ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮದ ವೇಳೆ ಚೈನಾ ಇಂಡಿಯಾ ಭಾಯಿ ಭಾಯಿ

Last Updated 9 ಏಪ್ರಿಲ್ 2019, 10:14 IST
ಅಕ್ಷರ ಗಾತ್ರ

ಬ್ರಿಗೇಡಿಯರ್ ಆಗಿ ಪದೋನ್ನತಿ ಹೊಂದಿದ ನಾನು ಬೆಂಗಳೂರಿನಿಂದ ಕೋಲ್ಕತಾ ಮಾರ್ಗವಾಗಿ ಸಿಲಿಗುರಿ ತಲುಪಿದೆ. ಅಲ್ಲಿಂದ ಜಿಪ್ಸಿಯ ಮೂಲಕ ಗಾಂಗ್ಟಾಕ್ ತಲುಪಿದೆ. ಅತ್ಯಂತ ಸುಂದರ ಸ್ವರ್ಗದಂತಿದ್ದ ನಾಡದು. ಶಾಂಗ್ರಿಲಾ ಎಂದೇ ಗುರುತಿಸಲ್ಪಡುವ ಭೂಲೋಕದ ಸ್ವರ್ಗ-ಸ್ವಚ್ಛ ಸುಂದರ ನಾಡು. ಗಾಂಗ್ಟಾಕ್‍ನ್ನು ತಲುಪುವ ರಸ್ತೆ ಮಾರ್ಗವೂ ಬಲು ಸುಂದರ. ತೀಸ್ತಾ ನದಿಯ ದಂಡೆಯ ಮೇಲೆ ಡ್ರೈವ್ ಮಾಡುತ್ತಾ ಆ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ಒಂದೇ ರೀತಿಯಲ್ಲಿ ಏರುಗತಿಯ ರಸ್ತೆಯ ಮೇಲೆ ಸುಮಾರು 3000ಅಡಿ ಎತ್ತರದಲ್ಲಿದೆ ಈ ಊರು.

ಅಲ್ಲಿನ ಸೈನ್ಯದ ವಿಭಾಗೀಯ ಕಚೇರಿಯಲ್ಲಿ ನಾನು ರಿಪೋರ್ಟ್ ಮಾಡಿಕೊಂಡು, ಒಂದು ರಾತ್ರಿ ಅಲ್ಲಿಯೇ ಉಳಿದು ಮರುದಿನ ಮತ್ತೆ ಪ್ರಯಾಣ ಮುಂದುವರಿಸಿ 9000ಅಡಿ ಎತ್ತರದ ಪ್ರದೇಶವನ್ನು ಸೇರಿಕೊಂಡೆ. ಅಲ್ಲಿ ಎಲ್ಲಾ ಸೈನಿಕರನ್ನೂ ವಿವಿಧ ಸ್ಥಳಗಳಿಗೆ ಕಳಿಸುವ ಟ್ರಾನ್ಸಿಟ್ ಕ್ಯಾಂಪ್ ಇತ್ತು. ಮತ್ತೆ ಅಲ್ಲಿ ಸೈನಿಕರ ತುರ್ತು ಚಿಕಿತ್ಸೆಗೆ ಬೇಕಾಗುವ ವ್ಯವಸ್ಥೆ ಇರುವ ಸೈನ್ಯದ ಆಸ್ಪತ್ರೆಯೂ ಇತ್ತು. ಶಸ್ತ್ರಚಿಕಿತ್ಸಾ ತಂಡ ಮತ್ತು ದಂತ ವೈದ್ಯಕೀಯ ವಿಭಾಗವೂ ಅಲ್ಲಿತ್ತು. ಹತ್ತಿರದಲ್ಲೇ ಶಸ್ತ್ರಾಸ್ತ್ರ ವಿಭಾಗದ ರೆಜಿಮೆಂಟ್ ಕೂಡಾ ಇತ್ತು. ಅಂತೂ ಈ ಸುದೀರ್ಘ ಪಯಣದ ನಂತರ ಏಳು ದಿನಗಳನ್ನು ಅಲ್ಲೇ ಅನೇಕ ವೈದ್ಯಕೀಯ ತಪಾಸಣೆಗೊಳಗಾಗಿ ಅಂತೂ ನಾನು ವೈದ್ಯಕೀಯವಾಗಿ ಫಿಟ್ ಎಂಬ ಪ್ರಮಾಣ ಪತ್ರ ಪಡೆದೆ. ನಂತರ ನನ್ನ ಬ್ರಿಗೇಡಿಯರ್ ಕರ್ತವ್ಯ ನಿರ್ವಹಣೆಯ 13000ಅಡಿ ಎತ್ತರದ ಪ್ರದೇಶಕ್ಕೆ ಪ್ರಯಾಣ ಬೆಳೆಸಿದೆ.

ಪೂರ್ವ ಸಿಕ್ಕಿಂನಲ್ಲಿ ಸುಮಾರು 12000-16000ಅಡಿ ಎತ್ತರದಲ್ಲಿ ಇನ್‍ಫಂಟರಿ ಬೆಟಾಲಿಯನ್‍ನ್ನು ಪೋಸ್ಟ್ ಮಾಡಿರಲಾಗುತ್ತದೆ. ಭಾರತ ಮತ್ತು ಚೀನಾ/ಟಿಬೆಟ್ ನಡುವಿನ ಗಡಿ ಪ್ರದೇಶ ಅತ್ಯಂತ ಸ್ಪಷ್ಟವಾಗಿ ಕಾಣುವಂತೆ ಭೌಗೋಳಿಕವಾಗಿಯೇ ಪ್ರಾಕೃತಿಕವಾಗಿ ನಿರ್ಮಾಣವಾಗಿತ್ತು. ಇದನ್ನು ‘ವಾಟರ್ ಶೆಡ್’ ಎಂದು ಕರೆಯುತ್ತಾರೆ. ಅತ್ಯಂತ ಎತ್ತರದ ಪರ್ವತ ಪ್ರದೇಶಗಳು ಹಿಮಾಲಯವನ್ನು ಸಂಪರ್ಕಿಸುತ್ತಿದ್ದರೆ, ಅತೀ ಎತ್ತರದ ಪ್ರದೇಶದಲ್ಲಿ ಮಂಜುಗಡ್ಡೆ ನೀರಾದಾಗ, ಅದು ಒಂದೆಡೆ ಟಿಬೆಟ್ ಕಡೆಗೆ ಮತ್ತು ಇನ್ನೊಂದೆಡೆ ಭಾರತದ ಕಡೆಗೆ ಹರಿಯುತ್ತಿತ್ತು. ಹೀಗೆ ಉಂಟಾದ ಜಲಧಾರೆಯ ದಾರಿಯನ್ನು ವಾಟರ್ ಶೆಡ್ ಎಂದು ಕರೆಯುತ್ತಾರೆ. (ಸ್ಕೆಚ್ ಗಮನಿಸಿ) ತುಂಬಾ ಸೂಕ್ಷ್ಮ ಪ್ರದೇಶಗಳಲ್ಲಿ ಪೀಪಲ್ ಲಿಬರೇಶನ್ ಆರ್ಮಿ ಮತ್ತು ಭಾರತೀಯ ಸೇನೆಗಳು ಶೇಕ್ ಹ್ಯಾಂಡ್ ನೀಡುವ ಅಂತರದಲ್ಲಿರುತ್ತವೆ. ಇದನ್ನು ‘ಐ ಬಾಲ್ ಟು ಐ ಬಾಲ್ ಡಿಪ್ಲಾಯ್‍ಮೆಂಟ್’ ಎನ್ನುತ್ತಾರೆ. ಹೀಗೆ ಇಷ್ಟು ಎತ್ತರದಲ್ಲಿಯೂ ಭಾರತೀಯ ಸೈನ್ಯದ 24ಕ್ಕಿಂತಲೂ ಹೆಚ್ಚು ಸೈನ್ಯದ ತುಕಡಿಗಳು(ಘಟಕಗಳು) ಇರುತ್ತವೆ. ಇಂತಹ ಘಟಕಗಳು ಅಂತರರಾಷ್ಟ್ರೀಯ ಗಡಿ ನಿಯಂತ್ರಣವನ್ನು ಮಾಡುವ ಘನವಾದ ಜವಾಬ್ದಾರಿ ಹೊಂದಿರುತ್ತವೆ. ಯಾವುದೇ ಸಣ್ಣ ಸಣ್ಣ ಘಟನೆಗಳನ್ನೂ ನಿರ್ಲಕ್ಷಿಸದೇ ಕಾವಲು ಕಾಯುತ್ತಿರಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುವ ಸಂಭವ ಇರುತ್ತದೆ. ಇದರೊಂದಿಗೆ ತರಬೇತಿ, ಆಡಳಿತಾತ್ಮಕ ಜವಾಬ್ದಾರಿಗಳನ್ನೆಲ್ಲವೂ ನಿಭಾಯಿಸಬೇಕಾಗುತ್ತದೆ. ಸೈನಿಕರ ಎಲ್ಲಾ ರೀತಿಯ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಅವರ ಒಟ್ಟೂ ಯೋಗಕ್ಷೇಮದ ಹೊಣೆಯೂ ನಮ್ಮ ಮೇಲಿರುತ್ತಿತ್ತು.

