ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ, ದೆಹಲಿಗೂ ಶೀಘ್ರ ‘ಸ್ಟಾರ್‌ ಏರ್‌’ ವಿಮಾನ ಸಂಚಾರ ಆರಂಭ–ಸಂಜಯ್‌ ಘೋಡಾವತ್‌

ಬೆಂಗಳೂರು–ಹುಬ್ಬಳ್ಳಿ–ತಿರುಪತಿ ನಡುವೆ ‘ಸ್ಟಾರ್‌ ಏರ್‌’ ವಿಮಾನ ಸಂಚಾರಕ್ಕೆ ಚಾಲನೆ
Last Updated 25 ಜನವರಿ 2019, 9:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿ–ಬೆಂಗಳೂರು ನಡುವೆ ಫೆಬ್ರುವರಿ 6 ರಿಂದ ಹಾಗೂ ಹುಬ್ಬಳ್ಳಿ–ನವದೆಹಲಿ ನಡುವೆ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ‘ಸ್ಟಾರ್‌ ಏರ್‌’ ವಿಮಾನಯಾನ ಪ್ರಾರಂಭಿಸುವುದಾಗಿ ಸಂಜಯ್‌ ಘೋಡಾವತ್‌ ಗ್ರೂಫ್‌ನ ಅಧ್ಯಕ್ಷ ಸಂಜಯ್‌ ಘೋಡಾವತ್‌ ತಿಳಿಸಿದರು.

ಬೆಂಗಳೂರು–ಹುಬ್ಬಳ್ಳಿ–ತಿರುಪತಿ ನಡುವೆ ಶುಕ್ರವಾರದಿಂದ ಆರಂಭವಾದ ‘ಸ್ಟಾರ್ ಏರ್‌’ ವಿಮಾನಯಾನಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರು–ಹುಬ್ಬಳ್ಳಿ ನಡುವಿನ ವಿಮಾನಯಾನಕ್ಕೆ ಟಿಕೆಟ್‌ ದರ ₹ 1299, ಹುಬ್ಬಳ್ಳಿ–ತಿರುಪತಿ ಟಿಕೆಟ್‌ ದರ ₹ 2099 ಹಾಗೂ ಬೆಂಗಳೂರು–ಬೆಳಗಾವಿ ಟಿಕೆಟ್‌ ದರ ₹ 2599 ರಿಂದ ಪ್ರಾರಂಭವಾಗಲಿದೆ ಎಂದರು.

ಸ್ಟಾರ್‌ ಏರ್‌ 2013ರಿಂದ ದೇಶದ ವಿವಿಧ ತಾಣಗಳಿಗೆ ಹೆಲಿಕಾಫ್ಟರ್‌ ಚಾರ್ಟರ್‌ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ವಿಮಾನಯಾನ ಸೇವೆಯನ್ನು ಕೂಡ ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ‘ಉಡಾನ್‌ 3’ ಯೋಜನೆಯಡಿ ದೇಶದ ಇನ್ನಷ್ಟು ನಗರಗಳಿಗೆ ವಿಮಾನಯಾನ ಆರಂಭಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

ಪ್ರಯಾಣಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಒದಗಿಸಲು ಸಂಸ್ಥೆ ಮುಂದಾಗಿದೆ. ವಿಮಾನದಲ್ಲಿ ಸುರಕ್ಷತಾ, ಆರಾಮದಾಯಕ ಆಸನಗಳೊಂದಿಗೆ ಗುಣಮಟ್ಟದ ಸೇವೆ ಹಾಗೂ ವಿಶೇಷ ಆತಿಥ್ಯಗಳೊಂದಿಗೆ ಪ್ರಯಾಣಿಕರಿಗೆ ‘ಸ್ಟಾರ್‌’ ಅನುಭವ ಲಭಿಸಲಿದೆ ಎಂದು ಹೇಳಿದರು.

