ಬೆಂಗಳೂರು: ವಾರ್ಡ್ವಾರು ಘನತ್ಯಾಜ್ಯ ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಕ್ರಿಯಾಯೋಜನೆ ತಯಾರಿಸಿ ಕೋರ್ಟ್ಗೆ ನೀಡಬೇಕೆಂಬ ಆದೇಶ ಪಾಲಿಸದ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ₹ 50 ಸಾವಿರ ದಂಡ ವಿಧಿಸಿದೆ.
ಘನ ತ್ಯಾಜ್ಯ ನಿರ್ವಹಣೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪಾಲಿಕೆಯ ಕಾರ್ಯವೈಖರಿಗೆ ಕಿಡಿ ಕಾರಿದ ನ್ಯಾಯಪೀಠ, ಕಮಿಷನರ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಗೈರು ಹಾಜರಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
‘ಮುಂದಿನ ವಿಚಾರಣೆ ವೇಳೆಗೆ 2017ರ ನವೆಂಬರ್ 10ರಂದು ಹೊರಡಿಸಲಾಗಿರುವ ಆದೇಶ ಪಾಲನೆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಬೇಕು. ದಂಡದ ಮೊತ್ತವನ್ನು ಅಂದೇ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪಾವತಿಸಬೇಕು’ ಎಂದು ಆದೇಶಿಸಿತು.