ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...

Last Updated 2 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಹನ್ನೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದ ನಂತರದ `ಸುದ್ದಿ ಸ್ಫೋಟ~ವನ್ನು ನಂಬಿದ ಯಾರಲ್ಲಿಯೂ ಹೊರಗೆ ಹೊರಟ ಮೇಲೆ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬ ವಿಶ್ವಾಸ ಹುಟ್ಟಲಾರದು.

`...ರಾಜ್ಯದ ಮೆಟ್ರೊ ರೈಲ್ವೆ ನಿಲ್ದಾಣದಿಂದ ಹಿಡಿದು ಕೈಗಾ ಅಣುಸ್ಥಾವರದವರೆಗೆ, ಗಣೇಶೋತ್ಸವದಿಂದ ಹಿಡಿದು ಮೈಸೂರು ದಸರಾದ ವರೆಗೆ ಹಲವಾರು ಕಡೆ ಬಾಂಬು ಸ್ಫೋಟ ನಡೆಸುವ ಉದ್ದೇಶವನ್ನು ಈ ಶಂಕಿತ ಉಗ್ರರು ಹೊಂದಿದ್ದರು. ಎಲ್‌ಇಟಿ, ಹುಜಿ ಸೇರಿದಂತೆ ಹಲವು ಪ್ರಮುಖ ಉಗ್ರಗಾಮಿ ಸಂಘಟನೆಗಳ ಜತೆ ಇವರು ಸಂಪರ್ಕ ಹೊಂದಿದ್ದರು. ಉತ್ತರಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿಯೂ ಇವರ ಜಾಲ ಹರಡಿದೆ, ಪಾಕಿಸ್ತಾನ ಮಾತ್ರವಲ್ಲ ಆಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ದೇಶಗಳಿಗೂ ಇವರು ಭೇಟಿ ನೀಡಿದ್ದರು......~ ಇತ್ಯಾದಿ ಊಹಾಪೋಹ ಆಧರಿತ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ.

 ಇವುಗಳಲ್ಲಿ ಯಾವುದೂ ಪೊಲೀಸರ ಅಧಿಕೃತ ಹೇಳಿಕೆಗಳಲ್ಲ, ಸಾರ್ವಜನಿಕ ದಾಖಲೆಯಾಗಿರುವ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ಹೊರಗೆ ಬಿಟ್ಟುಕೊಡುತ್ತಿಲ್ಲ.
 
ಹೀಗೆ ಹೇಳಿದ ಮಾತ್ರಕ್ಕೆ ಅವರು ಕಟ್ಟುನಿಟ್ಟಾಗಿ ತನಿಖೆಯ ರಹಸ್ಯಪಾಲನೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ, ಪರಿಚಿತ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ಮುಕ್ತವಾಗಿ `ತನಿಖೆಯ ವಿವರ~ಗಳನ್ನು ಸೋರಿಬಿಡುತ್ತಿದ್ದಾರೆ. ಒಬ್ಬರು ಹೇಳಿರುವುದನ್ನು ಇನ್ನೊಬ್ಬರು ನಿರಾಕರಿಸುತ್ತಿದ್ದಾರೆ. ಕೈಗಾ ಅಣುಸ್ಥಾವರ ಶಂಕಿತ ಉಗ್ರರ ಗುರಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಮಾಡಿರುವ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ನಿರಾಕರಿಸುತ್ತಿದ್ದಾರೆ.

ಮೆಟ್ರೊ ನಿಲ್ದಾಣ ಸ್ಫೋಟ ಪ್ರಯತ್ನದ ಸುದ್ದಿಯನ್ನು ಕೂಡಾ ನಿರಾಕರಿಸಲಾಗಿದೆ. ಹಳೆಯ ಸುದ್ದಿಗಳನ್ನು ನಿರಾಕರಿಸಲಾಗುತ್ತಿದ್ದಂತೆಯೇ ಹೊಸ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪೈಪೋಟಿಯ ಯುಗದಲ್ಲಿ ಸಿಕ್ಕ ಸುದ್ದಿಯನ್ನು ದೃಢೀಕರಿಸಲು ಬೇಕಾದ ಸಮಯಾವಕಾಶ ಪತ್ರಕರ್ತರಿಗೂ ಇಲ್ಲ. ಮಾಧ್ಯಮರಂಗದ ಈ ದೌರ್ಬಲ್ಯವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ಅನುಮಾನ ಪಡುವ ರೀತಿಯಲ್ಲಿ `ಸುದ್ದಿಸ್ಫೋಟ~ ನಡೆಯುತ್ತಿದೆ.

ಇವೆಲ್ಲವನ್ನೂ ನೋಡುತ್ತಿದ್ದಾಗ `ಕಾಶ್ಮೆರ್ ಟೈಮ್ಸ~ ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥರಾದ ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತ ನೆನಪಾಗುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಪತ್ರಿಕೆಯ ಕಚೇರಿ ಇರುವ ಐಎನ್‌ಎಸ್ ಕಟ್ಟಡದಲ್ಲಿಯೇ ಗಿಲಾನಿ ಅವರ ಪತ್ರಿಕೆಯ ಕಚೇರಿಯೂ ಇದೆ. ಸ್ವಲ್ಪ ಕುಳ್ಳಗಿನ, ಸೌಮ್ಯ ಸ್ವಭಾವದ ಸುಮಾರು 35ರ ಆಜುಬಾಜಿನ ಈ ಗಿಲಾನಿ `ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ~ನೆಂದು ಒಂದು ದಿನ ಇದ್ದಕ್ಕಿದ್ದಂತೆ ಟಿವಿಚಾನೆಲ್‌ಗಳು ಕಿರಿಚಾಡುತ್ತಿರುವಾಗ ಅವರನ್ನು ಮೂರು ವರ್ಷಗಳಿಂದ ಆಗಾಗ ನೋಡುತ್ತಿದ್ದ ನನಗೆ ಆಘಾತವಾಗಿತ್ತು.

ಇಫ್ತಿಕರ್ ಗಿಲಾನಿ ಅವರು ಕಾಶ್ಮೆರದ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಹಾ ಗಿಲಾನಿ ಅಳಿಯನೆಂದು ಹೆಚ್ಚಿನವರಿಗೆ ಗೊತ್ತಾಗಿದ್ದು ಕೂಡಾ ಅವರ ಬಂಧನದ ನಂತರ. 2002ರ ಜುಲೈ ಒಂಬತ್ತರಂದು ದೆಹಲಿಯ ಮಾಳವೀಯ ನಗರದ ಅವರ ಮನೆ ಮೇಲೆ ದಾಳಿ ನಡೆಸಿದ ವರಮಾನ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಬಂದ ಐಬಿ ಅಧಿಕಾರಿಗಳು ಗಿಲಾನಿ ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಕರೆದೊಯ್ದಿದ್ದರು.

`ಅಧಿಕೃತ ರಹಸ್ಯ ಕಾಯಿದೆ~ಯಡಿ ಬಂಧಿಸಲಾದ ಅವರ ಮೇಲೆ ಬೇಹುಗಾರಿಕೆ, ರಾಜದ್ರೋಹದ ಆರೋಪಗಳನ್ನು ಮಾತ್ರವಲ್ಲ ಅಬ್ದುಲ್ ಗನಿ ಲೋನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಅವರನ್ನು ಬಂಧಿಸಿದ ಎರಡು ತಿಂಗಳ ನಂತರ `ಅಶ್ಲೀಲ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದರು~ ಎಂಬ ಹೊಸ ಆರೋಪ ಮಾಡಲಾಗಿತ್ತು.

