ಮುಂಬೈ: ದೇಶದಾದ್ಯಂತ ಮುಂಗಾರು ಉತ್ತಮವಾಗಿದೆ. ಇದರಿಂದ ಹೆಚ್ಚಿನ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬಿತ್ತನೆಯಾಗಲಿದ್ದು, ಉತ್ಪಾದನೆಯೂ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಉತ್ಪನ್ನಗಳ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ರಿಸರ್ಚ್ ಹೇಳಿದೆ.
ಆಗಸ್ಟ್ 21ರವರೆಗೆ ಸರಾಸರಿಗಿಂತಲೂ ಶೇ 7ರಷ್ಟು ಹೆಚ್ಚು ಮಳೆ ಸುರಿದಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರದೇಶದಲ್ಲಿ ಶೇ 2 ರಿಂದ ಶೇ 3ರಷ್ಟು ಹೆಚ್ಚಾಗಲಿದ್ದು, ಉತ್ಪಾದನೆಯಲ್ಲಿಯೂ ಶೇ 5 ರಿಂದ ಶೇ 6ರಷ್ಟು ಏರಿಕೆಯಾಗುವ ಅಂದಾಜು ಮಾಡಲಾಗಿದೆ ಎಂದು ತಿಳಿಸಿದೆ.
ಉತ್ತಮ ಮಳೆ ಮತ್ತು ಲಾಕ್ಡೌನ್ನಿಂದಾಗಿ ಕಾರ್ಮಿಕರು ಪೂರ್ವ ಮತ್ತು ದಕ್ಷಿಣ ರಾಜ್ಯಗಳಿಗೆ ವಲಸೆ ಹೋಗಿರುವುದರಿಂದ ಭತ್ತ ಬೆಳೆಯುವ ಪ್ರಮಾಣದಲ್ಲಿಯೂ ಏರಿಕೆಯಾಗಲಿದೆ ಎಂದೂ ಹೇಳಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ತರಕಾರಿ, ಹತ್ತಿ ಮತ್ತು ಜೋಳ ಬಿತ್ತನೆ ಪ್ರದೇಶದಲ್ಲಿ ಇಳಿಕೆ ಆಗಿದೆ. ಬೆಲೆ ಇಳಿಕೆ ಕಂಡಿರುವುದರಿಂದ ರೈತರು ಇವುಗಳನ್ನು ಬೆಳೆಯಲು ಆಸಕ್ತಿ ತೋರಿಸದೇ ಇರುವುದೇ ಇದಕ್ಕೆ ಕಾರಣ ಎಂದಿದೆ.
ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ, ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಧಾನ್ಯಗಳನ್ನು ಸಂಗ್ರಹಿಸುತ್ತಿರುವುದರಿಂದ ರೈತರ ಲಾಭವು ಪ್ರತಿ ಹೆಕ್ಟೇರ್ಗೆ ಶೇ 3–5ರಷ್ಟು ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ.