ನವದೆಹಲಿ: ‘ಕೋವಿಡ್–19 ಪ್ರಕರಣಗಳು ಈಚೆಗೆ ಮತ್ತೆ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಯ ವಿಚಾರವಾಗಿ ಅನಿಶ್ಚಿತ ಸ್ಥಿತಿ ನಿರ್ಮಿಸಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
‘ಅಲ್ಲಲ್ಲಿ ಜಾರಿಯಾಗುತ್ತಿರುವ ಲಾಕ್ಡೌನ್ ಕ್ರಮಗಳು ಬೇಡಿಕೆಯಲ್ಲಿ ಈಚೆಗೆ ಕಂಡುಬಂದಿರುವ ಹೆಚ್ಚಳದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಪರಿಸ್ಥಿತಿ ಮಾಮೂಲಿನಂತಾಗುವುದು ತಡವಾಗಬಹುದು’ ಎಂದು ಕೂಡ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಆರ್ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ದಾಸ್ ಅವರು ಈ ಮಾತು ಹೇಳಿದರು. ಆದರೆ, 2021–22ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 10.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಆರ್ಬಿಐ ಪುನರುಚ್ಚರಿಸಿದೆ.
ಆರ್ಥಿಕ ಪುನಶ್ಚೇತನಕ್ಕೆ ಬೆಂಬಲವಾಗಿ ಅಗತ್ಯವಿರುವ ಯಾವುದೇ ಕ್ರಮ ತೆಗೆದುಕೊಳ್ಳುವುದಾಗಿ ಕೂಡ ಆರ್ಬಿಐ ಹೇಳಿದೆ. ಎಂಪಿಸಿ ಸಭೆಯು ರೆಪೊ ದರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದಿರುವ ತೀರ್ಮಾನ ಕೈಗೊಂಡಿದೆ.