ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓವರ್ ಎ ಕಪ್ ಆಫ್ ಟೀ

ಅಕ್ಷರ ಗಾತ್ರ

ಪಾರ್ಲಿಮೆಂಟ್ ಗೇಟಿನ ಹತ್ತಿರ ‘ಗರಂ ಚಾಯ್, ಗರಂ ಚಾಯ್’ ಎಂದು ಕೂಗುತ್ತಿರುವ ಪದ ಕಿವಿಗೆ ಬಿದ್ದೊಡನೆ, ಅತ್ತ ಸಾಗುತ್ತಿದ್ದ ಮಂಕನ್ ಕಿವಿ ನೆಟ್ಟಗಾಯಿತು. ಎಲ್ಲೋ ಕೇಳಿದ ದನಿಯಂತಿದೆಯಲ್ಲಾ ಎಂದು ಅತ್ತ ತಿರುಗಿದ.

ಆಶ್ಚರ್ಯದಿಂದ ಹೃದಯಾ­ಘಾತ­ವಾಗಿ ಕುಸಿಯುವು­ದೊಂದು ಬಾಕಿ. ಟೀ ಕೆಟಲ್ ಹಿಡಿದು­ಕೊಂಡು ಪೆಕರ, ‘ಗರಂ ಚಾಯ್’ ಎಂದು ಕೂಗುತ್ತಿ­ದ್ದಾನೆ!!

‘ಏನ್ ಬ್ರೋ, ಪಾರ್ಲಿಮೆಂಟಿನಲ್ಲಿ ಐದು ವರ್ಷ ಕಸ ಗುಡಿಸಿ ಎಲ್ಲರೂ ಅವ­ರ­­­­ವರ ಮನೆಗೆ ಹೋಗಾಯ್ತು, ಮೈಕು ಕಿತ್ತೆ­ಸೆದದ್ದೂ ಆಯ್ತು, ಶರಟು ಹರಿ­ದು­­­ಕೊಂಡ ಘಟನೆಯೂ ಮುಗೀತು, ಪೆಪ್ಪರ್‌ ಸ್ಪ್ರೇ ಚಿಮುಕಿಸಿ ಕಣ್ಣುರಿ, ಮೂಗುರಿ ಮಾಡಿದ್ದೂ ಆಯ್ತು, ಕೋಟಿ ಕೋಟಿ ಹಗರಣ ಮಾಡಿ­­ದ್ದೂ ಆಯ್ತು, ಅಷ್ಟೂ ಸಾಲದು ಅಂತ ಒಂದೇ ಭಾಷೆ ಮಾತನಾಡುವ ರಾಜ್ಯ­­­ವನ್ನೂ ಕತ್ತ­ರಿಸಿ ಎರಡು ತುಕಡಾ ಮಾಡ­­­ಲಾಯ್ತು. ಎಲ್ಲಾ ಮುಗಿಸಿ ಬಾಗಿಲು ಹಾಕಿ­ಕೊಂಡು ಹೋದ ಮೇಲೆ ನೀನು ಇಲ್ಲಿ ನಿಂತ್ಕಂಡು ಟೀ ಮಾರ್ತಾ ಇದ್ದೀ­­ಯಲ್ಲಾ ಮಾರಾಯ! ಏನು ನಿನ್ನ ಫಜೀತಿ’ ಎಂದು ಪೆಕರನನ್ನು ಪ್ರಶ್ನಿಸಿದ.

ಮಂಕನ್‌ಗೆ ಒಂದು ಕಪ್ ಟೀ ಕೊಟ್ಟ ಪೆಕರ: ‘ಏನೂ ಗೊತ್ತಿಲ್ಲದವನಂತೆ ಕೇಳ­ಬೇಡ. ಈಗ ಟೀ ಮಾರಿದರೆ, ನಾಳೆ ನೇರ­ವಾಗಿ ಪಾರ್ಲಿಮೆಂಟ್ ಪ್ರವೇಶಿಸಿ ಪಿಎಮ್ಮಾಗಬಹುದು’ -ಎಂದ.
‘ಹೌದು ಬ್ರೋ, ಆ ಮಣಿಶಂಕರ ಅಯ್ಯ­ರ್‌ಗೆ ಸ್ವಲ್ಪ ಮಂಡೆ ಕಡಿಮೆ. ಟೀ ಅಂಗಡಿ ಇಡೋದಕ್ಕೆ ಜಾಗ ಬೇಕಾದ್ರೆ ಕೊಡ್ತೀನಿ, ಪಿ.ಎಂ. ಆಗಲು ನೀವು ನಾಲಾ­­­­ಯಕ್‌ ಅಂತ ಲೂಸ್‌ಟಾಕ್ ಮಾಡಿ, ಊರು ತುಂಬಾ ಚಾ ದುಖಾನ್ ಓಪನ್ ಆಗೋ ಹಾಗೆ ಮಾಡಿ­­­ದ­ರಲ್ಲಾ. ಎಲ್ಲ ಕಡೆ ಚಾಯ್ ಪರ್ ಚರ್ಚಾ ಆರಂಭವಾಗಿ ರೋಡಲ್ಲಿ ಹೋಗೋ ಮಾರೀನ ಮೈ­ಮೇಲೆ ಎಳ್ಕೊಂಡಂಗೆ ಆಗೋಯ್ತಲ್ಲ ‘ಕೈ’­ಪಾರ್ಟಿ­ಗಳ ಕತೆ’ ಎಂದು ಮಂಕನ್ ಲೊಚಗುಟ್ಟಿದ.

‘ಅಯ್ಯೋ ಬಿಡಪ್ಪ, ‘ಚಹಾ ಕುಡಿ­ಯುತ್ತಾ ಚರ್ಚೆ’ ನಡೆಯುತ್ತಿ­ರುವುದ­ನ್ನು ನೋಡಿದರೆ, ಕೈಪಾರ್ಟಿಗಳ ಹೆಗಲ ಮೇಲೆ ಶನಿಮಹಾತ್ಮ ಸವಾರಿ ಮಾಡ್ತಾ ಇದ್ದಾನೆ ಅಂತ ಕಾಣುತ್ತೆ. ಎಲ್ಲ ಕಡೆ ‘ಟೀ’ ಕುಡಿಯುವವರ ಸಂಖ್ಯೆ ಜಾಸ್ತಿ­ಯಾಗಿದೆ. ಇದನ್ನು ತಡೆದು ಅದಕ್ಕೆ ಪರ್ಯಾ­­ಯವಾಗಿ ಏನು ಕೊಡ್ಬೇಕು ಅಂತ ಗೊತ್ತಿಲ್ದೆ ಕೈ ಪಾರ್ಟಿಯವರು, ‘ರಾಗಾ ಹಾಲು’ ಕೊಡೋಕೆ ಶುರು­ಮಾಡಿದ್ದಾರೆ.

ಟಿ.ವಿ. ಚಾನೆಲ್‌ಗಳಲ್ಲಿ ‘ಟೀ ವಿಥ್ ಕರಣ್’ ಅಂತ ಕಾರ್ಯಕ್ರಮ ಶುರು­ಮಾಡಿದ್ದಾರೆ. ಕಮಲ ನಾಯಕ­ರೆಲ್ಲ ರಸ್ತೆರಸ್ತೆಗಳಲ್ಲಿ ನಿಂತುಕೊಂಡು ಟೀ ಮಾಡಿ­ಕೊಡುತ್ತಾ ಜನಪ್ರಿಯತೆ ಗಳಿ­ಸುತ್ತಿ­ರುವುದನ್ನು ನೋಡಿದರೆ, ಇರಲಾರ್ದೆ ಇರುವೆ ಬಿಟ್ಕಂಡ್ರು ಎನ್ನು­ವಂತಾಗಿದೆ ಕೈಗಳ ಕತೆ’ ಎಂದು ವಿವರಿಸಿದ ಪೆಕರ.

‘ನಿನ್ನೆ ನಮ್ಮ ಎಡಿಟರ್ರೂ ಫೋನ್‌ ಮಾಡಿದ್ರು. ದೇಶದ ತುಂಬ ಓವರ್ ಎ ಕಪ್ ಆಫ್ ಟೀ ನಡೀತಿರಬೇಕಾದ್ರೆ ಇನ್ನೂ ನೀವು ಟೂರ್ ಮಾಡಿ ವರದಿ ರೆಡಿ ಮಾಡ್ಲಿಲ್ಲವಲ್ಲ ಎಂದು ಕೇಳಿದರು ಮಾರಾ­­­­ಯ. ಅದಕ್ಕೆ, ಪಾರ್ಲಿಮೆಂಟ್ ಮುಂದೆ ಟೀ ಮಾರ್ತಾ ಇದ್ದೇನೆ’ ಎಂದು ತನ್ನ ಗೋಳಿನ ಕತೆಯನ್ನು ವಿವರಿಸಿ, ಒಂದು ಸಿಪ್ ಟೀಯನ್ನು ಸೊರ್ರನೆ ಎಳೆದ.

‘ನಮ್ಮ ನಮೋ ನಮೋ ಚಿಕ್ಕಂದಿನಲ್ಲಿ ಟೀ ಮಾರ್ತಾ ಇದ್ದದ್ದು ಯಾಕೆ ಬ್ರೋ? ಟೀ ನಮ್‌ ದೇಶದ್ದೇ ಅಲ್ಲ. ಇದು ಚೀನಾ ದೇಶದ್ದು. ನಮಗೆ ಟೀ ಕುಡಿಯೋದು ಕಲಿಸಿದ್ದೇ ಬ್ರಿಟಿಷರು. ವಿದೇಶಕ್ಕೆ ಹೋಗೋಕೆ ಪಾಸ್‌ಪೋರ್ಟೇ ಇಲ್ಲದ ನಮೋ ನಮೋ ವಿದೇಶಿ ಚಾಯ್ ಯಾಕ್‌ ಮಾರ್ತಾ ಇದ್ರು ಬ್ರೋ, ಬಹಳ ಕನ್‌-­ಫ್ಯೂಸ್ ಆಗ್ತಾ ಇದೆಯಲ್ಲಾ! ಸರ­ಸಂಚಾ­ಲಕರು ಕಿವಿ ಹಿಂಡಲಿಲ್ಲವೇ? ಅವ­ರೆಲ್ಲಾ ಅಪ್ಪಟ ಸ್ವದೇಶಿ ಅಂದ್ಕೊಂ­ಡಿದ್ದೇ­ನಲ್ಲಾ’ ಎಂದು ಮಂಕನ್ ಮೂಲಭೂತ ಅನುಮಾನವನ್ನು ಹೊರಹಾಕಿದ.

ಪೆಕರನಿಗೆ ಸ್ವಲ್ಪ ಸಿಟ್ಟು ಬಂತು.  ‘ನೀನು ಕೈ ಏಜೆಂಟರ ತರಹ ಮಾತಾಡ್ತಾ ಇದ್ದಂತಿದೆ. ಟೀ ವಿದೇಶಿ ಮೂಲದ್ದು ಅಂತ ನೀವು ವಾದಿಸಿದರೆ, ದೆಹಲಿ ಮೇಡಂ ಇಟಲಿ ಮೂಲದವರು ಅಂತ ಅವರು ಪ್ರತಿವಾದ ಮಾಡ್ತಾರೆ. ಹೊಲ­­ದಲ್ಲಿ ಕಳೆ ಕೀಳಬೇಕೇ ಹೊರತು, ಬೆಳೆ ಕೀಳಬಾರದು. ಒಬ್ಬರು ಟೀ ಕುಡಿ­ಸ್ತಾರೆ, ಮತ್ತೊಬ್ಬರು ಹಾಲು ಕುಡಿ­ಸ್ತಾರೆ. ಯಾರು ಪಿ.ಎಂ. ಆಗ್ತಾರೆ ನೋಡೋಣ’ ಎಂದು ಪೆಕರ ದಬಾಯಿಸಿದ.
ಏನೂ ಅರ್ಥವಾಗದೆ ಮಂಕನ್ ಕಣ್‌ಕಣ್ ಬಿಟ್ಟ.

ಹಾಲಲ್ಲಾದರೂ ಹಾಕು, ಟೀಯಲ್ಲಾದರೂ ಹಾಕು
ನಮೋ ನರೇಂದ್ರಾsss
ಹಾಲೆಲ್ಲಾ ‘ರಾಗಾ ಮಿಲ್ಕಾಗಿ’. ಟೀಯಲ್ಲಿ ಹೂ ಅರಳಿ
ಹಾಯಾಗಿರುವಿರಾ ನರೇಂದ್ರಾsss

ಈಗ ಈ ಹಾಡನ್ನು ಹಾಯಾಗಿ ಹಾಡ್ತಾ ಇದ್ದಾರೆ. ಚುನಾವಣೆ ಮುಗಿದ ಮೇಲೆ ಅವರ ರಾಗವೇ ಬೇರೆ ಆಗುತ್ತೆ ಎಂದ ಮಂಕನ್.

ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು
ಓ ನರೇಂದ್ರಾsss
ಬದುಕೆಲ್ಲಾ ಮುಳ್ಳಾಗಿ
ಐದ್‌ವರ್ಷ ಕಲ್ಲಾಗಿ
ಸಾಯುವೆ ನೀ ಬಡಮತದಾರಾsss

‘ಆದ್ರೂ ನನಗೆ ಒಂದು ಅನುಮಾನ ಬರ್‌್ತಾ ಇದೆ’ ಎಂದು ಮಂಕನ್ ಮತ್ತೆ ಶುರು ಹಚ್ಚಿಕೊಂಡ. ‘ಟೀ ಮಾರೋ­ದ್ರಲ್ಲಿ ನಾನು ಸೀನಿಯರ್ರು, ಶಾಲಾ ಫೀಜು ಕಟ್ಟಲು ಚಿಕ್ಕಂದಿನಲ್ಲಿ ನಾನು ಸಹೋ­­­ದರರ ಜೊತೆ ಸೇರಿಕೊಂಡು ಚಹಾ ಮಾರುತ್ತಿದ್ದೆ. ಆದ್ರಿಂದ ನಾನೇ ಪಿ.ಎಂ. ಆಗೋಕೆ ಸರಿಯಾದ ವ್ಯಕ್ತಿ ಅಂತ  ಮೇವು ವೀರ ಲಾಲೂಜೀ ಹೇಳ್ತಾ ಇದಾರೆ. ಮುಜಾಫರ್ ಜಿಲ್ಲೆಯಲ್ಲಿ ಚಾಯ್‌ ದುಕಾನ್ ಕೂಡಾ ಓಪನ್ ಮಾಡಿ­­ದ್ದಾರೆ. ಇನ್ನೂ ಸೀನಿಯರ್ ಅಂದ್ರೆ ಷರೀಫ್‌ ಜಾಫರ್ ಸಾಹೇಬ್ರು. ಜೂನಿಯರ್ ಅಂದ್ರೆ ಆಂಜನೇಯ ದೇವ್ರು. ಇದ್ರಲ್ಲಿ ಸೀನಿಯರ್, ಜೂನಿ­ಯರ್ ಲೆಕ್ಕ ಇದೆಯಾ ಬ್ರೋ!’

‘ನೋಡಯ್ಯಾ ನಿನ್ನ ಅನುಮಾನ­ಗಳಿಗೆ ಕೊನೆ ಮೊದಲೇ ಇಲ್ಲ. ಬೆಳ್ಳಗಿರುವು­ದೆಲ್ಲಾ ಹಾಲಲ್ಲ. ಕೆಂಪಗಿ­ರುವುದೆಲ್ಲಾ ಟೀ ಅಲ್ಲ ನೆನಪಿನಲ್ಲಿರಲಿ. ಚಾಯ್ ಅಂಗಡಿ ಎಂದರೆ, ಫುಟ್‌ಪಾತ್ ಪಾರ್ಲಿ­ಮೆಂಟ್ ಅಂತ ನಮೋ ನಮೋ ಹೇಳಿಲ್ಲವೇ? ಈ ಫುಟ್‌ಪಾತ್‌ನಲ್ಲೇ ಕುಳಿತು ಸಾವಿರಾರು ಜನರ ಜೊತೆ ಸಂವಾದ ಮಾಡಲಿಲ್ಲವೇ? ಇದೇ ಫುಟ್‌­ಪಾತ್‌ನಲ್ಲಿ ಕುಳಿತು ಧರಣಿ ಮಾಡಿದ ದೆಹಲಿ ಮಾಜಿ ಸಿ.ಎಂ. ಈಗ ಪಾರ್ಲಿ­ಮೆಂಟ್ ಮೇಲೆ ಕಣ್ಣಿಟ್ಟಿರುವ ಕ್ರೇಜಿ­ಸ್ಟಾರ್ ಆಗಿಲ್ಲವೇ? ಜೂನಿಯರ್, ಸೀನಿ­ಯರ್ ಎಂಬ ಲೆಕ್ಕ ಇಡದೆ ಯಾವ ವ್ಯಾಪಾರಿ­ಯಾದರೂ ಸರಿ ಪಿ.ಎಂ. ಆಗ­ಬಹುದು’ ಎಂದು ಪೆಕರ ತಿಳಿಹೇಳಿದ.

‘ಅರ್ಥವಾಯ್ತು ಬ್ರೋ, ಆದರೆ ಇನ್ನೊಂದು ಅನುಮಾನ ಬರ್್ತಾ ಇದೆ’ ಎಂದು ಮಂಕನ್ ಅಂಜುತ್ತಾ ಅಳುಕುತ್ತಾ ಕೇಳಿದ.
‘ಅದನ್ನೂ ಹೇಳಿ ಹಾಳಾಗಿ ಹೋಗು’ ಎಂದು ಪೆಕರ ಗದರಿದ.
‘ಕೈ ಪಾರ್ಟಿಯಲ್ಲಿರುವ ನಮ್ಮ ಯುವ­ರಾಜರು ಚಿಕ್ಕಂದಿನಲ್ಲಿ ಟೀನೂ ಮಾರಿಲ್ಲ. ಕಾಫೀನೂ ಮಾರಿಲ್ಲ. ಈಗ ಹಾಲು ಕೊಟ್ರೆ ಜನ ನಂಬ್ತಾರಾ? ಅವರಿ­ಗಿಂತ ನಮ್ಮ ಅಯ್ಯ ಅವರೇ ವಾಸಿ ಅಲ್ಲವಾ ಬ್ರೋ? ನಮ್ಮ ಅಯ್ಯ ಅವರನ್ನೇ ಪಿ.ಎಂ.­ ಅಭ್ಯರ್ಥಿ ಅಂತ ಘೋಷಿಸಿಬಿಟ್ರೆ ಒಳ್ಳೆ ಕಾಂಪಿಟೇಶನ್ ಆಗುತ್ತೆ. ಸಾಧನೆ ಹೇಳಿ­ಕೊಳ್ಳೋಕೂ ಬಹಳ ಇದೆ’ ಮಂಕನ್ ಅಳುಕುತ್ತಲೇ ಬಾಯಿಬಿಟ್ಟ.

‘ನಿನಗೆ ಬುದ್ಧಿ ಇದೆಯಾ? ಈಗಲೇ ಅವ­­­ರಿಗೆ ನಿದ್ದೆ ಮಾಡೋಕೆ ಟೈಂ ಇಲ್ಲ. ಇನ್ನು ಪಿ.ಎಂ. ಆಗ್ಬಿಟ್ರೆ ಕೂತ್ರೂ ನಿದ್ದೆ, ನಿಂತ್ರೂ ನಿದ್ದೆ ಅನ್ನೋ ತರ ಆಗುತ್ತೆ’ ಎಂದ ಪೆಕರ.
‘ನಮ್ಮ ಅಯ್ಯ ಅವರು ಒಂದ್ರು­ಪಾಯಿಗೆ ಒಂದ್ ಕೆ.ಜಿ. ಅಕ್ಕಿ ಕೊಟ್ಟು ಅಕ್ಕಿ ವ್ಯಾಪಾರಿಯಾಗಿದ್ದಾರೆ. ದಿನಾ ಮಧ್ಯಾಹ್ನ ಮಕ್ಕಳಿಗೆ ಹಾಲು ಕೊಟ್ಟು ಹಾಲಿನ ವ್ಯಾಪಾರಿ ಆಗಿದ್ದಾರೆ. ಪಿ.ಎಂ. ಅಭ್ಯರ್ಥಿ ಅಂತ ಘೋಷಿಸಿದರೆ, ಸಮ­ನ್ವಯ ಸಮಿತಿಯನ್ನೂ ಕೇರ್ ಮಾಡದೆ, ಚಹಾ ಪ್ರಣಾಳಿಕೆ ರೂಪಿಸಿ, ಎಲ್ಲ ಕಡೆ ಕಾಫಿ ಡೇ ತರಹ ಚಹಾ ಡೇ ಓಪನ್ ಮಾಡಿಸ್ತಾರೆ. ಚಹಾ ಈಗ ರಾಷ್ಟ್ರೀಯ ಪಾನೀಯ ಎಂದು ಘೋ­ಷಣೆ ಮಾಡಿದ್ರೂ ಆಶ್ಚರ್ಯವಿಲ್ಲ’ ಎಂದು ಉದ್ವೇಗದಿಂದ ಹೇಳುತ್ತಾ ಹೋದ.

‘ಸ್ವಲ್ಪ ಬಾಯ್ಮುಚ್ಚಿಕೊಳ್ತೀಯಾ, ಅಯ್ಯ ಅವರ ಆಸ್ಥಾನ ಕೂಟದ ಸದಸ್ಯರ ತರಹ ಮಾತಾಡ್ತಾ ಇದೀಯಾ. ಯುವ­ರಾಜರ ರೋಡ್‌ಷೋಗೆ ಡಾಜಿಪ ಜಿಲ್ಲೆ ತುಮ­ಕೂರಿನಲ್ಲಿ, ಅಯ್ಯ ಅವರ ಊರು ಮೈಸೂ­ರಿನಲ್ಲಿ ಜನರೇ ಸೇರಿರಲಿಲ್ಲವಂತೆ. ಹೈಕ­ಮಾಂಡು, ಕೈಕಮಾಂಡುಗಳಿಗೆ ಇದ­ರಿಂದ ಸಣ್ಣಗೆ ಚಳಿಜ್ವರ ಬಂದಂತಾ­ಗಿದೆ­ಯಂತೆ, ಎಲ್ಲ ನಾಯಕರೂ ಕೈ ಭಿನ್ನ­ಮತ ಕಂಡು ಐಸಿಯುನಲ್ಲಿ ಅಡ್ಮಿಟ್ ಆದ ಪೇಷೆಂಟ್ ತರ ಆಗೋಗಿಬಿಟ್ಟಿದ್ದಾರೆ. ಅಂಥ­ದ್ದರಲ್ಲಿ ನಿನ್ನದೇ ಒಂದು ಕತೆ’ ಎಂದು ಪೆಕರ ರೇಗಿದ.

‘ನಾನು ಸುಮ್‌ಸುಮ್ನೆ ಹೇಳ್ಲಿಲ್ಲ ಬ್ರೋ, ರಪ್ಪ ಅವರು ಶಿವಮೊಗ್ಗದಲ್ಲಿ ನಿಂಬೂ­ಕಾಯ್ ವಿಥ್ ಚರ್ಚಾ ಕಾರ್ಯ­ಕ್ರಮ ಹಾಕಿಕೊಳ್ತಾರಂತೆ. ನಾನೂ ಚಿಕ್ಕ­ವಯ­ಸ್ಸಿನಿಂದ ಅವರೆಕಾಯಿ ಮಾರ್್ತಾ ಇದ್ದೆ. ಆದ್ರಿಂದ ನನಗೂ ಟಿಕೆಟ್ ಕೊಡಿ ಎಂದು ಸೊಗಡು ಅಣ್ಣನವರೂ ಹೋಗಿ­ದ್ದು ಶುದ್ದ ಕುಹಕವಂತೆ. ನಾನು ಅಡಿಕೆ ಮಾರ್್ತಾ ಇದ್ದೆ ನಾನೂ ಪಿ.ಎಂ. ಆಗ­ಬಹುದಾ ಅಂತ ಅಡಿಕೆಲಾಬಿಯ ಸಂಸ­ದರು ಕೇಳ್ತಾ ಇದಾರಂತೆ’

‘ನಮ್ಮ ದೊಡ್ಡಗೌಡರನ್ನು ಬಿಟ್ಯಲ್ಲಾ!’
‘ಅವರೂ ಚಿಕ್ಕಂದಿನಿಂದ ಮಾಡದ ವ್ಯಾಪಾ­ರಾನೇ ಇಲ್ಲ ಬ್ರೋ. ಜನ­ಸಾಮಾನ್ಯರ ಮುಂದೆ ರಾಗಿಮುದ್ದೆ ಮಾಡಿ ಉರುಳಿಸ್ತೀನಿ ಅಂತ ಅವರು ಹೇಳ­ಬಹುದು. ಆಗ ಎಲ್ಲರಿಗೂ ರಾಷ್ಟ್ರ­ದಾದ್ಯಂತ ಮುದ್ದೆ ಭಾಗ್ಯ! ಫುಟ್‌­ಪಾತ್‌ನಲ್ಲಿ ನಿಂತು ಇದೇ ಮಣ್ಣಿನಮಕ್ಕಳ ಪಾರ್ಲಿ­ಮೆಂಟ್ ಅಂತ ಹೇಳಿ ನಿಂತ­ವರಿಗೆಲ್ಲಾ ಒಂದೊಂದು ಬಿಸಿಬಿಸಿ ಮುದ್ದೆ ದಯಪಾಲಿಸಿದರೆ ಸಾಕು, ಕೊನೆಯ ಎಲೆಕ್ಷನ್‌ನಲ್ಲಾದರೂ ಗುರಿ­ಮುಟ್ಟಬಹುದು. ಮೂರನೇ ರಂಗಕ್ಕೂ ತಾಖತ್‌ವರ್ಧನೆ ಆಗಬಹುದು!’

‘ಆಯ್ತು ಮಾರಾಯ, ನಡಿ. ಓವರ್ ಎ ಕಪ್ ಆಫ್ ಟೀ ಬೇರೆ ಏನಾದ್ರೂ ಮಾತ­ನಾಡೋಣ’ ಎಂದು ಪೆಕರ ಮಂಕನ್‌ನನ್ನು ಕರೆದುಕೊಂಡು ನಡೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT