ಕನಕಪುರ: ಲಾಕ್ಡೌನ್ ಸಂದರ್ಭದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲೇ ಸರ್ಕಾರ ರೈತರ ಪರವಾಗಿ ನಿಲ್ಲುವ ಬದಲು ರೈತ ವಿರೋಧಿ ನೀತಿಗಳಿಗೆ ಕಾನೂನು ತಿದ್ದುಪಡಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹನುಮಂತನಗರ ಗ್ರಾಮದಲ್ಲಿ ರೈತ ಸಂಘದ ಹೋಬಳಿ ಘಟಕ ಉದ್ಘಾಟಿಸಿದ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಎಪಿಎಂಸಿಗೆ ಕಾನೂನು ತಿದ್ದಪಡಿ ಮಾಡಿದರೆ ರೈತರು ಪ್ರತಿಭಟಿಸುವುದಿಲ್ಲ ಎಂದು ಅವಕಾಶ ಸಿಂಧು ಕೆಲಸ ಮಾಡಿದ್ದಾರೆ ಎಂದು ದೂರಿದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಮತ್ತು ಬಡವರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿರುವ ವಿದ್ಯುತ್ ಇಲಾಖೆಗೆ ತಿದ್ದುಪಡಿ ತಂದು ಖಾಸಗಿಕರಣ ಮಾಡಲು ಹೊರಟಿರುವುದು ರೈತ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೊರೊನಾ ತಡೆಗಟ್ಟಲು ಲಾಕ್ಡೌನ್, ಸೀಲ್ಡೌನ್ ಮಾಡಲಾಗಿದೆ. ಜನರು ರೋಗ ತಡೆಗೆ ಮನೆಯಿಂದ ಹೊರಬರುವಂತಿಲ್ಲ. ಗುಂಪು ಸೇರುವಂತಿಲ್ಲ, ಅಂತರ ಕಾಯ್ದುಕೊಳ್ಳಬೇಕಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರನ್ನು ಯಾಮಾರಿಸಲು ಸರ್ಕಾರ ಹೊರಟಿದೆ ಎಂದು ದೂರಿದರು.
ಟ್ರ್ಯಾಕ್ಟರ್ ಹೊಂದಿರುವ ರೈತರು ಬಿಪಿಎಲ್ ಕಾರ್ಡ್ ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಹೇಳಿದೆ. ಕೃಷಿ ಚಟುವಟಿಕೆಗಾಗಿ ರೈತರು ಟ್ರ್ಯಾಕ್ಟರ್ನ್ನು ಸಾಲಮಾಡಿ ಖರೀದಿಸಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ಯುವ ಘಟಕದ ಅಧ್ಯಕ್ಷ ರವಿ, ಜಿಲ್ಲಾ ಸಂಚಾಲಕ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಭಿ, ಕೋಡಿಹಳ್ಳಿ ಹೋಬಳಿ ಅಧ್ಯಕ್ಷ ಲಕ್ಷ್ಮಣ, ಯುವ ರೈತ ಘಟಕದ ಕಾರ್ಯದರ್ಶಿ ಹರೀಶ್, ಮಹಿಳಾ ಪದಾಧಿಕಾರಿಗಳಾದ ಉಷಾರಾಣಿ, ಪ್ರತಿಭಾ, ಸುಕನ್ಯ, ಮಂಜುಳಾ ಇದ್ದರು.