ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಶಾಂತಿಯುತ ಮತದಾನ

ಹಣವಾಳ ಗ್ರಾಮದಲ್ಲಿ ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Last Updated 13 ಮೇ 2018, 9:57 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ಶನಿವಾರ ಶಾಂತಿಯುತವಾಗಿ ಮತದಾನ ನಡೆಯಿತು.

ತಿಪ್ಪನಾಳ, ಸೂಳೇಕಲ್, ಮರಕುಂಬಿ, ಹಣವಾಳ, ಸಿಂಗನಾಳ, ಜೀರಾಳ, ಡಂಕನಕಲ್, ಹಿರೇಖೇಡ, ಕಲಕೇರಿ, ಹುಲಿಹೈದರ, ಚಿಕ್ಕ ಮಾದಿನಾಳ, ನವಲಿ, ಗೌರಿಪುರ ಗ್ರಾಮಗಳಲ್ಲಿ ಮತದಾನವಾಯಿತು.

ಪ್ರತಿಯೊಂದು ಮತಗಟ್ಟೆ ಕೇಂದ್ರದಲ್ಲೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಬೂತ್ ಮಟ್ಟದ ಅಧಿಕಾರಿಗಳು ಹಾಜರಿದ್ದು ಅಂಗವಿಕಲರಿಗೆ ಮತ ಚಲಾಯಿಸಲು ನೆರವಾದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ ಅವರು ಮಡ್ಡೇರವಾಡಿ ಶಾಲೆ, ಉಪಾಧ್ಯಕ್ಷ ಹುಲಗಪ್ಪ ವಾಲೇಕಾರ ಅವರು ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಗೋಧಾಮಿನಲ್ಲಿ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮವ್ವ ಅವರು ನೀರ್ಲೂಟಿಯಲ್ಲಿ ಜಿ.ಪಂ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ಹಾಗೂ ತಾ.ಪಂ ಉಪಾಧ್ಯಕ್ಷ ಕನಕಪ್ಪ ತಳವಾರ ಅವರು ಹುಲಿಹೈದರದಲ್ಲಿ ಮತ ಚಲಾಯಿಸಿದರು.

ಹಣವಾಳ ಗ್ರಾಮದ ಶಾಲೆಯ ಮತದಾನ ಕೇಂದ್ರದ ಮುಂದೆ ಮತಗಟ್ಟೆ ಆವರಣದೊಳಗೆ ಮತಯಾಚಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು,

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್‌ ಶೆಟ್ಟಿ ಅವರು ಪಟ್ಟಣದ ವಿವಿಧ ಬೂತ್‌ಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸಿದರು. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ಎಲ್ಲಿಯೂ ಗಲಾಟೆ ನಡೆದಿಲ್ಲ ಎಂದು ಅವರು ತಿಳಿಸಿದರು.

ಪಟ್ಟಣದ ದ್ಯಾಮವ್ವನಗುಡಿ ಶಾಲೆಯಲ್ಲಿ ತೆರೆದ ಪಿಂಕ್‌ ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಪಿಂಕ್‌ ಕಲರ್‌ ಸೀರೆ, ರವಿಕೆ ಧರಿಸಿ ಕರ್ತವ್ಯ ನಿರ್ವಹಿಸಿದರು. ಪಿಎಸ್‌ಐ ಜಯಪ್ರಕಾಶ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು.

ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಶಿವರಾಜ ತಂಗಡಗಿ, ಬಿಜೆಪಿ ಅಭ್ಯರ್ಥಿ ಬಸವರಾಜ ಧಡೇಸೂಗುರು ಅವರು ವಿವಿಧ ಮತಗಟ್ಟೆಗಳಿಗೆ ತೆರಳಿ ಮಾಹಿತಿ ಪಡೆದರು.  ಕಲಕೇರಿಯಲ್ಲಿ ಮಹಿಳೆಯೊಬ್ಬರು ಆರು ತಿಂಗಳ ಮಗುವಿನ ಜೊತೆ ಬಂದು ಅರ್ಧ ಗಂಟೆ ಬಂದು ಮತ ಚಲಾಯಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಛಾಯಾದೇವಿ ಅವರ ಎಡಗೈ ಮುರಿದಿದ್ದರೂ ಬ್ಯಾಡೆಂಜ್ ಹಾಕಿಕೊಂಡೇ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT