ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ನ ಸ್ವಾಯತ್ತತೆ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರಿಂದ, ವಹಿವಾಟಿನ ಆರಂಭದಲ್ಲಿನ ಕುಸಿತ ಮೆಟ್ಟಿನಿಂತ, ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ದಿನದ ಅಂತ್ಯದ ವೇಳೆಗೆ 550 ಅಂಶಗಳ ಏರಿಕೆ ದಾಖಲಿಸಿತು.
ಬೆಳಗಿನ ವಹಿವಾಟಿನಲ್ಲಿ ಷೇರುಗಳ ಮಾರಾಟ ಒತ್ತಡ ಕಂಡು ಬಂದಿತ್ತು. ಸರ್ಕಾರದ ಸ್ಪಷ್ಟನೆ ಹೊರ ಬಿದ್ದ ನಂತರ ಪೇಟೆಯಲ್ಲಿ ಖರೀದಿ ಆಸಕ್ತಿ ಗೋಚರಿಸಿತು. ಹೂಡಿಕೆದಾರರು ಷೇರುಗಳ ಖರೀದಿಗೆ ಗಮನ ಹರಿಸಿದರು.
ಬ್ಯಾಂಕಿಂಗ್, ಐ.ಟಿ, ಔಷಧಿ ಮತ್ತು ರಿಯಾಲ್ಟಿ ವಲಯದ ಷೇರುಗಳಲ್ಲಿನ ಖರೀದಿಯು ಸೂಚ್ಯಂಕ ಹೆಚ್ಚಳಕ್ಕೆ ಕಾರಣವಾಯಿತು. ಹಣಕಾಸು ವಲಯದ ಷೇರುಗಳು ಖರೀದಿಯಲ್ಲಿ ಮುಂಚೂಣಿಯಲ್ಲಿ ಇದ್ದವು.
ಎಚ್ಡಿಎಫ್ಸಿ, ಇಂಡಸ್ಇಂಡ್, ಆ್ಯಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಗರಿಷ್ಠ ಶೇ 4ರಷ್ಟು ಚೇತರಿಕೆ ದಾಖಲಿಸಿದವು.
ಕೋಲ್ ಇಂಡಿಯಾ, ಟಾಟಾ ಸ್ಟೀಲ್, ಮಾರುತಿ, ಅದಾನಿ ಪೋರ್ಟ್ಸ್, ಕೋಟಕ್ ಬ್ಯಾಂಕ್, ಪವರ್ ಗ್ರಿಡ್, ಭಾರ್ತಿ ಏರ್ಟೆಲ್ ಮತ್ತು ಹೀರೊ ಮೋಟೊಕಾರ್ಪ್ ಷೇರುಗಳು ಶೇ 3ರಷ್ಟು ಕುಸಿತ ಕಂಡವು.
ಏಷ್ಯಾ ಮತ್ತು ಯುರೋಪ್ ಷೇರು ಮಾರುಕಟ್ಟೆಗಳಲ್ಲೂ ಚೇತರಿಕೆ ಕಂಡು ಬಂದಿತು.