ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಸಂಕೀರ್ತನ್, ರಾಜಾಜಿನಗರ, ಬೆಂಗಳೂರು

ಪ್ರಶ್ನೆ: ಇತ್ತೀಚೆಗೆ ನನಗೆ ಹಾಲಿಡೇ ಕ್ಲಬ್ ನಡೆಸುವ ಒಂದು ಸಂಸ್ಥೆಯ ಉದ್ಯೋಗಿಯೊಬ್ಬರಿಂದ ಕರೆ ಬಂತು. ಅವರು ನನ್ನನ್ನು ಔತಣ ಕೂಟಕ್ಕೆ ಕರೆದರು. ಹೋಗಿದ್ದಕ್ಕೆ ಉಡುಗೊರೆ ಕೊಟ್ಟರು. ಮೊಬೈಲ್ ಸಂಖ್ಯೆ ಹಾಗೂ ವಿಳಾಸ ತೆಗೆದುಕೊಂಡಿದ್ದರು. ನಂತರ ಕೆಲವು ದಿನಗಳಿಂದ, ತಮ್ಮ ಸಂಸ್ಥೆಯ ಕ್ಲಬ್ ಸದಸ್ಯತ್ವ ಪಡೆಯಬೇಕೆಂದು, ವರ್ಷದಲ್ಲಿ ಒಂದು ವಾರ ಸ್ಟಾರ್ ಹೋಟೆಲ್‌ಗಳಲ್ಲಿ ಉಚಿತ ಕೊಠಡಿ ಸೌಕರ್ಯ ಒದಗಿಸಲಾಗುತ್ತದೆ ಎಂದು ನನಗೆ ತಿಳಿಸುತ್ತಿದ್ದಾರೆ. 20 ವರ್ಷದ ಸದಸ್ಯತ್ವಕ್ಕೆ ₹ 5 ಲಕ್ಷಕ್ಕೂ ಹೆಚ್ಚಿನ ಮೊತ್ತ, ಹಾಗೂ ಪ್ರತೀ ವರ್ಷ ಒಂದಷ್ಟು ಚಂದಾ ಮೊತ್ತ ಪಾವತಿಸಬೇಕೆಂದು ಹೇಳಿರುತ್ತಾರೆ. ನಾವು ಕೆಲವೊಮ್ಮೆ ರಜಾ ಪ್ರವಾಸ ಕೈಗೊಳ್ಳುತ್ತೇವೆ. ಆದರೆ ಈ ಸದಸ್ಯತ್ವ ನಮಗೆ ಪ್ರಯೋಜನಕಾರಿಯೇ? ಇದಕ್ಕೆ ತೆರಿಗೆ ಪ್ರಯೋಜನ ಇದೆಯೇ? ಅಥವಾ ಹೆಚ್ಚು ತೆರಿಗೆ ಪಾವತಿಸಬೇಕೇ?

ಉತ್ತರ: ಇತ್ತೀಚಿನ ದಿನಗಳಲ್ಲಿ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹಾಗೂ ಅದಕ್ಕೆ ಸಂಬಂಧಿಸಿದ ಸೌಲಭ್ಯ ಕಲ್ಪಿಸಿಕೊಡುವ ಉದ್ಯಮಗಳ ಸಂಖ್ಯೆ ಅಧಿಕವಾಗುತ್ತಿದೆ. ಇದು ಒಂದು ರೀತಿ ಒಳ್ಳೆಯದೇ. ಆದರೆ ಇದರ ಸುತ್ತ ಅದೆಷ್ಟೋ ರೀತಿಯ ಆರ್ಥಿಕ ಅಂಶಗಳು ಅಡಗಿವೆ. ನೀವು ಹೇಳಿರುವ ಕ್ಲಬ್ ಸದಸ್ಯತ್ವವೂ ತಮ್ಮ ವ್ಯವಹಾರವನ್ನು ಸಮತೋಲನದಲ್ಲಿಡಲು ಹಾಗೂ ಹೆಚ್ಚು ಸದಸ್ಯರನ್ನು ಹೊಂದಿಸಿಕೊಂಡು ವಾರ್ಷಿಕ ಆದಾಯ ವೃದ್ಧಿಸುವಂತೆ ಮಾಡುವ ಒಂದು ತಂತ್ರ ಎನ್ನುವುದು ತಿಳಿದಿರಬೇಕು.

ಯಾವುದೇ ಸಂಸ್ಥೆ ಇತರರಿಗೆ ಉಚಿತ ಸೌಲಭ್ಯ ನೀಡುವ ಮೊದಲು ತನಗೇನು ಲಾಭವಿದೆ ಎನ್ನುವುದನ್ನು ಮೊದಲು ಲೆಕ್ಕ ಹಾಕುತ್ತದೆ. ವಾಣಿಜ್ಯ ಉದ್ದೇಶದ ಸಂಸ್ಥೆಗಳು ಹಾಗೆ ಆಲೋಚಿಸುವುದು ಸಹಜ. ಅದು ತಪ್ಪಲ್ಲ. ಉಚಿತ ಸೇವೆಗಳ ಹಿಂದೆ ಒಂದಷ್ಟು ‘ನಿಯಮ ಹಾಗೂ ಷರತ್ತು’ಗಳು ಇರುತ್ತವೆ. ನೀವು ಇಂದಿನ ಸಂದರ್ಭದಲ್ಲಿ, ಅದೇ ದರ್ಜೆಯ ಸೌಕರ್ಯ ನೀಡುವ ಹೋಟೆಲ್‌ಗಳಲ್ಲಿ ತಂಗಲು ಎಷ್ಟು ಖರ್ಚು ಬರುತ್ತದೆ ಎನ್ನುವುದನ್ನು ನಿರ್ಧರಿಸಿ. ಕ್ಲಬ್‌ಗಳ ಸದಸ್ಯತ್ವದಿಂದ ಊಟೋಪಚಾರದ ವ್ಯವಸ್ಥೆಯಲ್ಲಿ ಒಂದಷ್ಟು ವಿನಾಯಿತಿ ಸಿಗಬಹುದೇ ವಿನಾ ಅವು ಸಂಪೂರ್ಣ ಉಚಿತವಾಗಿ ಸಿಗುತ್ತವೆ ಎನ್ನಲಾಗದು. ಇಷ್ಟೇ ಅಲ್ಲದೆ, ಮುಂದೆ ನಿಮ್ಮ ಪತ್ನಿ, ಮಕ್ಕಳು ಹಾಗೂ ತಂದೆ–ತಾಯಿಯನ್ನೂ ಉಚಿತವಾಗಿ ಕರೆದೊಯ್ಯುವ ಅವಕಾಶವಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಇಂತಹ ಸಂಸ್ಥೆಗಳು ಸದಸ್ಯರಿಗೆ ತಾವು ನಿಗದಿಪಡಿಸಿದ ಕಾಲಾವಧಿಯಲ್ಲಿ ತಂಗಲು ಅವಕಾಶ ಕೊಡುತ್ತವೆಯೇ ಹೊರತು ಯಾವುದೇ ದಿನ ನಮ್ಮ ಅನುಕೂಲಕ್ಕೆ ತಕ್ಕಂತೆ ಹೋಗುವ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಇದ್ದರೂ ಅಂತಹ ಸೌಕರ್ಯಕ್ಕೆ ಹೆಚ್ಚಿನ ಶುಲ್ಕ ಪಡೆಯುತ್ತವೆ.

ನಿಮ್ಮ ವಾರ್ಷಿಕ ರಜಾ ಪ್ರವಾಸದ ದಿನಗಳನ್ನು ಮೊದಲು ನಿರ್ಧರಿಸಿ. ನಿಮ್ಮ ವಾರ್ಷಿಕ ಬಜೆಟ್ ಏನೆಂಬುದನ್ನು ನಿಗದಿಪಡಿಸಿ. ಇದಲ್ಲದೆ ನಿಮ್ಮ ಸದಸ್ಯತ್ವದ ಅವಧಿಯ ಎಲ್ಲಾ ವರ್ಷಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವರ ಷರತ್ತುಗಳಿಗೆ ಸರಿಹೊಂದುವ ರೀತಿ ಸಮಯ ಹೊಂದಿಸಿಕೊಳ್ಳುವುದು ಸುಲಭವೇ ಎನ್ನುವುದನ್ನು ತಿಳಿದುಕೊಳ್ಳಿ. ಅವರ ನಿಯಮಗಳು ಏನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕೆಲವೊಮ್ಮೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣ ತೆತ್ತು ಮಾಡುವ ಪ್ರವಾಸ ಪರಿವಾರದವರಿಗೆಲ್ಲ ಲಾಭದಾಯಕ ಆಗಬಹುದು. ನಿಮ್ಮ ಸದಸ್ಯತ್ವ ಶುಲ್ಕದ ಹಣ ಬ್ಯಾಂಕ್‌ನಲ್ಲಿ ಇಟ್ಟರೆ ಸಿಗುವ ಬಡ್ಡಿಯಲ್ಲೇ ಎರಡೋ ಮೂರೋ ವರ್ಷಕೊಮ್ಮೆ ಪ್ರವಾಸ ಕೈಗೊಳ್ಳಬಹುದು. ಇಂತಹ ಕ್ಲಬ್‌ ಸದಸ್ಯತ್ವ ಪಡೆದಿದ್ದಕ್ಕೆ ಆದಾಯ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗುವುದಿಲ್ಲ. ಇವೆಲ್ಲ ವೈಯಕ್ತಿಕ ಖರ್ಚು ಎಂದು ದಾಖಲಾಗುತ್ತದೆ.

****

ಕೃಷ್ಣಮೂರ್ತಿ ಟಿ., ಹನುಮಂತನಗರ, ಬೆಂಗಳೂರು

ಪ್ರಶ್ನೆ: ನನ್ನ ಮಗನಿಗೆ 27 ವರ್ಷ ವಯಸ್ಸು. ಅವನಿಗೆ ಶೇಕಡ 70ರಷ್ಟು ಅಂಗವೈಕಲ್ಯ ಇದೆ. ಅವನ ಜೀವನ ಭದ್ರತೆಗಾಗಿ ತೆರಿಗೆ ಇಲ್ಲದಂತೆ ನನ್ನ ನಿವೃತ್ತಿಯ ಹಣವನ್ನು ಯಾವ ರೀತಿ ಎಫ್.ಡಿ ಮಾಡಬಹುದು?

ಉತ್ತರ: ಅಂಗವಿಕಲರಿಗೆ ಎಲ್ಲರಂತೆ ಬದುಕುವ ಹಕ್ಕನ್ನು ವಿವಿಧ ಕಾನೂನುಗಳು ಕಲ್ಪಿಸಿಕೊಟ್ಟಿವೆ ಹಾಗೂ ಕೆಲವು ವಿಶೇಷ ಸವಲತ್ತುಗಳು ಇವೆ ಎನ್ನುವುದು ಬಹುತೇಕ ಪಾಲಕರಿಗೆ ತಿಳಿದ ವಿಚಾರ. ಅಂಗವಿಕಲ ಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಯ ವಿಚಾರವಾಗಿ ಯಾವುದೇ ಪೋಷಕರು ಆತಂಕಿತರಾಗುವುದು ಸಹಜ. ಇಂತಹ ಸನ್ನಿವೇಶ ನಿಭಾಯಿಸಲು ನಿಮ್ಮ ಮಗನ ಬಗ್ಗೆ ಕೆಲವು ಸಾಮಾನ್ಯ ಮಾಹಿತಿಯನ್ನು ಪೂರ್ವದಲ್ಲೇ ಊಹಿಸಿ. ಅಂದರೆ, ಹಣಕಾಸು ನೆರವು ಅಗತ್ಯವಿರುವ ಅವಧಿ, ಪೋಷಕರ ನಂತರ ಅವನನ್ನು ನೋಡಿಕೊಳ್ಳುವ ಸಂದರ್ಭದಲ್ಲಿ ಅಗತ್ಯವುಳ್ಳ ಹೆಚ್ಚುವರಿ ಮೊತ್ತ, ಇಂದಿನ ಮಟ್ಟದಲ್ಲಿಯೇ ಮುಂದಿನ ದಿನಗಳಲ್ಲೂ ವೆಚ್ಚವಾಗುತ್ತಾ ಹೋದರೆ ಬೇಕಾಗಬಹುದಾದ ಮೊತ್ತ ಇತ್ಯಾದಿ ವಿಚಾರಗಳನ್ನು ಅಂದಾಜು ಮಾಡಿ. ಇಷ್ಟೇ ಅಲ್ಲದೆ, ನಿಮಗೆ ಹಣ ಹೊಂದಿಸಿಕೊಳ್ಳಲು ಸಾಧ್ಯವಾಗುವ ಅವಧಿಯನ್ನೂ ಗಮನದಲ್ಲಿಟ್ಟು ಯೋಜನೆ ನಿರೂಪಿಸಿ.

