ಮುಂಬೈ: ‘ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗುವುದು’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
‘ಕಠಿಣ ಸ್ವರೂಪದ ‘ಫೆಬ್ರುವರಿ 12ರ ಸುತ್ತೋಲೆ’ಯನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್ನ ತೀರ್ಪಿನಿಂದಾಗಿ ಆರ್ಬಿಐನ ಅಧಿಕಾರಕ್ಕೆ ಧಕ್ಕೆ ಒದಗಿಲ್ಲ. ಅಧಿಕಾರವನ್ನು ನಿರ್ದಿಷ್ಟ ಸ್ವರೂಪದಲ್ಲಿ ಬಳಸಿಲ್ಲ ಎನ್ನುವುದು ಕೋರ್ಟ್ನ ವಿಶ್ಲೇಷಣೆಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಹೊಸ ಸುತ್ತೋಲೆ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.
ರಿಯಲ್ ಎಸ್ಟೇಟ್ ವಲಯದ ಒತ್ತಾಯ: ಬಡ್ಡಿ ದರ ಕಡಿತ ನಿರ್ಧಾರವು ಮನೆಗಳ ಮಾರಾಟ ಹೆಚ್ಚಿಸಲಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ಉತ್ಸಾಹ ಮೂಡಿಸಲಿದೆ. ಬ್ಯಾಂಕ್ಗಳು ಬಡ್ಡಿ ದರ ಕಡಿತದ ಲಾಭವನ್ನು ಕಟ್ಟಡ ನಿರ್ಮಾಣಗಾರರು ಮತ್ತು ಖರೀದಿದಾರರಿಗೆ ವರ್ಗಾಯಿಸಬೇಕು ಎಂದು ರಿಯಲ್ ಎಸ್ಟೇಟ್ ವಲಯವು ಒತ್ತಾಯಿಸಿದೆ.
‘ಬಡ್ಡಿ ದರ ಕಡಿತ ನಿರ್ಧಾರವು ರಿಯಲ್ ಎಸ್ಟೇಟ್ ವಲಯದ ಪಾಲಿಗೆ ಅತಿದೊಡ್ಡ ಸಕಾರಾತ್ಮಕ ಸಂಕೇತವಾಗಿದೆ’ ಎಂದು ‘ಕ್ರೆಡಾಯ್’ ಅಧ್ಯಕ್ಷ ಸತೀಶ್ ಮಗರ್ ಅವರು ಬಣ್ಣಿಸಿದ್ದಾರೆ.