ಸೋಮವಾರಪೇಟೆ: ವಿಧಾನ ಸಭಾ ಚುನಾವಣೆ ಮೇ 12ರ ಶನಿವಾರ ನಡೆದು, ಕಳೆದ ಒಂದೆರಡು ತಿಂಗಳಿನಿಂದ ಅವಿತರ ಶ್ರಮ ವಹಿಸಿದ್ದ ಅಭ್ಯರ್ಥಿಗಳು ಭಾನುವಾರ ವಿಶ್ರಾಂತಿಗೆ ಹೆಚ್ಚಿನ ಆಧ್ಯತೆ ನೀಡಿದ್ದು ಕಂಡುಬಂದಿತು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಬಿ.ಎ.ಜೀವಿಜಯ ಮತದಾನ ಸಂಜೆ 6ಗಂಟೆಗೆ ಮುಗಿದರೂ, ರಾತ್ರಿ 8.15ಕ್ಕೆ ಬಿಳಿಗೇರಿಯ ತಮ್ಮ ನಿವಾಸಕ್ಕೆ ಹಿಂದಿರುಗಿದ್ದಾರೆ. ನಂತರ ಮನೆಗೆ ಆಗಮಿಸಿದ್ದ ಕಾರ್ಯಕರ್ತರೊಂದಿಗೆ ಚುನಾವಣೆಯ ಬಗ್ಗೆ ಚರ್ಚಿಸಿದರು. ನಂತರ ಬಂದುಗಳೊಂದಿಗೆ ಊಟವನ್ನು ಮುಗಿಸಿ ನಂತರ 10.30ಕ್ಕೆ ನಿದ್ರೆಗೆ ಶರಣಾಗಿದ್ದಾರೆ. ಚುನಾವಣೆ ಕೆಲಸದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರಿಂದ ಇಂದು ತಡವಾಗಿ ಎದ್ದಿದ್ದಾರೆ. ಬೆಳಗ್ಗೆ 6 ಗಂಟೆಗೆ ಎದ್ದು ಸ್ವಲ್ಪ ಸಮಯ ಯೋಗ ಮಾಡಿದ ನಂತರ ಸ್ನಾನ ಮಾಡಿ, ಪೂಜೆ ಪುನಸ್ಕಾರದ ನಂತರ ಮನೆಗೆ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಚರ್ಚೆ ನಡೆಸಲಾಗಿದೆ. 10ಗಂ ಟೆಗೆ ರೊಟ್ಟಿಯನ್ನು ತಿಂದು ಕಾಫಿ ತೋಟದಲ್ಲಿ ಒಂದು ಸುತ್ತು ಹಾಕಿ ಕಾರ್ಮಿಕರೊಂದಿಗೆ ಚರ್ಚಿಸಿದ್ದಾರೆ. ಮನೆಗೆ ಹಿಂದಿರುಗಿದ ನಂತರ ಕುಟುಂಬದವರೊಂದಿಗೆ ಹಾಗೂ ಮೊಮ್ಮಕ್ಕಳೊಂದಿಗೆ ಕಾಲ ಕಳೆದರು.
ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಅನಿವಾರ್ಯವಾಗಿದ್ದ ನಾನು, ಕುಮಾರಸ್ವಾಮಿಯವರ ಒತ್ತಡಕ್ಕೆ ಮಣಿದು ಮಡಿಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಪಕ್ಷ ಚುನಾವಣೆಗೆ ಕಳೆದ ಒಂದು ವರ್ಷದಿಂದಲೇ ಸಿದ್ಧತೆ ಮಾಡಿಕೊಂಡಿದ್ದರಿಂದ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಈ ಬಾರಿಯ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸುವುದರೊಂದಿಗೆ ಎರಡೂ ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಇತರ ಪಕ್ಷದ ಕಾರ್ಯಕರ್ತರು, ಜಾತಿ, ಮತ ಭೇದ ಮರೆತು ಹಗಲಿರುಳು ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ಪಡೆಯಲು ಶ್ರಮಿಸಿರುವುದು ನಮ್ಮ ಹೆಗ್ಗಳಿಕೆ. ಪ್ರಸಕ್ತ ಚುನಾವಣೆಯಲ್ಲಿ ಕೆಲವು ಹಣಬಲದಿಂದ ಗೆಲುವು ದಾಖಲಿಸುತ್ತಾರೆಂಬ ಕೆಲವರ ಭ್ರಮೆಯನ್ನು ಮಂಗಳವಾರದ ಎಣಿಕೆ ಕಾರ್ಯದಿಂದ ತೊಡೆದುಹಾಕಲಾಗುವುದು. ಜನರ ಬೆಂಭಲವಿಲ್ಲದೆ ಯಾರೂ ಚುನಾವನೆಯಲ್ಲಿ ಗೆಲುವು ದಾಖಲಿಸಲು ಅಸಾಧ್ಯ. ನಮಗೆ ಈ ಬಾರಿ ಜನಬೆಂಭಲ ವ್ಯಕ್ತವಾಗಿದೆ ಎಂದರು.
ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಶಾಸಕನಾಗಿ ಜೆಡಿಎಸ್ ಪಕ್ಷದಿಂದ ಹೆಚ್ಚಿನ ಮತಗಳಿಂದ ಆಯ್ಕೆಯಾಗುವುದು ಖಚಿತ ಎಂದು ತಿಳಿಸಿದರು. ಸೋಮವಾರಪೇಟೆಯ ಭಾಗದಿಂದ ಹೆಚ್ಚಿನ ಮತಗಳಿಸಿದರೂ, ಮಡಿಕೇರಿ ಭಾಗದಿಂದ ನಿರೀಕ್ಷಿತ ಮತ ಗಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗೆಲವು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಮಡಿಕೇರಿ ನಗರಸಭೆ, ಗಾಳಿಬೀಡು, ಮಕ್ಕಂದೂರು, ಹೊಸ್ಕೇರಿ, ಕಡಗದಾಳು, ಮರಗೋಡು, ಹಾಕತ್ತೂರು, ಮೂರ್ನಾಡು ಸೇರಿದಂತೆ ಮಡಿಕೇರಿ ವಿಭಾಗದಲ್ಲಿ ಹೆಚ್ಚಿನ ಮತಗಳು ಪಕ್ಷಕ್ಕೆ ಬರಲಿವೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿಯವರ ಸರ್ಕಾರ ಬರುವುದು ಖಚಿತವಾಗಿದ್ದು, ಚುನಾವಣೆಯ ಸಂದರ್ಭ ಪಕ್ಷದ ಪ್ರಣಾಳಿಕೆಯಂತೆ ರೈತರು ಹಾಗೂ ಸ್ತ್ರೀಶಕ್ತಿ ಸದಸ್ಯರುಗಳ ಸಾಲ ಮನ್ನಾ ಮಾಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.