‘ಸ್ಟಾರ್‌ ಏರ್‌ ಎಂಬ್ರೇರ 145’ ವಿಮಾನವು ದೇಶದ ಒಳಗಿನ ನಗರಗಳಿಗೆ ಸೇವೆ ಒದಗಿಸುತ್ತಿರುವ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಹೊಸ ವಿಮಾನ ನಿಲ್ದಾಣ:

ಸ್ಟಾರ್‌ ಏರ್‌ ವಿಮಾನ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಆರ್‌.ವಿ.ದೇಶಪಾಂಡೆ, ಕಾರವಾರ ಮತ್ತು ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಹಾಗೂ ಮೈಸೂರು, ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.

ತಿರುಪತಿಗೆ ವಿಮಾನಯಾನ ಆರಂಭವಾಗಿರುವುದರಿಂದ ಈ ಭಾಗದ ತಿರುಪತಿ ಯಾತ್ರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್‌, ಉದ್ಯಮಿ ವಿಜಯ ಸಂಕೇಶ್ವರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಸ್ಟಾರ್ ಏರ್‌ ವ್ಯವಸ್ಥಾಪಕ ನಿರ್ದೇಶಕ ಶ್ರೇಣಿಕ್‌ ಘೋಡಾವತ್‌, ನೀತಾ ಸಂಯತ್‌ ಘೋಡಾವತ್‌, ಧ್ಯಾನಚಂದ್‌ ಘೋಡಾವತ್‌ ಇದ್ದರು.

ವಿಮಾನ ಸಂಚಾರ ವೇಳಾಪಟ್ಟಿ

ಪ್ರತಿ ದಿನ ಬೆಳಿಗ್ಗೆ 7.35ಕ್ಕೆ ಬೆಂಗಳೂರಿನಿಂದ ಹೊರಡುವ ‘ಸ್ಟಾರ್‌ ಏರ್’ ವಿಮಾನವು 8.35ಕ್ಕೆ ಹುಬ್ಬಳ್ಳಿ ತಲುಪಲಿದೆ. ಬೆಳಿಗ್ಗೆ 8.55ಕ್ಕೆ ಇಲ್ಲಿಂದ ಹೊರಟು 10ಕ್ಕೆ ತಿರುಪತಿ ತಲುಪಲಿದೆ. 10.20ಕ್ಕೆ ಅಲ್ಲಿಂದ ಪುನಃ ಸಂಚಾರ ಆರಂಭಿಸಿ, 11.25ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 11.45ಕ್ಕೆ ಹೊರಟು ಮಧ್ಯಾಹ್ನ 12.45ಕ್ಕೆ ಬೆಂಗಳೂರಿಗೆ ಮರಳಲಿದೆ.

ಫೆ. 6ರಿಂದ ಮಧ್ಯಾಹ್ನ 1.25ಕ್ಕೆ ಬೆಂಗಳೂರಿನಿಂದ ಹೊರಟು 2.30ಕ್ಕೆ ಬೆಳಗಾವಿ ತಲುಪಲಿದೆ. ಸಂಜೆ 5ಕ್ಕೆ ಬೆಳಗಾವಿಯಿಂದ ಹೊರಟು 6.05ಕ್ಕೆ ಬೆಂಗಳೂರಿಗೆ ಮರಳಲಿದೆ.

ಕಣ್ಣೂರಿಗೆ ಇಂಡಿಗೊ ಸಂಚಾರ ಆರಂಭ

‘ಉಡಾನ್‌’ ಯೋಜನೆಯಡಿ ಹುಬ್ಬಳ್ಳಿಯಿಂದ ಕೇರಳದ ಕಣ್ಣೂರಿಗೆ ಇಂಡಿಗೊ ವಿಮಾನ ಸಂಚಾರ ಶುಕ್ರವಾರದಿಂದ ಆರಂಭಗೊಂಡಿತು. ಹುಬ್ಬಳ್ಳಿಯಿಂದ ಸಂಜೆ 7.05ಕ್ಕೆ ಹೊರಟು ರಾತ್ರಿ 8.25ಕ್ಕೆ ಕಣ್ಣೂರು ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT