ಮುಂಬೈ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳನ್ನು (ಡಿಸಿಸಿಬಿ) ರಾಜ್ಯ ಸಹಕಾರಿ ಬ್ಯಾಂಕ್ಗಳ (ಎಸ್ಟಿಸಿಬಿ) ಜೊತೆ ವಿಲೀನ ಮಾಡುವ ಪ್ರಸ್ತಾವಗಳನ್ನು ಕೆಲವು ಷರತ್ತುಗಳಿಗೆ ಅನುಗುಣವಾಗಿ ಪರಿಗಣಿಸುವುದಾಗಿ ಆರ್ಬಿಐ ಸೋಮವಾರ ಹೇಳಿದೆ. ವಿಲೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬರಬೇಕು ಎಂಬುದು ಷರತ್ತುಗಳ ಪೈಕಿ ಒಂದು.
ಎಸ್ಟಿಸಿಬಿ ಮತ್ತು ಡಿಸಿಸಿಬಿ ವಿಲೀನಕ್ಕೆ ಆರ್ಬಿಐ ಅನುಮೋದನೆ ಬೇಕು. ವಿಲೀನಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಕೆಲವು ರಾಜ್ಯ ಸರ್ಕಾರಗಳು ಆರ್ಬಿಐ ಬಾಗಿಲು ತಟ್ಟಿದ್ದವು. ಈಗ ಆರ್ಬಿಐ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಿದ್ಧಪಡಿಸಿದೆ.
ವಿಲೀನಗೊಂಡ ನಂತರ ಬ್ಯಾಂಕ್ಗೆ ಹೆಚ್ಚುವರಿ ಬಂಡವಾಳ ನೀಡಲು ಕಾರ್ಯತಂತ್ರ, ಅಗತ್ಯವಿದ್ದರೆ ಹಣಕಾಸಿನ ನೆರವು ನೀಡುವ ಭರವಸೆ, ಲಾಭ ಆಗುವ ರೀತಿಯಲ್ಲಿ ವಹಿವಾಟು ನಡೆಸುವ ಯೋಜನೆ, ಬ್ಯಾಂಕ್ನ ಆಡಳಿತದ ಕುರಿತು ವಿವರಣೆಯನ್ನೂ ಪ್ರಸ್ತಾವದ ಜೊತೆಯಲ್ಲಿ ಆರ್ಬಿಐಗೆ ನೀಡಬೇಕಾಗುತ್ತದೆ.
ರಾಜ್ಯ ಸರ್ಕಾರ ಸಿದ್ಧಪಡಿಸುವ ಪ್ರಸ್ತಾವನೆಯನ್ನು ನಬಾರ್ಡ್ ಪರಿಶೀಲಿಸಬೇಕು, ಆ ಪ್ರಸ್ತಾವನೆಯನ್ನು ಅನುಮೋದಿಸಬೇಕು. ವಿಲೀನಕ್ಕೆ ಅಗತ್ಯ ಸಂಖ್ಯೆಯ ಷೇರುದಾರರ ಒಪ್ಪಿಗೆ ಸಿಗಬೇಕು. ‘ವಿಲೀನದ ಪ್ರಸ್ತಾವನೆಯನ್ನು ಆರ್ಬಿಐ, ನಬಾರ್ಡ್ ಜೊತೆ ಸಮಾಲೋಚಿಸಿ ಪರಿಶೀಲಿಸುತ್ತದೆ’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.