 ಈ ಎಲ್ಲ ಆರೋಪಗಳಿಗೆ ಗುಪ್ತಚರ ಇಲಾಖೆ ಆಧಾರವಾಗಿ ಬಳಸಿದ್ದು ಅವರ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ `ಫ್ಯಾಕ್ಟ್‌ಶೀಟ್ ಆನ್ ಇಂಡಿಯನ್ ಫೋರ್ಸಸ್ ಇನ್ ಇಂಡಿಯಾ ಹೆಲ್ಡ್ ಕಾಶ್ಮೆರ್~ ಎಂಬ ಹೆಸರಿನ ಫೈಲ್‌ನಲ್ಲಿದ್ದ ಐದು ಪುಟಗಳ ದಾಖಲೆ. ಕಾಶ್ಮೆರದ ಉತ್ತರ ಕಮಾಂಡ್‌ನ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆ ಮತ್ತು ಅರೆಸೇನಾಪಡೆಯ ಸಾಮರ್ಥ್ಯದ ಬಗ್ಗೆ ಅದರಲ್ಲಿ ವಿವರಗಳಿದ್ದವು.

ಈ ಬಗ್ಗೆ ಸೇನಾ ಗುಪ್ತಚರ ಮಹಾನಿರ್ದೇಶಕರ (ಡಿಜಿಎಂಐ) ಅಭಿಪ್ರಾಯ ಪಡೆಯಲಾಗಿತ್ತು. ` ..ಈ ಮಾಹಿತಿ ದೇಶದ ಭದ್ರತೆಗೆ ಅಪಾಯಕಾರಿ ಹಾಗೂ ಜಮ್ಮು ಮತ್ತು ಕಾಶ್ಮೆರದಲ್ಲಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ..~ಎಂದು ಡಿಜಿಎಂಐ ಹೇಳಿತ್ತು. ಇಂಟಲಿಜೆನ್ಸ್ ಬ್ಯೂರೋ (ಐಬಿ) ಆಗಲೇ ಗಿಲಾನಿ ಅಪರಾಧಿ ಎಂದು ತೀರ್ಮಾನಿಸಿಯಾಗಿತ್ತು.

ಏಳು ತಿಂಗಳ ನಂತರ ಆರೋಪಮುಕ್ತರಾಗಿ ಹೊರಬಂದ ಗಿಲಾನಿ ತಿಹಾರ್ ಜೈಲಿನೊಳಗೆ ಪ್ರವೇಶಿಸಿದ ಮೊದಲ ದಿನದ ಅನುಭವವನ್ನು  `ಮೈ ಡೇಸ್ ಇನ್ ಪ್ರಿಸನ್~ ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ:

`.....ತಿಹಾರ್ ಜೈಲು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ಅಧಿಕಾರಿ ತನ್ನನ್ನು ಹಿಂಬಾಲಿಸುವಂತೆ ನನಗೆ ಸೂಚನೆ ನೀಡಿದರು. ಅಲ್ಲಿರುವ ಮೇಜಿನ ಹಿಂದೆ ಕಿಶನ್ ಎನ್ನುವ ಅಧಿಕಾರಿ ಕೂತಿದ್ದರು,ಅವರ ಸುತ್ತ 10-12 ಮಂದಿ ನೆರೆದಿದ್ದರು. ಅವರಲ್ಲಿ ಕೆಲವರು ಜೈಲು ಸಿಬ್ಬಂದಿ, ಉಳಿದವರು ಕೈದಿಗಳು.
 
ನನ್ನ ಹೆಸರೇನೆಂದು ಕಿಶನ್ ಕೇಳಿದರು. ನಾನು ಉತ್ತರಿಸುವಷ್ಟರಲ್ಲಿ ಅಲ್ಲಿದ್ದ ಜೈಲು ಸಿಬ್ಬಂದಿಯೊಬ್ಬ ನನ್ನ ಕೆನ್ನೆಗೆ ಬೀಸಿ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲರೂ ನನ್ನ ಮೇಲೆ ಎರಗಿದರು, ಹೊಟ್ಟೆ,ಬೆನ್ನು, ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹೊಡೆದದ್ದು ಮಾತ್ರವಲ್ಲ ನನ್ನ ಕೂದಲನ್ನು ಹಿಡಿದು ಜಗ್ಗಿ ತಲೆಯನ್ನು ಮೇಜಿಗೆ ಅಪ್ಪಳಿಸಿದರು. ನನ್ನ ಬಾಯಿ,ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಿತ್ತು.
 
`ಸಾಲಾ, ಗದ್ದಾರ್, ಪಾಕಿಸ್ತಾನಿ ಏಜಂಟ್, ನಿನ್ನಂತಹವರು ಬದುಕಬಾರದು, ನೇರವಾಗಿ ಗಲ್ಲಿಗೇರಿಸಬೇಕು..~ ಎಂದು ಬೈಯ್ಯುತ್ತಿರುವುದು ಪ್ರಜ್ಞೆ ತಪ್ಪುವವರೆಗೆ ಕೇಳುತ್ತಲೇ ಇತ್ತು. ಪ್ರಜ್ಞೆ ಬಂದ ಮೇಲೆ ನನ್ನ ಅಂಗಿಯಿಂದ ಟಾಯ್ಲೆಟ್ ಶುಚಿ ಮಾಡುವಂತೆ ತಿಳಿಸಿ ಮೂರು ದಿನಗಳ ಕಾಲ ಅದೇ ಅಂಗಿಯನ್ನು ತೊಡುವಂತೆ ಮಾಡಿದರು......~


ಯಾವ ಉದ್ದೇಶದಿಂದ ಗಿಲಾನಿ ಅವರನ್ನು ಬಂಧಿಸಿದ್ದರೆಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಬಂಧಿಸಿದ ಮರುಕ್ಷಣವೇ ಐಬಿ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿರಬಹುದು.

ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯಾಧಾರಗಳು ಅವರಲ್ಲಿ ಇರಲಿಲ್ಲ. ಆಗ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹದಿನೇಳು ಬಾರಿ ಗಿಲಾನಿ ಸಂಬಂಧಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಪ್ರತಿಬಾರಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳಿದ್ದರು. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಐಬಿ ಅಧಿಕಾರಿಗಳು ಒಂದಷ್ಟು ಸುಳ್ಳುಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ತೇಲಿ ಬಿಡತೊಡಗಿದ್ದರು.
 
ಮಾಧ್ಯಮಗಳು ಕೂಡಾ `ನಂಬಲರ್ಹ ಮೂಲಗಳು~ ಕೊಟ್ಟ ಮಾಹಿತಿಯನ್ನು ಪರಾಮರ್ಶಿಸಲು ಹೋಗದೆ ಪ್ರಕಟಣೆ-ಪ್ರಸಾರ ನಡೆಸಿದವು. `ಹಿಂದಿ ಟಿವಿ ಚಾನೆಲ್‌ನ ಒಬ್ಬ ವರದಿಗಾರ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಹೆಸರಿದ್ದ ಅಂಚೆಪೆಟ್ಟಿಗೆಯ ಮುಂದೆ ನಿಂತು `ಗಿಲಾನಿ ಪರಾರಿಯಾಗಿದ್ದಾರೆ~ ಎಂದು ಹೇಳುತ್ತಿರುವಾಗ ಮನೆಯೊಳಗೆ ಐಬಿ ಅಧಿಕಾರಿಗಳು ತಮ್ಮನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದುದನ್ನು ಗಿಲಾನಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತೆಯೊಬ್ಬರು `ನಾನು ಐಎಸ್‌ಐ ಏಜಂಟ್ ಎಂದು ಗಿಲಾನಿ ತಪ್ಪೊಪ್ಪಿಕೊಂಡಿದ್ದಾರೆ~ ಎಂದು ಐಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದರು. ಇದರಿಂದ ನೊಂದ ಗಿಲಾನಿ ಪತ್ನಿ ಅನಿಸಾ ಅವರು ಆ ಪತ್ರಿಕೆಯ ಮಾಲೀಕರನ್ನು ಸಂಪರ್ಕಿಸಿ ಆಗಿರುವ ಅನಾಹುತವನ್ನು ತಿಳಿಸಿದ್ದರು. ಮರುದಿನ ಪತ್ರಿಕೆ ಕ್ಷಮಾಪಣೆ ಕೇಳಿತ್ತು.

ನಿಜಾಂಶ ಏನೆಂದರೆ ಗಿಲಾನಿ ಅವರ ಮೇಲೆ `ಅಧಿಕೃತ ರಹಸ್ಯ ಕಾಯ್ದೆ~ಯ ಉಲ್ಲಂಘನೆಯ ಆರೋಪಕ್ಕೆ ಕಾರಣವಾದ ಅವರದ್ದೇ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ ದಾಖಲೆ ಭಾರತ ಸರ್ಕಾರದ್ದಾಗಿರದೆ, ಪಾಕಿಸ್ತಾನದ್ದಾಗಿತ್ತು. ಡಾ.ನಾಸಿರ್ ಕಮಾಲ್ ಎಂಬ ಪಾಕಿಸ್ತಾನಿ ರಕ್ಷಣಾ ತಜ್ಞರು ಬರೆದ ಈ ಲೇಖನವನ್ನು ಇಸ್ಲಾಮಾಬಾದ್‌ನ ರಕ್ಷಣಾ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಅದನ್ನು ಗಿಲಾನಿ ತಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದರು.
 
ಇದು ಆಗಲೇ ರಕ್ಷಣಾ ಖಾತೆಯ ಗ್ರಂಥಾಲಯಗಳಲ್ಲಿ ಲಭ್ಯ ಇತ್ತು. ಪಾಕಿಸ್ತಾನಿಗಳು ಜಮ್ಮು ಮತ್ತು ಕಾಶ್ಮೆರವನ್ನು ಹಾಗೆಂದು ಕರೆಯದೆ `ಇಂಡಿಯನ್ ಹೆಲ್ಡ್ ಕಾಶ್ಮೆರ್~ ಎಂದೇ ಈಗಲೂ ಕರೆಯುವುದು. (ಅವರು `ಆಜಾದಿ ಕಾಶ್ಮೆರ~ ಎಂದು ಹೇಳುತ್ತಿರುವ ಪ್ರದೇಶವನ್ನು ನಾವು `ಪಾಕಿಸ್ತಾನ ಆಕ್ರಮಿತ ಕಾಶ್ಮೆರ~ ಎಂದು ಕರೆಯುತ್ತೇವೆಯಲ್ಲ ಹಾಗೆ). ಇದರ ಅರಿವಿದ್ದ ಐಬಿ ತಾನು ವಶಪಡಿಸಿಕೊಂಡ ದಾಖಲೆಯಲ್ಲಿ `ಇಂಡಿಯನ್‌ಹೆಲ್ಡ್ ಕಾಶ್ಮೆರ~ ಎಂದು ಇದ್ದ ಕಡೆಗಳೆಲ್ಲ `ಜಮ್ಮು ಮತ್ತು ಕಾಶ್ಮೆರ~ ಎಂದು ತಿದ್ದಿತ್ತು.

ಆಗಲೇ ಡಿಜಿಎಂಐಗೆ ತಪ್ಪಿನ ಅರಿವಾಗಿ ತಾನು ಮೊದಲು ನೀಡಿದ್ದ ಅಭಿಪ್ರಾಯವನ್ನು ವಾಪಸು ಪಡೆದು `ಪ್ರಾರಂಭದಲ್ಲಿ ನಾವು ನೀಡಿದ್ದ ಅಭಿಪ್ರಾಯ ಅತಿರಂಜಿತವಾಗಿತ್ತು. ಈ ದಾಖಲೆ ಎಲ್ಲ ಕಡೆ ಸುಲಭದಲ್ಲಿ ಲಭ್ಯ ಇರುವುದರಿಂದ ಅದಕ್ಕೆ ಭದ್ರತಾ ಮೌಲ್ಯ ಇಲ್ಲ~ ಎಂಬ ಪರಿಷ್ಕೃತ ಅಭಿಪ್ರಾಯ ನೀಡಿತ್ತು.

ಅಷ್ಟು ಹೊತ್ತಿಗೆ ಪ್ರಾರಂಭದಿಂದಲೂ ಈ ಪ್ರಕರಣದಲ್ಲಿ ಗಿಲಾನಿ ಬಗ್ಗೆ ಅನುಕಂಪ ಹೊಂದಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರಿಗೆ ಕೂಡಾ ಐಬಿ ಎಡವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕೊನೆಗೆ ಏಳು ತಿಂಗಳ ನಂತರ ಇಫ್ತಿಕರ್ ಗಿಲಾನಿ ಅವರನ್ನು 2003 ಜೂನ್ 13ರಂದು ಬಿಡುಗಡೆ ಮಾಡಲಾಯಿತು. ಆದರೆ ಯಾರದೋ ಒತ್ತಡಕ್ಕೆ ಸಿಕ್ಕಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದ ಅಧಿಕಾರಿಗಳ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ.

ಭಯೋತ್ಪಾದಕರು ಮತ್ತು ನಕ್ಸಲೀಯರ ಜತೆ ಸಂಪರ್ಕ ಕಲ್ಪಿಸಿ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕಾರ್ಯ ದೇಶದಾದ್ಯಂತ ಈಗಲೂ ಮುಂದುವರಿದಿದೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ವಾರ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಾಜ್ಮಿ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
 
ಐದು ತಿಂಗಳುಗಳಾದರೂ ಅವರು ಬಿಡುಗಡೆಯಾಗಿಲ್ಲ. ಬೆಂಗಳೂರು ಬಾಂಬು ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳ ಜತೆ ಮಾತನಾಡಿದ್ದರು ಎನ್ನುವ ಕಾರಣಕ್ಕೆ ದೆಹಲಿಯ ವಾರಪತ್ರಿಕೆಯ ಕೇರಳ ವರದಿಗಾರರಾಗಿದ್ದ ಶಾಹಿನಾ ಎಂಬುವವರ ಮೇಲೆ ಕರ್ನಾಟಕ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇಫ್ತಿಕರ್ ಗಿಲಾನಿ ಅವರು ನಿರಪರಾಧಿಯಾಗಿ ಹೊರಬಂದ ಮಾತ್ರಕ್ಕೆ ಭಯೋತ್ಪಾದನೆ ಸಂಬಂಧಿ ಆರೋಪಿಗಳೆಲ್ಲರೂ ನಿರಪರಾಧಿಗಳಿರಲಾರರು. ಆದರೆ ಮಾಡಿದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗದ ನಮ್ಮ ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ನಿರಪರಾಧಿಗಳು ಅಪರಾಧಿಯಾಗುತ್ತಿರುವುದು ಮಾತ್ರವಲ್ಲ, ಅಪರಾಧಿ ನಿರಪರಾಧಿ ಎಂದು ಅನಿಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳೂ ಇವೆ.

ಮೊದಲನೆಯದರಷ್ಟೇ ಎರಡನೆಯದೂ ಅಪಾಯಕಾರಿ. ಆರೋಪಗಳನ್ನು ಹೊರಿಸಲು ಒಂದೆರಡು ನಾಲಿಗೆ, ಒಂದಷ್ಟು ಕಿವಿಗಳಷ್ಟೇ ಸಾಕು. ಆದರೆ ಅದನ್ನು ಸಾಬೀತುಪಡಿಸಲು ಅಷ್ಟೇ ಸಾಲದು, ಸತ್ಯದ ನೆರವು ಕೂಡಾ ಬೇಕಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT