ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಹೊಸ ಗವರ್ನರ್ ಆಗಿ ನೇಮಕಗೊಂಡಿರುವ ಶಕ್ತಿಕಾಂತ್ ದಾಸ್ ಅವರು, 2016ರಲ್ಲಿ ನಡೆದಿದ್ದ ಗರಿಷ್ಠ ಮುಖಬೆಲೆಯ ನೋಟು ರದ್ದು ನಿರ್ಧಾರ ಮತ್ತು ನಂತರ ಉದ್ಭವಿಸಿದ್ದ ನಗದು ಬಿಕ್ಕಟ್ಟು ಪರಿಹರಿಸುವ ಗುರುತರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.
ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನ ಇತಿಹಾಸ ಪದವೀಧರರಾಗಿರುವ ಇವರು 1980ರ ತಮಿಳುನಾಡು ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವರನ್ನು ಹಣಕಾಸು ಸಚಿವಾಲಯಕ್ಕೆ ಕರೆತಂದು ರೆವಿನ್ಯೂ ಇಲಾಖೆಯ ಹೊಣೆ ಒಪ್ಪಿಸಲಾಗಿತ್ತು.
ಆನಂತರ ಆರ್ಥಿಕ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಲಾಗಿತ್ತು. ಹಣಕಾಸು ನೀತಿ ಮತ್ತು ಆರ್ಬಿಐಗೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ರಘುರಾಂ ರಾಜನ್ ಅವರ ಸೇವೆಯನ್ನು ಎರಡನೆ ಬಾರಿಗೆ ವಿಸ್ತರಣೆ ಮಾಡದ ಸರ್ಕಾರ, ಆರ್ಥಿಕ ತಜ್ಞ ಉರ್ಜಿತ್ ಪಟೇಲ್ ಅವರನ್ನು ಗವರ್ನರ್ ಹುದ್ದೆಗೆ ನೇಮಿಸಿತ್ತು.
ಈಗ ಈ ಹುದ್ದೆ ಸರ್ಕಾರದ ನಿವೃತ್ತ ಅಧಿಕಾರಿಯ ಸುಪರ್ದಿಗೆ ಹೋಗಿದೆ. ಸರ್ಕಾರಿ ಅಧಿಕಾರಿಗಳು ಬಹಳ ವರ್ಷಗಳ ಕಾಲ ಈ ಹುದ್ದೆ ನಿಭಾಯಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿದ್ದ ಡಿ.ಸುಬ್ಬರಾವ್ ಅವರು 2013ರಲ್ಲಿ ಗವರ್ನರ್ ಹುದ್ದೆಯಿಂದ ನಿವೃತ್ತ ರಾಗಿದ್ದರು.
ಈ ನೇಮಕದಿಂದ ಸರ್ಕಾರ ಮತ್ತು ಆರ್ಬಿಐ ನಡುವಣ ಸಂಬಂಧ ಸುಧಾರಣೆಯಾಗಲಿದೆ. ಇದರಿಂದ ಷೇರುಪೇಟೆಯಲ್ಲಿ ಉತ್ಸಾಹ ಗರಿಗೆದರಲಿದೆ ಎಂಬುದು ಹೂಡಿಕೆದಾರರ ನಿರೀಕ್ಷೆಯಾಗಿದೆ.