ನವದೆಹಲಿ: ಕೆಲವು ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ ಮುಷ್ಕರದಿಂದ ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಹಿವಾಟಿಗೆ ಭಾಗಶಃ ಧಕ್ಕೆಯಾಗುವ ಸಾಧ್ಯತೆ ಇದೆ.
ಮುಷ್ಕರ ನಡೆಯುವ ಪ್ರದೇಶದಲ್ಲಿನ ಎಟಿಎಂಗಳನ್ನೂ ಮುಚ್ಚುವುದಾಗಿ ಒಕ್ಕೂಟಗಳು ಹೇಳಿವೆ.
ಬ್ಯಾಂಕ್ಗಳ ವಿಲೀನ ಮತ್ತು ಠೇವಣಿ ದರದಲ್ಲಿ ಇಳಿಕೆಗೆ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್ ಸಿಬ್ಬಂದಿ ಸಂಘಟನೆಗಳು (ಬಿಇಎಫ್ಐ) ಈಮುಷ್ಕರಕ್ಕೆ ಕರೆ ನೀಡಿವೆ. ಬ್ಯಾಂಕ್ನ ಅಧಿಕಾರಿಗಳು ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಈ ಮುಷ್ಕರದ ಭಾಗವಾಗಿಲ್ಲ.
ಠೇವಣಿ ಇಡುವುದು, ನಗದು ಹಿಂದಕ್ಕೆ ಪಡೆಯುವುದು, ಚಕ್ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ವಹಿವಾಟುಗಳಿಗೆ ಅಡ್ಡಿಯಾಗಲಿದೆ ಎಂದು ಬಹುತೇಕ ಬ್ಯಾಂಕ್ಗಳು ಸೂಚನೆ ನೀಡಿವೆ.
ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ.ಹೀಗಾಗಿ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಎಸ್ಬಿಐ ಷೇರುಪೇಟೆಗೆ ಮಾಹಿತಿ ನೀಡಿದೆ.
ಎಂದಿನಂತೆ ಗ್ರಾಹಕರಿಗೆ ಸೇವೆ ಒದಗಿಸಲು ಕಷ್ಟವಾಗಲಿದೆ ಎಂದುಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಬರೋಡಾ ಹೇಳಿವೆ.
ಶಾಖೆಗಳು ಎಂದಿನಂತೆಯೇ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ಕೆಲವು ಶಾಖೆಗಳ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಿಂಡಿಕೇಟ್ ಬ್ಯಾಂಕ್ ತಿಳಿಸಿದೆ.