ಮುಂಬೈ: ಆರ್ಥಿಕತೆಗೆ ಚೇತರಿಕೆ ನೀಡಲು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಲವಾರು ಉತ್ತೇಜನಾ ಕ್ರಮಗಳನ್ನು ಘೋಷಿಸಿದ್ದರಿಂದ ಬ್ಯಾಂಕಿಂಗ್, ಇಂಧನ ಮತ್ತು ಐ.ಟಿ ಕಂಪನಿ ಷೇರುಗಳ ಬೆಲೆ ಏರಿಕೆಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರ 986 ಅಂಶಗಳಷ್ಟು ಚೇತರಿಕೆ ದಾಖಲಿಸಿತು.
ದಿನದ ವಹಿವಾಟು ಆರಂಭದಲ್ಲಿನ 1,116 ಅಂಶಗಳ ಹೆಚ್ಚಳವನ್ನು ಕಾಯ್ದುಕೊಳ್ಳಲು ವಿಫಲವಾದ ಸೂಚ್ಯಂಕವು, ದಿನದ ಅಂತ್ಯಕ್ಕೆ 986 ಅಂಶಗಳ ಏರಿಕೆ ಕಂಡು 31,588 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 273 ಅಂಶ ಹೆಚ್ಚಳ ಕಂಡು 9,266 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.
ಆ್ಯಕ್ಸಿಸ್ ಬ್ಯಾಂಕ್ ಷೇರು ಬೆಲೆ (ಶೇ 13) ಗರಿಷ್ಠ ಮಟ್ಟದ ಏರಿಕೆ ದಾಖಲಿಸಿತು. ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಮಾರುತಿ, ಟಿಸಿಎಸ್, ಕೋಟಕ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿದ್ದವು.
ಬ್ಯಾಂಕ್ ಬಡ್ಡಿ ದರಕ್ಕೆ ತೀವ್ರವಾಗಿ ಸ್ಪಂದಿಸುವ ಬ್ಯಾಂಕಿಂಗ್, ಹಣಕಾಸು, ವಾಹನ ತಯಾರಿಕಾ ಮತ್ತು ರಿಯಾಲ್ಟಿ ವಲಯದ ಷೇರುಗಳ ಬೆಲೆ ಗರಿಷ್ಠ ಶೇ 6.83ರವರೆಗೆ ಹೆಚ್ಚಳ ಕಂಡವು.
ರೂಪಾಯಿ ಚೇತರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 48 ಪೈಸೆ ಚೇತರಿಕೆ ಕಂಡು ₹ 76.39ಕ್ಕೆ ಏರಿಕೆ ದಾಖಲಿಸಿತು.
ಕಚ್ಚಾ ತೈಲ ಬೆಲೆ ಏರಿಕೆ: ಜಾಗತಿಕ ಕಚ್ಚಾ ತೈಲ ಬೆಲೆಯ ಮಾನದಂಡವಾಗಿರುವ ಬ್ರೆಂಟ್ನ ವಾಯಿದಾ ಬೆಲೆಯು ಪ್ರತಿ ಬ್ಯಾರಲ್ಗೆ 27.84 ಡಾಲರ್ಗೆ ಏರಿಕೆಯಾಗಿದೆ.