ಇದು ಒಂದೂವರೆ ದಶಕದ ಹಿಂದಿನ ಮಾತು. 1999ರ ಫೆಬ್ರುವರಿಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್ನತ್ತ ಬಸ್ಸಿನಲ್ಲಿ ಪಯಣಿಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಸುಧಾರಣೆಯೇ ಆ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಆಗ ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದರು. ಅಂದು ಇಬ್ಬರೂ ಪ್ರಧಾನಿಗಳು ಒಮ್ಮತದಿಂದ ಪ್ರಕಟಿಸಿದ್ದ ಲಾಹೋರ್ ಘೋಷಣೆ ದೇಶದಾದ್ಯಂತ ಸುದ್ದಿಯಾಗಿತ್ತು. ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಯಲ್ಲಿ ಅದೊಂದು ಮಹತ್ವದ ಪ್ರಯತ್ನವಾಗಿತ್ತು.
ಅಂದು ಆ ಬಸ್ಸಿನಲ್ಲಿ ನಾನೂ ಪ್ರಯಾಣಿಸಿದ್ದೆ. ಅದೊಂದು ರೋಚಕ ಅನುಭವ. ಶಾಂತಿಯ ಕನಸು ನಮ್ಮೆಲ್ಲರ ಮನದೊಳಗೆ ಗರಿಗೆದರಿತ್ತು. ವಾಘಾ ಗಡಿ ದಾಟಿದ ಆ ಪಯಣ ಕೆಲವೇ ಕಿಲೋ ಮೀಟರ್ಗಳಷ್ಟು ದೂರವಿದ್ದಿರಬಹುದು, ಆದರೆ ನವದೆಹಲಿ ಮತ್ತು ಇಸ್ಲಾಮಾಬಾದ್ಗಳನ್ನು ಭಾವನಾತ್ಮಕವಾಗಿ ಹತ್ತಿರ ತರುವಲ್ಲಿ ಅದೊಂದು ಪರಿಣಾಮಕಾರಿ ಪಯಣ ಎಂಬ ಭಾವನೆ ಅಂದು ನನ್ನಲ್ಲಿತ್ತು.
ದುರದೃಷ್ಟವಶಾತ್ ಅಂದು ನಾವೆಲ್ಲಾ ಕಂಡ ಕನಸು ನನಸಾಗಲೇ ಇಲ್ಲ. ಉಭಯ ದೇಶಗಳ ಪ್ರಧಾನಿಗಳು ಭಿನ್ನಾಭಿಪ್ರಾಯ ಹೊಂದಿದ್ದರೆಂಬ ಕಾರಣಕ್ಕೆ ಆ ಶಾಂತಿಯ ಪ್ರಯತ್ನಗಳು ಕಡಿದು ಬೀಳಲಿಲ್ಲ. ಆದರೆ ಪಾಕಿಸ್ತಾನದ ಸೇನೆಯೇ ಅಂತಹದ್ದೊಂದು ರಾಜಕೀಯ ಪ್ರಯತ್ನಕ್ಕೆ ಅಡ್ಡಗಾಲು ಹಾಕಿತು. ಅಂದು ಪಾಕಿಸ್ತಾನದ ಭೂಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಮುಖ್ಯಸ್ಥರು ಭಾರತದ ಪ್ರಧಾನಿಗೆ ಸಲ್ಯೂಟ್ ಮಾಡಲು ನಿರಾಕರಿಸಿದ್ದರು. ಅಂದು ಜನರಲ್ ಪರ್ವೇಜ್ ಮುಷರಫ್ ಅವರು ಭೂಪಡೆಯ ಮುಖ್ಯಸ್ಥರಾಗಿದ್ದರು. ಅವರ ವಿಚಾರಧಾರೆ, ಮಹತ್ವಾಕಾಂಕ್ಷೆ ಬೇರೆಯೇ ಇತ್ತು. ನಂತರ ಅವರು ಸೇನಾ ದಂಗೆ ನಡೆಸಿ ಚುನಾಯಿತ ಪ್ರಧಾನಿಯನ್ನು ಕೆಳಗಿಳಿಸಿದ್ದರು. ಅಲ್ಲಿಗೆ ಅಂದಿನ ಪ್ರಧಾನಿಯ ಕನಸು ನುಚ್ಚು ನೂರಾಯಿತು.
ಆ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು ತಾನೆ. ಆ ಪಕ್ಷ ಹಿಂದೂ ರಾಷ್ಟ್ರೀಯ ವಾದಕ್ಕೆ ಹೆಸರುವಾಸಿ. ಹಿಂದೂ ರಾಷ್ಟ್ರ ಪರಿಕಲ್ಪನೆಯೇ ಒಡಲಲ್ಲಿ ತುಂಬಿಕೊಂಡಿದ್ದ ಆ ಪಕ್ಷ ಸಹಜವಾಗಿಯೇ ಪಾಕಿಸ್ತಾನದ ವಿರುದ್ಧ ಧೋರಣೆಯನ್ನು ಹೊಂದಿತ್ತು. ಅಂತಹ ಪಕ್ಷಕ್ಕೆ ಸೇರಿದ್ದ ವಾಜಪೇಯಿ ನಡೆಸಿದ ‘ಲಾಹೋರ್ನತ್ತ ಬಸ್ಸು ಪಯಣ’ ಅವರ ದಿಟ್ಟ ನಿಲುವಿಗೆ ಸ್ಪಷ್ಟ ನಿದರ್ಶನವಾಗಿತ್ತು. ಅದೇ ರೀತಿ, ಕಾಶ್ಮೀರ ಸಮಸ್ಯೆಯನ್ನು ಇಂತಿಷ್ಟು ಸಮಯದೊಳಗೆ ತಾವು ಸಂಪೂರ್ಣವಾಗಿ ಪರಿಹರಿಸುತ್ತೇವೆ ಎಂಬ ಹೆಗ್ಗನಸನ್ನೂ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಹಂಚಿಕೊಂಡಿದ್ದರು. ಆ ದಿಸೆಯಲ್ಲಿ ಪ್ರಯತ್ನಿಸಿದ್ದರು. ಹಿಂದೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೊ ಕಾಶ್ಮೀರದ ಬಗ್ಗೆ ಹೊಂದಿದ್ದ ಅಭಿಪ್ರಾಯವನ್ನೇ ವಾಜಪೇಯಿಯವರೂ ಹೊಂದಿದ್ದರು ಎಂದೆನಿಸುತ್ತದೆ.
ಹಿಂದೆ ಬಾಂಗ್ಲಾದೇಶ ವಿಮೋಚನೆಯ ಸಂದರ್ಭದಲ್ಲಿ ನಾನು, ಭುಟ್ಟೊ ಅವರ ಸಂದರ್ಶನ ನಡೆಸಿದ್ದೆ. ಅಂದು ಅವರು ಮಾತನಾಡುತ್ತಾ ‘ಎರಡೂ ಕಾಶ್ಮೀರ’ಗಳ ನಡುವೆ ಶಾಂತಿಯ ‘ಗಡಿರೇಖೆ’ಯೊಂದನ್ನು ರೂಪಿಸಬೇಕಿದೆ ಎಂದಿದ್ದರು. ಅಲ್ಲಿ ಸದಾ ಕದನ ವಿರಾಮ ಸ್ಥಿತಿ ಇರಬೇಕೆಂದೂ ಅವರು ತಮ್ಮ ಆಶಯ ವ್ಯಕ್ತಪಡಿಸಿದ್ದರು. ‘ಭಾರತ ಪಾಕಿಸ್ತಾನ ನಡುವೆ ರಾಜಕೀಯ ವಿವಾದ, ಭಿನ್ನಾಭಿಪ್ರಾಯಗಳಿರ ಬಹುದು. ಆದರೆ ಇದರಿಂದ ಕಾಶ್ಮೀರದ ಮಂದಿ ಏಕೆ ಪಡಿಪಾಟಲು ಪಡಬೇಕು. ಆ ಶಾಂತಿಯ ಗಡಿರೇಖೆಯನ್ನು ಉಭಯ ಕಾಶ್ಮೀರಗಳ ಮಂದಿ ನಿರಾತಂಕವಾಗಿ ದಾಟಿ ಅತ್ತಿಂದಿತ್ತ, ಇತ್ತಿಂದತ್ತ ಹೋಗಿ ಬರುವಂತಾಗಲಿ’ ಎಂದು ನನ್ನ ಪ್ರಶ್ನೆಯೊಂದಕ್ಕೆ ಭುಟ್ಟೊ ಉತ್ತರಿಸಿದ್ದರು. ಆ ಧ್ವನಿ ಮುದ್ರಿಕೆಯೂ ನನ್ನ ಬಳಿ ಇದೆ. ಆದರೆ ಭಾರತ ಸರ್ಕಾರ, ಭುಟ್ಟೊ ಅವರ ಜತೆಗೆ ಅಧಿಕೃತ ಮಾತುಕತೆ ನಡೆಸಿದಾಗ ‘ಶಾಂತಿಯ ಗಡಿರೇಖೆ’ಯ ತಮ್ಮ ಅನಿಸಿಕೆಗಳನ್ನು ಒಪ್ಪಿಕೊಳ್ಳಲಿಲ್ಲ!
ಉಭಯ ದೇಶಗಳ ನಡುವೆ ವ್ಯಾಪಾರೋದ್ದಿಮೆ ಮತ್ತು ಸಂಚಾರ ವ್ಯವಸ್ಥೆಯು ಸಾಮಾನ್ಯವಾಗಿರುವುದಕ್ಕೆ ಪೂರಕ ವಾತಾವರಣ ಕಲ್ಪಿಸುವುದಕ್ಕೆ ‘ಲಾಹೋರ್ ಘೋಷಣೆ’ಯಲ್ಲಿ ಬಹಳಷ್ಟು ಅವಕಾಶಗಳಿವೆ. ಆ ‘ಘೋಷಣೆ’ಯನ್ನು ಕಾರ್ಯರೂಪಕ್ಕೆ ತರಲು ಇವತ್ತಿಗೂ ಅವಕಾಶವಿದೆ. ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಇಬ್ಬರೂ ಪ್ರಧಾನಿಗಳು ಅಂದು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆಂದು ನಾನು ಹೇಳುತ್ತಿಲ್ಲ. ಅಂದು ಪಾಕಿಸ್ತಾನ ತನ್ನ ವಾದ ಸರಣಿಯನ್ನು ಕಾಶ್ಮೀರದ ‘ಅಳತೆ ಗೋಲು’ ಮೂಲಕವೇ ಮಂಡಿಸುತ್ತಿದ್ದುದನ್ನೂ ಮರೆಯುವಂತಿಲ್ಲ. ಆದರೂ ಅಂದು ವಾಜಪೇಯಿ ಅವರು ‘ಕಾಶ್ಮೀರ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸಿಕೊಳ್ಳೋಣ. ಅಷ್ಟರವರೆಗೆ ನಾವು ಮಾತುಕತೆ ಮುಂದುವರಿಸೋಣ. ಮುಂದೊಂದು ದಿನ ಎಲ್ಲಾ ಸಮಸ್ಯೆಗಳೂ ಬಗೆಹರಿಯಬಹುದು’ ಎಂದಿದ್ದರು. ಕೊನೆಗೂ ವಾಜಪೇಯಿ ಅವರು ಸಂಬಂಧ ಸುಧಾರಣೆ ಪ್ರಯತ್ನದಲ್ಲಿ ನಿರಾಸೆಗೊಂಡಿದ್ದರು. ಆ ದಿನಗಳಲ್ಲಿ ವಾಜಪೇಯಿ ಮೂರು ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆಗ ಅವರು ಕಾಶ್ಮೀರದ ವಿಷಯಕ್ಕೆ ಹೆಚ್ಚು ಒತ್ತು ನೀಡದೇ ಸ್ನೇಹಹಸ್ತ ಚಾಚಿದ್ದರು. ಆ ಅಂಶವನ್ನಾದರೂ ಪಾಕ್ ಅಂದು ಗುರುತಿಸಬೇಕಿತ್ತು.
ಉಭಯ ದೇಶಗಳ ನಡುವೆ ಮಧುರ ಸಂಬಂಧ ಮೂಡಿಸುವ ದಿಸೆಯಲ್ಲಿ ಅಂದು ನಡೆದಿದ್ದ ಆ ‘ಬಸ್ಸು ಪಯಣ’ ನನಗೆ ಪದೇ ಪದೇ ನೆನಪಾಗುತ್ತಲೇ ಇರುತ್ತದೆ. ಆ ಬಸ್ಸಿನಲ್ಲಿ ದೇಶದ ಆಯ್ದ 22 ಮಂದಿ ಗಣ್ಯರಿದ್ದರು. ಪಂಜಾಬ್ನ ಆಗಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಅಮೃತಸರದಲ್ಲಿ ನಮ್ಮೊಡನೆ ಸೇರಿಕೊಂಡರು. ಅಂದು ಅವರು ನನ್ನನ್ನು ಅಪ್ಪಿಕೊಂಡು, ‘ನಿಮ್ಮ ಯತ್ನಗಳು ಈಗ ಫಲ ನೀಡುತ್ತಿವೆ’ ಎಂದಿದ್ದು ಇವತ್ತಿಗೂ ನನ್ನ ಸ್ಮೃತಿಪಟಲದಲ್ಲಿದೆ. ಹೌದು, ನಾವೆಲ್ಲಾ 1996ರಿಂದಲೂ ವಾಘಾ ಗಡಿಯ ಬಳಿ ಮೇಣದ ಬತ್ತಿ ಹಚ್ಚಿಟ್ಟು ಅತ್ತ ಕಡೆಗೆ ಸ್ನೇಹದ ಸಂದೇಶ ಕಳುಹಿಸುತ್ತಾ ಬಂದವರು ತಾನೆ. ಅದನ್ನು ನೆನಪಿಸಿಕೊಂಡು ಅವರು ಮಾತನಾಡಿದ್ದರು. ಅದೊಂದು ಸಾಂಕೇತಿಕ ಅಭಿವ್ಯಕ್ತಿಯಾಗಿತ್ತು ಬಿಡಿ. ನಮ್ಮಲ್ಲಿ ಕೆಲವರು ಆ ಬಸ್ಸಿಗೆ ಒರಗಿ ನಿಂತುಕೊಂಡು ಅಲ್ಲಿನ ಚಟುವಟಿಕೆಗಳನ್ನೆಲ್ಲಾ ಗಮನಿಸುತ್ತಿದ್ದೆವು. ಉಭಯ ದೇಶಗಳ ನಡುವಣ ಸುಂದರ ಸಂಬಂಧದ ಕಲ್ಪನೆಯನ್ನು ಕಟ್ಟಿಕೊಡುವ ಬರಹ ಮತ್ತು ಚಿತ್ರಗಳನ್ನೆಲ್ಲಾ ಆ ಬಸ್ಸು ತನ್ನ ಮೈಗಂಟಿಸಿಕೊಂಡಿತ್ತು. ಆದರೆ ಯಾವುದೇ ಘೋಷಣೆಗಳು ಕೇಳಿಸುತ್ತಿರಲಿಲ್ಲ. ಆದರೆ ನೂರಾರು ಪುರುಷರು, ಮಹಿಳೆಯರು ಹಾಡುತ್ತಿದ್ದರು, ನರ್ತಿಸುತ್ತಿದ್ದರು. ಎಲ್ಲರೂ ಬಣ್ಣ ಬಣ್ಣದ ಉಡುಪು ಧರಿಸಿದ್ದರು. ಊರ ಹಬ್ಬ ಅಥವಾ ಜಾತ್ರೆಯ ಕಳೆ ಅಲ್ಲಿತ್ತು. ಅಲ್ಲಿದ್ದ ಕೆಲವೇ ಕೆಲವು ಪೊಲೀಸರು ನಿರಾಳವಾಗಿದ್ದರು.
ವಾಜಪೇಯಿ ಅವರು ಮುಂದಿನ ಸೀಟಿನಲ್ಲಿ ಕುಳಿತ ತಕ್ಷಣ ಬಸ್ಸು ಲಾಹೋರ್ನತ್ತ ಹೊರಟಿತು. ಬಸ್ಸಿನ ನಿರ್ವಾಹಕ ನನ್ನ ಬಳಿ ಬಂದು ಮೊದಲ ಟಿಕೇಟು ನೀಡಿ, ಅದರ ಅರ್ಧವನ್ನು ತುಂಡು ಮಾಡಿ ನನ್ನ ಕೈಗಿತ್ತ. ನಾನು ಆ ಚೀಟಿಯನ್ನು ಇವತ್ತಿಗೂ ಅಪೂರ್ವ ಸ್ಮರಣಿಕೆಯಂತೆ ನನ್ನ ಬಳಿ ಜೋಪಾನವಾಗಿ ಇರಿಸಿಕೊಂಡಿದ್ದೇನೆ. ಬಸ್ಸಿನೊಳಗಿದ್ದ ಇನ್ನೊಬ್ಬ ಸಿಬ್ಬಂದಿ ಕುಡಿಯಲು ತಂಪು ಪಾನೀಯ ನೀಡಿದ. ಪಾಕ್ ಗಡಿವರೆಗಿನ ಆ 35 ಕಿ.ಮೀ. ದೂರದ ಹಾದಿಯಲ್ಲಿ ಬಸ್ಸು ಸಾಗಿದಷ್ಟೂ ದೂರ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಸಂಭ್ರಮದಿಂದ ಕೈ ಬೀಸುತ್ತಿದ್ದುದು ಎದ್ದು ಕಾಣುತ್ತಿತ್ತು. ಅಲ್ಲಿ ಸಂಭ್ರಮದ ಹೊಳೆ ಹರಿದಿತ್ತು. ಭಾರತ ಮತ್ತು ಪಾಕ್ ಪ್ರಧಾನಿಗಳಿಬ್ಬರೂ ಕುಳಿತು ಶಾಂತಿಯ ಮಾತುಕತೆ ನಡೆಸುತ್ತಾರೆನ್ನುವುದೇ ಆ ಪ್ರದೇಶದ ಜನರಿಗೆ ಅತೀವ ಖುಷಿ ಕೊಡುವ ವಿಚಾರವಾಗಿತ್ತು.
ಬಸ್ಸಿನ ಒಳಗಿನ ವಾತಾವರಣವೂ ಮನಸ್ಸಿಗೆ ಮುದ ನೀಡುವಂತಹದ್ದಾಗಿತ್ತು. ಅಲ್ಲಿ ಎಲ್ಲರೂ ಆ ಮೌನದೊಳಗಿನ ಸಂಭ್ರಮವನ್ನು ಅನುಭವಿಸುವಲ್ಲಿ ಖುಷಿ ಕಾಣುತ್ತಿದ್ದರು. ಆದರೂ ಎಲ್ಲರ ಮನದಾಳದಲ್ಲೂ ಅದೇನೋ ಆತಂಕ ಇದ್ದೇ ಇತ್ತು. ಒಂದೊಂದು ಮೈಲುಗಲ್ಲನ್ನು ದಾಟಿದಾಗಲೂ ಆ ಆತಂಕ ಹೆಚ್ಚುತ್ತಲೇ ಇತ್ತು. ಮುಂದೇ-ನಾಗಬಹುದು. ಅಲ್ಲಿ ನಮ್ಮನ್ನು ಅವರು ಯಾವ ರೀತಿ ಸ್ವಾಗತಿಸಬಹುದು. ಮಾತುಕತೆ ಸಫಲವಾಗಬಹುದೇ... ಹೀಗೆ ಹತ್ತು ಹಲವು ಆಲೋಚನೆಗಳು ಪ್ರತಿಯೊಬ್ಬರ ಮನದಲ್ಲೂ ತುಂಬಿಕೊಂಡಿದ್ದವು. ಅಂದು ಪ್ರಧಾನಿಯವರ ಹಿಂದಿನ ಆಸನದಲ್ಲಿ ಕುಳಿತಿದ್ದ ನಾನು ಅವರನ್ನುದ್ದೇಶಿಸಿ ‘ಇದೊಂದು ದಿಟ್ಟ ನಿಲುವು’ ಎಂದೆ. ಆಗ ಅವರು ಮುಗುಳ್ನಕ್ಕಿದ್ದರು.
ಆದರೆ ಅಷ್ಟಕ್ಕೆ ನಾನು ಸುಮ್ಮನಿರಲಿಲ್ಲ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದೆ. ‘ಇಂತಹದ್ದೊಂದು ಯಾನಕ್ಕೆ ನಿಮ್ಮ ಭಾರತೀಯ ಜನತಾ ಪಕ್ಷದ ಪ್ರತಿಕ್ರಿಯೆ ಏನಿದೆ’ ಎಂದು ಕೇಳಿದ್ದೆ. ‘ನೋಡಿ, ಈ ಪ್ರಧಾನಿ ಪಟ್ಟ ಶಾಶ್ವತವಲ್ಲ. ಇವತ್ತು ಇದೆ. ನಾಳೆ ಹೋಗುತ್ತೆ. ಈ ನಡುವೆ ದೇಶ, ಜನ ನೆನಪಲ್ಲಿ ಇಟ್ಟುಕೊಳ್ಳುವಂತಹ ಕೆಲಸ ಮಾಡಬೇಕು, ಅಷ್ಟೆ’ ಎಂದಿದ್ದರು. ಆದರೆ ಆ ದಿನಗಳಲ್ಲಿ ರಜೌರಿ ಪ್ರದೇಶದಲ್ಲಿ ನಡೆದಿದ್ದ ಹಿಂದೂಗಳ ಕಗ್ಗೊಲೆಯ ಪ್ರಸಂಗ ವ್ಯಾಪಕವಾಗಿ ಸುದ್ದಿಯಾಗಿತ್ತು. ಆ ಕುರಿತು ವಾಜಪೇಯಿ ಅವರು ವಿಚಲಿತರಾಗಿದ್ದರು. ಅದನ್ನೇ ಪ್ರಸ್ತಾಪ ಮಾಡಿದ ಅವರು, ‘ನೋಡಿ, ಇಂತಹದ್ದೊಂದು ಮಾತುಕತೆಯನ್ನು ವಿಫಲಗೊಳಿಸಲು ಎಲ್ಲಾ ಬಗೆಯ ಪ್ರಯತ್ನಗಳೂ ನಡೆಯುತ್ತವೆ. ಈ ಬಗ್ಗೆಯೂ ಎಚ್ಚರಿಕೆ ಬೇಕಿದೆ’ ಎಂದಿದ್ದರು. ಅವರೊಡನೆ ಅಂದು ಇನ್ನಷ್ಟು ಮಾತನಾಡಬೇಕೆಂದಿದ್ದೆ. ಆದರೆ ಅವರೊಡನೆ ಮಾತನಾಡಲು ಹಲವರು ತುದಿಗಾಲಲ್ಲಿ ನಿಂತಿದ್ದರು.
ಪಾಕ್ ನೆಲದಲ್ಲಿ ಕಾಲಿಟ್ಟ ಮೇಲೆ ಗೌರವ ರಕ್ಷೆಯ ವೈಭವ ಬಲು ಜೋರಾಗಿಯೇ ಇತ್ತೆನ್ನಿ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಎದ್ದು ಕಾಣುತ್ತಿದ್ದರು. ಬ್ರಿಟಿಷರು ಈ ನೆಲವನ್ನು ಬಿಟ್ಟು ಹೋದರೂ ಅವರ ಸಂಪ್ರದಾಯಗಳು ಉಳಿದುಕೊಂಡಿವೆ. ಇದರಲ್ಲಿ ಭಾರತ– ಪಾಕಿಸ್ತಾನ ಎಂಬ ವ್ಯತ್ಯಾಸವಿಲ್ಲ.
ಪಾಕ್ ನೆಲದಲ್ಲಿ ನಮ್ಮ ಬಸ್ಸಿನ ಸುತ್ತಲೂ ಸೇನಾ ಮಂದಿಯೇ ದೊಡ್ಡ ಸಂಖ್ಯೆಯಲ್ಲಿದ್ದರು. ಎಲ್ಲೆಡೆಯೂ ಒಂದು ವಿಚಿತ್ರವಾದ ಮೌನ ಪಸರಿಸಿತ್ತು. ಅಂಥದ್ದೊಂದು ಏಕತಾನತೆಯನ್ನು ನವಾಜ್ ಷರೀಫ್ ಅವರ ಮುಗುಳ್ನಗೆಯ ಸ್ವಾಗತ ಮರೆ ಮಾಡಿತ್ತು. ಅವರ ಜತೆಗಿದ್ದವರಲ್ಲಿ ಬಹುತೇಕ ಮಂದಿ ವರ್ಣರಂಜಿತ ಸಾಂಪ್ರದಾಯಿಕ ಉಡುಪು ಧರಿಸಿದ್ದು ಮನ ಸೆಳೆಯುವಂತಿತ್ತು. ಆ ವಾತಾವರಣ ಒಂದಷ್ಟು ಖುಷಿ ನೀಡಿತ್ತು.
ನವಾಜ್ ಷರೀಫ್ ಅವರು ವಾಜಪೇಯಿ ಅವರನ್ನು ಅಪ್ಪಿಕೊಳ್ಳುವ ಮೊದಲು ‘ಪಾಕಿ-ಸ್ತಾನಕ್ಕೆ ಸುಸ್ವಾಗತ’ ಎಂದು ಸ್ನೇಹದಿಂದ ಹೇಳಿದ್ದು ಅರ್ಥಪೂರ್ಣವಾಗಿತ್ತು. ಪಾಕ್ ಸರ್ಕಾರದ ಸಚಿವರೆಲ್ಲರೂ ಸಾಲಾಗಿ ನಿಂತು ವಾಜಪೇಯಿ ಅವರ ಕೈಕುಲುಕಿದರು. ಲಾಹೋರ್ನತ್ತ ಸಾಗಿದ್ದ ರಸ್ತೆಯ ಎರಡೂ ಕಡೆ ಜನ ನಿಂತಿದ್ದು ನಮ್ಮತ್ತ ಕೈಬೀಸುತ್ತಿದ್ದರು.
ಅಂದು ನವಾಜ್ ಷರೀಫ್ ಮತ್ತು ವಾಜಪೇಯಿ ಒಗ್ಗೂಡಿ ಕುಳಿತು ಬಹಳ ಹೊತ್ತು ಮಾತನಾಡಿದರು. ಎರಡೂ ದೇಶಗಳ ನಡುವಣ ಸಂಬಂಧ ಇನ್ನೇನು ಸಂಪೂರ್ಣವಾಗಿ ಸುಧಾರಿಸಿಯೇ ಬಿಟ್ಟಿತು ಎಂದು ನಾವೆಲ್ಲಾ ಭಾವಿಸಿಬಿಟ್ಟಿದ್ದೆವು. ಆದರೆ ಹಾಗಾಗಲಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕಿದವು. ಕಾಣದ ಕೈಗಳ ಕೈವಾಡ ಹೆಚ್ಚುತ್ತಾ ಹೋಯಿತು. ಅಂತಹದೊಂದು ಸುಂದರ ಪರಿಕಲ್ಪನೆ ತನ್ನ ಮಹತ್ವ ಕಳೆದುಕೊಂಡಿತು. ಹೌದು, ನಂತರದ ದಿನಗಳಲ್ಲಿ ಬಸ್ಸು ನಿಂತು ಹೋಯಿತು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.