ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರಬನಿ ಮತ್ತು ತರಕುಂದಿ ವಲಯದ ಗಡಿ ಭದ್ರತಾ ರೇಖೆ ಬಳಿ ಪಾಕಿಸ್ತಾನ ಸೇನೆ ಭಾನುವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿಯಲ್ಲಿ ರಕ್ಷಣಾಪಡೆ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಒಬ್ಬ ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹುತಾತ್ಮ ಕ್ಯಾಪ್ಟನ್ ಕಪಿಲ್ ಕುಂದು (23) ಹರಿಯಾಣ ಗುರುಗ್ರಾಮದ ರಂಸಿಕ ಗ್ರಾಮದವರು. ಫೆ.10ರಂದು ಅವರ ಹುಟ್ಟುಹಬ್ಬವಿತ್ತು. ಅಲ್ಲದೇ ಉಳಿದ ಹುತಾತ್ಮ ಯೋಧರನ್ನು ಹವಿಲ್ದಾರ್ ರೋಶನ್ ಲಾಲ್(42), ಸುಭಮ್ ಸಿಂಗ್(23), ರಾಮವತಾರ್ (27) ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಸೇನೆಯು ಭಾನುವಾರ ಮಧ್ಯಾಹ್ನ ಸುಮಾರು 3.30ರ ವೇಳೆ ಗುಂಡಿನ ದಾಳಿ ನಡೆಸಿತು. ಆಗ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ ಗುಂಡಿನ ಮಳೆಗರೆದಿದೆ. ಈ ವೇಳೆ ಕ್ಯಾಪ್ಟನ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಪಾಕಿಸ್ತಾನ ಸೇನೆಯ ಕೆಲವು ಸ್ಥಳಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.