ಇದರಲ್ಲೂ ಮುಖ್ಯವಾದ ಅರು ಅತ್ಯಂತ ಪ್ರಮುಖ ದ್ವಾರಗಳನ್ನು ಕಾಯುವುದು ಮತ್ತು ಕೆಲ ಅತೀ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸುವುದು ಇಲ್ಲಿ ಅಗತ್ಯವಿತ್ತು. ನಾನು ಅಲ್ಲಿ ಕರ್ತವ್ಯದಲ್ಲಿದ್ದಾಗ ‘ನಾತುಲಾ’(ಲಾ ಎಂದರೆ ಬಾಗಿಲು ಎಂದರ್ಥ) ಎಂಬ ಪ್ರದೇಶ ಅತ್ಯಂತ ಪ್ರಮುಖವಾಗಿತ್ತು. ಇದೇ ಗಡಿಭಾಗದ ದ್ವಾರದಿಂದ ಗಣ್ಯರು, ವಿಶೇಷಾಹ್ವಾನಿತರು, ಎರಡೂ ದೇಶದ ಪ್ರತಿನಿಧಿಗಳು ಮತ್ತು ಪ್ರವಾಸಿಗರು ಬರುವ ಹೋಗುವ ಪ್ರಕ್ರಿಯೆ ನಡೆಯುತ್ತಿತ್ತು. ಇದೇ ಸ್ಥಳದಲ್ಲಿ ವಿಶ್ವದಲ್ಲಿಯೇ ಸೈನ್ಯದ ಎಂಜಿನಿಯರ್‍ಗಳೇ ನಿರ್ಮಿಸಿದ ಅತ್ಯಂತ ಎತ್ತರ ಪ್ರದೇಶದ ಕಾನ್ಫರೆನ್ಸ್ ಹಾಲ್ ಕೂಡಾ ಇತ್ತು. ಭಾರತೀಯ ಸೈನ್ಯದ ಪರವಾಗಿ ನನ್ನ ಮತ್ತು ಚೈನಾದ ಯಾತುಂಗ್ ಗಾರಿಸನ್ ಕಮಾಂಡರ್ ನಡುವೆ ಹಾಟ್ ಲೈನ್ ಸಂಪರ್ಕ ವ್ಯವಸ್ಥೆಯೂ ಇತ್ತು. ಅನೇಕ ಹಿರಿಯ ಭೂ, ಜಲ ಹಾಗೂ ವಾಯು ಮಾರ್ಗದ ಸೇನಾಧಿಕಾರಿಗಳ ಜೊತೆಗೇ ಸಂಸದರು, ಅನೇಕ ರಾಜ್ಯಪಾಲರುಗಳು ಹಾಗೂ ರಾಯಭಾರಿಗಳೂ ಈ ಪ್ರದೇಶಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಿದ್ದರು.

