ಬೆಂಗಳೂರು: ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್ ನೀಡದಿರುವ ಬಗ್ಗೆ ವಿಧಾನಪರಿಷತ್ನಲ್ಲಿ ಸದಸ್ಯರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ನ ಪುಟ್ಟಣ್ಣ ಮಾತನಾಡಿ, ‘ಇಂತಹ ಮುಖ್ಯವಾದ ಕಾರ್ಯಕ್ರಮಕ್ಕೆ ಪಾಸ್ ಪಡೆಯಲು ಜನಪ್ರತಿನಿಧಿಗಳೇ ಪರದಾಡಬೇಕಾಗಿದೆ’ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು, ‘ಹಲವು ಸದಸ್ಯರು ಪಾಸ್ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದ್ದು, ಅತಿ ಶೀಘ್ರದಲ್ಲಿ ಪಾಸ್ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಜೆಡಿಎಸ್ನ ಬಸವರಾಜ ಹೊರಟ್ಟಿ ಮಾತನಾಡಿ, ‘ಪಾಸ್ಗಳ ಬಗ್ಗೆ ಸದನದಲ್ಲಿ ಮಾತನಾಡುವುದು ಉಚಿತವಲ್ಲ. ಪಾಸ್ ನೀಡುವಂತೆ ಭಿಕ್ಷೆ ಬೇಡುವುದೂ ಸರಿ ಅಲ್ಲ. ಇದೇ ರೀತಿ ಕ್ರಿಕೆಟ್ ಮತ್ತಿತರ ಕಾರ್ಯಕ್ರಮಗಳಿಗೆ ಪಾಸ್ ಕೇಳುವುದು ಸೂಕ್ತವಲ್ಲ’ ಎಂದರು.