ಬೆಂಗಳೂರು: ಶುಕ್ರವಾರ ದೇಶದ ಷೇರುಪೇಟೆಗಳು ಇಳಿಮುಖವಾಗಿವೆ. ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಹಾಗೂ ಕಚ್ಚಾ ತೈಲ ದರ ಅಲ್ಪ ಏರಿಕೆ ಕಂಡು ಬಂದಿದ್ದರೂ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಬ್ಯಾಂಕ್ ಹಾಗೂ ಫೈನಾನ್ಶಿಯಲ್ ವಲಯದ ಷೇರುಗಳು ಇಳಿಕೆ ಕಂಡಿವೆ.
ಆರಂಭದಲ್ಲಿಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 340 ಅಂಶ (ಶೇ 1.2) ಇಳಿಕೆಯಾಗಿ 27,920 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 105 ಅಂಶ ಇಳಿಕೆಯೊಂದಿಗೆ 8,160 ಅಂಶ ಮುಟ್ಟಿದೆ.
ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್ ಶೇ 7, ಇಂಡಸ್ಇಂಡ್ ಬ್ಯಾಂಕ್ ಷೇರು ಶೇ 5, ಐಸಿಐಸಿಐ ಬ್ಯಾಂಕ್ ಹಾಗೂ ಎಚ್ಡಿಎಫ್ಸಿ ಷೇರುಗಳು ಶೇ 4ರಷ್ಟು ಕುಸಿದಿವೆ. ಸಿಪ್ಲಾ, ಐಟಿಸಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಸನ್ ಫಾರ್ಮಾ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶೇ 6ರಿಂದ ಶೇ 2ರ ವರೆಗೂ ಏರಿಕೆ ದಾಖಲಿಸಿವೆ.
ಕೋವಿಡ್–19 ಪ್ರಕರಣಗಳು ಏರಿಕೆಯಾದ ಕಾರಣ ಮಾರ್ಚ್ನಲ್ಲಿ ಭಾರತದ ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆಯ ಆಟ ನಡೆಯಿತು. ಮಾರಾಟ ಒತ್ತಡ ನಿರ್ಮಾಣವಾಗುವ ಮೂಲಕ ಹೂಡಿಕೆದಾರರ ₹3.3 ಲಕ್ಷ ಕೋಟಿ ಸಂಪತ್ತು ಕರಗಿತು. ವಿದೇಶಿ ಹೂಡಿಕೆದಾರರು ₹58,632 ಕೋಟಿ ಮೌ್ಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಬೆಳಿಗ್ಗೆ 10:30ಕ್ಕೆ ಸೆನ್ಸೆಕ್ಸ್ 368.67 ಅಂಶ ಕಡಿಮೆಯಾಗಿ 27,896.64 ಅಂಶಗಳಲ್ಲಿ ವಹಿವಾಟು ನಡೆದಿದೆ. ನಿಫ್ಟಿ 100 ಅಂಶ ಕಡಿಮೆಯಾಗಿ8,153.20 ಅಂಶ ತಲುಪಿದೆ.
ಕಚ್ಚಾ ತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಗಳು ಶೇ 21ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 29.94 ತಲುಪಿದೆ. ತೈಲ ದರ ಏರಿಕೆ ಹಿಂದೆಯೇ ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡಿವೆ. ಬಜಾಜ್ ಕಂಪನಿ ವಾಹನಗಳ ಮಾರಾಟ ಶೇ 55ರಷ್ಟು ಇಳಿಕೆಯಾಗಿದೆ. ಇದು ದೇಶದ ಆಟೊ ವಲಯದ ಪರಿಸ್ಥಿತಿಯನ್ನು ಸಾರುವಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.