ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ ಮತ್ತು ನಮ್ಮ ಮಕ್ಕಳು...

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬಹಳ ಹಿಂದೆ ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.  ಕಾಡಿನ ಮಕ್ಕಳು ಎಂದರೆ ಸೋಲಿಗರ ಮಕ್ಕಳು ಹಾಗೂ ನಾಡ ಮಕ್ಕಳು ಎಂದರೆ ಪಟ್ಟಣದಿಂದ ಬಂದಿದ್ದ ಮಕ್ಕಳನ್ನು ಕಾಡಿನಲ್ಲಿ ಒಟ್ಟಿಗೆ ಸೇರಿಸಿ ಒಂದು ವಿಶೇಷ ಮಕ್ಕಳ ಶಿಬಿರವನ್ನು ಏರ್ಪಡಿಸಿದ್ದೆವು. ಹದವಾದ ಒಂದು ರಾಶಿ ಕೆರೆ ಮಣ್ಣನ್ನು ಹಾಕಿ ಈ ಮಣ್ಣಿನಿಂದ ನಿಮಗೆ ಇಷ್ಟವಾದ ಬೊಂಬೆಗಳನ್ನು ಮಾಡಿ ಎಂದೆವು. ಮಕ್ಕಳು ಉತ್ಸಾಹದಿಂದ ಕೆಲಸ ಪ್ರಾರಂಭಿಸಿದರು. ಹಾಗೆಯೇ ಮಕ್ಕಳ ಕಲಾಕೃತಿಗಳನ್ನು ಗಮನಿಸುತ್ತಿದ್ದ ನಮಗೆ ಕಾಡ ಮಕ್ಕಳ ಕಲಾಕೃತಿಗಳು ವೈವಿಧ್ಯಮಯವಾಗಿದ್ದುದು ಕಂಡು ಬಂತು.

 ಒಬ್ಬ ಸೋಲಿಗರ ಪೋರ ಮಾಡಿದ ಹುಲಿ ಅದ್ಭುತವಾಗಿತ್ತು. ಅವನು ಮಣ್ಣಿನ ಜೊತೆಗೆ ಹುಲಿಯ ಕಣ್ಣುಗಳನ್ನು ಮಾಡಲು ಪಕ್ಕದಲ್ಲೇ ಬೆಳೆದಿದ್ದ ಲಾಂಟಾನಾ ಗಿಡದ ಕಪ್ಪು ಹಣ್ಣುಗಳನ್ನು ಬಳಸಿದ್ದ. ಕಾಡಿನ ರಾಜ ಹುಲಿರಾಯನ ವ್ಯಘ್ರರೂಪ ಇದಾಗಿತ್ತು.  ಕೆಕ್ಕರಿಸಿ ನೋಡುವ ಕಣ್ಣುಗಳು, ಕೋರೆಹಲ್ಲುಗಳು, ಕಾಡುಕೋಣವನ್ನು ಸಾರಗವನ್ನು ಹಿಡಿಯಲೆಂದು ಸಿದ್ದವಾಗಿ ಹೊರಚಾಚಿದ ನಖಗಳು - ಹೀಗೆ ಹುಲಿಯ ಚಿತ್ರ ಇದಾಗಿತ್ತು.  ಜೂ ಗಾರ್ಡನ್‌ಗಳಲ್ಲಿ ಹುಲಿ ನೋಡಿದವರಿಗೆ ಕಾಡಿನ ಹುಲಿಯ ಚಿತ್ರ ಕಣ್ಣಿಗೆ ಕಟ್ಟುವುದುಂಟೆ? ಈ ಹುಡುಗ ಹುಲಿಯನ್ನು ಕಾಡಿನಲ್ಲಿ ನೋಡಿರಬೇಕು ಎನಿಸಿತು. ಇತರೆ ಕಾಡು ಮಕ್ಕಳು ಇದೇ ರೀತಿಯ ಬಗೆಬಗೆಯ ಆನೆ, ಕರಡಿ, ಕ್ಯಾತೆದೇವರ ದೇವಸ್ಥಾನ ಮುಂತಾದ ಅನೇಕ ಆಕೃತಿ ಮಾಡಿದ್ದರು.

ಇನ್ನು ನಮ್ಮ ನಾಡ ಮಕ್ಕಳ ಕಲಾಕೃತಿಗಳ ಕಡೆಗೆ ಕಣ್ಣು ಹಾಯಿಸಿದೆವು. ಅಲ್ಲಿ ವೈವಿಧ್ಯತೆಯ ಅಭಾವ ಎದ್ದುಕಾಣುತ್ತಿತ್ತು. ಹೊಸದಾಗಿ ಟಿ.ವಿ.ಗಳು ಮನೆಮನೆಗಳನ್ನು ಪ್ರವೇಶ ಮಾಡಿದ್ದ ಕಾಲವದು. ಹಾಗಾಗಿ ಬಹಳಷ್ಟು ಮಕ್ಕಳು ಟಿ.ವಿಗಳನ್ನು ಅದರ ಆಂಟೆನಾಗಳನ್ನು ಮಾಡಿದ್ದರು. ಮತ್ತೆ ಕೆಲವರು ವಿಮಾನ, ಬಸ್ಸು ಮುಂತಾದ ಅವರ ಸುತ್ತ ಮುತ್ತಲಿನ ಯಂತ್ರ ಜಗತ್ತನ್ನು ಕಲಾಕೃತಿಗಳ ಮೂಲಕ ತೆರೆದಿಟ್ಟಿದ್ದರು. ಈ ಮಕ್ಕಳು ಟಿ.ವಿ ಮಾಡಿದ್ದು ನಮಗೆ ನಿರಾಸೆಯಾಯಿತು.ಆಕಾರದಲ್ಲಿ ಒಂದು ಸಾಧಾರಣ ಪೆಟ್ಟಿಗೆಗಿಂತ ಹೆಚ್ಚೇನೂ ಅಲ್ಲದ ಇದಕ್ಕೆ ಮಕ್ಕಳ ಮನಸ್ಸನ್ನು ಆಮೂಲಾಗ್ರವಾಗಿ ಕೊಳ್ಳೆಹೊಡೆಯುವ ಶಕ್ತಿ ಎಲ್ಲಿಂದ ಬಂತು?

ಟಿ.ವಿ ಗಳಿಗೆ ಏಕಾತಾನತೆ (stereotype) ಯನ್ನು ಉಂಟು ಮಾಡುವ ಗುಣವಿದೆ.  ಜಾಹೀರಾತುಗಳಲ್ಲಿ ನಾವು ಇದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಒಂದು ನಿರ್ದಿಷ್ಟ ಭಾವನಾ ಸಮುಚ್ಛಯಗಳ ಸುತ್ತ ಈ ಜಾಹೀರಾತುಗಳು ಕೆಲಸ ಮಾಡುತ್ತವೆ. ಸ್ಥೂಲವಾಗಿ ಈ ಭಾವನೆಗಳು ಏನೆಂದು ಹೇಳುವುದಾದರೆ ‘ಇತರರಿಗಿಂತ ನಾನು ಮೇಲು’, ‘ಹಿಂಸೆ ಗೆಲುವಿನ ಕುರುಹು’,  ‘ಜಾಣನಾದವನು ಮಾರ್ಗ ಯಾವುದಾದರೇನು ಸದಾ ಗೆಲ್ಲುತ್ತಾನೆ’, ‘ಕೊಳ್ಳುವವನು ಜಾಣ’ ಹೀಗೆ ಜಾಹೀರಾತುಗಳು ಶ್ರೀಮಂತರಿಗೆ, ಮೋಸ ಮಾಡುವ ಶಕ್ತಿ ಇರುವವರಿಗೆ ಮಾತ್ರ ಈ ಪ್ರಪಂಚದಲ್ಲಿ ಸ್ಥಾನ ಕಲ್ಪಿಸುತ್ತದೆ. ಈ ಜಾಹೀರಾತುಗಳಲ್ಲಿ ಬಡವರು ಎಂದೂ ಯಾವ ಸಂದರ್ಭದಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಈ ಜಾಹೀರಾತು ಉದ್ಯಮದ ಹಿಂದೆ ಒಂದು ದೊಡ್ಡ ಮನೋವಿಜ್ಞಾನದ ಶಾಖೆಯೇ ಇದೆ. ಇದನ್ನು Psychographic ಎನ್ನುತ್ತಾರೆ. ಜಾಗತಿಕ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಶ್ರಿ ಸಾಮಾನ್ಯರು ಕೊಂಡು ಬಳಸಲು ಯಾವ ನಡವಳಿಕೆಗಳನ್ನು, ಯಾವ ಅಭಿರುಚಿಗಳನ್ನು ಬೆಳೆಸಿಕೊಂಡರೆ ಒಳಿತು ಎಂದು ಸಂಶೋಧನೆ ನಡೆಸಿ ಆ ಸಂಬಂಧವಾದ ಜಾಹೀರಾತುಗಳನ್ನು ರೂಪಿಸಿ ಜನಗಳ ಮನಸ್ಸನ್ನು ತನ್ನ ಅವಶ್ಯಕತೆಗೆ ತಕ್ಕಂತೆ ತಿದ್ದಿತೀಡುವ ಕೆಲಸ ಮಾಡುತ್ತವೆ.

ಈ ಜಾಹೀರಾತುಗಳನ್ನು ನಾವು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗಿ ಕಾಣುತ್ತದೆ. ಅದೇನೆಂದರೆ ಎಲ್ಲ ಜಾಹೀರಾತುಗಳು ನಮ್ಮ ಶಕ್ತಿಶಾಲಿ ಸ್ವಾವಲಂಬಿ ವ್ಯಕ್ತಿತ್ವವನ್ನು ಹೊಡೆದುರುಳಿಸುವ ಅನೇಕ ತಂತ್ರಗಳನ್ನು ಬಳಸುತ್ತವೆ. ಅವುಗಳ ಬಂಡವಾಳ ಮನುಷ್ಯನ ಭಾವುಕತೆಯ ದೌರ್ಬಲ್ಯ. ಮನುಷ್ಯನ ಮನಸ್ಸಿನಲ್ಲಿ ಸುಪ್ತವಾಗಿರುವ ಕೀಳರಿಮೆಯನ್ನೂ ಈ ಜಾಹೀರಾತುಗಳು ಚೆನ್ನಾಗಿ ಬಳಸಿಕೊಳ್ಳುತ್ತವೆ. ವೈಚಾರಿಕತೆಗೆ ಕೈಗೆಟುಕದ ಲೈಂಗಿಕತೆ ಮಿಶ್ರವಾದ ಭಾವನೆಗಳ ಮುಖಾಂತರ ತನ್ನ ಉತ್ಪನ್ನಗಳನ್ನು ಬಳಸುವವರು ಶ್ರೇಷ್ಠ ವ್ಯಕ್ತಿಗಳು ಎಂಬ ನಂಬಿಕೆಯನ್ನು ಮನಸ್ಸಿನ ಆಳಕ್ಕೆ ಬಿತ್ತುತ್ತವೆ. ಅದರಲ್ಲೂ ಹದಿಹರೆಯದ ಮಕ್ಕಳು ಹಾಗೂ ಯುವಕರು ಈ ಬಗೆಯ ಜಾಹೀರಾತುಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ.

ಜಾಹೀರಾತುಗಳು ಮೆದುಳಿನ ವೈಚಾರಿಕ ವಲಯದಿಂದ ಉಪಾಯವಾಗಿ ನುಣುಚಿಕೊಂಡು ಮೆದುಳಿನ ಭಾವನಾ ವಲಯಕ್ಕೆ ಸಂಬಂಧಪಟ್ಟ ಅಮಗ್ಡಾಲ ಅಥವಾ ಲಿಂಬಿಕ್ ಸಿಸ್ಟಂ ಎಂಬ ಭಾಗವನ್ನು ತಲುಪುತ್ತದೆ. ಇದರ ಪರಿಣಾಮವಾಗಿ ಹೆಚ್ಚು ವಿಚಾರ ವಿಶ್ಲೇಷಣೆಗಳಿಲ್ಲದೆ ಜನ ತಮ್ಮ ಸುತ್ತಮುತ್ತ ಇರುವ  ‘ಬುದ್ಧಿವಂತರ’ ರೀತಿ ನೀತಿಗಳನ್ನು ಕಲಿತು, ಅವರು ಬಳಸುವ ವಸ್ತುಗಳನ್ನು ತಾವು ಬಳಸಿ ತಮ್ಮ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಬೇಕಾಗಿದೆ. 

ಮಕ್ಕಳು ಈ ಎಲ್ಲ ವಿಸ್ಮೃತಿಗಳಿಗೆ ಸದಾ ಸಿದ್ಧವಾಗಿರುವ ಅಮಾಯಕ ಬಲಿಪಶುಗಳು. ಅದರಲ್ಲೂ ಚಿಕ್ಕ ಮಕ್ಕಳು ಜಾಹೀರಾತುಗಳಲ್ಲಿ ಬರುವ ಪ್ರಾಣಿಗಳು, ತಮಾಷೆ ಪ್ರಸಂಗಗಳನ್ನು ನೋಡಲು ಬಹಳ ಇಷ್ಟಪಡುತ್ತಾರೆ. ಜಾಹೀರಾತುಗಳಲ್ಲಿ  ಕಂಡು ಬರುವ ಘಟನಾವಳಿಗಳ ಅಸಹಜ ವೇಗ ವಾಸ್ತವ ಜಗತ್ತಿನಲ್ಲೂ ಯಥಾವತ್ತಾಗಿ ಮೂಡಿ ಬರಬೇಕೆಂದು ಮಕ್ಕಳು ಬಯಸುತ್ತಾರೆ. ಈ ಬಯಕೆ ಸುಪ್ತವಾಗಿ ಶಾಲಾ ಕಲಿಕೆಯ ಸಮಯದಲ್ಲೂ ಕೆಲಸ ಮಾಡಲು ಪ್ರಾರಂಭಿಸಿದರೆ ತಾಳ್ಮೆಯಿಂದ ಕಲಿಯಬೇಕಾದ ಪಾಠಗಳು ನೀರಸವಾಗಿ ಕಾಣಲಾರಂಭಿಸುತ್ತವೆ. ಸದಾ ಕ್ಷಿಪ್ರಗತಿಯಲ್ಲಿ ಬದಲಾಗುವ ದೃಶ್ಯ ಸರಣಿಗಳ ಗೀಳಿಗೆ ಒಳಗಾದ ಮನಸ್ಸು ವೈಚಾರಿಕತೆಯನ್ನು ಬೆಳೆಸಿಕೊಳ್ಳದಿರಬಹುದು.

ಮೆದುಳಿಗೆ ಸಂಬಂಧಪಟ್ಟ ಇತ್ತೀಚಿನ ಸಂಶೋಧನೆಗಳು ಈ ಅಂಶ ಮನುಷ್ಯ ಸಂಬಂಧಗಳನ್ನು ದೃಢಪಡಿಸುತ್ತದೆ. ಆರು ಸೆಕೆಂಡಿಗೊಮ್ಮೆ ಬದಲಾಗುವ ದೃಶ್ಯಗಳು, ಧ್ವನಿಯ ಏರಿಳಿತಗಳು ಮಕ್ಕಳ ಮನಸ್ಸನ್ನು ಒಂದು ಬಗೆಯ ಅಸ್ವಾಭಾವಿಕವಾದ ತುರ್ತು ಸ್ಥಿತಿಯಲ್ಲಿಡುತ್ತದೆ. ಬದುಕು ಸ್ನೇಹ-ಮೈತ್ರಿಗಳ ಬೀಡಲ್ಲ. ರಣರಂಗದ ಗೂಡು ಎನ್ನುವಂತೆ ಬಿಂಬಿಸುವ ಈ ಸಿನಿಮಾ ಹಾಗೂ ಟಿ.ವಿ ಮಾಧ್ಯಮಗಳು ನಮ್ಮ ಜೀವನ ದೃಷ್ಟಿಯನ್ನೇ ಬದಲಿಸಿ ಸದಾ ಕವಚ ಧರಿಸಿ, ಕತ್ತಿ ಗುರಾಣಿಗಳೊಡನೆ ಸನ್ನದ್ಧ ವಾಗಿರಬೇಕೆಂಬ ಸಂದೇಶವನ್ನು ಬಿತ್ತುತ್ತವೆ. ಮನುಷ್ಯ ಸಂಬಂಧಗಳ ಮೇಲೆ ಇದು ಬೀರುವ ಪರಿಣಾಮವನ್ನು ನೀವೇ ಊಹಿಸಬಹುದು!

 ಇಂದು ನಾವು ಕಾಣುವ ಶಾಲೆಯೊಳಗಿನ ಹಿಂಸಾ ಪ್ರಕರಣಗಳಿಗೆ ನಮ್ಮ ಮಾಧ್ಯಮಗಳನ್ನೇ ಹೊಣೆ ಮಾಡಬೇಕು. ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುವ ಹಿಂಸೆಗಳು ಇಂದು ನಿಜ ಜೀವನದಲ್ಲಿ ಸಾಕಾರಗೊಳ್ಳುತ್ತಿರುವ ಸತ್ಯವನ್ನು ಯಾರೂ ನಿರಾಕರಿಸಲಾರರು. ಅಮೆರಿಕನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಈ ಬಗ್ಗೆ 1950 ರಿಂದಲೂ ವೈಜ್ಞಾನಿಕ ಪುರಾವೆಗಳನ್ನು ಒದಗಿಸುತ್ತಲೇ ಇದೆ. ಆದರೆ ಮಾಧ್ಯಮದವರು ಇದಕ್ಕೆ ಕಿವಿಗೊಡುತ್ತಿಲ್ಲ. ಇಂದು ಈ ಸಮಸ್ಯೆ ಕೇವಲ ಅಮೆರಿಕಾ ಮಕ್ಕಳ ಸಮಸ್ಯೆಯಲ್ಲ. ದೆಹಲಿಯ ಗೋರೆಗಾಂನ ಅಂತರರಾಷ್ಟ್ರೀಯ ಶಾಲೆಯಲ್ಲಿ ನಡೆದ ಸಿನಿಮೀಯ ಶೂಟಿಂಗ್ ಪ್ರಕರಣ ಇಡೀ ಭಾರತವನ್ನೇ ಬೆಚ್ಚಿ ಬೀಳುವಂತೆ ಮಾಡಿತು.

ಸತ್ತ ನತದೃಷ್ಟ ಬಾಲಕ ಅಭಿಷೇಕ್ ತ್ಯಾಗಿ 8ನೇ ತರಗತಿಯಲ್ಲಿ ಓದುತ್ತಿದ್ದ. ಅವನ ಇಬ್ಬರು ಸಹಪಾಠಿಗಳು ಅಭಿಷೇಕ್‌ನನ್ನು ಸಾಯಿಸಿ ಬಿಡಬೇಕೆಂದು ಸಂಚು ರೂಪಿಸಿ ಅಪ್ಪನ ಪಿಸ್ತೂಲನ್ನು ಕಾಲು ಚೀಲದಲ್ಲಿ ಬಚ್ಚಿಟ್ಟುಕೊಂಡು ಶಾಲೆಗೆ ಬಂದರು.ಅದನ್ನು ಶಾಲೆಯ ಶೌಚಾಲಯದಲ್ಲಿ ಮಧ್ಯಾಹ್ನದವರೆಗೆ ಬಚ್ಚಿಟ್ಟಿದ್ದು ನಂತರ ಅಭಿಷೇಕ್‌ನ ತಲೆ ಹಾಗೂ ಎದೆಗೆ ಐದು ಗುಂಡು ಹಾರಿಸಿ ಸಾಯಿಸಿಬಿಟ್ಟರು. ಈ ಇಬ್ಬರೂ ಹದಿಮೂರು ಹದಿನಾಲ್ಕು ವರ್ಷದ ಅಭಿಷೇಕ್‌ನ ಸಹಪಾಠಿಗಳೇ. ಈ ಭೀಕರ ಕೃತ್ಯ ಕೊಲೆಗಾರ ಮಕ್ಕಳಿಗೆ ಸಹಜವಾದ, ನ್ಯಾಯ ಸಮ್ಮತವಾದ ಕ್ರಿಯೆಯಾಗಿ ಕಂಡಿತು. ಕೇಳಿದಾಗ ತಾವು ಮಾಡಿದ ಕೊಲೆಯನ್ನು ಯಾವುದೇ ಅಳುಕಿಲ್ಲದೆ ಸಮರ್ಥಿಸಿಕೊಂಡರು.  ‘ಅಭಿಷೇಕ ದಾದಾಗಿರಿ ಮಾಡುತ್ತಿದ್ದ, ನಮ್ಮನ್ನು ಸಾಯಿಸುವುದಾಗಿ ಹೇಳಿದ್ದ,  ಆದ್ದರಿಂದ ಅವನನ್ನು ನಾವೇ ಮೊದಲು ಸಾಯಿಸಿಬಿಟ್ಟೆವು’ ಎಂದರು. ಈ ಕೊಲೆಯ ಸಂಚಿನ ವಿವರ ಗಮನಿಸಿದರೆ ‘ಗಾಡ್‌ಫಾದರ್’ ಸಿನಿಮಾದಿಂದ ಹಿಡಿದು ಇದೇ ಧಾಟಿಯ ಸಂಚು ಅನೇಕಾನೇಕ ಇಂಗ್ಲಿಷ್ ಹಾಗೂ ಹಿಂದಿ ಸಿನಿಮಾಗಳಲ್ಲಿ ಪುನಾರಾವರ್ತನೆ ಗೊಳ್ಳುವುದನ್ನು ನೋಡುತ್ತೇವೆ.

ಈ ಸಂದರ್ಭದಲ್ಲಿ ವನವಾಸದಲ್ಲಿದ್ದ ಸೀತೆ ರಾಮನಿಗೆ ಬುದ್ಧಿವಾದರೂಪದಲ್ಲಿ ಹೇಳಿದ ಕಥೆಯ ನೆನಪಾಗುತ್ತದೆ. ಸೀತೆಗೆ ಶಸ್ತ್ರಾಸ್ತ್ರಗಳ ಸಹವಾಸ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಕಥೆ ಹೀಗಿದೆ:  ‘ಒಬ್ಬ ಋಷಿ ಉಗ್ರ ತಪಸ್ಸನ್ನು ಕೈಗೊಂಡಿದ್ದ. ಇವನು ಹೀಗೆ ತಪಸ್ಸು ಮಾಡಿ ಎತ್ತರಕ್ಕೆ ಬೆಳೆದರೆ ತನ್ನ ಇಂದ್ರ ಪದವಿಗೆ ಸಂಚಕಾರ ಬಂದೀತೆಂದು ಹೆದರಿದ ಇಂದ್ರ ಒಂದು ಕುಟಿಲೋಪಾಯ ಮಾಡಿದ. ತನ್ನ ಬಳಿ ಒಂದು ಅಮೂಲ್ಯವಾದ ಖಡ್ಗ ಇರುವುದಾಗಿ, ತಾನು ಕಾರ್ಯನಿಮಿತ್ತ ಎಲ್ಲೋ ಹೋಗುತ್ತಿರುವುದರಿಂದ ಈ ಖಡ್ಗವನ್ನು ಋಷಿಯ ಕುಟೀರದಲ್ಲೇ ಇಟ್ಟು ಹೋಗುವುದಾಗಿ ವಿನಂತಿಸಿಕೊಂಡ. ಋಷಿ ಒಪ್ಪಿಕೊಂಡ. ಕುಟೀರದ ಮೂಲೆಯಲ್ಲಿದ್ದ ಖಡ್ಗ ಏಕೋ ಏನೋ ಋಷಿಯ ಮನಸ್ಸಿನಲ್ಲಿ ಕುತೂಹಲ ಕೆರಳಿಸಿತು. ಖಡ್ಗದಿಂದ ಮೊದಮೊದಲು ಗಿಡಬಳ್ಳಿ ಕತ್ತರಿಸುತ್ತಿದ್ದ ಋಷಿ ಕೊನೆಗೆ ಹಿಂಸಾ ಕಾರ್ಯಕ್ಕೆ ಇಳಿದುಬಿಟ್ಟ.  ತಪಸ್ಸನ್ನು ಮರೆತ. ಹೀಗೆ ಶಸ್ತ್ರಾಸ್ತ್ರಗಳು ಸಮೀಪದಲ್ಲಿದ್ದರೆ ಸಾಕು ಹಿಂಸೆ ಹುಟ್ಟುತ್ತದೆ.?

ಒಂದು ಸಮೀಕ್ಷೆಯ ಪ್ರಕಾರ 12 ವರ್ಷ ವಯಸ್ಸಾಗುವ ವೇಳೆಗೆ ಮಕ್ಕಳು ಟಿ.ವಿ.ಗಳಲ್ಲಿ ಸರಾಸರಿ 8000 ಕೊಲೆ ದೃಶ್ಯಗಳನ್ನು ಮತ್ತು ಒಂದು ಲಕ್ಷ ಹಿಂಸೆಯ ದೃಶ್ಯಗಳನ್ನು ನೋಡಿರುತ್ತಾರೆ. ಹೀಗೆ ಹಿಂಸಾ ಪ್ರಧಾನವಾದ, ಹಿಂಸೆಯನ್ನು ವೈಭವೀಕರಿಸುವ ವಾತಾವರಣದಿಂದಾಗಿ ಮಕ್ಕಳ ಮನಸ್ಸು ಹಿಂಸೆಯನ್ನು ಸಹಜವೋ ಎಂಬಂತೆ ಸ್ವೀಕರಿಸುತ್ತದೆ. ಇದರಿಂದಾಗಿ ಎಲ್ಲಾ ಮಕ್ಕಳು ಹಿಂಸಾಕೃತ್ಯಕ್ಕೆ ಇಳಿಯದಿದ್ದರೂ ಈ ಹಿಂಸಾ ಸಂಸ್ಕಾರ ಮನುಷ್ಯ ಸಂಬಂಧಗಳನ್ನು ಕೆಡಿಸುವುದಂತೂ ನಿಸ್ಸಂಶಯ.ಇತ್ತೀಚಿನ ಧಾರಾವಾಹಿಗಳಲ್ಲಿ ಉದ್ದೇಶಪೂರ್ವಕವಾಗಿ ಸ್ತ್ರೀಯರನ್ನು ವಿಲನ್‌ಗಳಂತೆ ತೋರಿಸುತ್ತಿದ್ದಾರೆ. ಈ ಪ್ರಯೋಗಗಳಿಗೆ ಅಪೇಕ್ಷಿತ ಸ್ತ್ರೀ ಗುಣಗಳಿಗಿಂತ ತಮ್ಮ ಪಾತ್ರಗಳು ಭಿನ್ನವಾಗಿರಬೇಕೆಂಬ ಉದ್ದೇಶ ಬಿಟ್ಟರೆ ಬೇರಾವ ಘನ ಉದ್ದೇಶವೂ ಇಲ್ಲ. ಆದರೆ ನಿಜ ಜೀವನದಲ್ಲಿ ಇದು ಮನುಷ್ಯ ಸಂಬಂಧಗಳ ಅನೇಕ ಅಹಿತಕರ ಸಾಧ್ಯತೆಗಳನ್ನು ತೆರೆದಿಡುತ್ತವೆ. 

ಖಾಸಗಿ ಟಿ.ವಿ ಚಾನಲ್‌ಗಳು ಶೇಕಡ 30 ಭಾಗ ತಮ್ಮ ಪ್ರಸಾರದ ವೇಳೆಯನ್ನು ಜಾಹೀರಾತುಗಳಿಗೆ ಮೀಸಲಾಗಿಡುವುದು ಅನಿವಾರ್ಯ. ಈ ಜಾಹೀರಾತುಗಳು ಕೊಳ್ಳುಬಾಕ ಸಂಸ್ಕೃತಿಯನ್ನು ಬಿತ್ತುವುದಲ್ಲದೆ ನಮ್ಮ ಆಹಾರ ಪದ್ದತಿಯನ್ನು ಬದಲಿಸುತ್ತಿವೆ.  ಒಟ್ಟಿನಲ್ಲಿ ಟಿ.ವಿಗಳಿಂದ ಮಕ್ಕಳನ್ನು ರಕ್ಷಿಸುವುದು ಬಹಳ ಮುಖ್ಯ. ತಂದೆ ತಾಯಿಯರಿಗೆ ಅಥವಾ ಪೋಷಕರಿಗೆ ಶಿಸ್ತು ಇಲ್ಲದೆ ಇದ್ದಾಗ ಅದನ್ನು ಮಕ್ಕಳ ಮೇಲೆ ಹೇರಲು ಸಾಧ್ಯವಿಲ್ಲ. ದೊಡ್ಡವರು ಸಹ ಟಿ.ವಿ ಗೀಳಿನಿಂದ ಪಾರಾಗಿ ಮನರಂಜನೆಯ ಅನೇಕ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಪುಸ್ತಕ ಪ್ರೀತಿಯನ್ನು ಬೆಳೆಸುವುದು, ಕ್ರೀಡೆಗಳು, ತರಕಾರಿ ತೋಟ, ಹೂತೋಟ, ಚಾರಣ ಹೀಗೆ ಅನೇಕ ಚಟುವಟಿಕೆಗಳ ಮೂಲಕ ನಾವು ನಮ್ಮ ಮಕ್ಕಳ ಟಿ.ವಿ ಗೀಳನ್ನು ನಿವಾರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT