಾವಿಸುವುದಿಲ್ಲ. ಬಿ.ಬಿ. ಚಿಮ್ಮನಕಟ್ಟಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಪಕ್ಷದಲ್ಲಿ ಅವರು ಹಿರಿಯರು. ಅವರಿಗೆ ಕೈಮುಗಿದು ಕಾಲಿಗೆ ಬಿದ್ದು ಮನವೊಲಿಸಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಕರೆದುಕೊಂಡು ಬರುತ್ತೇನೆ. ಬಾದಾಮಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮತ್ತೆ ಗೆಲ್ಲುವಂತೆ ಕಾರ್ಯಕರ್ತರು ಮಾಡುತ್ತಾರೆ’ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಹೇಳಿದರು.
‘ಕೆಲವರು ನಾನು ಬೇರೆ ತಾಲ್ಲೂಕಿನವರು ಎಂದು ಹೇಳುವರು. ಆದರೆ ಜಿಲ್ಲೆಯ ಕೆಲವು ಶಾಸಕರು ಬೇರೆ ಕ್ಷೇತ್ರದವರು ಇದ್ದಾರೆ. ಅವರು ಸ್ಪರ್ಧಿಸಿ ಗೆದ್ದಿಲ್ಲವೇ’ ಎಂದು ಉಮಾಶ್ರೀ ಮತ್ತು ಎಚ್.ವೈ. ಮೇಟಿ ಅವರ ಕುರಿತು ಹೇಳಿದರು. 2013 ರ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿತ್ತು. ಆವಾಗ ಚಿಮ್ಮನಕಟ್ಟಿ ಅವರಿಗೆ ಬಿಟ್ಟುಕೊಟ್ಟಿದ್ದೆ. ಪಕ್ಷದ ಪ್ರಚಾರಕ್ಕಾಗಿ ಎಸ್.ಡಿ. ಜೋಗಿನ, ಎಸ್.ವೈ. ಕುಳಗೇರಿ, ಮಹೇಶ ಹೊಸಗೌಡ್ರ, ಪಿ.ಆರ್. ಗೌಡರ , ಐ.ಎಚ್. ಹುನಗುಂಡಿ , ಪ್ರಕಾಶ ನಾಯ್ಕರ್ ಪಕ್ಷದ ಎಲ್ಲ ಮುಖಂಡರನ್ನು ಸೇರಿಸುತ್ತೇವೆ ಎಂದರು.