ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ: ಆಶಾವಾದ ಮತ್ತು ವಾಸ್ತವ

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೂವತ್ತು ವರ್ಷಗಳ ಅವಧಿಯಲ್ಲಿ ಭಾರತದ ನಗರಗಳು ದೊಡ್ಡ ಮಟ್ಟದಲ್ಲಿ ಬದಲಾಗಿವೆ. ಇದು ಪೊಲೀಸ್ ಕೆಲಸದ ಮೇಲೆ ಪರಿಣಾಮ ಉಂಟುಮಾಡಿದೆ. ನಗರಗಳು ದೊಡ್ಡದಾಗಿ ಬೆಳೆದಿರುವ ಬಗ್ಗೆ, ನಗರಗಳಲ್ಲಿನ ಜನಸಂಖ್ಯೆ ಹೆಚ್ಚಾಗಿರುವ ಬಗ್ಗೆ ಹಾಗೂ ಬಹುತೇಕರ ಪಾಲಿಗೆ ಅವು ‘ಬದುಕಲು ಅಸಾಧ್ಯವಾಗಿರುವ’ ಬಗ್ಗೆ ನಾನು ಇಲ್ಲಿ ಮಾತನಾಡುತ್ತಿಲ್ಲ. ನಗರಗಳು ಹೀಗೆ ಆಗಿವೆ ಎಂಬುದು ನಿಜ. ನಾನು ಇಲ್ಲಿ ಮಾತನಾಡುತ್ತಿರುವುದು ನಮ್ಮ ನಗರಗಳ ರಚನೆ, ಮೂಲದಲ್ಲಿ ಹೇಗಿತ್ತು, ಅವು ಈಗ ಏನಾಗಿವೆ ಎಂಬುದರ ಬಗ್ಗೆ.

ಭಾರತವು ಪುರಾತನ ದೇಶವಾಗಿದ್ದರೂ, ಇಲ್ಲಿನ ಬಹುತೇಕ ನಗರಗಳು ಹೊಸ ಕಾಲದವು. ನಮ್ಮ ಅತಿ ದೊಡ್ಡ ನಗರಗಳಾದ ಮುಂಬೈ, ಕೋಲ್ಕತ್ತ ಮತ್ತು ಚೆನ್ನೈಯನ್ನು ನಿರ್ಮಿಸಿದ್ದು ಬ್ರಿಟಿಷರು, 300 ವರ್ಷಗಳಿಗಿಂತ ಈಚೆಗೆ. ಹೈದರಾಬಾದ್, ಸೂರತ್ ಮತ್ತು ಅಹಮದಾಬಾದ್ ನಗರಗಳು ಮೊದಲು ಹೇಳಿದ ನಗರಗಳಿಗಿಂತ ಸುಮಾರು ಇನ್ನೂರು ವರ್ಷಗಳಷ್ಟು ಹಳೆಯವು. ‘ಹಳೆಯ’ ದೆಹಲಿ, ಅಂದರೆ ಶಹಜಹಾನಾಬಾದ್‌ ನಗರವನ್ನು 400 ವರ್ಷಗಳ ಹಿಂದೆ ನಿರ್ಮಿಸಲಾಯಿತು.

ಪುರಾತನ ನಗರ ಎಂದು ಕಾಶಿಯನ್ನು ಮಾತ್ರ ಕರೆಯಬಹುದು. ಆದರೆ, ವಾಸ್ತವದಲ್ಲಿ ಬಹುಪಾಲು ಕಾಶಿ ಹೊಸದೇ ಆಗಿದೆ. ಹೋಲಿಸಿ ಹೇಳುವುದಾದರೆ, ಅಲ್ಲಿನ ಘಾಟ್‌ಗಳು ಇತ್ತೀಚಿನವು. ಅಲ್ಲಿನ ಯಾವುದೇ ರಚನೆಯು 500 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಇದೆ ಎಂದು ಗಟ್ಟಿಯಾಗಿ ಹೇಳಲು ಆಗದು.

ಇದನ್ನು ರೋಮ್ ಜೊತೆ ಹೋಲಿಸಿ ನೋಡೋಣ. ಅಂದಾಜು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ ಪ್ಯಾಂಥಿಯಾನ್ ಎನ್ನುವ ಬೃಹತ್ ಕಟ್ಟಡ ಅಲ್ಲಿ ಇಂದಿಗೂ ಗಟ್ಟಿಯಾಗಿದೆ. ರೋಮನ್ನರು ಯಾವತ್ತಿಗೂ ಸ್ಮಾರಕಗಳ ಸುತ್ತ ತಮ್ಮ ಜೀವನ ಸಾಗಿಸಿದ್ದಾರೆ. ಆಧುನಿಕ ಕಾಲದ ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ರೆಸ್ಟೊರೆಂಟ್‌ಗಳು ಬಂದಿದ್ದರೂ, ಅಲ್ಲಿನ ಜೀವನದಲ್ಲಿ ಒಂದು ಬಗೆಯ ನಿರಂತರತೆ ಇದೆ. ರೋಮ್‌ ಸುತ್ತಲಿನ ಯಾವುದೇ ಪ್ರದೇಶದ ಜನಜೀವನ ಶತಮಾನಗಳಿಂದಲೂ ಬದಲಾಗಿಲ್ಲ ಎಂಬಂತೆ ಭಾಸವಾಗುತ್ತದೆ.

ಭಾರತದಲ್ಲಿನ ಚಿತ್ರಣ ಸಂಪೂರ್ಣವಾಗಿ ಬೇರೆಯದೇ ಆಗಿದೆ. ಹೊಸ ಹೊಸ ಕಟ್ಟಡಗಳ ನಿರ್ಮಾಣ ನಡೆಯದೇ ಇರದ ಪ್ರದೇಶಗಳು ನಮ್ಮ ದೇಶದ ನಗರಗಳಲ್ಲಿ ಕಾಣಿಸುವುದು ತೀರಾ ಅಪರೂಪ. ಒಂದು ಪ್ರದೇಶದವರು ಕೆಲವು ವರ್ಷಗಳ ಕಾಲ ಹೊರಗಡೆ ವಾಸವಿದ್ದರೆ, ತಮ್ಮದೇ ಪ್ರದೇಶ ಗುರುತಿಸಲು ಸಾಧ್ಯವಿಲ್ಲದಂತೆ ಆಗಿರುತ್ತದೆ. ನನ್ನ ಜೀವನದ ಬಹುಪಾಲು ಅವಧಿಯನ್ನು ನಾನು ಕಳೆದಿದ್ದು ಸೂರತ್ ನಗರದಲ್ಲಿ. ಕೆಲವು ಸಮಯದ ಹಿಂದೆ ನಾನು ಅಲ್ಲಿಗೆ ಹೋಗಿದ್ದಾಗ, ನನ್ನದೇ ಮನೆ ತಲುಪಲು ನಾನು ಜಿಪಿಎಸ್ ಬಳಸಬೇಕಾಗಿ ಬಂತು.

ಹಾಗಾದರೆ, ಆಗಿರುವ ಬದಲಾವಣೆಯು ನಮ್ಮ ಪೊಲೀಸರ ಕೆಲಸಗಳ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ನಾನು ಹೇಳಿದ್ದು ಏಕೆ? ಆಯಾ ಪ್ರದೇಶದ ಪೊಲೀಸ್ ಠಾಣೆಗಳ ಮೂಲಕ ಹಾಗೂ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಆ ಠಾಣೆಗಳಲ್ಲಿ ಸಿದ್ಧಪಡಿಸುವ ಪಟ್ಟಿ ಆಧರಿಸಿ ಅಪರಾಧಗಳನ್ನು ನಿಯಂತ್ರಿಸುವುದು ಭಾರತದಲ್ಲಿನ ಸಾಂಪ್ರದಾಯಿಕ ಪದ್ಧತಿ. ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಭಾವಚಿತ್ರಗಳನ್ನು ಪೊಲೀಸ್ ಠಾಣೆಗಳ ಸೂಚನಾ ಫಲಕದ ಮೇಲೆ ಅಂಟಿಸಿರಲಾಗುತ್ತದೆ. ಹೊಸದಾಗಿ ಠಾಣೆಗೆ ಬರುವ ಪೊಲೀಸರು ತಮ್ಮ ಠಾಣಾ ವ್ಯಾಪ್ತಿ ಹಾಗೂ ಅಲ್ಲಿ ‘ಮಾಮೂಲಿಯಾಗಿ’ ಠಾಣೆಗೆ ಬಂದುಹೋಗುವವರ ಬಗ್ಗೆ ಮಾಹಿತಿ ಹೊಂದಿರಲಿ ಎಂಬುದು ಇದರ ಉದ್ದೇಶ. ಆದರೆ, ಭಾರತದ ನಗರಗಳಲ್ಲಿ ಇಂದು ಜನ ಉದ್ಯೋಗ ಬದಲಿಸುತ್ತಿರುವ, ನಗರದಿಂದ ನಗರಕ್ಕೆ ವಲಸೆ ಹೋಗುತ್ತಿರುವ ಹಾಗೂ ಬಾಡಿಗೆ ಮನೆ ಬದಲಿಸುತ್ತಿರುವ ಕಾರಣ ದೊಡ್ಡ ಪ್ರಮಾಣದ ಬದಲಾವಣೆ ನಡೆಯುತ್ತಿದೆ. ನಗರಗಳ ಜನ ಒಂದೇ ಕಡೆ ಇರುವುದಿಲ್ಲ, ಕಟ್ಟಡಗಳೂ ಒಂದೇ ರೀತಿಯಲ್ಲಿ ಇರುವುದಿಲ್ಲ.

ಹೀಗಿದ್ದರೂ, ಪೊಲೀಸರು ಮಾಡುವ ಕೆಲಸದ ರೀತಿಯಲ್ಲಿ ಬದಲಾವಣೆ ಆಗಿಲ್ಲ. ಸಿಸಿ ಟಿವಿ ಕ್ಯಾಮೆರಾದಂತಹ ತಂತ್ರಜ್ಞಾನದಿಂದ ಪೊಲೀಸರಿಗೆ ತುಸು ನೆರವಾಗಿದೆ ಎಂಬುದು ನಿಜ. ಈ ತಂತ್ರಜ್ಞಾನ ಕೂಡ ಪೊಲೀಸರ ನೆರವಿಗೆ ಬರಬಹುದು, ಬಾರದೆಯೂ ಇರಬಹುದು. ಆದರೆ ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ.

ಮಧ್ಯಮ ವರ್ಗದವರ ಮನೆಗಳಲ್ಲಿ ನಡೆಯುವ ಕಳ್ಳತನದ ಪ್ರಕರಣಗಳನ್ನು ಪೊಲೀಸರು ಇಂದಿಗೂ, ಮನೆಕೆಲಸದವರನ್ನು ಥಳಿಸುವ ಮೂಲಕ ಬಗೆಹರಿಸುತ್ತಿದ್ದಾರೆ. ಯಾರಾದರೂ ಒಬ್ಬರು ತಪ್ಪು ಒಪ್ಪಿಕೊಳ್ಳುವವರೆಗೆ ಅವರಿಗೆ ಹೊಡೆಯಲಾಗುತ್ತದೆ. ಕೊಲೆ ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳ ಸೂಕ್ತ ತನಿಖೆ ನಡೆಯುತ್ತಿಲ್ಲ. ಗೌರಿ ಲಂಕೇಶ್ ಹತ್ಯೆ ನಡೆದ ಸ್ಥಳದಲ್ಲಿ ಜನರಿಗೆ ಆರಾಮವಾಗಿ ಓಡಾಡಲು ಅವಕಾಶವಿತ್ತು. ಆ ಸ್ಥಳಕ್ಕೆ ಮೊದಲು ಬಂದವರು ಈ ಪರಿಸ್ಥಿತಿ ಇದ್ದಿದ್ದನ್ನು ಗಮನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೌಲ್ಯಯುತ ವಿಧಿವಿಜ್ಞಾನ ಸಾಕ್ಷ್ಯಗಳು ಉಳಿದುಕೊಳ್ಳಲು ಸಾಧ್ಯವಿಲ್ಲ.

ಪೊಲೀಸ್ ಮಾಹಿತಿದಾರರು (ಖಬ್ರಿ) ಇಲ್ಲವಾಗುತ್ತಿರುವುದು ಕೂಡ ಪೊಲೀಸರ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಅಪರಾಧ ಕೃತ್ಯಗಳ ಪರಿಧಿಯಲ್ಲಿ ನಿಂತವ ಮಾತ್ರ ಪೊಲೀಸ್ ಮಾಹಿತಿದಾರ ಆಗಬಲ್ಲ. ಈತ ಸಣ್ಣ ಪ್ರಮಾಣದಲ್ಲಿ ಅಕ್ರಮ ಕೆಲಸ ಮಾಡುತ್ತಿರುತ್ತಾನೆ. ಈತನನ್ನು ಬೆದರಿಸಿ ಅಥವಾ ಈತನಿಗೆ ಆಮಿಷ ತೋರಿಸಿ ಪೊಲೀಸರು ಮಾಹಿತಿ ಪಡೆಯುತ್ತಾರೆ. ನಿಮಗೆ ಅಥವಾ ನನಗೆ ಖಬ್ರಿ ಆಗಲು ಸಾಧ್ಯವಿಲ್ಲ. ಏಕೆಂದರೆ ನಾವು ಕ್ರಿಮಿನಲ್‌ಗಳ ಜೊತೆ ಸಂಪರ್ಕದಲ್ಲಿ ಇಲ್ಲ.

ಬಾಬ್ರಿ ಮಸೀದಿಯ ಧ್ವಂಸ, ಮುಂಬೈ ಹಾಗೂ ಸೂರತ್‌ನಲ್ಲಿ ನಡೆದ ಹಿಂಸಾಚಾರ ಹಾಗೂ ಬಾಂಬ್‌ ಸ್ಫೋಟದ ಮೂಲಕ ನಡೆದ ಪ್ರತೀಕಾರದ ದಾಳಿ ನಂತರ ಪೊಲೀಸರು ಖಬ್ರಿಗಳನ್ನು ಕಳೆದುಕೊಂಡರು. ಖಬ್ರಿಗಳಲ್ಲಿ ಬಹುತೇಕರು ಮುಸ್ಲಿಮರು. ಕೋಮು ಕಂದಕವು ಹಳೆಯ ಮಾದರಿಯ ಪೊಲೀಸ್ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡಿದೆ. ಯಾವುದೇ ಭಯೋತ್ಪಾದಕ ಕೃತ್ಯದ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮಾಧ್ಯಮಗಳ ವರದಿಗಳು ತೋರಿಸುತ್ತಿವೆ. ಆಧುನಿಕ ವಿಧಿವಿಜ್ಞಾನ ಆಧರಿಸಿದ ತನಿಖೆ ಇಲ್ಲ, ಹಳೆಯ ಮಾದರಿಯ ತನಿಖೆಯಿಂದ ಫಲಿತಾಂಶ ಸಿಗುವ ಸ್ಥಿತಿ ಇಲ್ಲ.

1996ರಲ್ಲಿ ನಾನು ವರದಿಗಾರನಾಗಿದ್ದಾಗ, ಮುಂಬೈ ಸೆಷನ್ಸ್‌ ನ್ಯಾಯಾಲಯದಲ್ಲಿ ಶ್ಯಾಮ್ ಕೇಶ್ವಾನಿ ಎನ್ನುವ ವಕೀಲರು ನನ್ನನ್ನು ಸಂಪರ್ಕಿಸಿದರು. ಇವರು, ಮಾದಕ ವಸ್ತುಗಳ ವಹಿವಾಟಿನಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿದ್ದ ಇಕ್ಬಾಲ್‌ ಮಿರ್ಚಿ ಪರ ವಕೀಲರಾಗಿದ್ದರು. ಇಕ್ಬಾಲ್‌ನನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಕರೆತರಲು ಸರ್ಕಾರ ಯತ್ನಿಸುತ್ತಿತ್ತು. ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಾದ ಮಂಡಿಸಲು ಸಿಬಿಐ ನಾಲ್ಕು ಜನರ ಒಂದು ತಂಡ ಕಳುಹಿಸಿತ್ತು.
ಅಂದಾಜು 200 ಪುಟಗಳಷ್ಟಿದ್ದ ದೋಷಾರೋಪ ಪಟ್ಟಿಯ ಒಂದು ಪ್ರತಿಯನ್ನು ಕೇಶ್ವಾನಿ ನನಗೆ ಕೊಟ್ಟರು. ನಾನು ಅದನ್ನು ಓದಿದೆ. ಕೇಶ್ವಾನಿ ಅವರ ಕಕ್ಷಿದಾರರ ಹೆಸರು ಇದ್ದಿದ್ದು ಇಡೀ ಕಡತದಲ್ಲಿ ಒಂದು ಕಡೆ ಮಾತ್ರ. ದೋಷಾರೋಪ ಪಟ್ಟಿಯ ಕೊನೆಯ ಪುಟದಲ್ಲಿ ಒಂದು ಸಾಲಿನಲ್ಲಿ ‘ಈ ಪ್ರಕರಣದಲ್ಲಿ ಇಕ್ಬಾಲ್‌ ಮೆಮನ್ ಅಲಿಯಾಸ್ ಮಿರ್ಚಿ ಕೂಡ ಬೇಕಾದವನಾಗಿದ್ದಾನೆ’ ಎಂದಿತ್ತು. ಕೇಂದ್ರ ಸರ್ಕಾರ ಸಲ್ಲಿಸುತ್ತಿದ್ದ ‘ಸಾಕ್ಷ್ಯ’ ಇಷ್ಟೇ ಆಗಿತ್ತು. ಮಿರ್ಚಿಯನ್ನು ಇಂಗ್ಲೆಂಡ್‌ನಿಂದ ಕರೆತರಲು ಆಗಲಿಲ್ಲ. ಆತ ಅಲ್ಲೇ ಇದ್ದಾನೆ.

ಇದು ಭಾರತದ ಪೊಲೀಸರ ತಪ್ಪು ಎನ್ನುವಂತಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ, ಪತ್ತೇದಾರಿಕೆ ಮೂಲಕ ಅಪರಾಧ ಕೃತ್ಯಗಳನ್ನು ಭೇದಿಸುವ ಬದಲು ಅವರು ಬ್ರಿಟಿಷ್ ಕಾಲದಲ್ಲಿ ಆರಂಭಗೊಂಡ, ಸುತ್ತಮುತ್ತಲಿನ ಕಾನೂನು - ಸುವ್ಯವಸ್ಥೆ ನೋಡಿಕೊಳ್ಳುವ ವ್ಯವಸ್ಥೆಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಜಪಾನ್‌ನಲ್ಲಿ ಶಿಕ್ಷೆಯ ಪ್ರಮಾಣ ಶೇಕಡ 95ರಷ್ಟಿದೆ. ಅಂದರೆ, ಅಪರಾಧ ಕೃತ್ಯವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಹಿಡಿದಿದ್ದಾರೆ ಅಂದರೆ ಆತನಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವುದು ಬಹುತೇಕ ಖಚಿತ. ಈ ವ್ಯವಸ್ಥೆಯ ಬಗ್ಗೆ ಕೂಡ ಟೀಕೆಗಳಿವೆ. ಅಲ್ಲಿ ಕೂಡ, ಭಾರತದಲ್ಲಿ ಇರುವಂತೆಯೇ, ತಪ್ಪೊಪ್ಪಿಗೆ ಹೇಳಿಕೆಗಳ ಮೂಲಕ ಶಿಕ್ಷೆ ಆಗುತ್ತದೆ. ಇಂತಹ ಹೇಳಿಕೆಗಳನ್ನು ದೈಹಿಕ ಹಿಂಸೆ ಮೂಲಕ ಪಡೆದುಕೊಳ್ಳಲಾಗುತ್ತದೆ. ಭಾರತದಲ್ಲಿ ಇರುವ ದೋಷಗಳು ಇವೇ ಆಗಿದ್ದರೂ, ನಮ್ಮಲ್ಲಿ ಶಿಕ್ಷೆ ಆಗುವ ಪ್ರಮಾಣ ಶೇಕಡ 50ರಷ್ಟಕ್ಕಿಂತಲೂ ಕಡಿಮೆ. ಭಾರತದಲ್ಲಿ ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿದರೂ ಬಹುತೇಕರು ಶಿಕ್ಷೆಯಿಂದ ಪಾರಾಗುತ್ತಾರೆ.

ಈ ಎಲ್ಲ ಕಾರಣಗಳಿಂದಾಗಿ, ಗೌರಿ ಲಂಕೇಶ್ ಹತ್ಯೆ ಮಾಡಿದವರಿಗೆ, ಅವರಿಗೆ ಹಣ ನೀಡಿದವರಿಗೆ ಶಿಕ್ಷೆಯಾಗದಿದ್ದರೆ ಅದರಲ್ಲಿ ನನಗೆ ಆಶ್ಚರ್ಯವಾಗುವಂಥದ್ದು ಏನೂ ಇಲ್ಲ. ಸೋಲು ಇರುವುದು ವ್ಯವಸ್ಥೆಯಲ್ಲಿ. ನಿರ್ದಿಷ್ಟ ಪ್ರಕರಣವೊಂದರಲ್ಲಿ ಎಲ್ಲವೂ ಸರಿಯಾಗಿ ಆಗುತ್ತದೆ ಎಂದು ನಿರೀಕ್ಷಿಸುವುದು ಆಶಾವಾದ ಆಗುತ್ತದೆಯೇ ವಿನಾ ವಾಸ್ತವದ ಮೌಲ್ಯಮಾಪನ ಆಗುವುದಿಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT