ನವದೆಹಲಿ: ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರದಿಂದ ದೇಶದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಇಲ್ಲ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗರಿಯಾ ಮತ್ತು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.
₹ 2 ಸಾವಿರದ ನೋಟುಗಳನ್ನು ಕಡಿಮೆ ಮುಖಬೆಲೆಯ ನೋಟುಗಳೊಂದಿಗೆ ಬದಲಿಸಿಕೊಳ್ಳುವ ಅಥವಾ ಬ್ಯಾಂಕ್ನಲ್ಲಿ ಠೇವಣಿ ಇಡುವ ಅವಕಾಶ ಇದೆ. ಹೀಗಾಗಿ ಹಣದ ಪೂರೈಗೆ ಅಡ್ಡಿಯಾಗುವುದಿಲ್ಲ ಎಂದು ಎಂದು ಪನಗರಿಯಾ ಹೇಳಿದ್ದಾರೆ.
ಹಣವನ್ನು ಅಕ್ರಮವಾಗಿ ಸಾಗಿಸುವುದನ್ನು ಇನ್ನಷ್ಟು ಕಷ್ಟವಾಗಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಸದ್ಯ ದೇಶದಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳಲ್ಲಿ ₹ 2 ಸಾವಿರದ ನೋಟುಗಳ ಪ್ರಮಾಣವು ಶೇ 10.8ರಷ್ಟು ಮಾತ್ರವೇ ಇದೆ. ಬಹುಶಃ ಅದರಲ್ಲಿ ಹೆಚ್ಚಿನ ಪಾಲು ಅಕ್ರಮ ವಹಿವಾಟುಗಳಿಗೆ ಬಳಕೆಯಾಗುತ್ತಿದೆ ಎಂದು ಪನಗರಿಯಾ ಹೇಳಿದ್ದಾರೆ.
ಆರ್ಬಿಐ ನಿರ್ಧಾರವು ಅನಿರೀಕ್ಷಿತವಾಗಿದ್ದು ದೇಶದ ಆರ್ಥಿಕತೆ ಮತ್ತು ಹಣಕಾಸು ನೀತಿಯ ಮೇಲೆ ಅದರ ಪರಿಣಾಮವು ಶೂನ್ಯ ಮಟ್ಟದ್ದಾಗಿರಲಿದೆ ಎಂದು ಗರ್ಗ್ ತಿಳಿಸಿದ್ದಾರೆ.