ಪಾರ್ಲಿಮೆಂಟ್ ಗೇಟಿನ ಹತ್ತಿರ ‘ಗರಂ ಚಾಯ್, ಗರಂ ಚಾಯ್’ ಎಂದು ಕೂಗುತ್ತಿರುವ ಪದ ಕಿವಿಗೆ ಬಿದ್ದೊಡನೆ, ಅತ್ತ ಸಾಗುತ್ತಿದ್ದ ಮಂಕನ್ ಕಿವಿ ನೆಟ್ಟಗಾಯಿತು. ಎಲ್ಲೋ ಕೇಳಿದ ದನಿಯಂತಿದೆಯಲ್ಲಾ ಎಂದು ಅತ್ತ ತಿರುಗಿದ.
ಆಶ್ಚರ್ಯದಿಂದ ಹೃದಯಾಘಾತವಾಗಿ ಕುಸಿಯುವುದೊಂದು ಬಾಕಿ. ಟೀ ಕೆಟಲ್ ಹಿಡಿದುಕೊಂಡು ಪೆಕರ, ‘ಗರಂ ಚಾಯ್’ ಎಂದು ಕೂಗುತ್ತಿದ್ದಾನೆ!!
‘ಏನ್ ಬ್ರೋ, ಪಾರ್ಲಿಮೆಂಟಿನಲ್ಲಿ ಐದು ವರ್ಷ ಕಸ ಗುಡಿಸಿ ಎಲ್ಲರೂ ಅವರವರ ಮನೆಗೆ ಹೋಗಾಯ್ತು, ಮೈಕು ಕಿತ್ತೆಸೆದದ್ದೂ ಆಯ್ತು, ಶರಟು ಹರಿದುಕೊಂಡ ಘಟನೆಯೂ ಮುಗೀತು, ಪೆಪ್ಪರ್ ಸ್ಪ್ರೇ ಚಿಮುಕಿಸಿ ಕಣ್ಣುರಿ, ಮೂಗುರಿ ಮಾಡಿದ್ದೂ ಆಯ್ತು, ಕೋಟಿ ಕೋಟಿ ಹಗರಣ ಮಾಡಿದ್ದೂ ಆಯ್ತು, ಅಷ್ಟೂ ಸಾಲದು ಅಂತ ಒಂದೇ ಭಾಷೆ ಮಾತನಾಡುವ ರಾಜ್ಯವನ್ನೂ ಕತ್ತರಿಸಿ ಎರಡು ತುಕಡಾ ಮಾಡಲಾಯ್ತು. ಎಲ್ಲಾ ಮುಗಿಸಿ ಬಾಗಿಲು ಹಾಕಿಕೊಂಡು ಹೋದ ಮೇಲೆ ನೀನು ಇಲ್ಲಿ ನಿಂತ್ಕಂಡು ಟೀ ಮಾರ್ತಾ ಇದ್ದೀಯಲ್ಲಾ ಮಾರಾಯ! ಏನು ನಿನ್ನ ಫಜೀತಿ’ ಎಂದು ಪೆಕರನನ್ನು ಪ್ರಶ್ನಿಸಿದ.
ಮಂಕನ್ಗೆ ಒಂದು ಕಪ್ ಟೀ ಕೊಟ್ಟ ಪೆಕರ: ‘ಏನೂ ಗೊತ್ತಿಲ್ಲದವನಂತೆ ಕೇಳಬೇಡ. ಈಗ ಟೀ ಮಾರಿದರೆ, ನಾಳೆ ನೇರವಾಗಿ ಪಾರ್ಲಿಮೆಂಟ್ ಪ್ರವೇಶಿಸಿ ಪಿಎಮ್ಮಾಗಬಹುದು’ -ಎಂದ.
‘ಹೌದು ಬ್ರೋ, ಆ ಮಣಿಶಂಕರ ಅಯ್ಯರ್ಗೆ ಸ್ವಲ್ಪ ಮಂಡೆ ಕಡಿಮೆ. ಟೀ ಅಂಗಡಿ ಇಡೋದಕ್ಕೆ ಜಾಗ ಬೇಕಾದ್ರೆ ಕೊಡ್ತೀನಿ, ಪಿ.ಎಂ. ಆಗಲು ನೀವು ನಾಲಾಯಕ್ ಅಂತ ಲೂಸ್ಟಾಕ್ ಮಾಡಿ, ಊರು ತುಂಬಾ ಚಾ ದುಖಾನ್ ಓಪನ್ ಆಗೋ ಹಾಗೆ ಮಾಡಿದರಲ್ಲಾ. ಎಲ್ಲ ಕಡೆ ಚಾಯ್ ಪರ್ ಚರ್ಚಾ ಆರಂಭವಾಗಿ ರೋಡಲ್ಲಿ ಹೋಗೋ ಮಾರೀನ ಮೈಮೇಲೆ ಎಳ್ಕೊಂಡಂಗೆ ಆಗೋಯ್ತಲ್ಲ ‘ಕೈ’ಪಾರ್ಟಿಗಳ ಕತೆ’ ಎಂದು ಮಂಕನ್ ಲೊಚಗುಟ್ಟಿದ.
‘ಅಯ್ಯೋ ಬಿಡಪ್ಪ, ‘ಚಹಾ ಕುಡಿಯುತ್ತಾ ಚರ್ಚೆ’ ನಡೆಯುತ್ತಿರುವುದನ್ನು ನೋಡಿದರೆ, ಕೈಪಾರ್ಟಿಗಳ ಹೆಗಲ ಮೇಲೆ ಶನಿಮಹಾತ್ಮ ಸವಾರಿ ಮಾಡ್ತಾ ಇದ್ದಾನೆ ಅಂತ ಕಾಣುತ್ತೆ. ಎಲ್ಲ ಕಡೆ ‘ಟೀ’ ಕುಡಿಯುವವರ ಸಂಖ್ಯೆ ಜಾಸ್ತಿಯಾಗಿದೆ. ಇದನ್ನು ತಡೆದು ಅದಕ್ಕೆ ಪರ್ಯಾಯವಾಗಿ ಏನು ಕೊಡ್ಬೇಕು ಅಂತ ಗೊತ್ತಿಲ್ದೆ ಕೈ ಪಾರ್ಟಿಯವರು, ‘ರಾಗಾ ಹಾಲು’ ಕೊಡೋಕೆ ಶುರುಮಾಡಿದ್ದಾರೆ.
ಟಿ.ವಿ. ಚಾನೆಲ್ಗಳಲ್ಲಿ ‘ಟೀ ವಿಥ್ ಕರಣ್’ ಅಂತ ಕಾರ್ಯಕ್ರಮ ಶುರುಮಾಡಿದ್ದಾರೆ. ಕಮಲ ನಾಯಕರೆಲ್ಲ ರಸ್ತೆರಸ್ತೆಗಳಲ್ಲಿ ನಿಂತುಕೊಂಡು ಟೀ ಮಾಡಿಕೊಡುತ್ತಾ ಜನಪ್ರಿಯತೆ ಗಳಿಸುತ್ತಿರುವುದನ್ನು ನೋಡಿದರೆ, ಇರಲಾರ್ದೆ ಇರುವೆ ಬಿಟ್ಕಂಡ್ರು ಎನ್ನುವಂತಾಗಿದೆ ಕೈಗಳ ಕತೆ’ ಎಂದು ವಿವರಿಸಿದ ಪೆಕರ.
‘ನಿನ್ನೆ ನಮ್ಮ ಎಡಿಟರ್ರೂ ಫೋನ್ ಮಾಡಿದ್ರು. ದೇಶದ ತುಂಬ ಓವರ್ ಎ ಕಪ್ ಆಫ್ ಟೀ ನಡೀತಿರಬೇಕಾದ್ರೆ ಇನ್ನೂ ನೀವು ಟೂರ್ ಮಾಡಿ ವರದಿ ರೆಡಿ ಮಾಡ್ಲಿಲ್ಲವಲ್ಲ ಎಂದು ಕೇಳಿದರು ಮಾರಾಯ. ಅದಕ್ಕೆ, ಪಾರ್ಲಿಮೆಂಟ್ ಮುಂದೆ ಟೀ ಮಾರ್ತಾ ಇದ್ದೇನೆ’ ಎಂದು ತನ್ನ ಗೋಳಿನ ಕತೆಯನ್ನು ವಿವರಿಸಿ, ಒಂದು ಸಿಪ್ ಟೀಯನ್ನು ಸೊರ್ರನೆ ಎಳೆದ.
‘ನಮ್ಮ ನಮೋ ನಮೋ ಚಿಕ್ಕಂದಿನಲ್ಲಿ ಟೀ ಮಾರ್ತಾ ಇದ್ದದ್ದು ಯಾಕೆ ಬ್ರೋ? ಟೀ ನಮ್ ದೇಶದ್ದೇ ಅಲ್ಲ. ಇದು ಚೀನಾ ದೇಶದ್ದು. ನಮಗೆ ಟೀ ಕುಡಿಯೋದು ಕಲಿಸಿದ್ದೇ ಬ್ರಿಟಿಷರು. ವಿದೇಶಕ್ಕೆ ಹೋಗೋಕೆ ಪಾಸ್ಪೋರ್ಟೇ ಇಲ್ಲದ ನಮೋ ನಮೋ ವಿದೇಶಿ ಚಾಯ್ ಯಾಕ್ ಮಾರ್ತಾ ಇದ್ರು ಬ್ರೋ, ಬಹಳ ಕನ್-ಫ್ಯೂಸ್ ಆಗ್ತಾ ಇದೆಯಲ್ಲಾ! ಸರಸಂಚಾಲಕರು ಕಿವಿ ಹಿಂಡಲಿಲ್ಲವೇ? ಅವರೆಲ್ಲಾ ಅಪ್ಪಟ ಸ್ವದೇಶಿ ಅಂದ್ಕೊಂಡಿದ್ದೇನಲ್ಲಾ’ ಎಂದು ಮಂಕನ್ ಮೂಲಭೂತ ಅನುಮಾನವನ್ನು ಹೊರಹಾಕಿದ.
ಪೆಕರನಿಗೆ ಸ್ವಲ್ಪ ಸಿಟ್ಟು ಬಂತು. ‘ನೀನು ಕೈ ಏಜೆಂಟರ ತರಹ ಮಾತಾಡ್ತಾ ಇದ್ದಂತಿದೆ. ಟೀ ವಿದೇಶಿ ಮೂಲದ್ದು ಅಂತ ನೀವು ವಾದಿಸಿದರೆ, ದೆಹಲಿ ಮೇಡಂ ಇಟಲಿ ಮೂಲದವರು ಅಂತ ಅವರು ಪ್ರತಿವಾದ ಮಾಡ್ತಾರೆ. ಹೊಲದಲ್ಲಿ ಕಳೆ ಕೀಳಬೇಕೇ ಹೊರತು, ಬೆಳೆ ಕೀಳಬಾರದು. ಒಬ್ಬರು ಟೀ ಕುಡಿಸ್ತಾರೆ, ಮತ್ತೊಬ್ಬರು ಹಾಲು ಕುಡಿಸ್ತಾರೆ. ಯಾರು ಪಿ.ಎಂ. ಆಗ್ತಾರೆ ನೋಡೋಣ’ ಎಂದು ಪೆಕರ ದಬಾಯಿಸಿದ.
ಏನೂ ಅರ್ಥವಾಗದೆ ಮಂಕನ್ ಕಣ್ಕಣ್ ಬಿಟ್ಟ.
ಹಾಲಲ್ಲಾದರೂ ಹಾಕು, ಟೀಯಲ್ಲಾದರೂ ಹಾಕು
ನಮೋ ನರೇಂದ್ರಾsss
ಹಾಲೆಲ್ಲಾ ‘ರಾಗಾ ಮಿಲ್ಕಾಗಿ’. ಟೀಯಲ್ಲಿ ಹೂ ಅರಳಿ
ಹಾಯಾಗಿರುವಿರಾ ನರೇಂದ್ರಾsss
ಈಗ ಈ ಹಾಡನ್ನು ಹಾಯಾಗಿ ಹಾಡ್ತಾ ಇದ್ದಾರೆ. ಚುನಾವಣೆ ಮುಗಿದ ಮೇಲೆ ಅವರ ರಾಗವೇ ಬೇರೆ ಆಗುತ್ತೆ ಎಂದ ಮಂಕನ್.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು
ಓ ನರೇಂದ್ರಾsss
ಬದುಕೆಲ್ಲಾ ಮುಳ್ಳಾಗಿ
ಐದ್ವರ್ಷ ಕಲ್ಲಾಗಿ
ಸಾಯುವೆ ನೀ ಬಡಮತದಾರಾsss
‘ಆದ್ರೂ ನನಗೆ ಒಂದು ಅನುಮಾನ ಬರ್್ತಾ ಇದೆ’ ಎಂದು ಮಂಕನ್ ಮತ್ತೆ ಶುರು ಹಚ್ಚಿಕೊಂಡ. ‘ಟೀ ಮಾರೋದ್ರಲ್ಲಿ ನಾನು ಸೀನಿಯರ್ರು, ಶಾಲಾ ಫೀಜು ಕಟ್ಟಲು ಚಿಕ್ಕಂದಿನಲ್ಲಿ ನಾನು ಸಹೋದರರ ಜೊತೆ ಸೇರಿಕೊಂಡು ಚಹಾ ಮಾರುತ್ತಿದ್ದೆ. ಆದ್ರಿಂದ ನಾನೇ ಪಿ.ಎಂ. ಆಗೋಕೆ ಸರಿಯಾದ ವ್ಯಕ್ತಿ ಅಂತ ಮೇವು ವೀರ ಲಾಲೂಜೀ ಹೇಳ್ತಾ ಇದಾರೆ. ಮುಜಾಫರ್ ಜಿಲ್ಲೆಯಲ್ಲಿ ಚಾಯ್ ದುಕಾನ್ ಕೂಡಾ ಓಪನ್ ಮಾಡಿದ್ದಾರೆ. ಇನ್ನೂ ಸೀನಿಯರ್ ಅಂದ್ರೆ ಷರೀಫ್ ಜಾಫರ್ ಸಾಹೇಬ್ರು. ಜೂನಿಯರ್ ಅಂದ್ರೆ ಆಂಜನೇಯ ದೇವ್ರು. ಇದ್ರಲ್ಲಿ ಸೀನಿಯರ್, ಜೂನಿಯರ್ ಲೆಕ್ಕ ಇದೆಯಾ ಬ್ರೋ!’
‘ನೋಡಯ್ಯಾ ನಿನ್ನ ಅನುಮಾನಗಳಿಗೆ ಕೊನೆ ಮೊದಲೇ ಇಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕೆಂಪಗಿರುವುದೆಲ್ಲಾ ಟೀ ಅಲ್ಲ ನೆನಪಿನಲ್ಲಿರಲಿ. ಚಾಯ್ ಅಂಗಡಿ ಎಂದರೆ, ಫುಟ್ಪಾತ್ ಪಾರ್ಲಿಮೆಂಟ್ ಅಂತ ನಮೋ ನಮೋ ಹೇಳಿಲ್ಲವೇ? ಈ ಫುಟ್ಪಾತ್ನಲ್ಲೇ ಕುಳಿತು ಸಾವಿರಾರು ಜನರ ಜೊತೆ ಸಂವಾದ ಮಾಡಲಿಲ್ಲವೇ? ಇದೇ ಫುಟ್ಪಾತ್ನಲ್ಲಿ ಕುಳಿತು ಧರಣಿ ಮಾಡಿದ ದೆಹಲಿ ಮಾಜಿ ಸಿ.ಎಂ. ಈಗ ಪಾರ್ಲಿಮೆಂಟ್ ಮೇಲೆ ಕಣ್ಣಿಟ್ಟಿರುವ ಕ್ರೇಜಿಸ್ಟಾರ್ ಆಗಿಲ್ಲವೇ? ಜೂನಿಯರ್, ಸೀನಿಯರ್ ಎಂಬ ಲೆಕ್ಕ ಇಡದೆ ಯಾವ ವ್ಯಾಪಾರಿಯಾದರೂ ಸರಿ ಪಿ.ಎಂ. ಆಗಬಹುದು’ ಎಂದು ಪೆಕರ ತಿಳಿಹೇಳಿದ.
‘ಅರ್ಥವಾಯ್ತು ಬ್ರೋ, ಆದರೆ ಇನ್ನೊಂದು ಅನುಮಾನ ಬರ್್ತಾ ಇದೆ’ ಎಂದು ಮಂಕನ್ ಅಂಜುತ್ತಾ ಅಳುಕುತ್ತಾ ಕೇಳಿದ.
‘ಅದನ್ನೂ ಹೇಳಿ ಹಾಳಾಗಿ ಹೋಗು’ ಎಂದು ಪೆಕರ ಗದರಿದ.
‘ಕೈ ಪಾರ್ಟಿಯಲ್ಲಿರುವ ನಮ್ಮ ಯುವರಾಜರು ಚಿಕ್ಕಂದಿನಲ್ಲಿ ಟೀನೂ ಮಾರಿಲ್ಲ. ಕಾಫೀನೂ ಮಾರಿಲ್ಲ. ಈಗ ಹಾಲು ಕೊಟ್ರೆ ಜನ ನಂಬ್ತಾರಾ? ಅವರಿಗಿಂತ ನಮ್ಮ ಅಯ್ಯ ಅವರೇ ವಾಸಿ ಅಲ್ಲವಾ ಬ್ರೋ? ನಮ್ಮ ಅಯ್ಯ ಅವರನ್ನೇ ಪಿ.ಎಂ. ಅಭ್ಯರ್ಥಿ ಅಂತ ಘೋಷಿಸಿಬಿಟ್ರೆ ಒಳ್ಳೆ ಕಾಂಪಿಟೇಶನ್ ಆಗುತ್ತೆ. ಸಾಧನೆ ಹೇಳಿಕೊಳ್ಳೋಕೂ ಬಹಳ ಇದೆ’ ಮಂಕನ್ ಅಳುಕುತ್ತಲೇ ಬಾಯಿಬಿಟ್ಟ.
‘ನಿನಗೆ ಬುದ್ಧಿ ಇದೆಯಾ? ಈಗಲೇ ಅವರಿಗೆ ನಿದ್ದೆ ಮಾಡೋಕೆ ಟೈಂ ಇಲ್ಲ. ಇನ್ನು ಪಿ.ಎಂ. ಆಗ್ಬಿಟ್ರೆ ಕೂತ್ರೂ ನಿದ್ದೆ, ನಿಂತ್ರೂ ನಿದ್ದೆ ಅನ್ನೋ ತರ ಆಗುತ್ತೆ’ ಎಂದ ಪೆಕರ.
‘ನಮ್ಮ ಅಯ್ಯ ಅವರು ಒಂದ್ರುಪಾಯಿಗೆ ಒಂದ್ ಕೆ.ಜಿ. ಅಕ್ಕಿ ಕೊಟ್ಟು ಅಕ್ಕಿ ವ್ಯಾಪಾರಿಯಾಗಿದ್ದಾರೆ. ದಿನಾ ಮಧ್ಯಾಹ್ನ ಮಕ್ಕಳಿಗೆ ಹಾಲು ಕೊಟ್ಟು ಹಾಲಿನ ವ್ಯಾಪಾರಿ ಆಗಿದ್ದಾರೆ. ಪಿ.ಎಂ. ಅಭ್ಯರ್ಥಿ ಅಂತ ಘೋಷಿಸಿದರೆ, ಸಮನ್ವಯ ಸಮಿತಿಯನ್ನೂ ಕೇರ್ ಮಾಡದೆ, ಚಹಾ ಪ್ರಣಾಳಿಕೆ ರೂಪಿಸಿ, ಎಲ್ಲ ಕಡೆ ಕಾಫಿ ಡೇ ತರಹ ಚಹಾ ಡೇ ಓಪನ್ ಮಾಡಿಸ್ತಾರೆ. ಚಹಾ ಈಗ ರಾಷ್ಟ್ರೀಯ ಪಾನೀಯ ಎಂದು ಘೋಷಣೆ ಮಾಡಿದ್ರೂ ಆಶ್ಚರ್ಯವಿಲ್ಲ’ ಎಂದು ಉದ್ವೇಗದಿಂದ ಹೇಳುತ್ತಾ ಹೋದ.
‘ಸ್ವಲ್ಪ ಬಾಯ್ಮುಚ್ಚಿಕೊಳ್ತೀಯಾ, ಅಯ್ಯ ಅವರ ಆಸ್ಥಾನ ಕೂಟದ ಸದಸ್ಯರ ತರಹ ಮಾತಾಡ್ತಾ ಇದೀಯಾ. ಯುವರಾಜರ ರೋಡ್ಷೋಗೆ ಡಾಜಿಪ ಜಿಲ್ಲೆ ತುಮಕೂರಿನಲ್ಲಿ, ಅಯ್ಯ ಅವರ ಊರು ಮೈಸೂರಿನಲ್ಲಿ ಜನರೇ ಸೇರಿರಲಿಲ್ಲವಂತೆ. ಹೈಕಮಾಂಡು, ಕೈಕಮಾಂಡುಗಳಿಗೆ ಇದರಿಂದ ಸಣ್ಣಗೆ ಚಳಿಜ್ವರ ಬಂದಂತಾಗಿದೆಯಂತೆ, ಎಲ್ಲ ನಾಯಕರೂ ಕೈ ಭಿನ್ನಮತ ಕಂಡು ಐಸಿಯುನಲ್ಲಿ ಅಡ್ಮಿಟ್ ಆದ ಪೇಷೆಂಟ್ ತರ ಆಗೋಗಿಬಿಟ್ಟಿದ್ದಾರೆ. ಅಂಥದ್ದರಲ್ಲಿ ನಿನ್ನದೇ ಒಂದು ಕತೆ’ ಎಂದು ಪೆಕರ ರೇಗಿದ.
‘ನಾನು ಸುಮ್ಸುಮ್ನೆ ಹೇಳ್ಲಿಲ್ಲ ಬ್ರೋ, ರಪ್ಪ ಅವರು ಶಿವಮೊಗ್ಗದಲ್ಲಿ ನಿಂಬೂಕಾಯ್ ವಿಥ್ ಚರ್ಚಾ ಕಾರ್ಯಕ್ರಮ ಹಾಕಿಕೊಳ್ತಾರಂತೆ. ನಾನೂ ಚಿಕ್ಕವಯಸ್ಸಿನಿಂದ ಅವರೆಕಾಯಿ ಮಾರ್್ತಾ ಇದ್ದೆ. ಆದ್ರಿಂದ ನನಗೂ ಟಿಕೆಟ್ ಕೊಡಿ ಎಂದು ಸೊಗಡು ಅಣ್ಣನವರೂ ಹೋಗಿದ್ದು ಶುದ್ದ ಕುಹಕವಂತೆ. ನಾನು ಅಡಿಕೆ ಮಾರ್್ತಾ ಇದ್ದೆ ನಾನೂ ಪಿ.ಎಂ. ಆಗಬಹುದಾ ಅಂತ ಅಡಿಕೆಲಾಬಿಯ ಸಂಸದರು ಕೇಳ್ತಾ ಇದಾರಂತೆ’
‘ನಮ್ಮ ದೊಡ್ಡಗೌಡರನ್ನು ಬಿಟ್ಯಲ್ಲಾ!’
‘ಅವರೂ ಚಿಕ್ಕಂದಿನಿಂದ ಮಾಡದ ವ್ಯಾಪಾರಾನೇ ಇಲ್ಲ ಬ್ರೋ. ಜನಸಾಮಾನ್ಯರ ಮುಂದೆ ರಾಗಿಮುದ್ದೆ ಮಾಡಿ ಉರುಳಿಸ್ತೀನಿ ಅಂತ ಅವರು ಹೇಳಬಹುದು. ಆಗ ಎಲ್ಲರಿಗೂ ರಾಷ್ಟ್ರದಾದ್ಯಂತ ಮುದ್ದೆ ಭಾಗ್ಯ! ಫುಟ್ಪಾತ್ನಲ್ಲಿ ನಿಂತು ಇದೇ ಮಣ್ಣಿನಮಕ್ಕಳ ಪಾರ್ಲಿಮೆಂಟ್ ಅಂತ ಹೇಳಿ ನಿಂತವರಿಗೆಲ್ಲಾ ಒಂದೊಂದು ಬಿಸಿಬಿಸಿ ಮುದ್ದೆ ದಯಪಾಲಿಸಿದರೆ ಸಾಕು, ಕೊನೆಯ ಎಲೆಕ್ಷನ್ನಲ್ಲಾದರೂ ಗುರಿಮುಟ್ಟಬಹುದು. ಮೂರನೇ ರಂಗಕ್ಕೂ ತಾಖತ್ವರ್ಧನೆ ಆಗಬಹುದು!’
‘ಆಯ್ತು ಮಾರಾಯ, ನಡಿ. ಓವರ್ ಎ ಕಪ್ ಆಫ್ ಟೀ ಬೇರೆ ಏನಾದ್ರೂ ಮಾತನಾಡೋಣ’ ಎಂದು ಪೆಕರ ಮಂಕನ್ನನ್ನು ಕರೆದುಕೊಂಡು ನಡೆದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.