ಜೋಧಪುರ/ರಾಜಸ್ಥಾನ : ತನ್ನಂಥ ಬ್ರಹ್ಮಜ್ಞಾನಿಗಳು ಬಾಲಕಿಯರನ್ನು ಕಾಮತೃಷೆ ತಣಿಸಲು ಬಳಸಿಕೊಳ್ಳುವುದು ತಪ್ಪಲ್ಲ. ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸೆಗಿದರೂ ಪಾಪ ತಟ್ಟುವುದಿಲ್ಲ ಎಂದು ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು (77) ನಂಬಿದ್ದ!
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ‘ಸಂತ’ನ ಬಗ್ಗೆ ಇಂತಹ ಅನೇಕ ಬೆಚ್ಚಿ ಬೀಳುವ ಸಂಗತಿಗಳನ್ನು ರಾಹುಲ್ ಸಾಚರ್ ಎಂಬ ಆತನ ಮಾಜಿ ಕಟ್ಟಾ ಅನುಯಾಯಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
‘ಬಾಬಾ ಲೈಂಗಿಕಶಕ್ತಿಯ ವೃದ್ಧಿಗೆ ಹಲವು ಕಾಮೋತ್ತೇಜಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ. ಅಫೀಮಿನಂತಹ ಮಾದಕ ಪದಾರ್ಥ ಇವುಗಳಲ್ಲಿ ಒಂದು. ಅಫೀಮಿಗೆ ಆತ ‘ಪಚೇಡ್ ಬೂಟಿ’ ಎಂಬ ಸಾಂಕೇತಿಕ ಹೆಸರು ಇಟ್ಟಿದ್ದ’ ಎಂದು ರಾಹುಲ್ ತಿಳಿಸಿದ್ದಾನೆ.
2003ರಲ್ಲಿ ರಾಜಸ್ಥಾನದ ಪುಷ್ಕರ್, ಹರಿಯಾಣ ಮತ್ತು ಗುಜರಾತ್ ಆಶ್ರಮಗಳಲ್ಲಿ ಈತ ಕಾಮತೃಷೆ ತಣಸಿಕೊಳ್ಳಲು ಬಾಲಕಿಯರನ್ನು ಬಳಸಿಕೊಳ್ಳುತ್ತಿದ್ದ. ಅವರಿಗಾಗಿ ಆಶ್ರಮಗಳಲ್ಲಿಯೇ ಹುಡುಕಾಟ ನಡೆಸುತ್ತಿದ್ದ.
ಆಶ್ರಮದಲ್ಲಿದ್ದ ಮೂವರು ಸಹಾಯಕಿಯರು ಈ ಕೃತ್ಯಕ್ಕೆ ನೆರವಾಗುತ್ತಿದ್ದರು. ಇಷ್ಟವಾಗುವ ಬಾಲಕಿಯರ ಮೇಲೆ ಟಾರ್ಚ್ ಬೆಳಕು ಚೆಲ್ಲುವ ಮೂಲಕ ಸಹಾಯಕರಿಯರಿಗೆ ಸಂಕೇತ ನೀಡುತ್ತಿದ್ದ. ಅದನ್ನು ಅರಿತುಕೊಂಡ ಅವರು ಆ ಬಾಲಕಿಯರನ್ನು ‘ಸಂತ’ನ ಅಂತಃಪುರಕ್ಕೆ ಕರೆದೊಯ್ಯುತ್ತಿದ್ದರು’ ಎಂದಿದ್ದಾನೆ.
‘ಗೋಡೆ ಏರಿದಾಗ ಈತನ ದುಷ್ಕೃತ್ಯವನ್ನು ಕಣ್ಣಾರೆ ಕಂಡು ದಂಗಾಗಿ ಹೋಗಿದ್ದೆ. ಈ ಬಗ್ಗೆ ರೊಚ್ಚಿಗೆದ್ದು ನೇರವಾಗಿ ಕುಟೀರಕ್ಕೆ ತೆರಳಿ ಇದು ಪಾಪವಲ್ಲವೇ ಎಂದು ಪ್ರಶ್ನಿಸಿದ್ದೆ. ಆಗ ಆತ ‘ಬ್ರಹ್ಮಜ್ಞಾನಿಗಳಿಗೆ ಇದರಿಂದ ಪಾಪ ತಟ್ಟುವುದಿಲ್ಲ’ ಎಂದು ತಣ್ಣಗೆ ಉತ್ತರಿಸಿದ್ದ ’ ಎಂದು ರಾಹುಲ್ ತನ್ನ ಅನುಭವ ಹಂಚಿಕೊಂಡಿದ್ದಾನೆ.
** ನಿರಾಳವಾದ ಸಂತ್ರಸ್ತೆ
‘ಕಳೆದ ನಾಲ್ಕು ವರ್ಷಗಳಿಂದ ನಮಗೆ ನಿದ್ದೆಯೇ ಇರಲಿಲ್ಲ. ನಿನ್ನೆ (ಬುಧವಾರ ರಾತ್ರಿ) ಚೆನ್ನಾಗಿ ನಿದ್ದೆ ಮಾಡಿದ್ದೇವೆ. ಆಸಾರಾಂನಿಂದ ಇನ್ನು ಮುಂದೆ ನಮಗೆ ತೊಂದರೆ ಎದುರಾಗದು ಎಂಬುದು ಖಚಿತವಾಗಿದೆ’ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಬಾಲಕಿಯ ಬದುಕಿನಲ್ಲಿ ಬಂದೆರಗಿದ್ದ ದುರಂತದಿಂದಾಗಿ ಆಕೆಯ ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಈಗ ಕುಟುಂಬ ನಿರಾಳವಾಗಿದೆ. ಹಾಗಾಗಿ ಆಕೆ ಬಯಸುವ ಶಿಕ್ಷಣ ಒದಗಿಸಲು ಕುಟುಂಬ ಮುಂದಾಗಿದೆ.