ಮೊನ್ನೆ ಮಹಾರಾಷ್ಟ್ರದ ಕೊಲ್ಹಾಪುರದ ಹತ್ತಿರವೇ ಇರುವ ಕಣೇರಿ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಹದಿಮೂರು ನೂರು ವರ್ಷಗಳ ಹಿಂದಿನ ಕಾಡಸಿದ್ಧೇಶ್ವರ ಮಠ ಇದೆ. ಅದೊಂದು ಶ್ರದ್ಧಾಕೇಂದ್ರ. ಇಂದು ಅಲ್ಲಿಯ ಪೀಠಾಧ್ಯಕ್ಷರು ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು. ಇಂದು ಸ್ವಾಮಿಗಳು ಹೇಗಿರಬೇಕೆನ್ನುವುದಕ್ಕೆ ಅವರೊಬ್ಬ ಆದರ್ಶ ಮಾದರಿ. ಅವರಿಗೆ ಅದೃಶ್ಯ ಎಂಬ ಹೆಸರನ್ನು ಗುರುಗಳು ಏಕೆ ನೀಡಿದರೋ ತಿಳಿಯದು. ಆದರೆ ಅದು ಸಾರ್ಥಕವಾಗಿದೆ. ಅದೃಶ್ಯ ಎಂದರೆ ಕಣ್ಣಿಗೆ ಕಾಣದ್ದು. ಗಾಳಿ ಕಣ್ಣಿಗೆ ಕಾಣುವುದಿಲ್ಲ, ಆದರೆ ಅದಿಲ್ಲದಿದ್ದರೆ ಬದುಕು ಅಸಾಧ್ಯ. ಪರಿಮಳ ಕಣ್ಣಿಗೆ ಕಾಣದು, ಆದರೆ ನಮ್ಮನ್ನು ಪ್ರಚೋದಿಸುತ್ತದೆ.
ಭಗವಂತನ ಶಕ್ತಿ ಕಣ್ಣಿಗೆ ಕಾಣುವುದಿಲ್ಲ, ಆದರೆ ಪ್ರಪಂಚವನ್ನೇ ನಡೆಸುತ್ತದೆ. ಹಾಗೆಯೇ ಈ ಸ್ವಾಮಿಗಳು ಎಲ್ಲಿಯೇ ಇದ್ದರೂ ಮಠದ ಎಲ್ಲೆಡೆಯಲ್ಲಿ, ಭಕ್ತರ ಮನಸ್ಸಿನಲ್ಲಿ ನೆಲೆಯಾಗಿ ನಿಂತದ್ದು ಗೋಚರವಾಗುತ್ತದೆ. ಒಬ್ಬ ಅತ್ಯಂತ ಸಮಾಜಮುಖಿಯಾದ, ಸೃಜನಶೀಲನಾದ ವ್ಯಕ್ತಿ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಅವರು ಮಾಡಿದ್ದಾರೆ. ಬಡ ರೈತಕುಟುಂಬ ಆತ್ಮಗೌರವದಿಂದ, ಸಂತೋಷದಿಂದ ಕೇವಲ ಒಂದು ಎಕರೆ ಜಮೀನಿನಲ್ಲಿ ಹೇಗೆ ಬದುಕಬಹುದೆಂಬ ಪ್ರಾತ್ಯಕ್ಷಿಕೆ ಮಾಡಿದ್ದಾರೆ. ಕೃಷಿಯಲ್ಲಿ ಡಾಕ್ಟರೇಟ್ ಮಾಡಿರುವವರಿಗೆ ಪಾಠ ಅಲ್ಲಿ ದೊರಕೀತು. ನಮ್ಮ ದೇಶದ ಹಸುಗಳ ರಕ್ಷಣೆ, ಪೋಷಣೆಯನ್ನು ಮಾದರಿ ಎಂಬಂತೆ ಮಾಡಿ ತೋರಿಸಿದ್ದಾರೆ.
ಬೇರೆ ಗುರುಗಳು ಮಾತಿನಿಂದ ಮಾರ್ಗದರ್ಶನ ಮಾಡಿದರೆ ಇವರು ಮಾದರಿಗಳನ್ನು ಕಣ್ಣಿಗೆ ಕಾಣುವಂತೆ ಮಾಡಿಟ್ಟು ಅನುಸರಿಸುವಂತೆ ಮಾಡಿದ್ದಾರೆ. ವಿದ್ಯುತ್ ಶಕ್ತಿಯಂತೆ ಒಂದು ಕ್ಷಣವೂ ನಿಂತಲ್ಲಿ ನಿಲ್ಲದೇ ಸಹಸ್ರಾರು ಜನರನ್ನು ಪ್ರೇರೇಪಿಸುತ್ತ ಉತ್ಸಾಹದ ಬುಗ್ಗೆಯಂತೆ ಕೆಲಸ ಮಾಡುವುದನ್ನು ಕಂಡರೆ ಬದುಕಿನ ಕೊನೆಯ ಕ್ಷಣದಲ್ಲಿದ್ದವನೂ ಕೊಡವಿಕೊಂಡು ಎದ್ದು ನಿಲ್ಲುವಂತಾಗುತ್ತದೆ. ಇತ್ತೀಚಿಗೆ ಕಣೇರಿ ಮಠ ಭಾರತೀಯ ಸಂಸ್ಕೃತಿ ಉತ್ಸವವನ್ನು ನಡೆಸಿತು. ಅದೊಂದು ಅಭೂತಪೂರ್ವ ಸಂಭ್ರಮ. ಏಳುದಿನಗಳಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಜನ ಕಾರ್ಯಕ್ರಮಗಳಿಗೆ ಬಂದಿದ್ದರು ಎಂದರೆ ಅದರ ಸ್ವರೂಪದ ಅರ್ಥವಾದೀತು.
ದಿನವೂ ಎರಡು-ಮೂರು ಲಕ್ಷ ಜನ ಕಣೇರಿಯಂಥ ಪುಟ್ಟ ಗ್ರಾಮದಲ್ಲಿ ಸೇರಿದರೆ ಜನದಟ್ಟಣೆ ಹೇಗಾದೀತು ಎಂಬುದನ್ನು ಹೇಳಬೇಕಿಲ್ಲ. ರಾಶಿರಾಶಿ ಜನಸಮೂಹ ಗಾಳಿಯಲ್ಲಿ ತೇಲಿ ಹೋಗುವಂತೆ ಕಾಣುತ್ತಿತ್ತು. ಎಷ್ಟೇ ತಯಾರಿ ಮಾಡಿದರೂ ಅಷ್ಟೊಂದು ಜನಕ್ಕೆ ಊಟದ, ವಸತಿ ಶೌಚಾಲಯದ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯವಾದದ್ದು. ನನಗೆ ಅಚ್ಚರಿಯಾಗುವುದೆಂದರೆ ಅಷ್ಟೊಂದು ಜನ, ಅಷ್ಟು ತೊಂದರೆ ಮಾಡಿಕೊಂಡು ಆ ಗದ್ದಲದಲ್ಲಿ ಯಾಕೆ ಬಂದರು ಎನ್ನುವುದು.
ಒಂದು ದಿನ ವಾರಕರಿ ಉತ್ಸವದಂದು ನಾನೊಬ್ಬ ಹಿರಿಯರನ್ನು ಕಂಡೆ. ಅವರಿಗೆ ಸುಮಾರು ಎಪ್ಪತ್ತೈದರಿಂದ ಎಂಬತ್ತು ವರ್ಷವಿದ್ದೀತು. ಅವರ ಬಲಗಾಲು ಆನೆಯ ಕಾಲಿನಂತಾಗಿದೆ. ಕೆರೆದುಕೊಂಡು ಅಲ್ಲಲ್ಲಿ ರಕ್ತ ಬರುತ್ತಿದೆ, ಸರಿಯಾಗಿ ನಡೆಯಲು ಆಗುತ್ತಿಲ್ಲ. ನೀವು ಏಕೆ ಇಲ್ಲಿಗೆ ಬಂದಿರಿ ಎಂದು ಕೇಳಿದಾಗ ಅವರು ಹೇಳಿದರು, ‘ನಾನು ಮತ್ತೊಮ್ಮೆ ಇಲ್ಲಿಗೆ ಬರುತ್ತೇನೋ ಇಲ್ಲವೋ ತಿಳಿದಿಲ್ಲ. ಬಂದರೆ ಸರಿ, ಇಲ್ಲದಿದ್ದರೆ ಇಂದೇ ದೇವರಿಗೆ ನಮಸ್ಕಾರ ಹಾಕಿ ಭಗವಂತ ಕರೆಸಿಕೋ ಎಂದು ಹೇಳಿ ಹೋಗಿಬಿಡುತ್ತೇನೆ. ಆತ ನನ್ನ ಕೈ ಬಿಡುವುದಿಲ್ಲ’. ಅದೆಂಥ ಶ್ರದ್ಧೆ!
ಇನ್ನೊಬ್ಬ ಪುಟ್ಟ ದಂಪತಿ ಅಲ್ಲಿದ್ದರು. ತಾಯಿಗೇ ವಯಸ್ಸು ಇಪ್ಪತ್ತು- ಇಪ್ಪತ್ತೆರಡಿದ್ದೀತು. ಆಕೆ ತನ್ನ ಹದಿಮೂರು ದಿನದ ಮಗುವನ್ನು ಎದೆಗೊತ್ತಿಕೊಂಡು ಬಂದಿದ್ದಳು. ‘ಆ ಗಲಾಟೆ, ಆ ದೂಳು, ಆ ನೂಕುನುಗ್ಗಲಾಟ ಇವುಗಳಲ್ಲಿ ಈ ಮಗುವನ್ನು ಕರೆದುಕೊಂಡು ಹಸೀ ಬಾಣಂತಿ ಏಕೆ ಬಂದೆ’ ಎಂದು ಕೇಳಿದರೆ ಆಕೆ, ‘ನನ್ನ ಮಗುವನ್ನು ಸಿದ್ಧೇಶ್ವರರ, ಗುರುಗಳ ಪಾದಕ್ಕೆ ಹಾಕಿ ಹೋದರೆ ಅವನಿಗೇನೂ ಆಗುವುದಿಲ್ಲ’ ಎಂದಳು! ಈ ಮಾತುಗಳು ಕೆಲವರಿಗೆ ಹುಂಬತನವೆನ್ನಿಸಬಹುದು. ಆದರೆ ಈ ಅನನ್ಯವಾದ ಶ್ರದ್ಧೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತದೆ. ಸಾಮಾನ್ಯರ ಹೃದಯದಲ್ಲಿ ಅಸಾಮಾನ್ಯ ಧೈರ್ಯ ತುಂಬುತ್ತದೆ, ನಿರಾಶೆ ಕತ್ತಲಲ್ಲಿ ಆಸೆಯ ಬೆಳಕನ್ನು ತೋರುತ್ತದೆ. ಅಂತೆಯೇ ಕಣೇರಿ ಮಠದಂತಹ ಶ್ರದ್ಧಾ ಕೇಂದ್ರಗಳೇ ನಮ್ಮ ಭಾರತೀಯ ಸಂಸ್ಕೃತಿಯ ಮೂಲ ಸ್ರೋತಗಳು. ಅವು ಸಾವಿರವಾಗಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.