ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: ರೈತರ ಹಿತ ಕಾಯುವ ಇಚ್ಛಾಶಕ್ತಿ ಇದೆಯೇ?

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ­ಗಳಲ್ಲಿ ಒಂದು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣ ಕೂಡ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ವಿಸ್ತೀರ್ಣದ ದೃಷ್ಟಿಯಿಂದ ಭಾರಿ ದೊಡ್ಡದು. ವಹಿ­ವಾಟು ಕೂಡ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಆದರೂ ಈ ಮಾರುಕಟ್ಟೆಯನ್ನು ರೈತರ ಮತ್ತು ವ್ಯಾಪಾರಿ­ಗಳ ಹಿತದೃಷ್ಟಿಯಿಂದ ಅಭಿವೃದ್ಧಿಪಡಿಸುವ ಕಾರ್ಯ 20–25 ವರ್ಷ ಕಳೆದರೂ ಆಗದಿರುವುದು ಸೋಜಿಗವೇ ಸರಿ.

ಹತ್ತಾರು ವರ್ಷಗಳಿಂದ ಖಾಲಿ ಖಾಲಿ ಕಾಣುತ್ತಿದ್ದ ಎಪಿಎಂಸಿ ಆವರಣದಲ್ಲಿ ಈಗ ಎಲ್ಲೆಡೆ ವರ್ತಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮಳಿಗೆಗಳು ಹಾಗೂ ಗೋದಾಮುಗಳನ್ನು ನಿರ್ಮಿಸಿಕೊಂಡಿರುವುದ­ರಿಂದ ಕಟ್ಟಡಗಳು ಎದ್ದು ನಿಂತಿವೆ. ಇಲ್ಲಿ ಅಭಿವೃದ್ಧಿ ಎಂದರೆ ಇದೊಂದೇ. ಆ ಮಳಿಗೆಗಳಿಗೆ ಹೋಗಲು ರಸ್ತೆ­ಗಳಿ­ಲ್ಲದೆ ದೂಳಿನಲ್ಲೇ ಸಾಗಬೇಕಾದ ಸ್ಥಿತಿ ಇದ್ದರೂ ಕನಿಷ್ಠ ಡಾಂಬರೀಕಣ ಕಾರ್ಯವೂ ಆಗಿಲ್ಲ. ಆಗ ಖಾಲಿ ಜಾಗದಲ್ಲಿ ರಸ್ತೆ ಮಾಡಿ ಏನು ಪ್ರಯೋಜನ ಎಂದು ಕೇಳು­ತ್ತಿದ್ದ ಆಡಳಿತ ಮಂಡಳಿ, ಈಗ ಉತ್ತರ ಕೊಡಲು ಆಗದ ಸ್ಥಿತಿಯಲ್ಲಿದೆ.

ಅಕ್ಕಿ ಹೊಂಡವನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದಾಗಲೇ ಸೌಕರ್ಯ ಕಲ್ಪಿಸಬೇಕು ಎಂಬ ಆಲೋಚನೆಯೂ ಅಧಿಕಾರಿಗಳು ಮತ್ತು ಆಡಳಿತ­ಮಂಡ­ಳಿಗೆ ಇರಬೇಕಿತ್ತು. ಆಗ ಇವರಾರೂ ಆ ನಿಟ್ಟಿ­ನಲ್ಲಿ ಯೋಚಿಸದ ಕಾರಣ ಇಂದು ವರ್ತಕರು ದೂಳಿ­ನಲ್ಲಿ ಅಂಗಡಿ ತೆರೆದು ಕುಳಿತು, ಸಂಜೆಗೆ ಬಾಗಿಲು ಹಾಕಿ­ಕೊಂಡು ಹೋಗುವಂತಾಗಿದೆ. ಈ ಅಂಗಡಿಗಳ ಮುಂದೆ ಜನರೇ ಸುಳಿದಾಡುವುದಿಲ್ಲ! ನಿಜ. ಇಲ್ಲಿ ಮನೆಗಳಿಗೆ ಬೇಕಾದ ದಿನಸಿ ಖರೀದಿಸಲು ಜನರು ಬರುವುದಿಲ್ಲ. ಚಿಲ್ಲರೆ ಮಾರಾಟಕ್ಕೂ ಆಸ್ಪದವಿಲ್ಲ. ಬದಲಿಗೆ ಕಿರಾಣಿ ಅಂಗ­ಡಿಗಳನ್ನು ಇಟ್ಟುಕೊಂಡಿರುವ ಸಣ್ಣ ಸಣ್ಣ ವರ್ತ­ಕರು ಬರುತ್ತಾರೆ. ಅವರಷ್ಟೇ ಇಲ್ಲಿ ಸಗಟು ರೂಪದಲ್ಲಿ ಒಂದಿಷ್ಟು ವಸ್ತುಗಳನ್ನು ಖರೀದಿಸಿ ಕೊಂಡೊಯ್ಯು­ತ್ತಾರೆ. ಆದರೆ ಇಲ್ಲಿನ ವಹಿವಾಟನ್ನು ನೋಡಿದಾಗ ವ್ಯಾಪಾ­ರವೇ ನಡೆಯುವುದಿಲ್ಲವೇನೋ ಎನಿಸುತ್ತದೆ. ಈ ವರ್ತಕರು ಅಕ್ಕಿ, ಬೆಲ್ಲ, ರವೆ, ಸಕ್ಕರೆ ಮೊದಲಾದ ಪದಾರ್ಥ­ಗಳನ್ನು ಬೇರೆ ಕಡೆಯಿಂದ ತರಿಸಿ ಇಲ್ಲಿ ಮಾರು­ತ್ತಾರೆ. ಈ ವಸ್ತುಗಳನ್ನು ರೈತರಿಂದ ಖರೀದಿಸು­ವು­ದಿಲ್ಲ. ಎಪಿಎಂಸಿಗೆ ಸೆಸ್‌ ಕೂಡ ಕೊಡುವಂತಿಲ್ಲ. ಆದರೂ ಇಲ್ಲಿಗೆ ಸ್ಥಳಾಂತರಿಸಿರುವುದಕ್ಕೆ ಆ ವರ್ತಕ­ರಲ್ಲಿ ಅಸಮಾಧಾನವಿದೆ.

ದವಸ–ಧಾನ್ಯ, ಕಾಳು–ಕಡಿ, ಸೊಪ್ಪು–ತರಕಾರಿ ಎಲ್ಲವೂ ಒಂದೇ ಕಡೆ ದೊರೆಯುವ ಏಕರೂಪ ಮಾರು­ಕಟ್ಟೆ ವ್ಯವಸ್ಥೆ ಇರಬೇಕು ಎಂಬುದೇನೋ ಸರಿ. ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನೂ ಕಲ್ಪಿಸಬೇಕಲ್ಲವೇ? ಪ್ರಾಂಗಣ­ದಲ್ಲಿ ರಸ್ತೆ, ಬೀದಿ ದೀಪ, ನೀರು ಪೂರೈಕೆ, ಭದ್ರತೆ ಯಾವು­ದನ್ನೂ ಒದಗಿಸದೇ ಇಲ್ಲಿಗೆ ವರ್ತಕರನ್ನು ಸ್ಥಳಾಂತ­ರಿಸಿರುವುದು ಸರಿಯಲ್ಲ. ಸಂಜೆ ನಂತರ ಇಲ್ಲಿ ಓಡಾಡಲು ಅಂಜಿಕೆಯಾಗುತ್ತದೆ ಎಂಬ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ಚಿಕ್ಕಮಠ ಅವರ ಮಾತು ಅಕ್ಷರಶಃ ನಿಜ.

ಇನ್ನು, ಎಪಿಎಂಸಿಗಳಲ್ಲಿ ಪ್ರಧಾನವಾಗಿ ನಡೆಯು­ವುದು ರೈತರು ತರುವ ಕೃಷಿ ಉತ್ಪನ್ನಗಳ ಖರೀದಿ. ಇದು ಪ್ರಾಥಮಿಕ ಮಾರುಕಟ್ಟೆ. ಕಮಿಷನ್ ಏಜೆಂಟರು ಇವನ್ನು ಖರೀದಿಸಿ, ಬೇರೆಡೆಗೆ ಸಾಗಿಸುತ್ತಾರೆ. ಹುಬ್ಬಳ್ಳಿ ಎಪಿ­ಎಂಸಿಗೆ ಹತ್ತಿ, ಅರಳೆ, ಶೇಂಗಾ, ಒಣಮೆಣಸಿನ­ಕಾಯಿ, ಆಹಾರ ಧಾನ್ಯ, ದ್ವಿದಳ ಧಾನ್ಯ, ಈರುಳ್ಳಿ, ಆಲೂ­ಗಡ್ಡೆ ಪ್ರಮುಖವಾಗಿ ಆವಕವಾಗುತ್ತದೆ. ಹತ್ತಿ ಮತ್ತು ಈರುಳ್ಳಿಗೆ ಅತ್ಯಂತ ದೊಡ್ಡ ಮಾರುಕಟ್ಟೆ ಹುಬ್ಬಳ್ಳಿ. ಈಗೀಗ ಶೇಂಗಾ ಆವಕವೂ ಹೆಚ್ಚುತ್ತಿದೆ. ಎಪಿಎಂ­ಸಿಗೆ ವಾರ್ಷಿಕ ಸುಮಾರು ₨ 9 ಕೋಟಿ ವರ­ಮಾನವೂ ಇದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಮಾರು­ಕಟ್ಟೆ­ಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರು­ವುದು ಏಕೆ ಎಂಬುದೇ ತಿಳಿಯದು. ವಿಪರ್ಯಾಸ­ವೆಂ­ದರೆ, ಎಪಿಎಂಸಿಯ ಚುನಾಯಿತ ಆಡಳಿತ ಮಂಡಳಿ­ಯಲ್ಲಿ ರೈತರು, ವರ್ತಕರು, ದಲಾಲರು, ಅಧಿಕಾರಿ­ಗಳು ಎಲ್ಲರೂ ಇರುತ್ತಾರೆ. ಆದರೂ ಎಪಿಎಂಸಿ ಸ್ಥಿತಿ ಮಾತ್ರ ಸುಧಾರಿಸಿಲ್ಲ!

ಎಪಿಎಂಸಿ ಅಭಿವೃದ್ಧಿಗಾಗಿ ಸರ್ಕಾರ ಅನುದಾನ­ವ­ನ್ನೇನೂ ಕೊಡುವುದಿಲ್ಲ. ಕೊನೆಪಕ್ಷ ಅಲ್ಲಿ ಉತ್ಪತ್ತಿ­ಯಾ­ಗುವ ವರಮಾನವನ್ನು ಆ ಮಾರುಕಟ್ಟೆ ಅಭಿವೃದ್ಧಿಗೇ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರ ಮಾಡಿಲ್ಲ. ಅದೂ ಅಲ್ಲದೇ, ಎಪಿಎಂಸಿಯಲ್ಲಿ ಕಾರ್ಯನಿರ್ವಹಿ­ಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ನೌಕರ­ರಾ­ದರೂ ಅವರ ಸಂಬಳಕ್ಕೂ ಆಯಾ ಎಪಿಎಂಸಿಗಳೇ ಹಣವನ್ನು ಸರ್ಕಾರಕ್ಕೆ ಜಮಾ ಮಾಡಬೇಕು. ಇಷ್ಟು ವರ್ಷ­ಗಳಾದರೂ ಸಿಬ್ಬಂದಿಗೆ ಕನಿಷ್ಠ ಸಂಬಳವನ್ನೂ ಕೊಡಲೂ ಸರ್ಕಾರ ಮುಂದಾಗಿಲ್ಲ. ಇದು ಹೊಣೆ­ಗೇಡಿ­ತನ­ವಲ್ಲದೇ ಬೇರೇನು? ವರಮಾನದಲ್ಲಿ ಇಂತಿಷ್ಟು ಶೇಕಡಾ­ವಾರು ಹಣವನ್ನು ಮಾತ್ರ ಅಭಿವೃದ್ಧಿಗೆ ಬಳಸ­ಬೇಕು ಎಂಬ ನಿಯಂತ್ರಣವನ್ನೂ ಹೇರಿರುವುದು ಯಾವ ಸುಖಕ್ಕಾಗಿ? ಒಟ್ಟಾರೆ ಎಪಿಎಂಸಿಗಳು ಹೀಗೆ ಅವ್ಯವಸ್ಥಿತವಾಗಿಯೇ ಇರಬೇಕು ಎಂಬ ಬಯಕೆ ಸರ್ಕಾರ­ದ್ದಾಗಿದೆ ಎನಿಸುತ್ತದೆ.

ರೈತರ ಹಿತದೃಷ್ಟಿಯಿಂದ ಆಗಾಗ್ಗೆ ರಚಿಸಿರುವ ಕಾಯ್ದೆಗಳು ಇನ್ನೂ ಜಾರಿಯಾಗಿಲ್ಲ ಎಂದರೆ ಎಪಿಎಂಸಿ ಮೇಲಿನ ವರ್ತಕರ ಮತ್ತು ದಲಾಲರ ಲಾಬಿ ಎಷ್ಟು ಬಲಿಷ್ಠ ಎಂಬುದು ಎಂತಹವರಿಗೂ ಅರ್ಥವಾಗುತ್ತದೆ. ಇನ್ನು ಮಾರುಕಟ್ಟೆ ನಿಯಂತ್ರಣ ಸಾಧ್ಯವಾಗುವುದಾ­ದರೂ ಹೇಗೆ? ರೈತರಿಂದ ಕಮಿಷನ್‌ ಪಡೆಯಬಾರದು ಎಂಬ ಕಾಯ್ದೆ 1986ರಲ್ಲಿಯೇ  ರಚನೆಯಾಗಿದ್ದರೂ ಅದು ಇನ್ನೂ ಅನುಷ್ಠಾನವಾಗಿಲ್ಲ ಎಂದರೆ ಅಂತಹ ಕಾಯ್ದೆಯನ್ನೇಕೆ ರಚನೆ ಮಾಡಬೇಕು? ವಿಧಾನ­ಮಂಡಲ ಅಂಗೀಕರಿಸಿದ ಕಾಯ್ದೆಯನ್ನು ಅನುಷ್ಠಾನ ಮಾಡುವ ಎದೆಗಾರಿಕೆ ಸರ್ಕಾರಕ್ಕಿರಬೇಕು. ರೈತರಿಂದ ಕೃಷಿ ಉತ್ಪನ್ನವನ್ನು ಖರೀದಿಸಿದ ಮೇಲೆ ಕೊಡಬೇಕಾದ ಹಣವನ್ನು ದಲ್ಲಾಳಿಯು ಎಪಿಎಂಸಿಗೇ ಪಾವತಿಸುವಂತೆ ಮಾಡಬೇಕು; ಅಲ್ಲಿಂದ ರೈತರಿಗೆ ಹಣ ಸಂದಾಯ­ವಾಗುವ ವ್ಯವಸ್ಥೆ ಜಾರಿ ಮಾಡಬೇಕು. ಆಗ ಮಾತ್ರ ರೈತರಿಗೆ ಪೂರ್ಣ ಹಣ ಕೈಸೇರುತ್ತದೆ. ಈಗ ದಲ್ಲಾಳಿ­ಗಳು ಶೇ 2 ರಿಂದ 3ರಷ್ಟು ಹಣವನ್ನು ಮುರಿದು­ಕೊಂಡು ರೈತರಿಗೆ ಕೊಡುತ್ತಿದ್ದಾರೆ. ಇದನ್ನು ಕಂಡೂ ಕಾಣ­ದಂತೆ ಅಧಿಕಾರಿಗಳೂ ಸುಮ್ಮನಿರುತ್ತಾರೆ. ರೈತರೂ ದೂರು ಕೊಡಲು ಹಿಂಜರಿಯುತ್ತಾರೆ. ಏಕೆಂದರೆ ಅವರಿಗೆ ಕಷ್ಟ­ಕಾಲದಲ್ಲಿ ಆಗುವವರು ಅದೇ ಸಾಹುಕಾರ ದಲ್ಲಾಳಿ. ಕಮಿಷನ್‌ ಪಾವತಿಸುವ ಮೂಲಕ ರೈತರು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಕಳೆದುಕೊಳ್ಳುತ್ತಿ­ದ್ದಾರೆ. ಇದನ್ನು ತಪ್ಪಿಸು­ವತ್ತ ಗಮನಹರಿಸದ ಸರ್ಕಾರ, ಸಾಲ ಮನ್ನಾ ಘೋಷಿಸಿ ಮತ ಬ್ಯಾಂಕ್‌ ಸೃಷ್ಟಿಸಿಕೊಳ್ಳಲು ಆದ್ಯತೆ ನೀಡು­ತ್ತದೆ. ದಲ್ಲಾಳಿಗಳ  ವಿರುದ್ಧ ಕ್ರಮ ಜರುಗಿಸುವ ಧೈರ್ಯವೇ ಅದಕ್ಕಿಲ್ಲ.


ರೈತರ ಹಿತ ಕಾಯುವ ಮನಸ್ಸುಳ್ಳ ಚುನಾಯಿತ ಪ್ರತಿನಿಧಿಗಳು ಕನಿಷ್ಠ ಬೆಳಗಾವಿ ಅಧಿವೇಶನದಲ್ಲಾ­ದರೂ ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆ­ಯನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಮಾಡ­ಬೇಕು.

‘ರಾಜ್ಯದಲ್ಲಿ (ವಿವಿಧ ಪ್ರಾಂತ್ಯಗಳಲ್ಲಿ ಜಾರಿಯಲ್ಲಿದ್ದ ವಿವಿಧ ಕಾಯ್ದೆಗಳ ಬದಲಿಗೆ ಸಮಗ್ರವಾಗಿ ಜಾರಿಗೆ ತಂದ 1966ರ ಕಾಯ್ದೆ) 1968ರಲ್ಲಿ ಸಮಗ್ರ ಕಾಯ್ದೆ ಜಾರಿಯಾಗುವ ಮೊದಲು ಮುಂಬೈ–ಕರ್ನಾಟಕ ಭಾಗದ ಎಪಿಎಂಸಿಗಳ ಕಾರ್ಯನಿರ್ವಹಣೆ ಉತ್ತಮ­ವಾಗಿಯೇ ಇತ್ತು. ಮುಂಬೈ ಸರ್ಕಾರದ ಹಸ್ತಕ್ಷೇಪವಿರ­ಲಿಲ್ಲ. ನಂತರ ರಾಜ್ಯ ಸರ್ಕಾರ ಜಾರಿಗೊಳಿಸಿದ ಈ ಕಾನೂನಿನಿಂದಲೇ ತೊಂದರೆ ಆರಂಭವಾಯಿತು ಎಂಬ ಭಾವನೆ ಈ ಭಾಗದಲ್ಲಿದೆ. ಅದನ್ನು ಸರ್ಕಾರ ನಿವಾರಿಸಬೇಕು’ ಎಂಬ ಹಿರಿಯ ಸಹಕಾರಿ ಧುರೀಣ ಡಿ.ಆರ್. ಪಾಟೀಲರ ಒತ್ತಾಯ ಸಮಂಜಸವಾಗಿದೆ. ಸರ್ಕಾರ ಕಣ್ತೆರೆಯಬೇಕಷ್ಟೇ.

ಎಪಿಎಂಸಿ ಅಧಿಕಾರಿಗಳು ಕೂಡ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವ ಬದಲಿಗೆ ಮಾರುಕಟ್ಟೆ­ಯಲ್ಲಿ ತೂಕ ಪರಿಶೀಲಿಸುವ ಕೆಲಸವನ್ನು ಪ್ರತಿನಿತ್ಯ ಮಾಡ­ಬೇಕು. ರೈತರಿಗೆ ತೂಕದಲ್ಲಿ ಮೋಸವಾಗದಂತೆ ನೋಡಿಕೊಂಡು, ತ್ವರಿತವಾಗಿ ಹಣ ಪಾವತಿಯಾಗು­ವಂತೆ ಮಾಡಿದರೆ ಮಾತ್ರ ರೈತರಿಗೆ ಮಾರುಕಟ್ಟೆ ಮೇಲೆ ವಿಶ್ವಾಸ ಮೂಡುತ್ತದೆ. ಅದೇ ರೀತಿ, ರೈತರಲ್ಲಿ ಅರಿವು ಮೂಡಿಸಿ, ಉತ್ಪನ್ನಗಳ ಗ್ರೇಡಿಂಗ್‌ ಮಾಡುವಂತೆ ಮನ­ವೊಲಿಸಿ, ಅನುಷ್ಠಾನಗೊಳಿಸಿದರೆ ದಲಾಲರೂ ಈ ಮಾರು­ಕಟ್ಟೆಯಲ್ಲಿ ಉತ್ತಮ ಪದಾರ್ಥ  ಸಿಗುತ್ತದೆ ಎಂದು ಬರುತ್ತಾರೆ. ರೈತರು–ದಲಾಲರ ಸಂಖ್ಯೆ ಹೆಚ್ಚಾ­ದರೆ ವಹಿವಾಟೂ ತಾನಾಗಿಯೇ ಹೆಚ್ಚಾಗುತ್ತದೆ. ಇದಕ್ಕೆ ಅಧಿಕಾರಿ ವರ್ಗ ಹೆಚ್ಚು ಗಮನಕೊಡಬೇಕು. ರೈತ­ರಿಗೆ ಅನ್ಯಾಯವಾಗಬಾರದು, ಶೋಷಣೆಯನ್ನು ತಪ್ಪಿಸ­ಬೇಕು ಎಂಬುದು ಎಪಿಎಂಸಿ ರಚನೆಯ ಮುಖ್ಯ ಉದ್ದೇಶ. ಇದನ್ನು ನೋಡಿಕೊಳ್ಳಬೇಕಾದವರು ಅಧಿಕಾರಿ­ಗಳು ಮತ್ತು ಆಡಳಿತ ಮಂಡಳಿ. ಆ ಜವಾಬ್ದಾರಿಯನ್ನು ಅವರು ಸಮರ್ಪಕವಾಗಿ ನಿರ್ವಹಿ­ಸ­ಬೇಕು. ಜತೆಗೆ ಸರ್ಕಾರ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕು. ಅವ್ಯವಹಾರ ತಡೆಗೆ ಎಲ್ಲರೂ ಕೈಜೋಡಿಸಿ, ರೈತರ ಹಿತಕಾಯಬೇಕು. ಆದರೆ ಆ ಇಚ್ಛಾಶಕ್ತಿ ಯಾರಿಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT