ಚನ್ನಮ್ಮನ ಕಿತ್ತೂರು: ‘ಸಂಗೊಳ್ಳಿರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ನಾಡದ್ರೋಹಿ ಮನೆತನದ ಡಿ.ಬಿ. ಇನಾಮದಾರ ಕೈಯಲ್ಲಿ ಕಿತ್ತೂರು ಕ್ಷೇತ್ರ ಸಿಕ್ಕು ನಲುಗುತ್ತಿದೆ. ಇದಕ್ಕೆ ಮುಕ್ತಿ ಕಾಣಿಸಬೇಕಾಗಿದೆ’ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಸಿದ್ರಾಮನಿ ಆರೋಪಿಸಿದರು.
ಇಲ್ಲಿನ ಕಲ್ಮಠದ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನ ಹಮ್ಮಿಕೊಂಡಿರುವ ಕಮಲ ಜಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇನಾಮದಾರ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಏತ ನೀರಾವರಿ ಮಾಡಿಸಿದ್ದಾರಾ?, ಕೆರೆಗಳನ್ನು ತುಂಬಿಸಿದ್ದಾರಾ?, ಚುನಾವಣೆ ಸಂದರ್ಭದಲ್ಲಿ ಈಗ ಕೆರೆ ತುಂಬಿಸುವ ನಾಟಕವಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಅನೇಕ ವೀರರು ನಡೆದಾಡಿದ ಇಂಥ ಪವಿತ್ರ ನೆಲದಲ್ಲಿ ಕಮಲ ಜಾತ್ರೆ ನಡೆಯುತ್ತಿದೆ. ಕ್ಷೇತ್ರ ಹೇಗಿರಬೇಕು ಎಂಬ ಅನಿಸಿಕೆಗಳನ್ನು ಸಾರ್ವಜನಿಕರಿಂದ ಪಡೆದುಕೊಂಡು ಅವುಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್. ಪಾಟೀಲ, ಸಿದ್ದಯ್ಯ ಹಿರೇಮಠ, ಭಾರತಿ ಮುಗದುಮ್, ಆನಂದ ಜಕಾತಿ, ಗೂಳಪ್ಪ ಹೊಸಮನಿ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.