ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯೆಡೆಗೆ ಪ್ರಯಾಣವೇ ಲಾಭ

Last Updated 2 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ |
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು ? |
ಆಟದೋಟವೆ ಲಾಭ – ಮಂಕುತಿಮ್ಮ || 330 ||

ಪದ-ಅರ್ಥ: ಕೌತುಕದ=ಕುತೂಹಲದ, ಚೀಟಿ=ಇಸ್ಪೀಟಿನ ಎಲೆ, ಬೀಳೆನೆನಲ್=ಬೀಳೆನು+ಎನಲ್(ಎನ್ನಲು), ಏಟಾಯ್ತೆ=ಏಟು+ಆಯ್ತೆ, ಆಟದೋಟವೆ=ಆಟದ+ಓಟವೆ.

ವಾಚ್ಯಾರ್ಥ: ಆಟದ ಫಲ ಏನು? ಆಟದ ಕುತೂಹಲದ ರುಚಿಯೆ ಅದರ ಫಲ. ಹಾಕಿದ ಎಲೆ ತಾನು ಬೀಳೆನು ಎಂದರೆ ಆಟ ಸಾಗುವುದೆ? ಈ ಆಟದಲ್ಲಿ ಪೆಟ್ಟೆಯ್ತೆ, ಗೆಲುವಾಯ್ತೆ ಎಂದು ಕೇಳುವುದೇಕೆ? ಆಟದ ಓಟವೇ ಲಾಭ.

ವಿವರಣೆ: ಬದುಕೇ ಒಂದು ಆಟ. ಅದು ಜನ್ಮಜನ್ಮಾಂತರದ ಆಟ. ಪ್ರತಿಯೊಂದು ಆಟಕ್ಕೆ ಒಂದು ಫಲಿತಾಂಶವಿರಬೇಕಲ್ಲವೆ? ಹಾಗಾದರೆ ಈ ಬದುಕಿನ ಆಟದ ಫಲವೇನು? ಅಟವನ್ನು ಆಡುವುದರಿಂದ ಆಗುವ ಲಾಭವೇನು? ಸ್ಮೃತಿ ಪ್ರವರ್ತಕರಾದ ಆಪಸ್ತಂಬ ಮಹರ್ಷಿಗಳು ಹೇಳುತ್ತಾರೆ,

ಆತ್ಮಲಾಭಾನ್ನ ಪರಂ ವಿದ್ಯತೇ ||

‘ಆತ್ಮಜ್ಞಾನಕ್ಕಿಂತ ಹೆಚ್ಚಿನ ಲಾಭವಾವುದೂ ಇರದು’ ಎಂದು ಸಿದ್ಧಾಂತವನ್ನು ನೀಡುತ್ತಾರೆ. ಸತ್ಯಗಳಲ್ಲೆಲ್ಲ ಪರಮಸತ್ಯವಾದ್ದು ಆತ್ಮವಸ್ತು. ಅದು ಸರ್ವಕಾಲಗಳಲ್ಲಿ, ಸರ್ವಅವಸ್ಥೆಗಳಲ್ಲಿ ಅಬಾಧಿತವಾಗಿ, ಅನಂತವಾಗಿರುವಂಥದ್ದು. ಅದನ್ನು ಅರಿಯುವ ಕುತೂಹಲದ ರುಚಿಯೇ ಬದುಕಿನ ಫಲ. ಆ ಆತ್ಮವಸ್ತುವನ್ನು ಅರಿಯಲು ಮಾಡುವ ಸರ್ವಪ್ರಯತ್ನವೂ ಆಟವೆ. ಈ ಆಟದಲ್ಲಿ ಕೆಲವೊಮ್ಮೆ ಪೆಟ್ಟಾಗಬಹುದು. ಆತ್ಮಜ್ಞಾನವನ್ನು ಪಡೆಯುವ ಮಾರ್ಗದಲ್ಲಿ ಸೋಲುಂಟಾಗಬಹುದು. ಆಗ ನಿರಾಸೆಯಾಗಬಹುದು, ವೈಫಲ್ಯತೆ ಕಾಡಬಹುದು. ಋಷಿ ವಿಶ್ವಾಮಿತ್ರರಿಗೆ ಆದದ್ದು ಅದೇ. ಸಾಧನೆಯ ಮಾರ್ಗದಲ್ಲಿ ಮೇನಕೆಗೆ ಮನಸೋತದ್ದುಂಟು, ತ್ರಿಶಂಕುವಿಗೆ ಹಟದಿಂದ ಪ್ರತಿ ಸ್ವರ್ಗವನ್ನು ನಿರ್ಮಿಸುವಲ್ಲಿ ತಮ್ಮ ಸಾಕಷ್ಟು ತಪಃಶಕ್ತಿಯನ್ನು ಕಳೆದುಕೊಂಡಿದ್ದಿರಬಹುದು. ಅಂತೆಯೇ ಹರಿಶ್ಚಂದ್ರನ ಸತ್ಯಾಪರೀಕ್ಷೆಯಲ್ಲೂ ಘನತೆಗೆ ಕೊಂಚ ಹಾನಿಯಾಗಿದ್ದಿರಬಹುದು.

ಆದರೆ ಅವರು ಪ್ರಯತ್ನವನ್ನು ಬಿಡಲಿಲ್ಲ. ಪ್ರಯತ್ನದಲ್ಲಿ ಸೋತಿರಬಹುದು, ಆದರೆ ಬದುಕಿನಲ್ಲಿ ಅಲ್ಲ. ಸೋತಾಗ ಪ್ರತಿ ಬಾರಿಯೂ ಪುಟಿದೆದ್ದು ಬಹುದೊಡ್ಡ ಆತ್ಮಜ್ಞಾನಿಯಾದರು. ಎಲ್ಲಿ ಸೋತುಬಿಡುತ್ತೇನೋ ಎಂದು ಪ್ರಯತ್ನವನ್ನೇ ಮಾಡದಿದ್ದರೆ ಸಾಧನೆಯ ಮಾರ್ಗ ತೆರೆಯುವುದೆಂತು? ಅದನ್ನೇ ಕಗ್ಗ, ‘ಚೀಟಿ ತಾಂ ಬೀಳದಿರೆ ಆಟ ಸಾಗುವುದೆ’ ಎಂದು ಕೇಳುತ್ತದೆ. ಇಸ್ಪೀಟು ಆಟದಲ್ಲಿ ಸೋಲಬಹುದು ಎಂದು ಎಲೆಯನ್ನೇ ಹಾಕದಿದ್ದರೆ ಆಟ ಮುಂದುವರಿಯುವುದು ಹೇಗೆ?

ಆತ್ಮಜ್ಞಾನವನ್ನು ಪಡೆಯುವ ಜೀವನದ ಪ್ರಯತ್ನದಲ್ಲಿ ಗೆಲುವು ಎಂದರೇನು? ಅದೇನು ಯುದ್ಧವೇ? ದೊರೆಯುವ ಆತ್ಮಜ್ಞಾನವೇ, ಆಥವಾ ಅದನ್ನು ಪಡೆಯುವ ದಾರಿಯಲ್ಲಿ ದೊರೆತ ವಿಶೇಷ ಅನುಭೂತಿಗಳೇ ಗೆಲುವು. ಇದು ಒಂದೇ ಜನ್ಮದಲ್ಲಿ ಆಗಲಿಕ್ಕಿಲ್ಲ. ತೊಂದರೆ ಇಲ್ಲ. ನಮ್ಮ ನಂಬಿಕೆಯಲ್ಲಿ ಒಂದೇ ಜನ್ಮವೆಂಬುದು ಇಲ್ಲ. ಅದು ಹಾಗೆಯೇ ಮುಂದುವರೆಯುತ್ತದೆ. ನಮ್ಮ ಗುರಿ ಸ್ಪಷ್ಟವಿದೆ. ಅದನ್ನೊಂದು ಆಟವೆಂದು ಭಾವಿಸಿ ಗುರಿ ತಲುಪಲು ಹೊರಡೋಣ. ಇಂದೇ, ನಾಳೆಯೇ ಆದೀತೆಂಬ ಅವಸರ ಬೇಡ. ಯಾಕೆಂದರೆ ಗುರಿಯನ್ನು ತಲುಪುವ ಮಾರ್ಗದಲ್ಲಿ ಸಾಗುವುದೂ ಒಂದು ಸುಂದರವಾದ ಲಾಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT