ಬೆಂಗಳೂರು: ಗೃಹ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ವಿದ್ಯುತ್ ಬಿಲ್ ಪಾವತಿಸಲು ಅನೇಕ ರಾಜ್ಯ ಸರ್ಕಾರಗಳು ಗಡುವು ವಿಸ್ತರಿಸಿದ್ದರೂ, ಬಳಸದ ವಿದ್ಯುತ್ಗೂ ಬಿಲ್ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವು ಕೈಗಾರಿಕಾ ಬಳಕೆದಾರರಿಗೆ ಸೂಚಿಸಿದೆ.
ವಾಸ್ತವದಲ್ಲಿ ಬಳಸಿದ ವಿದ್ಯುತ್ಗೆ ಬಿಲ್ ನೀಡುವ ಬದಲಿಗೆ, ಕೈಗಾರಿಕಾ ಬಳಕೆದಾರರು ಮಾರ್ಚ್ನಲ್ಲಿ ಬಳಸಿದ ವಿದ್ಯುತ್ಗೆ, ಹಿಂದಿನ ಮೂರು ತಿಂಗಳಲ್ಲಿ ಬಳಸಿದ ವಿದ್ಯುತ್ನ ಸರಾಸರಿ ಮೊತ್ತದ ಬಿಲ್ ಪಾವತಿಸುವಂತೆ ಕೇಳಿಕೊಳ್ಳಲಾಗಿದೆ.
‘ಕೈಗಾರಿಕಾ ವಿದ್ಯುತ್ ಬಳಕೆದಾರರು ಪೀಣ್ಯ ಮತ್ತು ಬೊಮ್ಮಸಂದ್ರದಲ್ಲಿನ ತಮ್ಮ ಕೈಗಾರಿಕಾ ಘಟಕಗಳಿಗೆ ಮಾರ್ಚ್ ಮಧ್ಯಭಾಗದಿಂದಲೇ ಬಾಗಿಲು ಹಾಕಿದ್ದಾರೆ. ಮಾರ್ಚ್ನಲ್ಲಿ ಬಳಕೆಯಾದ ವಿದ್ಯುತ್ಗೆ ಬಿಲ್ ಪಾವತಿಸಲು ಅವರು ಸಿದ್ಧರಿದ್ದಾರೆ. ಆದರೆ ಬಳಕೆಯಾಗದ ವಿದ್ಯುತ್ಗೆ ಸರಾಸರಿ ಲೆಕ್ಕದ ಆಧಾರದಲ್ಲಿ ಬಿಲ್ ಪಾವತಿಸಲು ಸೂಚಿಸಿರುವುದು ಉದ್ಯಮಿಗಳಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿರುವು ದನ್ನು ಕರ್ನಾಟಕ ವಿದ್ಯುತ್ಶಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಗಮನಕ್ಕೆ ತರಲಾಗಿದೆ. ಮಾರ್ಚ್ ಬಿಲ್ನಲ್ಲಿ ಸ್ಥಿರ ಅಥವಾ ಕನಿಷ್ಠ ಶುಲ್ಕ ವಿಧಿಸದಿರಲೂ ಕೇಳಿಕೊಳ್ಳಲಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಆರ್. ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ವಿದ್ಯುತ್ ಬಳಸದೇ ಇದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಬಿಲ್ ಪಾವತಿಸಲು ಎಂಎಸ್ಎಂಇಗಳಿಗೆ ಸಾಧ್ಯವಾಗುವುದಿಲ್ಲ. ವಿವಿಧ ಕಾರಣಗಳಿಗಾಗಿ ಕೈಗಾರಿಕಾ ಘಟಕಗಳು ಈಗಾಗಲೇ ತಮ್ಮ ತಯಾರಿಕಾ ಸಾಮರ್ಥ್ಯವನ್ನು ತಗ್ಗಿಸಿವೆ. ‘ಕೋವಿಡ್–19‘ ಪಿಡುಗು ‘ಎಂಎಸ್ಎಂಇ’ಗಳ ಸಂಕಷ್ಟ ಹೆಚ್ಚಿಸಿದೆ. ವಾಹನ ತಯಾರಿಕಾ ಮತ್ತು ಜವಳಿ ಕೈಗಾರಿಕೆಗಳು ತಯಾ ರಿಕೆಯನ್ನು ಗಮನಾರ್ಹವಾಗಿ ತಗ್ಗಿ ಸಿವೆ. ಹೀಗಾಗಿ ದಿಗ್ಬಂಧನ ತೆರವಾದ ನಂತರವೂ ಸಣ್ಣ ಕೈಗಾ ರಿಕೆಗಳು ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.