ಈ ಸಲದ ಗುರುಹುಣ್ಣಿಮೆಯಂದು ಅಂದು ಗುರುಹುಣ್ಣಿಮೆಯೆಂಬುದೇ ಮರೆತು ಹೋಗಿತ್ತು. ನನ್ನನ್ನು ತನ್ನ ಗುರುವೆಂದು ನಂಬಿರುವ ನನ್ನ ಒಬ್ಬ ವಿದ್ಯಾರ್ಥಿನಿ ಬ್ರಾಹ್ಮೀ ಮುಹೂರ್ತದಲ್ಲಿ ಫೋನು ಮಾಡಿ ನನ್ನ ಆಶೀರ್ವಾದ ಕೇಳಿದಳು. ನನಗೆ ನಗು ಬಂತು. ‘ಒಳ್ಳೆಯ ಶಿಷ್ಯನೂ ಆಗಲೊಲ್ಲದ ನನ್ನಂಥ ಯಃಕಶ್ಚಿತ್ ವ್ಯಕ್ತಿ ಗುರುವಾಗಲು ಸಾಧ್ಯವಿಲ್ಲ, ನಿನಗೆ ನಿಜಗುರು ಸಿಕ್ಕಲಿ’ ಎಂದು ಹೇಳಿ ಮಾತುಮುಗಿಸಿದೆ.
ಈ ದೂರವಾಣಿ ಸಂಭಾಷಣೆ ಗುರು ವಿಚಾರದ ಬಗ್ಗೆ ಪುನರಾಲೋಚಿಸುವಂತೆ ನನಗೆ ಪ್ರೇರಣೆ ನೀಡಿತು.
ಇಂದು ಜಗತ್ತಿನ ತುಂಬಾ ಅಸಂಖ್ಯಾತ ಗುರುಗಳು ಇಟ್ಟಾಡುತ್ತಿದ್ದಾರೆ. ಧಾರ್ಮಿಕ ರಚನೆಗಳು ಶಿಥಿಲವಾಗುತ್ತಿರುವ ಸುತ್ತುನೆಲೆಯಲ್ಲಿ ಗುರುಮಹಾತ್ಮರಿಗಾಗಿ ಬೃಹತ್ ಮಾರುಕಟ್ಟೆಯೊಂದು ನಿರ್ಮಾಣವಾಗಿದೆ. ಅವಸರದ ಗುರುಗಳಿಗೆ ಅವಸರದ ಶಿಷ್ಯರೂ ಬೇಡಿಕೆ–- ಸರಬರಾಜು ನಿಯಮದನ್ವಯ ಅವತರಿಸುತ್ತಲೇ ಇರುತ್ತಾರೆ. ಜಗತ್ತಿಗೆ ವೈರಾಗ್ಯವನ್ನು ಬೋಧಿಸಿ ಆಶ್ರಮಗಳೆಂಬ ಸಂಪತ್ತಿನ ಸಾಮ್ರಾಜ್ಯಗಳನ್ನು ಕಟ್ಟಿಕೊಳ್ಳುತ್ತಿರುವ, ಇಂದ್ರಿಯನಿಗ್ರಹವನ್ನು ಬೋಧಿಸಿ ಕಳ್ಳ ಶೃಂಗಾರಲೀಲೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಗುರುವರೇಣ್ಯರಿಗೇನೂ ಕಡಿಮೆಯಿಲ್ಲ. ಗುರು-ಶಿಷ್ಯರ ಬೃಹತ್ ಉತ್ಪಾದನೆಗೆ ಇತರ ಕೆಲವು ದೇಶಗಳ ಕೊಡುಗೆಯಿರುವುದು ನಿಜವಾದರೂ ಅದರ ಸಿಂಹಪಾಲು ಭಾರತದ್ದು. ಇಂಥ ಗುರುಗಳ ಗುಟ್ಟುಗಳನ್ನು ರಟ್ಟುಮಾಡುವ ವಿಚಾರವಂತರ, ಸತ್ಯಶೋಧಕರ ಪ್ರಯತ್ನಗಳೂ ಸದಾ ಜಾರಿಯಿವೆ. ಆಶ್ಚರ್ಯವೆಂದರೆ ಮಾಧ್ಯಮ ಪ್ರಧಾನವಾದ ಅನಿಮಿಷ ಜಗತ್ತಿನಲ್ಲಿ ಈ ರೀತಿಯ ‘ಮಹಿಮೆ’ಗಳು ಸಾರ್ವಜನಿಕರ ಗಮನಕ್ಕೆ ಬಂದ ಮೇಲೂ ಇಂಥಾ ಗುರುಗಳ ಬಗೆಗೆ ಅವರವರ ಶಿಷ್ಯವೃಂದದವರಿಗಿರುವ ಶ್ರದ್ಧೆ ಕುಗ್ಗುವುದಿಲ್ಲ.
ಒಬ್ಬ ಜರ್ಮನ್ ಮಹಿಳೆ ತನ್ನ ಕತೆ ಹೇಳಿದಳು. ಅವಳೂರಿಗೆ ಭಾರತದ ಯೋಗ-ವೇದಾಂತದ ಗುರುವೊಬ್ಬ ಬಂದ. ಅವನಿಂದ ಯೋಗ ಅಂದರೆ ಆಸನಗಳನ್ನು ಆಕೆ ಕಲಿತಳು. ಅವನ ಸಂಸ್ಥೆಯ ಯೋಗಗುರುವೂ ಆದಳು. ಆತ ಅವಳಿಗೆ ಕಾಮ ಮಹಾನ್ ಪಾಪವೆಂದು ಸದಾ ಬೋಧಿಸುತ್ತಿದ್ದ. ತುಂಬಾ ಜಾಣಳಾದರೂ ಸ್ವಲ್ಪ ಕೋಣಳಾಗಿದ್ದ ಅವಳು ಅವನು ಅಂದದ್ದೆಲ್ಲಾ ಅಮೃತವಾಕ್ಯ
ವೆಂದು ನಂಬಿದ್ದಳು. ಅವಳು ಗಂಡನ ಜೊತೆ ಮಲಗುವುದನ್ನೂ ಬಿಟ್ಟಳು. ಕೆಲವು ದಿನಗಳ ನಂತರ ಗುರುವಿನ ಮಾಯಾಸಿದ್ಧಾಂತದ ಇನ್ನೊಂದು ಮುಖ ಅವಳಿಗೆ ತೋರತೊಡಗಿತು. ಆತ ತನ್ನ ಶಿಷ್ಯರ ಜಾತಕಗಳನ್ನು ಓದಿ ಅವರ ಲೌಕಿಕ ತೊಂದರೆಗಳ ಪರಿಹಾರಕ್ಕಾಗಿ ಯಥೇಚ್ಛವಾಗಿ ಕಾಸು ಕೀಳತೊಡಗಿದ; ಚಿನ್ನ-–ಬೆಳ್ಳಿ ಯಂತ್ರಗಳನ್ನು ದುಬಾರಿ ಬೆಲೆಗೆ ಮಾರತೊಡಗಿದ. ಅವಳು ತನ್ನ ಗುರುವಿನ ಜೊತೆ ಭಾರತಕ್ಕೆ ಬಂದಾಗ ಅವಳ ಮೇಲೆ ಕೈಹಾಕಿ ಕಾಮಕೇಳಿಗೆ ಬಲವಂತ ಮಾಡತೊಡಗಿದ. ಅವಳಿಗೆ ಪೂರ್ತಿ ಭ್ರಮಾಭಂಗವಾಯಿತು. ಅಂದಿನಿಂದ ಗುರು ಪದ ಕೇಳಿದರೆ ಸಾಕು ಅವಳು ತಾಳ್ಮೆಗೆಡುತ್ತಾಳೆ. ಮತ್ತೆ ಭಾರತಕ್ಕೆ ಬರುವ ಧೈರ್ಯ ಮಾಡಲಿಲ್ಲ. ಗಂಡನ ಮನೆಗೆ ವಾಪಸಾದರೂ ಅವರಿಬ್ಬರ ಸಂಬಂಧ ಮೂರು ದಶಕಗಳಿಂದ ನಿತ್ಯ ಚಿತ್ರಹಿಂಸೆಯಾಗಿ ಮಾರ್ಪಟ್ಟಿದೆ. ಇದು ‘ಗುರುಮಹಿಮೆ’ಯ ಒಂದು ಉದಾಹರಣೆ.
ಇಂಥ ‘ಗುರುಮಹಿಮೆ’ಗಳ ಕತೆಗಳು ಭಾರತದಲ್ಲೂ ಹೇರಳವಾಗಿ ಸಿಕ್ಕುತ್ತವೆ. ಹೃಷಿಕೇಶದಲ್ಲಿ ಹುಟ್ಟಿ ಬೆಳೆದ ಸಾಮಾಜಿಕ ಆಂದೋಲನಕಾರ ತ್ರಿಪನ್ ಸಿಂಗ್ ಚವಾಣರ ಬಳಿ ಹೃಷಿಕೇಶದ ಬಹುತೇಕ ಮಹಾತ್ಮರ ಕುಂಡಲಿ ಇದೆ. ಅವರ ಪ್ರಕಾರ ಸ್ವಾಮಿ ಶಿವಾನಂದರಂತಹ ಕೆಲವೇ ಸಾಚಾ ಯೋಗಿಗಳನ್ನು ಹೊರತುಪಡಿಸಿದರೆ ಮಿಕ್ಕವರು ಡೋಂಗಿಗಳು. ನೆಲಗಳ್ಳತನದಲ್ಲಿ ನಿಸ್ಸೀಮರು.
ಅಂಥವರಲ್ಲೊಬ್ಬನಿಗೆ ದೆಹಲಿಯ ಶ್ರೀಮಂತ ದಂಪತಿ ಶಿಷ್ಯರಾದರು. ವ್ಯವಹಾರದ ತೊಂದರೆಯಲ್ಲಿದ್ದ ಗಂಡನಿಗೆ ಆಶ್ರಮದ ಶಾಂತಿಯ ಅಗತ್ಯವಿತ್ತು. ಹೆಂಡತಿ ಅನುಪಮ ಚೆಲುವೆ. ಅವಳ ಮೇಲೆ ಗುರುವಿನ ಕಣ್ಣು ಬಿತ್ತು. ಅವಳಲ್ಲಿ ವಿಶೇಷವಾದ ಆಧ್ಯಾತ್ಮಿಕ ಅರ್ಹತೆಯಿದೆಯೆಂದು ನಂಬಿಸಿ ಅವಳಿಗೆ ವಿಶೇಷ ತರಪೇತಿ ಕೊಡುವುದಕ್ಕಾಗಿ ಆಶ್ರಮದಲ್ಲೇ ಇರುವಂತೆ ಪ್ರೇರೇಪಿಸಿದ. ಅವಳನ್ನು ಲೈಂಗಿಕವಾಗಿ ವಶಪಡಿಸಿಕೊಂಡು ತನ್ನ ಕೈಗೊಂಬೆಯನ್ನಾಗಿಸಿಕೊಂಡು ಅವಳ ಸಹಕಾರದಿಂದ ಗಂಡನನ್ನು ಚಾಣಾಕ್ಷವಾಗಿ ಕೊಲೆ ಮಾಡಿಸಿದ. ತಾವಿಬ್ಬರೂ ಅವಳ ಗಂಡನ ಅಪಾರ ಆಸ್ತಿಯ ನೆರವಿನಿಂದ ಅಮೆರಿಕದಲ್ಲಿ ಆಶ್ರಮ ಸ್ಥಾಪಿಸಿ ಎರ್ರಾಬಿರ್ರಿ ಕಾಸು ಮಾಡಿಕೊಳ್ಳಬಹುದೆಂದು ಅವಳನ್ನು ಒಪ್ಪಿಸಿದ್ದ. ಆದರೆ ಅವನ ಯಶಸ್ಸು ಅಲ್ಪಕಾಲೀನವಾಗಿತ್ತು. ಆ ಮಹಿಳೆಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಬಂದು ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಳು. ಕಳ್ಳಗುರು ಸಿಕ್ಕಿಬಿದ್ದ. ಇಬ್ಬರಿಗೂ ಜೀವಾವಧಿ ಶಿಕ್ಷೆ ದೊರಕಿತು.
ಇಂಥಾ ‘ಗುರುಮಹಿಮೆ’ಗಳಷ್ಟೇ ಪೂರ್ಣ ಸತ್ಯವಾಗಿದ್ದರೆ ಗುರು-ಶಿಷ್ಯ ಸಂಬಂಧ ಒಂದು ಮೋಸದ ಜಾಲವೆಂದು ತೀರ್ಮಾನಿಸಿಬಿಡಬಹುದಾಗಿತ್ತು. ಆದರೆ ರಾಮಕೃಷ್ಣ, ರಮಣ ಮಹರ್ಷಿ ಮುಂತಾದ ನೂರಾರು ನಿಸ್ವಾರ್ಥಿ ಗುರುಗಳ ಪರಂಪರೆಯೂ ನಮ್ಮ ಮುಂದಿದೆ. ರಾಮಕೃಷ್ಣರಾಗಲಿ ರಮಣರಾಗಲಿ ಯಾವ ಪ್ರಲೋಭನೆಗೂ ಸಿಗಲಿಲ್ಲ. ರಮಣರು ಕಾಸನ್ನು ಮುಟ್ಟಲಾರೆನೆಂಬ ವ್ರತ ತೊಟ್ಟಿದ್ದರು. ಹರಿಯುವ ತಿಳಿನೀರಿನ ಹಾಗೆ ತಮ್ಮನ್ನು ಸದಾ ಶುದ್ಧವಾಗಿರಿಸಿಕೊಂಡಿದ್ದರು. ರಾಮಕೃಷ್ಣರು ನಿರ್ಮಲತೆಯ ಸಾಕಾರವಾಗಿದ್ದರು. ಇಂತಹ ನಿಜಗುರುಗಳು ಲೋಕಪ್ರಸಿದ್ಧರಾಗಬೇಕೆಂಬ ನಿಯಮವೂ ಇಲ್ಲ. ಪ್ರಚಾರದ ಕಣ್ಣಿಗೆ ಬೀಳದಂತೆ ಪ್ರಾಮಾಣಿಕವಾಗಿ ತಮ್ಮ ಸಾಧನೆ ಮಾಡಿಕೊಂಡು ಶಿಷ್ಯರಿಗೆ ದಾರಿ ತೋರುತ್ತಿರುವ ಅನೇಕ ಗುರುಗಳನ್ನು ನಾನು ಭಾರತದಾದ್ಯಂತ ಕಂಡಿದ್ದೇನೆ. ವಿವೇಕಾನಂದ ಮತ್ತಿತರ ಶಿಷ್ಯರು ಸಿಗದಿದ್ದರೆ ರಾಮಕೃಷ್ಣರು ಇದ್ದದ್ದೂ ನಮಗೆ ಗೊತ್ತಾಗುತ್ತಿರಲಿಲ್ಲ. ಇಂಥವರನ್ನೇ ಶಂಕರಾನಂದ ಶಿವಯೋಗಿಗಳು ತಮ್ಮ ರಚನೆಯೊಂದರಲ್ಲಿ ‘ಉನ್ನತ ಜೀವ ರತ್ನ’ಗಳೆಂದು ಕರೆದದ್ದು. ಇಂಥ ಒಬ್ಬಿಬ್ಬರು ಸಾಚಾ ಯೋಗಿಗಳ ನಿಕಟ ಪರಿಚಯವನ್ನು ನನ್ನ ‘ಬತ್ತೀಸರಾಗ’ದಲ್ಲಿ ಮಾಡಿಕೊಟ್ಟಿದ್ದೇನೆ.
ಭಾರತೀಯ ಆಧ್ಯಾತ್ಮಿಕ ಪರಂಪರೆಗಳಲ್ಲಿ ಗುರುವಿಗೆ ವಿಶೇಷ ಸ್ಥಾನ ಕೊಡಲಾಗಿದೆ. ‘ನ ಗುರೋರಧಿಕಂ’ ಎಂದಿದೆ ಗುರುಮಹಿಮಾ ಸ್ತ್ರೋತ್ರ. ‘ಶಿವಪಥವನರಿವಡೆ ಗುರುಪಥವೇ ಮೊದಲು’ ಎಂಬುದು ಬಸವವಚನ. ಚೌರಾಂಶಿಲಕ್ಷಜೀವಿಗಳನ್ನು ಮಾತೃವಾತ್ಸಲ್ಯದಿಂದ ಪೊರೆದು ಶಿಷ್ಯರಿಗೆ ಸಮಸ್ತ ವಿದ್ಯೆಯನ್ನು ಧಾರೆಯೆರೆಯುವ ಕೆಲವೇ ಗುರುಗಳ ನಡುವೆ ನಕಲಿ ಗುರುಗಳೂ ಇಂದಿನಂತೆ ಹಿಂದೆಯೂ ಇದ್ದರು. ಇಂಥವರ ಬಗ್ಗೆ ಎಚ್ಚರಿಕೆಯನ್ನೂ ಸಾಚಾ ಯೋಗಿಗಳು ಕೊಡುತ್ತಾ ಬಂದಿದ್ದಾರೆ. ವಚನಕಾರರು ತಮ್ಮ ರಚನೆಗಳಲ್ಲಿ ಅಂಥವರನ್ನು ಕಟುವಾಗಿ ಟೀಕಿಸಿದ್ದಾರೆ. ‘ಪದುಮನಾಭನಲಿ ಲೇಶ ಭಕುತಿಯಿರದ ಉದರವೈರಾಗ್ಯ’ದವರ ಬಗ್ಗೆ ಪುರಂದರ ದಾಸರೂ ಎಚ್ಚರಿಕೆ ನೀಡಿದ್ದಾರೆ. ಆಧುನಿಕ ಯುಗದ ಅಸಾಂಪ್ರದಾಯಿಕ ಯೋಗಿಯಾಗಿದ್ದ ಜಿಡ್ಡು ಕೃಷ್ಣಮೂರ್ತಿ ಅವರು ಇಂದಿನ ಗುರುಗಿರಿಗೆ ಹೇಸಿ ಇಡೀ ಗುರು-ಶಿಷ್ಯ ಸಂಸ್ಥೆಯನ್ನೇ ಪ್ರಶ್ನಿಸತೊಡಗಿದರು.
ಇಂದಿನ ಪ್ರಚಾರಪ್ರಿಯ ಯುಗದಲ್ಲಿ ಗುರುಗಳ ವ್ಯಕ್ತಿಪೂಜೆಯ ಅಪಾಯ ಎಂದಿಗಿಂತಲೂ ಹೆಚ್ಚಾಗಿದೆ. ಅಸಮಾನತೆಯ ವಿಷಮ ಸನ್ನಿವೇಶದಲ್ಲಿ ಇಂದು ಬಡವರಂತೆ ಬಲ್ಲಿದರೂ ಅಶಾಂತಿಯಿಂದ ಹತಾಶರಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಂದಿಷ್ಟು ಶಾಂತಿ ದೊರಕೀತೆಂಬ ನಂಬುಗೆಯಿಂದ ಸರ್ವಶಕ್ತರಂತೆ ಸೋಗು ಹಾಕುವ ‘ಗುರು’ಗಳಿಗೆ ಸುಲಭವಾಗಿ ಬೇಸ್ತು ಬೀಳುತ್ತಾರೆ. ತಮ್ಮ ಜವಾಬುದಾರಿಯನ್ನು ಗುರುವಿಗೆ ವರ್ಗಾಯಿಸಿ ಹಗುರವಾಗಲಿಚ್ಛಿಸುತ್ತಾರೆ. ಹೀಗೆ ಶರಣಾಗತರಾದವರ ದೌರ್ಬಲ್ಯಗಳನ್ನು ಬಳಸಿಕೊಂಡು ಖೋಟಾ ಗುರುಗಳು ಹೆಚ್ಚುಹೆಚ್ಚು ಪ್ರಭಾವ ಬೆಳೆಸಿಕೊಳ್ಳುತ್ತಾರೆ. ‘ಅಂಧಕನ ಕೈಯನ್ನು ಅಂಧಕ ಹಿಡಿದಂತೆ’ ಶಿಷ್ಯರನ್ನು ಕತ್ತಲದಾರಿಯಲ್ಲಿ ಇನ್ನೂ ದೂರ ಕೊಂಡೊಯ್ಯುತ್ತಾರೆ.
ಚಿಕ್ಕಂದಿನಿಂದ ಗುರುಗಳ ಬಗ್ಗೆ ಅದಮ್ಯ ಆಸಕ್ತಿಯಿದ್ದ ನಾನು ಬೆಟ್ಟ-ಗುಡ್ಡಗಳ ನಡುವೆ, ಹಳ್ಳಿ-ನಗರಗಳಲ್ಲಿ ಗುರುಗಳನ್ನು ಅರಸುತ್ತಾ ಅಲೆದಾಡಿದ್ದೇನೆ. ನನಗೆ ಸಿಕ್ಕ ಗುರುಗಳಲ್ಲಿ ಕಳ್ಳಗುರುಗಳೇ ಹೆಚ್ಚು. ಸದ್ಗುರುಗಳು ತೀರಾ ಅಪರೂಪ. ಇನ್ನು ಕೆಲವರು ನಡುಮಧ್ಯದವರು. ಕೆಲವು ಗುರುಗಳಿಂದ ಅನರ್ಘ್ಯವಾದ ಸಂಸ್ಕಾರಗಳನ್ನು ಪಡೆದುಕೊಂಡ ಮೇಲೂ ಹಲವು ಸಲ ಡೂಪ್ಲಿಕೇಟ್ ಗುರುಗಳಿಂದ ವಂಚನೆಗೂ ಒಳಗಾದದ್ದುಂಟು. ಖೋಟಾ ಗುರುಗಳು ನನ್ನಲ್ಲುಂಟು ಮಾಡಿದ ತಮಂಧಘನವನ್ನು ನಿಜಗುರುಗಳು ಕಿರುಸೊಡರಿನಿಂದ ದೂರಮಾಡಿದ್ದರಿಂದಲೇ ಗುರುಗಿರಿಯ ಅಪಾಯಗಳು ಪೂರ್ಣ ಗೊತ್ತಿದ್ದರೂ ಗುರುತತ್ವವನ್ನು ನಿರಾಕರಿಸುವ ಅಗತ್ಯ ನನಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಗುರುವಿಚಾರದ ಬಗ್ಗೆ ನನ್ನ ಕೆಲವು ಅನುಭವೋಕ್ತಿಗಳನ್ನು ನಿಮ್ಮ ಮುಂದಿಡಬಯಸುತ್ತೇನೆ.
‘ಗುರೂರುಪಾಯಮ್’ ಎಂಬ ‘ಶಿವಸೂತ್ರ’ದ ಮಾತು ಮಹತ್ವಪೂರ್ಣ. ಅಂದರೆ ಗುರು ಎಷ್ಟೇ ಮುಖ್ಯವಾದರೂ ಅವನು ಗುರಿಯಲ್ಲ, ಉಪಾಯ ಮಾತ್ರ. ಹಾಗಿದ್ದರೆ ಗುರಿ? ನನ್ನ ಸೂಫಿ ಗುರು ಆಶದುಲ್ಲಾ ಖಾದ್ರಿ ಶಿವಯೋಗಿಗಳು ತಮ್ಮ ಸರಳ ಭಾಷೆಯಲ್ಲಿ ಹೇಳುತ್ತಿದ್ದರು: ‘ನಿನ್ನ ಗುರುತನ್ನು ನಿನಗೆ ಕೊಡುವುದೆಲ್ಲಾ ಗುರುವೇ’. ಹೀಗಾಗಿ ಗುರು ಒಬ್ಬ ವ್ಯಕ್ತಿಯಾಗಿರಬಹುದು. ಆತ ಶರೀರಧಾರಿ ವ್ಯಕ್ತಿಯಾಗಬೇಕೆಂಬ ನಿಯಮವಿಲ್ಲ. ನನ್ನ ಪರಮಗುರುಗಳು ಅಶರೀರ ಸ್ಥಿತಿಯಲ್ಲಿದ್ದು ನನಗೆ ಜಾಗೃದೇತರ ಸ್ಥಿತಿಗಳಲ್ಲಿ ಅರುಹುತ್ತಾರೆ. ‘ಊರಿಂಗೆ ದಾರಿಯನು ಆರು ತೋರಿದರೇನು? ಸಾರಾಯದ ನಿಜವ ತೋರುವನೆ ಗುರು’ ಅನ್ನುತ್ತಾನೆ ಸರ್ವಜ್ಞ. ವ್ಯಕ್ತಿಯಲ್ಲದ ಗುರುಗಳೂ ಇವೆ. ಕಲಿಯುಗದಲ್ಲಿ ಗುರುಗಳು ದುರ್ಲಭವೆಂಬ ಕಾರಣ ಸಿಖ್ಖರ ಕೊನೆಯ ಗುರು ಗುರು ಗೋಬಿಂದ್ ಸಿಂಗ್ ‘ಗುರು ಗ್ರಂಥಸಾಹಿಬ್’ ಅನ್ನೇ ಗುರುವೆಂದು ಸಾರಿದ. ಚೀನಾದಲ್ಲಿ ಕಾಲಜ್ಞಾನದ ಪುಸ್ತಕವಾದ ‘ಆಯ್ ಕಿಂಗ್’ ಅನ್ನೇ ಗುರುವೆಂದು ಕೆಲವರು ನಂಬುತ್ತಾರೆ.
ನಾನು ಸಂಧಿಸಿದ ಹಿರಿಯ ಯೋಗಿಗಳಲ್ಲೊಬ್ಬರಾದ ವಿಜಾಪುರ ಜಿಲ್ಲೆಯ ನಾಥಪಂಥೀಯ ಗುರು ಶ್ರೀಮದ್ವೀರೇಶ ಪ್ರಭುಗಳು ನನಗೊಮ್ಮೆ ಹೇಳಿದರು: ‘ಈ ಮಾಂಸಪಿಂಡವನ್ನು ಗುರುವೆಂದು ತಿಳಿದರೆ ಅಪಾಯ. ಗುರುವಿನದು ಮಂತ್ರಪಿಂಡ. ಒಮ್ಮೆ ಶಿಷ್ಯನಿಗೆ ಒಂದು ಮಂತ್ರವನ್ನೋ ಅಥವಾ ಇನ್ಯಾವುದೋ ಧ್ಯಾನಕ್ರಮವನ್ನೋ ಕೊಟ್ಟೊಡನೆ ಗುರುವಿನ ಕೆಲಸ ಮುಗಿಯಿತು. ಅಂದಿಂದ ಆ ಸಾಧನಾಕ್ರಮವೇ ಗುರು’.
ಶಿಷ್ಯನೊಳಗಿನ ಗುರುತತ್ವವನ್ನು ಹಸ್ತಮಸ್ತಕ ಸಂಯೋಗದಿಂದ ಎಚ್ಚರಿಸುವ ಕ್ರಿಯೆಯನ್ನೇ ದೀಕ್ಷೆಯೆಂದು ತಂತ್ರಾಗಮಗಳು ಕರೆದಿವೆ. ಆ ಗುರುತತ್ವವು ಪೂರ್ಣ ಜಾಗೃತಿ ಹೊಂದಿದಾಗ ಶಿಷ್ಯನೇ ಗುರು. ಅಲ್ಲಮನನುಸಾರ ‘ಗುರುವೇ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೇ ಗುರುವಾದ ತನ್ನ ವಿನೋದಕ್ಕೆ’. ಈ ಅವಿನಾ ಸಂಬಂಧ ಗುರುಶಿಷ್ಯರಿಬ್ಬರಿಗೂ ಜೀವಾಳ. ದೀಕ್ಷಾ ಕ್ರಮ ವಿಧಿಪೂರ್ವಕವೇ ನಡೆಯಬೇಕೆಂದಿಲ್ಲ. ಉದಾಹರಣೆಗೆ ಅಲ್ಲಮನಿಗೆ ದೀಕ್ಷೆ ನೀಡಿದ ಅವನ ಕಾಣಬಾರದ ಗುರು ತನ್ನ ಶಿಷ್ಯನಿಗಿತ್ತದ್ದು ‘ಪೂಜೆಗೆ ಬಾರದ ಲಿಂಗ’.
ಗುರು ವ್ಯಕ್ತಿಯಲ್ಲ, ಬದಲಿಗೆ ಒಂದು ತತ್ವವೆಂದು ತಿಳಿದದ್ದರಿಂದ ಯಾವ ನಿಜಗುರುವೂ ಶಿಷ್ಯನಲ್ಲಿ ಶಕ್ತಿಯನ್ನು ಜಾಗೃತಗೊಳಿಸಿದ ಬಳಿಕ ಅವನು ತನ್ನ ಮೇಲೆ ಅವಲಂಬಿತನಾಗಿರಬೇಕೆಂದು ಬಯಸುವುದಿಲ್ಲ. ಸ್ವಾಮಿ ಶಿವಾನಂದರು ತಮ್ಮ ಶಿಷ್ಯ ಸತ್ಯಾನಂದರಿಗೆ ಕ್ರಿಯಾದೀಕ್ಷೆ ನೀಡಿದ ಮರುಕ್ಷಣವೇ ಜಾಗ ಬಿಡಿಸಿದರು. ಆದರೆ ಶಿಷ್ಯ ಇಂಥಾ ದೀಕ್ಷೆಗೆ ತಯಾರಾಗುವವರೆಗೆ ಗುರು ಅನೇಕ ಪರೀಕ್ಷೆಗಳನ್ನು ನೀಡುತ್ತಿರುತ್ತಾನೆ.
ಟಿಬೆಟ್ಟಿನ ಮಹಾಯೋಗಿ ಮಿಲರೇಪನಿಗೆ ಆತನ ಗುರು ಮಾರ್ಪಾ ಅಗ್ನಿಪರೀಕ್ಷೆಗಳನ್ನು ನೀಡಿದ. ಮಾರ್ಪಾ, ಮಿಲರೇಪನಿಗೆ ಗುಡ್ಡದ ಮೇಲೆ ಬುದ್ಧವಿಹಾರವನ್ನು ಕಟ್ಟಲು ಹೇಳಿದ. ಅದನ್ನು ಕಟ್ಟಿ ಮುಗಿಸಿದ ಕೂಡಲೇ ಕೆಡವಲೆಂದು ಹೇಳಿದ. ಎಷ್ಟೋ ಸಲ ಕಟ್ಟಿಸಿ, ಕೆಡವಿಸಿ ಮಿಲರೇಪನ ಅಹಂಕಾರವನ್ನು ನಷ್ಟಗೊಳಿಸಿದ ನಂತರ ಅವನಿಗೆ ತನ್ನೆಲ್ಲಾ ಜ್ಞಾನವನ್ನು ಧಾರೆಯೆರೆದ. ಆ ನಂತರ ಮಿಲರೇಪ ಬೌದ್ಧಜಗತ್ತಿನ ಮಹಾನ್ ಜ್ಯೋತಿಯಾಗಿ ಬೆಳಗಿದ.
ಶಿಷ್ಯನು ಒಬ್ಬನೇ ಗುರುವಿನ ಅಡಿಯಾಳಾಗಿರಬೇಕೆಂಬುದು ಗುರು ಮಾಫಿಯಾಗಳ ಅಂಬೋಣ. ಕಾಶ್ಮೀರದ ಮಹಾನ್ ಯೋಗಿ ಅಭಿನವಗುಪ್ತನಿಗೆ ಮೂವರು ಗುರುಗಳು ಮೂರು ಮಾರ್ಗದಲ್ಲಿ ದೀಕ್ಷೆ ಕೊಟ್ಟರು. ರಾಮಕೃಷ್ಣರಿಗೆ ಇಬ್ಬರು ಗುರುಗಳು. ತಿರುವಣ್ಣಾಮಲೈನ ಅವಧೂತಯೋಗಿ ರಾಂ ಸುರತ್ಕುಮಾರರಿಗೆ ಅರವಿಂದರು, ರಮಣ ಮಹರ್ಷಿ, ಪಪ್ಪಾ ರಾಮದಾಸ್– ಹೀಗೆ ಮೂವರು ಗುರುಗಳು.
ನನ್ನ ಸೂಫಿಗುರು ಹೇಳುತ್ತಿದ್ದರು: ‘ಶಿವನ ಹಾಗೆ ಗುರುವೂ ಎಲ್ಲಾ ತವಲೂ ಅವನೆ. ಅವನನ್ನ ಕಾಣ ಕಣ್ಣುಗಳನ್ನ ಪಡಕೊ’.
ಇಂದಿನ ಖೋಟಾಗುರುಗಳ ಸೂಪರ್ ಮಾರ್ಕೆಟ್ಟಿನಲ್ಲೆ ನಿಜಗುರು ಅಡಗಿದ್ದಾನೆ. ‘ಅಪರಿಮಿತದ ಕತ್ತಲೆಯೊಳಗೆ ವಿಪರೀತದ ಬೆಳಕನಿಕ್ಕಿದವರಾರೋ? ಬೆಳಗೂ ಅದೆ, ಕತ್ತಲೆಯೂ ಅದೆ!’ ಎಂದ ಅಲ್ಲಮ.
ಹೀಗೆ ಅನುಭವದ ಮುಖೇನ ಶಾಸ್ತ್ರಗಳನ್ನು ಅರ್ಥೈಸಿಕೊಳ್ಳುತ್ತಾ ಹೋದರೆ ಗುರುತತ್ವವನ್ನು ಅರಸುವವರಿಗೆ ‘ಅರಸುವ ಬಳ್ಳಿ ಕಾಲ ತೊಡರುವಂತೆ’ ಗುರುತತ್ವ ತಾನಿದ್ದಲ್ಲಿಯೇ, ತನ್ನೊಳಗೇ ಸಿಗಬಹುದು. ಪ್ರಚಾರಪ್ರಿಯ ಗುರುಗಳ ಹಿಂದೆ ಇಡೀ ಲೋಕದಲ್ಲಿ ಅಲೆದಾಡಿದರೂ ಏನೂ ಸಿಗದೇ ಹೋಗಬಹುದು.
ಹೀಗೆ ತನ್ನೊಳಗಿನ ನಿಜಗುರುವನ್ನು ಗಳಿಸಿಕೊಂಡ ಬಳಿಕ ಶಿಷ್ಯ ಅನುತ್ತರ ಸ್ಥಿತಿ ತಲುಪುತ್ತಾನೆ. ಗುರು ಸಿಕ್ಕಿದ ಅನುಭವದ ತೀವ್ರತೆ ಮತ್ತು ಉತ್ಕಟತೆಗಳನ್ನು ಅನೇಕ ಮಂದಿ ಕವಿಗಳು ಅದ್ಭುತ ಉಪಮಾರೂಪಕಗಳಿಂದ ಬಣ್ಣಿಸಿದ್ದಾರೆ. ಅನುಭವದ ಸರಳ ಸುಂದರ ನಿರೂಪಣೆಯೊಂದು ಕನ್ನಡ ಜಾನಪದ ಕವಿಯೊಬ್ಬಳಲ್ಲಿದೆ:
ನಿದ್ದುರೆಗಣ್ಣಲಿ ಕಂಡೆ ಸದ್ದಗುರುವಿನ ಪಾದ
ನಿದ್ದೂರೆ ತಿಳಿದಾಗ ನಿರ್ವಯಲು! ಶ್ರೀಗುರುವೆ
ರುದ್ದುರನ ಮೈಮೆ ತಿಳಿಯಾದು
ಹೀಗೆ ಗುರುವನ್ನು ಕಂಡು ಗುರುವನ್ನು ಕೂಡಿ ತಾವೇ ಗುರುವಾದವರಿಗೆ ಪ್ರತಿ ದಿನವೂ ಗುರುಹುಣ್ಣಿಮೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.