ಕೇಂಬ್ರಿಡ್ಜ್ (ಮೆಸ್ಸಾಚುಸೆಟ್ಸ್): ಸೂಪರ್ಸ್ಟಾರ್ ರಜನಿಕಾಂತ್ ಅವರ ಬಣ್ಣ ಕೇಸರಿಯಾದರೆ ಅವರೊಂದಿಗೆ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಇತ್ತೀಚೆಗೆ ರಾಜಕಾರಣ ಪ್ರವೇಶಿಸಿರುವ ನಟ ಕಮಲ್ ಹಾಸನ್ ಹೇಳಿದ್ದಾರೆ. ರಜನಿಕಾಂತ್ ಅವರು ಬಿಜೆಪಿ ಕಡೆಗೆ ವಾಲಿದರೆ ಅವರ ಜತೆ ಸೇರುವುದಿಲ್ಲ ಎಂಬುದನ್ನು ಕಮಲ್ ಪರೋಕ್ಷವಾಗಿ ತಿಳಿಸಿದ್ದಾರೆ.
‘ಇಂದು ನಮ್ಮ ಮುಂದೆ ಇರುವ ನಿಜವಾದ ಗುರಿ ತಮಿಳುನಾಡನ್ನು ವ್ಯಾಪಿಸಿರುವ ಕಳಪೆ ರಾಜಕಾರಣವನ್ನು ಎದುರಿಸುವುದಾಗಿದೆ’ ಎಂದು ಅವರು ಹೇಳಿದ್ದಾರೆ.
ರಜನಿಕಾಂತ್ ಜತೆಗೆ ರಾಜಕೀಯ ಮೈತ್ರಿಯನ್ನು ಕಮಲ್ ತಳ್ಳಿ ಹಾಕಿಲ್ಲ. ತಮ್ಮಿಬ್ಬರ ಚಿಂತನೆಗಳು ಮತ್ತು ಪ್ರಣಾಳಿಕೆಯಲ್ಲಿ ಸಮಾನತೆ ಇದ್ದರೆ ಒಟ್ಟಾಗಿ ಚುನಾವಣೆಗೆ ಹೋಗಬಹುದು. ಆದರೆ ಧರ್ಮ ಮತ್ತು ‘ಕೇಸರಿ’ ವಿಚಾರಗಳಲ್ಲಿ ತಮ್ಮಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಇದೆ ಎಂದೂ ಅವರು ಹೇಳಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಭಾರತ ಸಮಾವೇಶದಲ್ಲಿ ಅವರು ಮಾತನಾಡಿದರು.
ಚುನಾವಣೋತ್ತರ ಮೈತ್ರಿ ಇಲ್ಲವೇ ಇಲ್ಲ ಎಂದೂ ಅವರು ತಿಳಿಸಿದ್ದಾರೆ.
‘ರಾಜಕಾರಣಿಗಳ ಜತೆಗೆ ಇರಬಾರದು, ಬದಲಿಗೆ ಜನರ ಜತೆಗೆ ಸಾಗಬೇಕು ಎಂಬ ಕಾರಣಕ್ಕಾಗಿಯೇ ನಾನು ಹೊಸ ಪಕ್ಷ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
ತಮಿಳುನಾಡಿನ ರಾಜಕೀಯ ವರ್ಗದ ಮೇಲೆ ಹರಿಹಾಯ್ದಿರುವ ಕಮಲ್, ‘ಇಲ್ಲಿ ಯಾವುದೂ ಸರಿ ಇಲ್ಲ’ ಎಂದಿದ್ದಾರೆ.
‘ಲವ್ ಜಿಹಾದ್’ ಬಗ್ಗೆ ಮಾತನಾಡಿದ ಅವರು, ‘ಹೊಸದೊಂದು ಕ್ರಾಂತಿ ಸನ್ನಿಹಿತವಾಗಿದೆ. ಜಿಹಾದ್ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ದ್ವೇಷದ ವಿರುದ್ಧ ಪ್ರೀತಿ ಜಯ ಸಾಧಿಸಲಿದೆ’ ಎಂದು ಹೇಳಿದರು.