ಮುಂಬೈ (ಪಿಟಿಐ):ಆರ್ಬಿಐನ ಬಡ್ಡಿದರ ಕಡಿತವು ದೇಶದ ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸಲು ವಿಫಲವಾಗಿವೆ.
ಮಾರುಕಟ್ಟೆ ನಿರೀಕ್ಷೆಯಂತೆಯೇ ಆರ್ಬಿಐ ಶೇ 0.25ರಷ್ಟು ಬಡ್ಡಿದರ ತಗ್ಗಿಸಿದೆ. ಆದರೆ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ಸಿ) ನಗದು ಕೊರತೆ ಬಿಕ್ಕಟ್ಟಿನ ಬಗ್ಗೆ ಹೂಡಿಕೆದಾರರ ಆತಂಕ ನಿವಾರಿಸಲು ಸಾಧ್ಯವಾಗಿಲ್ಲ. ಇದು ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 554 ಅಂಶ ಕುಸಿತ ಕಂಡು 39,529 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 178 ಅಂಶ ಇಳಿಕೆಯಾಗಿ 11,843 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಏಪ್ರಿಲ್ 22ರಂದು ಬಿಎಸ್ಇ 495 ಅಂಶ ಮತ್ತು ನಿಫ್ಟಿ 158 ಅಂಶಗಳಷ್ಟು ಗರಿಷ್ಠ ಇಳಿಕೆ ಕಂಡಿದ್ದವು.
2019ರಲ್ಲಿ ಇದುವರೆಗೆ ನಡೆದಿರುವ ದಿನದ ವಹಿವಾಟಿನಲ್ಲಿಯೇ ಸೂಚ್ಯಂಕಗಳು ಗರಿಷ್ಠ ಕುಸಿತ ಕಂಡಿವೆ.ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,449 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಮುಖ ಕಾರಣಗಳು: ಐಎಲ್ಆ್ಯಂಡ್ಎಫ್ಎಸ್, ಡಿಎಚ್ಎಫ್ಎಲ್ ಬಿಕ್ಕಟ್ಟು, ಜಿಡಿಪಿ ಮುನ್ನೋಟ ಇಳಿಕೆ ಮತ್ತು ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಂಘರ್ಷವು ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.