ಎರಡೂ ದೇಶದ ಸೈನಿಕರು ಅತ್ಯಂತ ಸನಿಹದಲ್ಲೇ ಇರುತ್ತಿದ್ದ ಕಾರಣ, ಯುದ್ಧವಿಲ್ಲದ ಶಾಂತ ಸಂದರ್ಭಗಳಲ್ಲಿ ಯಾವುದೇ ರೀತಿಯ ಬಿಸಿಯ ವಾತಾವರಣವಿಲ್ಲದೇ ಚೈನಾ ಇಂಡಿಯಾ ಭಾಯಿ ಭಾಯಿ ಎಂಬ ವಾತಾವರಣವಿರುತ್ತಿತ್ತು. ವರ್ಷದಲ್ಲಿ ಎರಡು ಬಾರಿ ಟಿಬೆಟಿಯನ್ ಆಟೋನೋಮಸ್ ರೀಜನ್ ಮತ್ತು ನಮ್ಮ ಸೈನ್ಯದ ನಡುವೆ ಬಾರ್ಡರ್ ಪರ್ಸನಲ್ ಮೀಟಿಂಗ್‍ನ್ನು ಆಯೋಜಿಸಲಾಗುತ್ತಿತ್ತು. ಒಮ್ಮೆ ನಮ್ಮ ದೇಶದೊಳಗೆ ನಡೆದರೆ ಮತ್ತೊಮ್ಮೆ ಟಿಬೆಟ್ ಗಡಿಯಾಚೆ ನಡೆಯುತ್ತಿತ್ತು. ನಮ್ಮ ಸೈನ್ಯದ ನಾಯಕತ್ವ ನನ್ನದಾಗಿತ್ತು. ನಮ್ಮ ನಮ್ಮ ರಾಷ್ಟ್ರ ಧ್ವಜಗಳನ್ನು ಆರೋಹಣ ಮಾಡಿ, ಎರಡೂ ದೇಶಗಳ ಪ್ರತಿನಿಧಿಗಳನ್ನು ಸ್ವಾಗತಿಸಿ, ಕಾನ್ಫರೆನ್ಸ್ ಹಾಲ್‍ನ ಪ್ರಥಮ ಮಹಡಿಯಲ್ಲಿ ಗಡಿ ಭಾಗದ ತಕರಾರುಗಳೇನಾದರೂ ಇದ್ದಲ್ಲಿ ಮಾತುಕತೆ ಆಗುತ್ತಿತ್ತು. ನಂತರ ಸೌಹಾರ್ದ ಕೂಟ, ಊಟ ಪಾನೀಯ ಪಾರ್ಟಿಗಳಾಗುತ್ತಿದ್ದುವು. ಎರಡೂ ಕಡೆಗಳಿಂದ ಶಾಂತಿ ಮತ್ತು ಸ್ನೇಹದ ಬಗ್ಗೆ ಹಸ್ತ ಲಾಘವ ಮತ್ತು ಬದ್ಧತೆಯ ವಿನಿಮಯವಾಗುತ್ತಿತ್ತು. ಇದೇ ಸಂದರ್ಭದಲ್ಲಿ ಏನಾದರೂ ಸ್ಮರಣಿಕೆ, ಉಡುಗೊರೆಗಳ ವಿನಿಮಯವೂ ಆಗುತ್ತಿತ್ತು. ಸಂಜೆಯ ವೇಳೆಗೆ ಎರಡೂ ಕಡೆಯ ನಾಯಕರುಗಳಿಗೆ, ಪ್ರತಿನಿಧಿಗೆ ವಿದಾಯ ಹೇಳುವ ಮೂಲಕ ನಮ್ಮ ಸೌಹಾರ್ದದ ಭೇಟಿ ಮುಗಿಯುತ್ತಿತ್ತು. ಈ ರೀತಿಯ ಭೇಟಿ, ಮಾತುಕತೆಯ ಸಂಪೂರ್ಣ ವಿವರಗಳುಳ್ಳ ವೀಡಿಯೋ ಹಾಗೂ ದಾಖಲೆಗಳನ್ನು ನಮ್ಮ ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದೆವು.

ಹೀಗೆ ಇಂತಹ ಒಟ್ಟೂ ಆರು ಸಭೆಗಳನ್ನು ನಾನು ನನ್ನ ಅವಧಿಯಲ್ಲಿ, ನನ್ನದೇ ನೇತೃತ್ವದಲ್ಲಿ ಆಯೋಜಿಸಿದ್ದೆ, ಭಾಗವಹಿಸಿದ್ದೆ. ಇದೂ ನಿತ್ಯವೂ ನೆನಪಿಸಿಕೊಳ್ಳುವ ಸೈನಿಕ ಜೀವನದ ಹೊಸ ಅನುಭವದ ಗಳಿಗೆಗಳು. ಈ ಅವಧಿಯಲ್ಲೆ ನಾತುಲಾ ಪ್ರವಾಸಿಗರಿಗೆ ಮುಕ್ತವಾಗಿ, ಅಲ್ಲಿಗೆ ಪ್ರವಾಸಿಗರ ಪ್ರವಾಹವೇ ಹರಿದು ಬರುತ್ತಿತ್ತು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ಆರಂಭವಾಯಿತು. ಇತ್ತ ಎಲ್ಲವೂ ಶಾಂತಿ ಸಮಾಧಾನದಿಂದ ಇದೆ ಎಂದು ಭಾವಿಸಿ ನಾವು ನಮ್ಮ ಪಾಡಿಗೆ ಸಭೆಗಳಲ್ಲಿ ತಲ್ಲೀನವಾಗಿದ್ದರೆ ಅತ್ತ ಕಾರ್ಗಿಲ್‍ನಲ್ಲಿ ಪಾಕಿಸ್ತಾನ ತನ್ನ ಎಂದಿನ ಬುದ್ಧಿ ತೋರಿತ್ತು. ಪರಿಣಾಮವಾಗಿ ಅಲ್ಲಿ ನಮ್ಮ ಸೈನಿಕರು ಹೋರಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಚೈನಾ ನಮ್ಮ ಇಲ್ಲಿನ ಗಡಿರೇಖೆಯಲ್ಲಿ ಸಮಯವನ್ನುಪಯೋಗಿಸಿಕೊಂಡು ತೊಂದರೆ ಕೊಡುವ ಸಾಧ್ಯತೆಯೂ ಇದ್ದುದರಿಂದ ನಮ್ಮಲ್ಲೂ ಒಂದು ರೀತಿಯ ಯುದ್ಧಸಾಧ್ಯತೆಯ ಸನ್ನಿವೇಶ ಸೃಷ್ಟಿಯಾಗಿತ್ತು.

ಹಾಗಾಗಿ ನಾವಿದ್ದ ಟಿಬೆಟ್/ಚೀನಾ ಗಡಿಯಲ್ಲೂ ಸೈನಿಕರನ್ನು ಹೆಚ್ಚಿಸಿ, ಸುಪರ್ದಿಯನ್ನು ಹೆಚ್ಚಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಬೋಫೋರ್ಸ್‍ನ್ನು ಕಳಿಸಲಾಯಿತು!. ಇಷ್ಟೇ ಹೇಳಿದರೆ ಇದರ ಮಹತ್ವ ಅರಿವಾಗದು. ಒಂದು ಬೋಫೋರ್ಸ್‍ನ್ನು ನಮ್ಮಲ್ಲಿಂದ (ಗಾಂಗ್ಟಾಕ್) ಜಮ್ಮು ಕಾಶ್ಮೀರಕ್ಕೆ ಕಳಿಸುವುದೇ ಒಂದು ದೊಡ್ಡ ಯೋಜನೆ. 10,000ಅಡಿ ಎತ್ತರದ ಪ್ರದೇಶದಿಂದ ಗಾಂಗ್ಟಾಕ್‍ಗೆ ಅದನ್ನು ತಂದು, 3000ಅಡಿ ಕೆಳಗೆ ಸಿಲಿಗುರಿಗೆ ಕೊಂಡೊಯ್ದು, ಅಲ್ಲಿಂದ ಅದನ್ನು ರೈಲ್ವೇಗೆ ಹಾಕಿ, ಜಮ್ಮು, ಶ್ರೀನಗರ, ಝೋಝೀಲಾ ಪಾಸ್ ಮೂಲಕ ಕಾರ್ಗಿಲ್ ಯುದ್ಧಭೂಮಿಗೆ ಕಳಿಸುವುದೇ ದೊಡ್ಡ ಸಾಹಸ. ಅದನ್ನೂ ಮಾಡಿದೆವು.

ಕಾರ್ಗಿಲ್ ಯುದ್ಧವಾಗುವ ಹೊತ್ತಿಗೆ ನಾನೂ ನನ್ನ ಕಮಾಂಡ್ ಜೊತೆಗೆ ಚೀನಾ-ಭಾರತ ಗಡಿಯುದ್ದಕ್ಕೂ ಚೈನಾ ಯಾವುದೇ ರೀತಿಯ ದುಸ್ಸಾಹ ಮಾಡದಂತೆ ತಡೆಯುವಲ್ಲಿ ಸಫಲರಾದೆವು. ಇದೂ ಯುದ್ಧ ಕಾಲದಲ್ಲಿ ಅತ್ಯಂತ ಮುಖ್ಯವಾಗಿ ಆಗಲೇ ಬೇಕಾದ ರಕ್ಷಣಾತ್ಮಕ ಕಾರ್ಯಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT