ಮುಂಬೈ : ರಾಜ್ಯಗಳು ನೀಡುವ ಉಚಿತ ಕೊಡುಗೆಗಳಿಗೆ ವಿನಿಯೋಗ ಆಗುವ ಮೊತ್ತವನ್ನು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್ಡಿಪಿ) ಶೇಕಡ 1ಕ್ಕೆ ಮಿತಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸಲಹೆ ಮಾಡಿದೆ.
ರಾಜ್ಯದ ಜಿಡಿಪಿಯ ಶೇ 1ರಷ್ಟು ಅಲ್ಲದಿದ್ದರೆ, ರಾಜ್ಯದ ತೆರಿಗೆ ವರಮಾನದ ಶೇ 1ರಷ್ಟಕ್ಕೆ ಉಚಿತ ಕೊಡುಗೆಗಳ ಮೊತ್ತವನ್ನು ಮಿತಿಗೊಳಿಸಬೇಕು ಎಂದು ಅದು ಸಲಹೆ ಇತ್ತಿದೆ. ಎಸ್ಬಿಐ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಅವರು ವರದಿಯನ್ನು ಸಿದ್ಧಪಡಿಸಿದ್ದಾರೆ.
ಜಾರ್ಖಂಡ್, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳು ಪ್ರತಿ ವರ್ಷ ಪಿಂಚಣಿಗಾಗಿ ವ್ಯಯಿಸುವ ಮೊತ್ತವು ಕ್ರಮವಾಗಿ ಅವುಗಳ ತೆರಿಗೆ ವರಮಾನದ ಶೇ 217, ಶೇ 190 ಮತ್ತು ಶೇ 207ರಷ್ಟು ಇದೆ. ಇದರ ಮೊತ್ತವು ₹ 3 ಲಕ್ಷ ಕೋಟಿ ಎಂದು ವರದಿಯಲ್ಲಿ ಹೇಳಲಾಗಿದೆ.
ಅತಿಹೆಚ್ಚು ಸಾಲ ಮಾಡಿರುವ ರಾಜ್ಯಗಳ ಸಾಲಿನಲ್ಲಿ ಇರುವ ಆಂಧ್ರಪ್ರದೇಶ, ಪಂಜಾಬ್ನಲ್ಲಿ ಉಚಿತ ಕೊಡುಗೆಗಳಿಗೆ ವಿನಿಯೋಗ ಮಾಡಬೇಕಿರುವ ಮೊತ್ತವು ರಾಜ್ಯಗಳ ಒಟ್ಟು ಜಿಡಿಪಿಯ ಶೇ 2ಕ್ಕಿಂತ ಹೆಚ್ಚಾಗಿದೆ ಎಂದು ಎಸ್ಬಿಐ ತಿಳಿಸಿದೆ.