ಹುಬ್ಬಳ್ಳಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ಉಚ್ಚಾಟನೆ ಮಾಡಿದರೆ ₹ 10 ಕೋಟಿ ಕೊಡುತ್ತೇನೆ ಎಂದು ಆಗ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರ್ ಆಮಿಷ ಒಡ್ಡಿದ್ದರು ಎಂದು ಕೆಜೆಪಿ ರಾಷ್ಟ್ರೀಯ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಇಂದ್ರಜಿತ್ ಲಂಕೇಶ್ ಮತ್ತು ಚಂದ್ರಚೂಡ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು. ಇದನ್ನು ಆಗಲೇ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೆ ಎಂದು ಪದ್ಮನಾಭ ಹೇಳಿದರು. ಶೆಟ್ಟರ್ ಮನೆಗೆ ಕರೆಯಿಸಿಕೊಂಡು ಆಮಿಷ ಒಡ್ಡಿದ್ದರು ಎಂದರು.
ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಈ ಆರೋಪ ಮಾಡುತ್ತಿಲ್ಲ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಲೂ ನಾನು ಸಿದ್ಧನಿದ್ದೇನೆ. ಈ ಕುರಿತು ನನ್ನಲ್ಲಿ ವಿಡಿಯೊ ಇದ್ದು ಕೆಲ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕ ಜನತಾ ಪಕ್ಷದ 43 ಅಭ್ಯರ್ಥಿಗಳ ಪಟ್ಟಿಯನ್ನು ಇಲ್ಲಿ ಬಿಡುಗಡೆ ಮಾಡಿದರು.