ಮುಂಬೈ: ಮಸ್ಕಿಯ ‘ಶ್ರೀ ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕ್’ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದೆ. ಈ ಬ್ಯಾಂಕ್ನಲ್ಲಿ ಹಣ ಠೇವಣಿ ಇರಿಸಿದವರು ಹಿಂದಕ್ಕೆ ಪಡೆಯಲು ಅವಕಾಶ ಇಲ್ಲ.
ಬ್ಯಾಂಕ್ನ ಹಣಕಾಸು ಸ್ಥಿತಿ ಹದಗೆಡುತ್ತಿರುವ ಕಾರಣ ಆರ್ಬಿಐ ಈ ತೀರ್ಮಾನ ಕೈಗೊಂಡಿದೆ. ಬ್ಯಾಂಕ್ನ ಶೇಕಡ 99.53ರಷ್ಟು ಗ್ರಾಹಕರು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡಿಐಸಿಜಿಸಿ) ನೀಡುವ ವಿಮಾ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದು ಆರ್ಬಿಐ ಹೇಳಿದೆ. ಅಂದರೆ, ಇಷ್ಟು ಪ್ರಮಾಣದ ಗ್ರಾಹಕರಿಗೆ ₹ 5 ಲಕ್ಷದವರೆಗಿನ ಠೇವಣಿಗೆ ವಿಮೆಯ ರಕ್ಷೆ ಇರಲಿದೆ.
‘ಬ್ಯಾಂಕ್ನಲ್ಲಿ ಇರುವ ಉಳಿತಾಯ ಖಾತೆ, ಚಾಲ್ತಿ ಖಾತೆ ಅಥವಾ ಇತರ ಯಾವುದೇ ಖಾತೆಯಿಂದ ಹಣ ಹಿಂದಕ್ಕೆ ಪಡೆಯಲು ಅವಕಾಶ ಇಲ್ಲ. ಆದರೆ, ಠೇವಣಿಯ ಮೊತ್ತವನ್ನು ಸಾಲದ ಜೊತೆ ಸರಿದೂಗಿಸಿಕೊಳ್ಳಲು ಅವಕಾಶ ಇದೆ’ ಎಂದು ಆರ್ಬಿಐ ತಿಳಿಸಿದೆ.
ಆರ್ಬಿಐ ಅನುಮತಿ ಇಲ್ಲದೆ ಈ ಬ್ಯಾಂಕ್ ಹೊಸದಾಗಿ ಸಾಲ ಕೊಡುವಂತಿಲ್ಲ, ಹೊಸದಾಗಿ ಹೂಡಿಕೆ ಮಾಡುವಂತಿಲ್ಲ, ಹೊಸದಾಗಿ ಠೇವಣಿ ಸ್ವೀಕರಿಸುವಂತೆಯೂ ಇಲ್ಲ.