ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಕಾರುಣ್ಯ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಶ್ರಿ ವೈಷ್ಣವ ಪಂಥದ ಮಹಾನಾಯಕ, ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶ್ರಿ ರಾಮಾನುಜಾಚಾರ್ಯರು ವೆಂಕಟೇಶ್ವರನ ದರ್ಶನಕ್ಕೆ ಶಿಷ್ಯರೊಡನೆ ತಿರುಪತಿಗೆ ನಡೆದಿದ್ದರು. ದಾರಿಯಲ್ಲಿ  ಅಷ್ಟಸಹಸ್ರ  ಎಂಬ ಹಳ್ಳಿ ಬಂದಿತು. ಅಲ್ಲಿ ಶ್ರಿ ರಾಮಾನುಜಾಚಾರ್ಯರ ಶಿಷ್ಯ ವರದಾಚಾರ್ಯರು ವಾಸವಾಗಿದ್ದರು. ಅವರಲ್ಲಿಯೇ ಉಳಿದುಕೊಳ್ಳಲು ಗುರುಗಳು ತೀರ್ಮಾನಿಸಿದರು.

ವರದಾಚಾರ್ಯರು ಕಡು ಬಡವರು. ಮನೆಯಲ್ಲಿ ಯಾವ ವಸ್ತುವನ್ನೂ ಸಂಗ್ರಹವಾಗಿ ಇಟ್ಟುಕೊಳ್ಳುವವರಲ್ಲ. ಪ್ರತಿದಿನವೂ ಭಿಕ್ಷೆ ಬೇಡಿ, ಅದನ್ನೇ ಪಾಕಮಾಡಿ ಭಗವಂತನಿಗೆ ಅರ್ಪಿಸಿ ನಂತರ ತಮ್ಮ ಪತ್ನಿ ಲಕ್ಷ್ಮಿಯೊಂದಿಗೆ ಊಟ ಮಾಡುತ್ತಿದ್ದರು. ಅವರ ಭಕ್ತಿ, ಹೃದಯ ಪರಿಶುದ್ಧತೆ ಅನನ್ಯವಾಗಿದ್ದವು. ಲಕ್ಷ್ಮಿ ಕೂಡ ಗಂಡನಿಗೆ ಅನುರೂಪಳಾದ ಪತ್ನಿ. ಆಕೆ ಅಪರೂಪದ ಸುಂದರಿ ಮಾತ್ರವಲ್ಲ, ಗುಣದಲ್ಲಿ, ಭಕ್ತಿಯಲ್ಲಿ ಗಂಡನಿಗೆ ಸರಿಸಾಟಿಯಾಗಿದ್ದಳು.

ಮನೆಯಲ್ಲಿ ಒಂದು ಕಾಳೂ ಧಾನ್ಯವಿಲ್ಲ, ಬೇರೆಡೆಯಿಂದ ಬರುವ ದಾರಿಯೂ ಇಲ್ಲ. ಆಗ ಆಕೆಗೊಂದು ವಿಚಾರ ಹೊಳೆಯಿತು. ಮನೆಯ ಸಮೀಪದಲ್ಲಿ ವರ್ತಕನೊಬ್ಬನಿದ್ದ. ಅವನು ಲಕ್ಷ್ಮಿಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಪಡೆಯುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದ. ಆಕೆ ಪತಿವ್ರತೆಯಾದ್ದರಿಂದ ಅವನ ಪ್ರಯತ್ನ ವ್ಯರ್ಥವಾಗಿತ್ತು. ಇದನ್ನು ಚಿಂತಿಸಿ ಲಕ್ಷ್ಮಿ ಒಂದು ತೀರ್ಮಾನಕ್ಕೆ ಬಂದಳು. ಬರೀ ರಕ್ತ, ಮಾಂಸ, ಮೂಳೆಗಳಿಂದಾದ ದೇಹವನ್ನು ಬಳಸಿಕೊಂಡಾದರೂ ಮನೆಗೆ ಭಗವಂತನ ರೂಪದಲ್ಲಿ ಬಂದ ಗುರುಗಳಿಗೆ ಸೇವೆ ಸಲ್ಲಿಸಿ ಕೃತಾರ್ಥಳಾಗಬೇಕು, ತನ್ನ ಗಂಡನ ಮರ್ಯಾದೆಯನ್ನು ಉಳಿಸಬೇಕು.

ನೇರವಾಗಿ ಆ ವ್ಯಾಪಾರಿಯ ಮನೆಗೆ ಹೋಗಿ ಗುರುಗಳು ಬಂದ ವಿಷಯವನ್ನು ತಿಳಿಸಿ, ಅವರ ಆತಿಥ್ಯಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿಕೊಟ್ಟರೆ ಅವನ ಇಚ್ಛೆಯನ್ನು ಪೂರೈಸುವುದಾಗಿ ತಿಳಿಸಿದಳು. ಅವನ ಆಶ್ಚರ್ಯ, ಸಂತೋಷಗಳಿಗೆ ಮಿತಿಯೇ ಇರಲಿಲ್ಲ, ತಕ್ಷಣವೇ ಬೇಕಾದ ಎಲ್ಲ ಸಾಮಾನುಗಳನ್ನು ಆಕೆಯ ಮನೆಗೆ ಕಳುಹಿಸಿಕೊಟ್ಟ. ಲಕ್ಷ್ಮಿ ಅಡುಗೆ ಮಾಡಿ ಗುರುಗಳ ಪೂಜೆಗೆ ನೈವೇದ್ಯವನ್ನು ಸಿದ್ಧ ಮಾಡಿದಳು.

ಮನೆಗೆ ಬಂದ ವರದಾಚಾರ್ಯರಿಗೆ ಗುರುಗಳನ್ನು ಕಂಡು ಪರಮ ಸಂತೋಷ ಮತ್ತು ಮಡದಿ ಮಾಡಿದ ವ್ಯವಸ್ಥೆಯಿಂದ ಪರಮ ಆಶ್ಚರ್ಯ. ಲಕ್ಷ್ಮಿ ಯಾವ ವಿಷಯವನ್ನು ಬಚ್ಚಿಡದೇ ತಾನು ಮಾಡಿದ ಚಿಂತನೆಯನ್ನು ಹೇಳಿದಳು. ವರದಾಚಾರ್ಯರೂ, ಗುರುಗಳ ಸೇವೆಗೆ ನೀನು ಮಾಡುವ ತ್ಯಾಗ ಬಹುದೊಡ್ಡದು ಎಂದು ಮೆಚ್ಚಿಕೊಂಡರು.

ಊಟವಾದ ಮೇಲೆ ವರದಾಚಾರ್ಯರು ಲಕ್ಷ್ಮಿಯನ್ನು ಕರೆದುಕೊಂಡು ಗುರುಗಳ ಬಳಿಗೆ ಹೋಗಿ ಎಲ್ಲ ವಿಷಯವನ್ನು ಅರಿಕೆ ಮಾಡಿಕೊಂಡರು. ಗುರುಭಕ್ತಿಯ ಪರಾಕಾಷ್ಠೆಯನ್ನು ಕಂಡು ರಾಮಾನುಜಾಚಾರ್ಯರಿಗೂ, ಶಿಷ್ಯರಿಗೂ ದಿಗ್ಭ್ರಮೆಯಾಯಿತು. ಆಗ ಗುರುಗಳು ಉಳಿದಿದ್ದ ಆಹಾರದಲ್ಲಿ ಕೊಂಚವನ್ನು ತರಹೇಳಿ ಅದನ್ನು ಮುಟ್ಟಿ, ಧ್ಯಾನಿಸಿ ನಂತರ ಆ ಪ್ರಸಾದವನ್ನು ಲಕ್ಷ್ಮಿಯೇ ವ್ಯಾಪಾರಿಗೆ ನೀಡುವಂತೆ ಹೇಳಿದರು.

ಲಕ್ಷ್ಮಿ ಮನೆಗೆ ಬಂದಾಗ ಸಂತೋಷಗೊಂಡ ವ್ಯಾಪಾರಿ ಆಕೆ ನೀಡಿದ ಪ್ರಸಾದವನ್ನು ಸ್ವೀಕರಿಸಿದ ಮರುಕ್ಷಣವೇ ಅವನ ಕಣ್ಣುಗಳಲ್ಲಿದ್ದ ಕಾಮಭಾವನೆ ಕರಗಿ ಮುಂದೆ ನಿಂತಿದ್ದವಳು ತಾಯಿಯೆಂದೇ ಭಾಸವಾಗಿ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ತಾನು ಎಂತಹ ಪಾಪಕೃತ್ಯಕ್ಕೆ ಮನಸ್ಸು ಮಾಡಿದ್ದೆ ಎಂದು ಪಶ್ಚಾತ್ತಾಪಪಟ್ಟ. ಆಕೆಯೊಂದಿಗೆ ಗುರುಗಳ ಬಳಿಗೆ ಬಂದು ಕ್ಷಮೆ ಕೇಳಿ ಅವರ ಶಿಷ್ಯನಾದ.

ಭಗವಂತನ ಕರುಣೆ ಕೆಲವೊಮ್ಮೆ ಗುರುಗಳ ಮೂಲಕ ಹರಿದುಬರುತ್ತದೆ. ಅದು ನಮ್ಮ ಕಣ್ಣು, ಕಿವಿ, ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆ, ಜಿಡ್ಡುಗಳಿಂದ ಮುಕ್ತಿ ನೀಡುತ್ತದೆ.

(ಕೃಪೆ: ಚೆಲುವಪತಿ ಸಂಪತ್ ಕುಮಾರ್
ರಾಮಾನುಜರವರ  ಶ್ರಿರಾಮಾನುಜದರ್ಶನ ಕೃತಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT