ದೆಹಲಿಯಲ್ಲಿ ಈಚೆಗೆ ನಡೆದ ಬಹುಚರ್ಚಿತವಾದ ಆ ಬರ್ಬರ ಮಾನಭಂಗದ ಘಟನೆ ಇಡೀ ರಾಷ್ಟ್ರದ ಜನಮಾನಸವನ್ನು ಬುಡ ಸಮೇತ ಅಲ್ಲಾಡಿಸಿಬಿಟ್ಟಿದೆ. ಆ ಘಟನೆಯ ವಿವರಗಳು ಕಾಳ್ಗಿಚ್ಚಿನಂತೆ ನಾಡಿನುದ್ದಕ್ಕೂ ಹೊರನಾಡುಗಳಲ್ಲೂ ಹಬ್ಬಿ ಬಹುಕೃತ ಮನಸ್ಸುಗಳನ್ನು ಆಳದಲ್ಲಿ ಕಲಕಿ, ಆ ಆಳಗಳಲ್ಲಿ ಅವಿಸಿಕೊಂಡಿದ್ದ ಆದಿಮ ಭೀತಿಗಳನ್ನು ರೋಷಗಳನ್ನು ಅಗ್ನಿಪರ್ವತದಂತೆ ಆಸ್ಫೋಟಿಸಿಬಿಟ್ಟಿದೆ.
ಉಗ್ರ ಪ್ರತಿಭಟನೆಗಳ, ಆರೋಪ - ಪ್ರತಿ ಆರೋಪಗಳ ಹೆಬ್ಬಲೆಗಳು ನಮ್ಮೆಲ್ಲರನ್ನು ಆವರಿಸಿದೆ. ನಾವು ಸ್ಥಿರವೆಂದುಕೊಂಡಿದ್ದ `ನಾಗರಿಕ' ಜಗತ್ತಿನ ನೆಲ ನಮ್ಮ ಕಾಲಡಿಯಲ್ಲಿ ಕರಗಿದಂತಾಗಿ ನಾವೆಂದೂ ಊಹಿಸಲಾಗದಂತಹ ಬಿರುಗಾಳಿ ನಮ್ಮನ್ನು ಎತ್ತೆತ್ತಲೋ ತೂರಾಡಿಸುತ್ತಿದೆ. ನಿನ್ನೆಯವರೆಗೆ ಮರ್ಯಾದಸ್ತಿಕೆಯ ಮೌನ ತಳೆದಿದ್ದ ಮಹಿಳೆಯರು, ಮಕ್ಕಳು, ಪುರುಷರು ಆ ಘಟನೆಯ ನೇರ ಶಿಕಾರಿಗಳು ತಾವೇ ಆಗಿರುವಂತೆ ಹತೋಟಿ ಮೀರಿದ ಕ್ರೋಧದಿಂದ, ಆಕ್ರೋಶದ ಮುಖಭಾವದಿಂದ ನಗರಮಧ್ಯಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ, ಮಾಧ್ಯಮಗಳಲ್ಲಿ, ಅಂತರ್ಜಾಲದ ಸೈಟುಗಳಲ್ಲಿ ಪ್ರತಿಭಟಿಸಹತ್ತಿದ್ದಾರೆ. ಲಾಠಿಯೇಟುಗಳನ್ನು, ಗ್ಯಾಸ್ ಷೆಲ್ಲುಗಳನ್ನು, ನೀರಿನಗನ್ನುಗಳನ್ನು ಲೆಕ್ಕಿಸದೆ ಬೀದಿಗಿಳಿಯುತ್ತಾರೆ. ಇವರಾರೂ ಬಾಡಿಗೆಯ ಜನರಲ್ಲ. ಘಟನೆಯ ಬರ್ಬರತೆಯನ್ನು ಪರೋಕ್ಷ ಮಾಧ್ಯಮಗಳ ಮೂಲಕ ಗ್ರಹಿಸಿ ತಮಗೆ, ತಮ್ಮ ಮಕ್ಕಳಿಗೆ, ಅಕ್ಕ-ತಂಗಿಯರಿಗೆ, ಹೆಂಡತಿಯರಿಗೆ, ಪ್ರೇಯಸಿಯರಿಗೆ, `ಬಲಿಯಾದ ಹುಡುಗಿ'ಗಾದ ಗತಿ ಬರಬಹುದೆಂಬ ಆತಂಕದಲ್ಲಿ ಅನಿವಾರ್ಯವೆಂಬಂತೆ, ಅಂತಿಮಾಸ್ತ್ರವೆಂಬಂತೆ ಪ್ರತಿಭಟನೆಯೊಳಗೆ ಧುಮುಕಿದ್ದಾರೆ.