ಮುಂಬೈ: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್ಎಂಇ) ವಲಯದ ದೀರ್ಘಾವಧಿ ಸುಸ್ಥಿರತೆಗೆ ಪರಿಹಾರ ಸೂಚಿಸಲು ಪರಿಣತರ ಸಮಿತಿ ರಚಿಸಲಾಗಿದೆ.
ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಯು. ಕೆ. ಸಿನ್ಹಾ ನೇತೃತ್ವದಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ‘ಎಂಎಸ್ಎಂಇ’ ವಲಯದ ₹ 25 ಕೋಟಿವರೆಗಿನ ಸಾಲವನ್ನು ಒಂದು ಬಾರಿ ಪುನರ್ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಆರ್ಬಿಐ ಈ ಸಮಿತಿ ರಚಿಸಿದೆ.
ಎಂಟು ಮಂದಿ ಸದಸ್ಯರ ಈ ಸಮಿತಿಯು, ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣಗಳನ್ನೂ ಪರಿಶೀಲಿಸಲಿದೆ. ಈ ವರ್ಷದ ಜೂನ್ ಅಂತ್ಯದ ವೇಳೆಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ.
ವಿಶ್ವದಾದ್ಯಂತ ಜಾರಿಯಲ್ಲಿ ಇರುವ ಅತ್ಯುತ್ತಮ ಕ್ರಮಗಳು, ಭಾರತದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನೂ ಸಮಿತಿಯು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.