ಮುಂಬೈ: ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಆರ್ಥಿಕ ಪ್ರಗತಿಯ ಚೇತರಿಕೆಯ ಮೇಲೆ ಕೇಂದ್ರೀಯ ಬ್ಯಾಂಕ್ನ ನಿಗಾ ಮುಂದುವರಿಯಲಿದೆ’ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
‘ಚಿಲ್ಲರೆ, ಹಣದುಬ್ಬರ, ಕೈಗಾರಿಕೆ, ಹಣಕಾಸು ಮತ್ತು ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಗಮನ ನೀಡಲಾಗುವುದು’ ಎಂದಿದ್ದಾರೆ.
2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿಆರ್ಥಿಕ ವೃದ್ಧಿ ದರ (ಜಿಡಿಪಿ) ನಿರೀಕ್ಷೆಗಿಂತಲೂ ಕಡಿಮೆ ಶೇ 6.6ರಷ್ಟು ದಾಖಲಾಗಿದೆ. ಇದು ಐದು ತ್ರೈಮಾಸಿಕಗಳಲ್ಲಿಯೇ ಕನಿಷ್ಠ ಮಟ್ಟದ್ದಾಗಿದೆ.
ಆದರೆ,2019–2020ನೇ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ನೈಜ ಜಿಡಿಪಿ ಪ್ರಗತಿ ದರ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ದಾಸ್ ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರ ಮಾರ್ಚ್ನಲ್ಲಿ ಶೇ 2.57 ರಿಂದ ಶೇ 2.86ಕ್ಕೆ ಏರಿಕೆಯಾಗಿದೆ. ಹೀಗಿದ್ದರೂ ಸತತ 8ನೇ ತಿಂಗಳಿನಲ್ಲಿಯೂ ಆರ್ಬಿಐ ಅಂದಾಜಿಗಿಂತಲೂ ಕಡಿಮೆ ಇದೆ.
‘2020ರ ಜನವರಿ–ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 3.8ರಷ್ಟಿರಲಿದೆ. ಒಂದೊಮ್ಮೆ ಆಹಾರ ಮತ್ತು ಇಂಧನ ದರ ಗಳಲ್ಲಿ ಅನಿಯಮಿತ ಏರಿಕೆ ಕಂಡುಬಂದರೆ ಅಥವಾ ವಿತ್ತೀಯ ಕೊರತೆ ನಿಯಂತ್ರಣ ಮೀರಿದರೆ ಚಿಲ್ಲರೆ ಹಣದುಬ್ಬರದಲ್ಲಿ ಏರಿಕೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ದೇಶದ ಚಾಲ್ತಿ ಖಾತೆ ಕೊರತೆ 2018–19ರಲ್ಲಿ ಜಿಡಿಪಿಯ ಶೇ 2.5ರಷ್ಟಿರುವ ನಿರೀಕ್ಷೆ ಮಾಡಲಾಗಿದೆ. ವಿತ್ತೀಯ ಕೊರತೆಯನ್ನು ಬಜೆಟ್ ಅಂದಾಜಿನಂತೆಯೇ ನಿಯಂತ್ರಿಸಲಾಗಿದೆ.
‘ಜಾಗತಿಕ ಮಂದಗತಿಯ ಆರ್ಥಿಕತೆ ಪ್ರಗತಿ ಮತ್ತು ವ್ಯಾಪಾರದಲ್ಲಿನ ಇಳಿಮುಖ ಚಲನೆಯು ಭಾರತದ ಮೇಲೆ ತಾತ್ಕಾಲಿಕ ಪರಿಣಾಮ ಬೀರಲಿವೆ.ಕೇಂದ್ರೀಯ ಬ್ಯಾಂಕ್ಗಳು ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿಲ್ಲ. ಕೆಲವು ಕೇಂದ್ರೀಯ ಬ್ಯಾಂಕ್ಗಳು ಸರಳವಾದ ಸಾಲ ನೀಡಿಕೆಯನ್ನು ಉತ್ತೇಜಿಸುತ್ತಿವೆ’ ಎಂದಿದ್ದಾರೆ.