ಬೆಂಗಳೂರು: ‘ಬಿಜೆಪಿ ಮತ್ತು ಕುಮಾರಸ್ವಾಮಿಯವರು ಏನೇ ತಂತ್ರ ಮಾಡಿದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಿಮ್ಮ ಹುಡುಗ ಜಮೀರ್ ಸಚಿವರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮ್ಮದ್ ಖಾನ್ ಮಾಡಿರುವ ಭಾಷಣದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಬರೆದಿಟ್ಟುಕೊಳ್ಳಿ, ನಾನು ಸಚಿವನಾದರೆ ಐದು ವರ್ಷದೊಳಗೆ ಎಂತೆಂತಹ ಅಭಿವೃದ್ಧಿ ಮಾಡುತ್ತೇನೆಂದರೆ ಗಿನ್ನಿಸ್ ದಾಖಲೆಯಲ್ಲಿ ನನ್ನ ಹೆಸರು ಬರಲಿದೆ’ ಎನ್ನುವ ಹೇಳಿಕೆ ವಿಡಿಯೊದಲ್ಲಿದೆ.
ಆದರೆ, ಚಿಕಾಗೊದಲ್ಲಿ ನೆಲೆಸಿರುವ ಕಮಲ್ ಲೋಚನ್ ಮಹಾಂತ್ ಎಂಬುವರು ಇದೇ ವಿಡಿಯೊ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ರಕ್ತಪಾತ ಆಗಲಿದೆ ಎಂದು ಜಮೀರ್ ಶಪಥ ಮಾಡಿದ್ದಾರೆ. ಆತ್ಮೀಯ ಕನ್ನಡಿಗರೇ ನೀವು ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಮೊದಲು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ’ ಎಂದು ಒಕ್ಕಣಿಕೆ ಬರೆದಿದ್ದಾರೆ.
ಇದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾದ ನಂತರ ಮಹಾಂತ್ ತಮ್ಮ ಖಾತೆಯಿಂದ ಪೋಸ್ಟ್ ತೆಗೆದು ಹಾಕಿದ್ದಾರೆ. ’ಈ ಬಗ್ಗೆ ಯಾವುದೇ ರೀತಿಯ ಲಿಂಕ್ಗಳು ಲಭಿಸಿಲ್ಲ. ಹಾಗೇನಾದರೂ ಸಿಕ್ಕರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಕಮಿಷನರ್ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.