ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆಲ ಬ್ಯಾಂಕ್ಗಳಿಗೆ ವಿಧಿಸಿರುವ ನಿರ್ಬಂಧಗಳು ಮತ್ತು ‘ಎಂಎಸ್ಎಂಇ’ ಸಾಲ ನೀಡಿಕೆಗೆ ವಿಧಿಸಿರುವ ಕಠಿಣ ನಿಯಮಗಳ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್
ಮತ್ತು ಕೇಂದ್ರ ಸರ್ಕಾರ ಮುಂದಾಗಿವೆ.
ನಷ್ಟಪೀಡಿತ 11 ಬ್ಯಾಂಕ್ಗಳ ವಿರುದ್ಧ ವಿಧಿಸಿರುವ ನಿರ್ಬಂಧಿತ ಕಠಿಣ ಕ್ರಮಗಳನ್ನು ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಂಎಸ್ಎಂಇ) ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಲು ಆರ್ಬಿಐ ಉದ್ದೇಶಿಸಿದೆ.
ಇದೇ 19ರಂದು ನಡೆಯಲಿರುವ ಕೇಂದ್ರೀಯ ಬ್ಯಾಂಕ್ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ, ಮುಂದಿನ ಕೆಲ ವಾರಗಳಲ್ಲಿ ಆರ್ಬಿಐ ಮತ್ತು ಕೇಂದ್ರ ಸರ್ಕಾರ ತಮ್ಮ ಧೋರಣೆ ಬದಲಿಸಿಕೊಳ್ಳುವ ಸಾಧ್ಯತೆ ಇದೆ.
ಆರ್ಬಿಐನ ಬದಲಾಗಲಿರುವ ಧೋರಣೆಯಿಂದಾಗಿ ಕೆಲವು ಬ್ಯಾಂಕ್ಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಕಠಿಣ ನಿರ್ಬಂಧ ಕ್ರಮಗಳಿಂದ ಹೊರ ಬರಲಿವೆ. ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ಹೆಚ್ಚಳ ಸೇರಿದಂತೆ ಆರ್ಬಿಐನ ಹಲವು ನಿಯಂತ್ರಣ ಕ್ರಮಗಳಿಗೆ ವ್ಯತಿರಿಕ್ತವಾಗಿ ನಿರ್ಧಾರ ಕೈಗೊಂಡ ಬ್ಯಾಂಕ್ಗಳಿಗೆ ಆರ್ಬಿಐ ಕಡಿವಾಣ ವಿಧಿಸಲು ಮುಂದಾಗಿತ್ತು.
‘ಎಂಎಸ್ಎಂಇ’ಗಳಿಗೆ ಸಾಲ ನೀಡಿಕೆ ಸರಳಗೊಳಿಸಲು, ನಗದು ಬಿಕ್ಕಟ್ಟು ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಸಿ) ವಿಶೇಷ ನಗದು ಹಂಚಿಕೆಮಾಡಲು ಆರ್ಬಿಐ ಸಮ್ಮತಿಸಿದೆ ಎನ್ನಲಾಗಿದೆ.
12 ಕೋಟಿ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿರುವ, ದೇಶಿ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ‘ಎಂಎಸ್ಎಂಇ’ ವಲಯವು ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿಯಿಂದಾಗಿ ತೀವ್ರವಾಗಿ ಬಾಧಿತವಾಗಿದೆ.
‘ಸಾಲದ ತೀವ್ರ ಅಗತ್ಯ ಇರುವ ವಲಯಗಳಿಗೆ ಹಣಕಾಸಿನ ನೆರವು ಹೆಚ್ಚಿಸಲು ಸಾಧ್ಯವಿರುವ ಬ್ಯಾಂಕಿಂಗ್ ವಲಯವೇ ಹೆಚ್ಚು ಬಲಿಷ್ಠವಾಗಿ
ರುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.
ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಕುರಿತು ತನ್ನ ನಿರ್ಧಾರಗಳನ್ನು ಪಾಲಿಸುವಂತೆ ಮಾಡಲು ಕೇಂದ್ರೀಯ ಬ್ಯಾಂಕ್ ವಿರುದ್ಧ ‘ಆರ್ಬಿಐ ಕಾಯ್ದೆ 1934’ರ ಸೆಕ್ಷನ್ 7 ಬಳಸುವುದಕ್ಕೆ ಹಣಕಾಸು ಸಚಿವಾಲಯವು ಚರ್ಚೆಗೆ ಆಸ್ಪದ ನೀಡುತ್ತಿದ್ದಂತೆ ಬ್ಯಾಂಕ್ನ ಸ್ವಾಯತ್ತೆ ಕುರಿತು ವಿವಾದ ತೀವ್ರಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.