ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ ಗೊಂದಲದಿಂದಾಚೆ

Last Updated 27 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಕ್ರಮಣಿಗಾರಿಕೆಯ ಅಪಾಯಕಾರಿ ವಿದ್ಯಮಾನಗಳನ್ನು ಕಂಡಾಗ ಕಾನೂನು ಕಟ್ಟಳೆಗಳನ್ನು ಕೈಬಿಟ್ಟಿರುವ ವಿಚಾರಗಳು ಸಣ್ಣ ಸಂಗತಿಗಳಾಗಿ ಕಾಣಿಸುತ್ತವೆ.
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಕೆಲವು ಪ್ರಮುಖ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಕಳೆದ 60 ವರ್ಷಗಳಿಂದಲೂ ಜಾಮೀನು ನೀಡುತ್ತಲೇ ಬಂದಿದ್ದ ಪ್ರಸಂಗಗಳಲ್ಲೂ ಇಂದು ಜಾಮೀನು ನೀಡಲು ನ್ಯಾಯಾಧೀಶರು ಭಯಪಡುತ್ತಿದ್ದಾರೆ.

ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು, ಬಡತನ ಏನೆಂದರೇ ಗೊತ್ತಿಲ್ಲದವರು ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕೊಠಡಿಯಲ್ಲಿ ಜೀವಿಸಬೇಕಾಗಿದೆ. ಜೈಲಿನ ಕಂಬಿಗಳ ಒಳಗೆ ನಿಸ್ಸಾರ ಆಹಾರ ಸೇವಿಸಬೇಕಾಗಿದೆ. ಸೆಖೆಯಲ್ಲಿ ಬೆಂದು ಬಸವಳಿಯುತ್ತಿರುವ ಅವರು ಯಾವುದೇ ಚಟುವಟಿಕೆ ಇಲ್ಲದೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಇವರ ಬಂಧನದಿಂದ ದೇಶ ಒಂದು ರೀತಿಯ ಆಘಾತದಲ್ಲಿದೆ. ಸತ್ಯಕ್ಕಿಂತಲೂ ಭಾವನಾ ಲೋಕದಲ್ಲಿ ನಾವಿನ್ನೂ ಬದುಕುತ್ತಿದ್ದೇವೆಯೇ ಎಂಬ ಗುಮಾನಿ ಬರುತ್ತಿದೆ.
ಬಳ್ಳಾರಿಯಲ್ಲಿ ಗಣಿ ಧಣಿಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಸ್ಫೋಟಿಸಿದಾಗ ಅದರ ರಾಜಕೀಯ ಪರಿಣಾಮಗಳ ಬಗ್ಗೆ ಹೆಚ್ಚು ಗಮನ ಹರಿಯಿತು.

ಇವರ ಬಂಧನದಿಂದ ಗಣಿಗಾರಿಕೆ ನಿಯಂತ್ರಣಕ್ಕೆ ಬಂದು ನಮ್ಮ ಸಂಪತ್ತು ಲೂಟಿಯಾಗುವುದು ತಪ್ಪಿದೆ, ಹೀಗಾಗಿ ದೀರ್ಘಾವಧಿಯಲ್ಲಿ ಇದು ದೇಶಕ್ಕೆ ಒಳಿತು ಎಂಬ ಚಿಂತನೆ ಹರಿದಿದ್ದರೆ ಸಂತೋಷವಾಗುತ್ತಿತ್ತು. ಆದರೆ, ಬೇರೊಂದು ರೀತಿಯ ವಾತಾವರಣವೇ ಸೃಷ್ಟಿಯಾಯಿತು. ಸಹಜವಾಗಿಯೇ ಕೆಲವೊಂದು ಪ್ರಶ್ನೆಗಳೂ ಹುಟ್ಟಿಕೊಳ್ಳುವಂತಾಯಿತು.

ದೇಶವೊಂದು ತನ್ನ ಪುನರ್ ನವೀಕರಿಸಬಹುದಾದ ಇಂಧನ ಮೂಲದಿಂದಲೇ ಸ್ವತಂತ್ರವಾಗಿ ಬದುಕುವುದು ಸಾಧ್ಯವೇ.  ಸಾಧ್ಯವೇ ಇಲ್ಲ. ಸೂರ್ಯನ ಕಿರಣಗಳನ್ನು ಬಳಸಿಕೊಂಡರೆ ಇಡೀ ಜಗತ್ತಿಗೆ ಬೇಕಾದ ವಿದ್ಯುತ್ ಪಡೆಯಬಹುದು ಎಂದು ಪರಿಣತರು ಹೇಳುತ್ತಾರೆ.
 
ಕಳೆದ 200 ವರ್ಷಗಳಲ್ಲಿ ನಮ್ಮ ನಾಗರಿಕತೆ ಎಷ್ಟು ತೀವ್ರಗತಿಯಲ್ಲಿ ಬೆಳೆದಿದೆ ಎಂದರೆ ಯಾವ ದೇಶಕ್ಕೂ ಇಂದು ಮತ್ತೊಂದು ದೇಶವನ್ನು ಅವಲಂಬಿಸದೆ ಜೀವನ ನಡೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅವಲಂಬನೆಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ನಾವು ಗಂಭೀರ ಚಿಂತನೆ ನಡೆಸಬೇಕಾಗಿದೆ.

ಕೈಗಾರಿಕೆ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಬಿಡಿ, ನಗರದಲ್ಲಿ ವಾಸವಿರುವ ನಾವೆಲ್ಲ ಪ್ರತಿಯೊಂದು ಮನೆಯಲ್ಲೂ ಒಂದು ಕಿಲೋವಾಟ್‌ನಷ್ಟು ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಿಕೊಂಡರೆ ಈಗ ಉತ್ಪಾದಿಸುವ ವಿದ್ಯುತ್‌ಗಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸುವ ಅಗತ್ಯ ಬರುವುದಿಲ್ಲ.

ಇನ್ನೂ ಮುಂದಕ್ಕೆ ಹೋದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಗಮನ ಹರಿಸಿದರೂ ಸಾಕು. ವಿದ್ಯುತ್ ಉಳಿತಾಯಕ್ಕೆ ಸಾಕಷ್ಟು ಕೊಡುಗೆ ನೀಡಬಹುದು.

ಎಲ್ಲರೂ ತಮ್ಮ ಕಾರುಗಳಲ್ಲಿ ಥರ್ಮೋಸ್ಟಾಟ್‌ಗಳನ್ನು ಅಳವಡಿಸಿಕೊಂಡರೆ, ಪ್ರತಿಯೊಂದು ಕಚೇರಿಯಲ್ಲಿ ಹೊರಗಿನ ವಾತಾವರಣಕ್ಕೆ 2 ಡಿಗ್ರಿಯಷ್ಟೇ ಕಡಿಮೆ ಹವಾನಿಯಂತ್ರಣವನ್ನು ವ್ಯವಸ್ಥೆಗೊಳಿಸಿದರೆ, ಸಣ್ಣ ಕಾರು ಅಥವಾ ಬಸ್‌ಗಳಲ್ಲಿ ನಾವೆಲ್ಲ ಪ್ರಯಾಣಿಸಿದರೆ, ಅಗತ್ಯ ಇಲ್ಲದಾಗ ನಮ್ಮ ಮೊಬೈಲ್ ಚಾರ್ಜರ್‌ಗಳನ್ನು ಸ್ವಿಚ್‌ಆಫ್ ಮಾಡಿಕೊಂಡರೆ ನಾವು ಅದೆಷ್ಟೋ ಪ್ರಮಾಣದಲ್ಲಿ ವಿದ್ಯುತ್ ಉಳಿಸಬಹುದು.

ಇದೆಲ್ಲ ಅಸಾಧ್ಯ ಎಂದು ಮೂಗು ಮುರಿಯುವ ಅಗತ್ಯ ಇಲ್ಲ, ಆದರೆ, ಅನುಷ್ಠಾನ ಮಾಡುವವರ ಕೊರತೆಯಿಂದಾಗಿಯೇ ನಮ್ಮ ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ.
ಸ್ವಯಂ ನಿಯಂತ್ರಣಕ್ಕೆ ಜನ ಒಗ್ಗಿಕೊಳ್ಳದಿದ್ದರೆ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಕಾರು ಕೊಳ್ಳುವವರಿಗೆ ಭಾರಿ ದಂಡ ವಿಧಿಸಬೇಕು, ಇದರಿಂದ ಕಾರು ಕೊಳ್ಳುವವರ ಸಂಖ್ಯೆ ಇಳಿಯಬಹುದು ಎಂದು ಕೆಲವರು ಹೇಳುತ್ತಾರೆ.

ಇಂಧನ ಸಾಗಾಟದ ಮೇಲೆ ದುಬಾರಿ ತೆರಿಗೆ ವಿಧಿಸಬೇಕು, ಇದರಿಂದ ಸಹ ಪೆಟ್ರೋಲಿಯಂ ಉತ್ಪನ್ನಗಳು ಅಥವಾ ಗ್ಯಾಸ್ ಬಳಸುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಮತ್ತೆ ಕೆಲವರು ಪ್ರತಿಪಾದಿಸುತ್ತಾರೆ. ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ವಿವಾದ ಎದ್ದಾಗಲೆಲ್ಲಾ ಕೆಲವರು ಪವನ ವಿದ್ಯುತ್ ಪರಿಹಾರದ ಬಗ್ಗೆ ಮಾತನಾಡುತ್ತಾರೆ.

ಆದರೆ ಪವನ ವಿದ್ಯುತ್ ಅಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲು ಸಾಧ್ಯವೇ? ನಮ್ಮ ಮನೆಗಳಲ್ಲಿನ, ಕಚೇರಿಗಳಲ್ಲಿನ ಹವಾನಿಯಂತ್ರಿತ ವ್ಯವಸ್ಥೆ ನಿಭಾಯಿಸುವ ಸ್ವಂತ ಶಕ್ತಿ ಅದಕ್ಕೆ ಇದೆಯೇ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ನಾವೆಲ್ಲ ಕಾಲ ಕಳೆದಂತೆ ಹೊಸ ತಂತ್ರಜ್ಞಾನಗಳಿಗೆ ಬದಲಾಗುತ್ತಿದ್ದೇವೆ. ನಮ್ಮ ಜೀವನ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಇದ್ದರೂ ಇಂಗಾಲದ ಮಾಲಿನ್ಯದ ಪ್ರಮಾಣ ತಗ್ಗಿಸುವ ಯಾವುದಾದರೂ ಕ್ರಮ ನಡೆಯುತ್ತಿದೆಯೇ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು.

ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಸಸ್ಯಾಹಾರಿಗಳಾಗಲು ಪ್ರಯತ್ನಿಸಬೇಕು, ಏಕೆಂದರೆ ಮಾಂಸಾಹಾರಕ್ಕೆ ಸಸ್ಯಾಹಾರ ಆಹಾರ ತಯಾರಿಕೆಗಿಂತ ಹತ್ತು ಪಟ್ಟು ಅಧಿಕ ನೀರು ಬೇಕಾಗುತ್ತದೆ.   

ಮಾಂಸಕ್ಕಾಗಿ ಸಾಕುವ ನಮ್ಮ ಪ್ರಾಣಿಗಳಿಗೆ ತಿನ್ನಲು ನಮ್ಮಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಹಾರದ ಲಭ್ಯತೆ ಇದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಜಗತ್ತಿನಲ್ಲಿ ಇಂದು ಮನುಷ್ಯರ ಸಂಖ್ಯೆ 600 ಕೋಟಿಯಷ್ಟಿದ್ದರೆ, ಆಹಾರಕ್ಕಾಗಿ ಸಾಕುವ ಪ್ರಾಣಿಗಳ ಸಂಖ್ಯೆ 6,500 ಕೋಟಿಗಿಂತ ಅಧಿಕ ಇದೆ. ನಾವು ಉತ್ಪಾದಿಸುವ ಶೇ 40ರಷ್ಟು ಆಹಾರಗಳನ್ನು ಇವುಗಳು ತಿಂದು ಮುಗಿಸಿಬಿಡುತ್ತವೆ. 

ಇಂತಹ ಗಂಭೀರ ವಿಚಾರಗಳ ಬಗ್ಗೆ ನಾವು ಚಿಂತನೆ ನಡೆಸುವುದಿಲ್ಲ, ನಮ್ಮನ್ನು ಪ್ರಶ್ನೆಗಳಿಗೆ ಒಡ್ಡಿಕೊಳ್ಳುವುದೂ ಇಲ್ಲ. ಇಂಧನ ಉಳಿತಾಯ, ಸಸ್ಯಾಹಾರ ಸೇವಿಸುವ ಅಗತ್ಯ ಮುಂತಾದ ವಿಚಾರಗಳನ್ನು ಬಹುಸಂಖ್ಯೆಯ ಜನರು ಮಾಡಬೇಕು.

ಕೆಲವೇ ಮಂದಿ ಈ ಬಗ್ಗೆ ಚಿಂತಿಸಿ ಅನುಷ್ಠಾನಗೊಳಿಸಿದರೆ ಅದರಿಂದ ತೀವ್ರ ಸ್ವರೂಪದ ಬದಲಾವಣೆ ಆಗಲಾರದು. ಇತಿಹಾಸವನ್ನು ನಾವು ಸ್ವಲ್ಪ ಇಣುಕಿ ನೋಡಬೇಕು.

ಅದೆಷ್ಟೋ ಸಾವಿರ ವರ್ಷ ಮೆರೆದ ನಾಗರೀಕತೆಗಳು ಅವಸಾನಗೊಳ್ಳಲು ಕೆಲವೇ ಕೆಲವು ವರ್ಷಗಳು ಸಾಕಾಯಿತು. 2500 ವರ್ಷಗಳ ಸಿಂಧೂ ನಾಗರಿಕತೆ 60 ವರ್ಷಕ್ಕೂ ಕಡಿಮೆ ಅವಧಿಯಲ್ಲಿ  ನಾಶವಾಗಿತ್ತು.
 
ಸುಮೇರಿಯ, ಈಜಿಪ್ಟ್, ರೋಂ ನಾಗರೀಕತೆಗಳೆಲ್ಲ ಬಹುಬೇಗ ನಾಶವಾಗಲು ಅವುಗಳು ಅರಣ್ಯಗಳಿಗೆ ಮಹತ್ವ ಕೊಡದೇ ಇದ್ದುದೇ ಕಾರಣವಾಗಿತ್ತು. ಆಗಿನ ಕಾಲದಲ್ಲಿ ಅರಣ್ಯಕ್ಕೆ ಕಡಿಮೆ ಬೇಡಿಕೆ ಇದ್ದಾಗಲೂ ಅದನ್ನು ಸಂರಕ್ಷಿಸಲು ಸಾಧ್ಯವಾಗಲಿಲ್ಲ.

ನಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನು ಬಳಸಿಕೊಂಡು ಅದನ್ನು ಮೂರ್ಖಗೊಳಿಸಲು ಸಾಧ್ಯವಿಲ್ಲ. ನಾವು ಮಾಡಿದ ತಪ್ಪಿಗಾಗಿ ಪ್ರಕೃತಿ ನಮ್ಮಿಂದ ದೊಡ್ಡ ಪ್ರಮಾಣದ ಪರಿಹಾರ ಕೇಳಿಯೇ ಕೇಳುತ್ತದೆ. ನಾವು ಈಗಾಗಲೇ ಅದನ್ನು ನೋಡುತ್ತಿದ್ದೇವೆ.

20 ವರ್ಷದ ಹಿಂದೆಯೇ ತಜ್ಞರು ನಮಗೆಲ್ಲ ಎಚ್ಚರಿಕೆ ನೀಡಿದ್ದರು. ಏನೆಂದರೆ, 2010ರ ಹೊತ್ತಿಗೆ ಇಂಗಾಲದ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸದಿದ್ದರೆ ಜಗತ್ತು ಅನಾಹುತದತ್ತ ಚಲಿಸಲಿದೆ ಎಂದು ಅವರು ಹೇಳಿದ್ದರು.

ಆದರೆ, ಅಂತಹ ಯಾವ ಎಚ್ಚರಿಕೆಗಳಿಗೂ ನಾವು ಗಮನ ಕೊಟ್ಟಿಲ್ಲ. ಜತೆಗೆ ನಮ್ಮ ಜೀವನ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಂಡಿಲ್ಲ. ನಾವು  ಭವಿಷ್ಯದ ಚಿಂತೆ ಇಲ್ಲದೆ ಮತ್ತೊಂದು ದಿನ, ಮತ್ತೊಂದು ವರ್ಷ ಮುಂದಕ್ಕೆ ಸಾಗುತ್ತಲೇ ಇದ್ದಂತೆ ಜಗತ್ತು ಕೂಡ ಅಪಾಯದತ್ತಲೇ ಚಲಿಸುತ್ತ ಹೋಗುತ್ತಿದೆ.

ಪ್ರಶಾಂತ ವಾತಾವರಣದಲ್ಲಿ ಹಕ್ಕಿಯ ಚಿಲಿಪಿಲಿ ಆಲಿಸಿದಾಗ, ಸೂರ್ಯೋದಯದ ಉಜ್ವಲ ಬೆಳಕನ್ನು ಕಂಡಾಗ ಜಗತ್ತು ಏನೂ ಬದಲಾಗಿಲ್ಲ, ಇದ್ದಂತೆಯೇ ಇದೆ ಎಂಬ ಭಾವನೆ ಬರಬಹುದು.

ಆದರೆ, ನಮ್ಮ ಜೀವನ ಕ್ರಮದತ್ತ ಸ್ವಲ್ಪ ಗಮನ ಹರಿಸೋಣ, ಈ ಪರಿಸರದಲ್ಲಿ ಸಿಗುವ ಪ್ರತಿಯೊಂದನ್ನೂ ನಾವು ನಮ್ಮ ಸುಖಕ್ಕಾಗಿ ಭಾರಿ ಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. ಅದು ಕಲ್ಲಿದ್ದಲು ಇರಬಹುದು, ತೈಲ ಇರಬಹುದು, ಅನಿಲ ಇರಬಹುದು, ಇತರ ಖನಿಜಗಳು ಇರಬಹುದು. ಅರಣ್ಯದಲ್ಲಿ ಇರುವ ಅಮೂಲ್ಯ ಮರಗಳನ್ನು,ಇತರ ಸಂಪತ್ತುಗಳನ್ನು ನಾವು ದೋಚುತ್ತಿದ್ದೇವೆ.

ಈ ಪ್ರಕೃತಿ 200 ಕೋಟಿ ವರ್ಷಗಳಷ್ಟು ಕಾಲ ದಿಟ್ಟತನದಿಂದ ಬದುಕಿತ್ತು. ಅದನ್ನು ನಾವಿಂದು ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯುತ್ತಿದ್ದೇವೆ. ಪ್ರಕೃತಿ ಲೂಟಿ ಮಾಡುತ್ತಿರುವವರು ಒಂದು ಬಳ್ಳಾರಿಯ ಗಣಿ ದಣಿಗಳ ಗಣ ಅಲ್ಲ, ಒಂದು ಷೆಲ್ ಕಂಪೆನಿ ಅಲ್ಲ.
 
ಯಾವುದೇ ಅಧಿಕಾರ ಇಲ್ಲದ ನಮ್ಮಂತಹವರು ಇಂತಹ ಲೂಟಿಕೋರರಿಗೆ ಬುದ್ಧಿ ಹೇಳುವುದಾದರೂ ಹೇಗೆ? ಪ್ರಕೃತಿ ನಾಶದ ದೀರ್ಘಾವಧಿ ದುಷ್ಪರಿಣಾಮಗಳನ್ನು ನಾವೆಲ್ಲ ಸರಿಯಾಗಿ ಮನವರಿಕೆ ಮಾಡಿಕೊಂಡು ಇಂಧನ ಉಳಿತಾಯ ಪದ್ಧತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಇಂತಹ ಲೂಟಿಕೋರರನ್ನು ಮಟ್ಟಹಾಕಲು ಸಾಧ್ಯವಾದೀತು.           

(ಲೇಖಕರನ್ನು 99010 54321 ಕರೆ ಮಾಡಿ ಸಂಪರ್ಕಿಸಬಹುದು)                                                                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT