ನಾನು ವಿಷ್ಣು, ರಜನಿ ಮನೆಗೆ ಆಗಾಗ ಹೋಗುತ್ತಿದ್ದೆ. ವಿಷ್ಣು ಮನೆಯಲ್ಲಿ ಅಡುಗೆ ಮಾಡುವ ಶ್ರೀಧರ್ ಕೈರುಚಿಯ ಸಾರನ್ನು ಇನ್ನೂ ಮರೆತಿಲ್ಲ. ಚಾಲಕ ರಾಧಾ ಕೂಡ ನನಗೆ ಚೆನ್ನಾಗಿ ಗೊತ್ತು. ಅಷ್ಟೇಕೆ, ವಿಷ್ಣು ಸ್ನೇಹಿತರಾದ ನಿತ್ಯಾನಂದ, ವಿಠೋಬಾ ಇಂದಿಗೂ ನನ್ನ ಹೃದಯದಲ್ಲಿದ್ದಾರೆ. ನನ್ನಲ್ಲಿ ಇದ್ದ ಅರಸು ಎಂಬ ಚಾಲಕ ವಿಷ್ಣು ಹತ್ತಿರ ಕೆಲಸಕ್ಕೆ ಹೋಗಿದ್ದ. ನನ್ನ ಮ್ಯಾನೇಜರ್ ರಾಮದೊರೈ ಅವರನ್ನು ಅವನಲ್ಲಿಗೆ ನಾನೇ ಕಳಿಸಿಕೊಟ್ಟಿದ್ದೆ. `ವಿಷ್ಣು, ಜಗಳ ಆಡಬೇಡ' ಎಂದು ನಾನು ಪದೇಪದೇ ಹೇಳುತ್ತಿದ್ದೆ.
ದ್ವಾರಕೀಶ್-ವಿಷ್ಣು ಇನ್ನೂ ಏನೇನೋ ಮಾಡುತ್ತಾರೆ ಎಂದು ಜನ ಮಾತನಾಡಿಕೊಳ್ಳುವ ಹೊತ್ತಿನಲ್ಲೇ ಕ್ಲೈಮ್ಯಾಕ್ಸ್ ಬೇರೆಯೇ ಆಯಿತು. ನಮ್ಮಿಬ್ಬರ ಜೋಡಿಯನ್ನು ಬೇರ್ಪಡಿಸಲು ಕೆಲವು ಮನಸ್ಸುಗಳು ಕಾಯುತ್ತಿದ್ದವು.