ನೀವು ಮಗನ ಹೆಸರಲ್ಲಿ ಯಾವುದೇ ಆರ್ಥಿಕ ಅಪಾಯವಿರದ, ನಿಶ್ಚಿತ ಬಡ್ಡಿ ನೀಡುವ ಹೂಡಿಕೆಗಳನ್ನು ಹೂಡಿಕೆಗೆ ಆಯ್ಕೆ ಮಾಡಿ. ಇದರಲ್ಲೂ ಐದು, ಹತ್ತು, ಹದಿನೈದು ವರ್ಷಗಳ ಅವಧಿಗೆ ಹಣ ತೊಡಗಿಸಬಹುದು. ನಿಮ್ಮಲ್ಲಿ ಏಕ ಕಂತಿನಲ್ಲಿ ಹೂಡಿಕೆಗೆ ಹಣವಿರುವುದರಿಂದ, ಮೊದಲ ಹಂತದಲ್ಲಿ ಉತ್ತಮ ಬಡ್ಡಿ ನೀಡುವ ಠೇವಣಿಗಳಲ್ಲಿ ಹಣ ತೊಡಗಿಸಿ. ಯಾವುದೇ ಹಂತದಲ್ಲಿ ಹಣ ಬೇಕಿದ್ದರೆ, ಚಿನ್ನದ ಬಾಂಡ್‌ಗಳಲ್ಲಿ ಹಣ ತೊಡಗಿಬಹುದು. ಇದು ಶೇ 2.50ರಷ್ಟು ಬಡ್ಡಿ ಹಾಗೂ ಬಾಂಡ್ ಮಾರಾಟದ ಸಂದರ್ಭದ ಬೆಲೆ ಒದಗಿಸಿಕೊಡುತ್ತದೆ. ನಿಗದಿತ ಬಡ್ಡಿ ಕೊಡುವ ಸರ್ಕಾರಿ ಬಾಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಒಂದಷ್ಟು ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಾದ ಚೈಲ್ಡ್ ಕೇರ್ ಫಂಡ್ ಅಥವಾ ಚಿಲ್ಡ್ರನ್ಸ್ ಗಿಫ಼್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇವೂ ದೀರ್ಘಾವಧಿಯಲ್ಲಿ ಉತ್ತಮ ಆರ್ಥಿಕ ಮೊತ್ತ ನೀಡುವವು. ಹೂಡಿಕೆಗಳನ್ನು ಎಷ್ಟು ಸೊಗಸಾಗಿ ನಿಮ್ಮ ಉದ್ದೇಶಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳುತ್ತೀರಿ ಎನ್ನುವುದಷ್ಟೇ ಇಲ್ಲಿರುವ ಪ್ರಧಾನ ಅಂಶ.

ಮಾನಸಿಕವಾಗಿ ಆರೋಗ್ಯದಿಂದಿದ್ದು, ದೈಹಿಕ ಅಂಗವೈಕಲ್ಯ ಮಾತ್ರವೇ ಇದ್ದರೆ ಅವರ ಅರ್ಹತೆಗೆ ತಕ್ಕಂತೆ ವೃತ್ತಿ ಮಾಡುವ ಅವಕಾಶಗಳನ್ನೂ ಹುಡುಕಬಹುದು. ಸಣ್ಣ ವ್ಯಾಪಾರವನ್ನು ನಡೆಸಬಹುದು. ಇದರಿಂದ ಅವರಿಗೂ ಸ್ವಾವಲಂಬನೆ ಹಾಗೂ ಆತ್ಮಸ್ಥೈರ್ಯ ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT