ರಾಜ ಧರ್ಮಾತ್ಮ. ದೇಶವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಜನರೂ ಅವನನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ಅವನಿಗೆ ಒಬ್ಬನೇ ಮಗ. ಅವನಿಗೆ ಸುಮಾರು ಹತ್ತು ವರ್ಷ. ರಾಜನ ಮಗ, ಅದರಲ್ಲೂ ಒಬ್ಬನೇ ಮಗ ಎಂಬ ಪ್ರೀತಿಯಿಂದ ಬೆಳೆಸಿದ್ದರಿಂದಲೋ ಅಥವಾ ಶ್ರೀಮಂತಿಕೆಯ ಗರ್ವದಿಂದಲೋ ಅವನು ಉದ್ಧಟನಾಗಿದ್ದ. ಹಿರಿಯರು, ದೊಡ್ಡಸ್ಥಾನದಲ್ಲಿರುವವರು ಎಂಬ ಯೋಚನೆ ಇಲ್ಲದೇ ಹೇಗಾದರೂ ಮಾತನಾಡುತ್ತಿದ್ದ. ಅವನ ಕ್ರೌರ್ಯ, ಕಠೋರತನ ಜನರ ಕೋಪಕ್ಕೆ ಕಾರಣವಾಗಿದ್ದವು.
ಅವನನ್ನು ಸರಿದಾರಿಗೆ ತರುವುದು ಹೇಗೆ ಎಂದು ತಿಳಿಯದೇ ರಾಜ ಒದ್ದಾಡುತ್ತಿದ್ದ. ಅವನು ಏನೇನೋ ಪ್ರಯೋಗಗಳನ್ನು ಮಾಡಿದರೂ ಫಲ ನೀಡಲಿಲ್ಲ. ಒಂದು ದಿನ ರಾಜ್ಯಕ್ಕೆ ಒಬ್ಬ ಸನ್ಯಾಸಿ ಬಂದ. ಅವನನ್ನು ನೋಡಿದರೆ ತುಂಬ ಗೌರವ ತುಂಬಿ ಬರುತ್ತಿತ್ತು. ಅವನ ನಡಿಗೆ ಸಿಂಹದಂತಿತ್ತು. ಅವನ ಮುಖದಲ್ಲಿ ಪ್ರಶಾಂತತೆ ತೋರುತ್ತಿತ್ತು. ಅವನಿಂದ ಪ್ರಭಾವಿತನಾದ ರಾಜ, ಅವನನ್ನು ಕಂಡು ಮಾತನಾಡಿಸಿ ತನ್ನ ಅರಮನೆಯ ತೋಟದಲ್ಲಿಯ ಮಂದಿರದಲ್ಲಿ ಉಳಿಯುವಂತೆ ನೋಡಿಕೊಂಡ.
ಒಂದು ವಾರ ಸನ್ಯಾಸಿಯೊಂದಿಗೆ ಸಮಯ ಕಳೆದ ಮೇಲೆ ರಾಜನಿಗೆ ಖಾತ್ರಿಯಾಯಿತು. ತನ್ನ ಮಗನನ್ನು ಯಾರಾದರೂ ದಾರಿಗೆ ತರುವುದಾದರೆ ಅದು ಕೇವಲ ಈ ಸನ್ಯಾಸಿಯಿಂದ ಎಂದುಕೊಂಡ. ಸನ್ಯಾಸಿಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡು ಅವನ ಸಹಾಯವನ್ನು ಕೇಳಿದ. ಸನ್ಯಾಸಿ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ. ಸನ್ಯಾಸಿ ರಾಜಕುಮಾರನನ್ನು ತನ್ನೊಡನೆ ಕರೆದುಕೊಂಡು ಅರಮನೆಯಿಂದ ಸ್ವಲ್ಪ ದೂರದಲ್ಲಿದ್ದ ಬೆಟ್ಟಕ್ಕೆ ಕರೆದುಕೊಂಡು ಹೋದ. ಅಲ್ಲಿಯೂ ರಾಜಕುಮಾರ ಉದ್ಧಟತನವನ್ನೇ ಪ್ರದರ್ಶಿಸುತ್ತಿದ್ದ.
ಒಂದು ಕಡೆಗೆ ಸನ್ಯಾಸಿ ನಿಂತುಬಿಟ್ಟ. ಅಲ್ಲಿ ನಾಲ್ಕಾರು ಪುಟ್ಟ ಸಸಿಗಳು ಕಂಡವು. ರಾಜಕುಮಾರನನ್ನು ಕರೆದು ಹೇಳಿದ, ‘ಕುಮಾರಾ, ಇಲ್ಲಿ ನೋಡು, ಎಷ್ಟು ಸುಂದರವಾದ ಸಸಿಗಳಿವೆ. ಈಗ ತಾನೇ ಹೊರಬಂದ ತಾಜಾ ಎಲೆಗಳು ಹೇಗೆ ನಳನಳಸುತ್ತಿವೆ. ಆ ಎಲೆಗಳ ಮೃದುತ್ವವನ್ನು ಗಮನಿಸು. ಅವುಗಳು ತುಂಬ ರುಚಿಯಾಗಿಯೂ ಇರಬಹುದು. ತಿಂದು ನೋಡು’. ರಾಜಕುಮಾರ ಛಕ್ಕನೇ ನಾಲ್ಕಾರು ಎಲೆಗಳನ್ನು ಕಿತ್ತು ಬಾಯಿಯಲ್ಲಿ ಹಾಕಿಕೊಂಡು ಕಚಪಚನೇ ಅಗಿದುಬಿಟ್ಟ.
ಅವು ಬೇವಿನ ಎಲೆಗಳು. ಬಾಯಿಯಲ್ಲಿ ಕಹಿ ವಿಷ ತುಂಬಿಕೊಂಡಿತು. ‘ಥೂ, ಥೂ, ಎನ್ನುತ್ತ ಒಂದೆ ಸಮನೆ ಉಗುಳಿದ. ಹತ್ತಿರದಲ್ಲಿ ಸಿಹಿ ಪದಾರ್ಥ ಯಾವುದೂ ಇಲ್ಲ. ಏನು ಮಾಡಿದರೂ ಕಹಿ ಹೋಗುತ್ತಿಲ್ಲ. ಮೊದಲೇ ಕೋಪಿಷ್ಠ ಹುಡುಗ. ಹೀಗೆ ಬಾಯಿ ಕಹಿಯಾದ ಮೇಲೆ ಅವನಿಗೆ ಆ ಸಸಿಗಳ ಬಗ್ಗೆ ದ್ವೇಷ ಉಕ್ಕಿ ಬಂತು. ಬಾಗಿ ಆ ಎಲ್ಲ ಸಸಿಗಳನ್ನು ಬೇರು ಸಮೇತ ಕಿತ್ತಿ ಹಾಕಿದ. ನಂತರ ಅವುಗಳನ್ನು ಕಾಲಿನಿಂದ ಹೊಸಕಿ ಹಾಕಿದ. ಇದನ್ನು ನೋಡುತ್ತಲೇ ಇದ್ದ ಸನ್ಯಾಸಿ, ‘ಏಕೆ ಕುಮಾರ, ಈ ಸಸಿಗಳ ಮೇಲೆ ಅಷ್ಟೊಂದು ಕೋಪ ನಿನಗೆ?’ ಎಂದು ಕೇಳಿದ.
ಅದಕ್ಕವನು, ‘ಮತ್ತೇನು ಮಾಡಬೇಕು? ಸಣ್ಣ ಸಸಿಯಾಗಿದ್ದಾಗಲೇ ಇಷ್ಟು ವಿಷಮಯವಾಗಿರುವ ಎಲೆಗಳು ಬೆಳೆದು ಮರವಾದ ಮೇಲೆ ಮತ್ತೆಷ್ಟು ಕಹಿಯಾಗಬಹುದು? ಅದಕ್ಕೇ ಮುಂದೆ ಹಾಲಾಹಲವಾಗಬಹುದಾಗಿದ್ದ ಸಸಿಯನ್ನು ಇಂದೇ ಹೊಸಕಿ ಹಾಕುವುದು ಸರಿ’ ಎಂದ.
ಆಗ ಸನ್ಯಾಸಿ ನಕ್ಕು ಹೇಳಿದ, ‘ಸಣ್ಣದಿದ್ದಾಗಲೇ ವಿಷಪೂರಿತವಾದ ಈ ಸಸಿ ದೊಡ್ಡದಾದ ಮೇಲೆ ಎಷ್ಟು ಕಹಿಯಾಗಬಹುದೆಂದು ಯೋಚಿಸಿ ನೀನು ಅದನ್ನು ಕಿತ್ತು ಹಾಕಿದೆ. ಅದೇ ರೀತಿ ನಿಮ್ಮ ದೇಶದ ಬಹುತೇಕ ಜನ ರಾಜಕುಮಾರ ಬಾಲಕನಾಗಿದ್ದಾಗಲೇ ಇಷ್ಟು ಉದ್ಧಟನಾಗಿದ್ದಾನೆ. ಕ್ರೂರನಾಗಿದ್ದಾನೆ, ಕೋಪಿಷ್ಠನಾಗಿದ್ದಾನೆ, ಮುಂದೆ ದೊಡ್ಡವನಾದ ಮೇಲೆ ಇನ್ನೆಷ್ಟು ಅನಾಹುತಗಳನ್ನು ಮಾಡುತ್ತಾನೋ ಎಂದುಕೊಂಡು ನಿನ್ನನ್ನೂ ರಾಜ್ಯದಿಂದ ಕಿತ್ತು ಹೊರಹಾಕಬಹುದಲ್ಲವೇ?’ ಬಾಲಕನಿಗೆ ಮಾತು ಅರ್ಥವಾಯಿತು.
ಅಂದಿನಿಂದ ಆತ ವಿನಮ್ರತೆಯನ್ನು ಮೈಗೂಡಿಸಲು ಪ್ರಯತ್ನಿಸತೊಡಗಿದ. ಮಕ್ಕಳಲ್ಲಿ, ಮನೆಗಳಲ್ಲಿ, ಸಮಾಜದಲ್ಲಿ ತೋರಿಬರುವ ಅಶಾಂತತೆ, ಕ್ರೌರ್ಯ, ಅಸಮಾನತೆಯನ್ನು ಪ್ರಾರಂಭದಲ್ಲೇ ಸರಿಮಾಡದಿದ್ದರೆ ಅದು ಬೆಳೆದು ಕಾಳ್ಗಿಚ್ಚಾಗಿ ವ್ಯವಸ್ಥೆಯನ್ನೇ ಆಹುತಿ ತೆಗೆದುಕೊಳ್ಳುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.