ನನಗಾಗ ಸುಮಾರು 10-12 ವರ್ಷ. ಆವಾಗಿಂದಲೆ ಶುರುವಾಗಿತ್ತು ನನ್ನ ಸಿನಿಮಾ-ನಾಟಕದ ಗೀಳು. ಬೆಳಗಿನ ಕ್ಲಾಸಿಗೆ ಚಕ್ಕರ್ ಹೊಡೆದು ಮಾರ್ನಿಂಗ್ ಷೋ, ಮಧ್ಯಾಹ್ನದ ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯೋಟಿನಿ ನೋಡುವುದು ನನಗಾಗ ದಿನ ನಿತ್ಯದ ಕಾರ್ಯಕ್ರಮ. ಸಾಯಂಕಾಲ ಇನ್ನೂ ಒಂದು ಸಿನಿಮಾ ನೋಡುವ ಪ್ಲಾನೊಂದು ಹೊಳೆಯಿತು. ಮೊದಲಿಂದಲೂ ಗಣಿತಕ್ಕೂ ನನಗೂ ಕಡು ವೈರ. ಆದ್ದರಿಂದ ಮನೆಯವರ ಮುಂದೆ ನಾನು ಸಂಜೆ ಟ್ಯೂಷನ್ನಿಗೆ ಹೋಗಬೇಕೆಂದು ಹಟ ಹಿಡಿದೆ. ಇಲ್ಲದಿದ್ದರೆ ಆ ವರ್ಷದ ಪರೀಕ್ಷೆಯಲ್ಲಿ ನನಗೆ ದೊಡ್ಡ ಕೋಳಿಮೊಟ್ಟೆ ಸಿಗುತ್ತದೆಂದು ಹೆದರಿಸಿದೆ.
ಕೊನೆಗೆ ಟ್ಯೂಷನ್ನಿಗೆ ಕಳಿಸಲು ಒಪ್ಪಿದರು. ಸಾಯಂಕಾಲ ಟ್ಯೂಷನ್ನಿಗೆ ಕೊಕ್ಕು ಕೊಟ್ಟು ಸಂಜೆ ಷೋ ಅನ್ನೂ ಪ್ರತಿದಿನ ನೋಡತೊಡಗಿದೆ. ಆಗ ನನಗೆ ಓದು ಅಂದರೆ ವಾಕರಿಕೆ. ಸಿನಿಮಾ ಅಂದರೆ ಪ್ರಾಣ.ಆಗಾಗ ಕಿಲಾರಿರಸ್ತೆಯ ತುದಿಗಿದ್ದ ಸುಬ್ಬಯ್ಯನಾಯ್ಡು ಅವರ ರಂಗಭೂಮಿಯಲ್ಲಿ ನಾಟಕ ನೋಡಲು ಮತ್ತೆ ಮತ್ತೆ ಹೋಗುತ್ತಿದ್ದೆ. ಅಲ್ಲಿ ಅಭಿನಯವಾಗುತ್ತಿದ್ದ `ಭಕ್ತ ಅಂಬರೀಶ', `ದೇವದಾಸಿ' , `ಎಚ್ಚಮನಾಯಕ' ನಾಟಕಗಳು ಈಗಲೂ ಕಣ್ಣಿಗೆ ಟ್ಟಿದಂತಿವೆ. ಚಿಂದೋಡಿ ಕಂಪನಿಯವರ `ಟಿಪ್ಪೂ ಸುಲ್ತಾನ್' ನಾಟಕವೂ ಅಲ್ಲಿ ಅಭಿನಯವಾಗಿತ್ತು. ಚಿಂದೋಡಿ ವೀರಪ್ಪನವರ ಟಿಪ್ಪೂ ಸುಲ್ತಾನ್ ಅಭಿನಯ ನೋಡಿ ಕರಗಿ ಹೋಗುತ್ತಿದ್ದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.