ಮಹಾಭಾರತದ ರಚಯಿತರಾದ ವ್ಯಾಸರು ಈ ಸಂಕೀರ್ಣ ರಚನೆಯಲ್ಲಿ ತಮ್ಮನ್ನೇ ತಾವು ತೀವ್ರವಾದ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆನ್ನಿಸುತ್ತದೆ. ತನ್ನ ರಚನೆಯಲ್ಲಿ ಯಾವ ಪಾತ್ರವನ್ನು ಪರೀಕ್ಷೆಗೆ ಒಡ್ಡಿದರೂ ಅದು ಆ ಪಾತ್ರವನ್ನು ರೂಪಿಸಿದ ಕವಿಯೇ ತನ್ನನ್ನು ಪರೀಕ್ಷೆಗೆ ಒಡ್ಡಿಕೊಂಡಂತೆ ಎನ್ನುವ ಮಾತು ಬೇರೆ. ರಾಮಾಯಣದಲ್ಲಿ ಬರುವ ವಾಲಿವಧೆಯ ಪ್ರಸಂಗವಾಗಲೀ, ಸೀತೆಯ ಅಗ್ನಿಪರೀಕ್ಷೆ ಮತ್ತು ಉತ್ತರಕಾಂಡದ ಸೀತಾಪರಿತ್ಯಾಗದ ಸಂದರ್ಭಗಳಾಗಲೀ ಅವು ಕವಿ ವಾಲ್ಮೀಕಿ ತನ್ನೊಳಗೆ ಗಾಢವಾಗಿ ಅನುಭವಿಸಿದ ಸಂಕಟಗಳೇ. ಅಲ್ಲದೆ ಒಂದೊಂದು ಪಾತ್ರವೂ ಪಡುವ ಸಂಕಟಕ್ಕಿಂತ ನಿಜವಾದ ಕವಿ ಮತ್ತು ಸಹೃದಯರು ಪಡುವ ಸಂಕಟ ಹೆಚ್ಚು ಆಳವಾದ್ದು. ಸೀತೆಯನ್ನು ಸಂಕಟಕ್ಕೆ ದೂಡುವಲ್ಲಿ ಹಾಗೆ ದೂಡಿದ ರಾಮನ ಸಂಕಟವನ್ನೂ ಕವಿ ತಾನು ಪ್ರಾಮಾಣಿಕವಾಗಿ ಅನುಭವಿಸಬೇಕಲ್ಲ! ಪಾತ್ರಗಳ ಪರ–ವಿರೋಧಗಳ ಮಾತು ಸಾಮಾಜಿಕರ ಮನಸ್ಸಿನ ಹೇಳಿಕೆಯಾಗಿದೆ ಮತ್ತು ಈ ಸಾಮಾಜಿಕ ಮನಸ್ಸಿನ ಜೊತೆಗೂ ಕವಿ ತಾನು ಒಡನಾಡಬೇಕಿದೆ. ನಾಯಕನಿಂದ ಪರಿತ್ಯಕ್ತಳಾದ ತನ್ನ ಕಾವ್ಯದ ಮಹಾನಾಯಕಿಯನ್ನು ತಾನೇ ತನ್ನ ಆಶ್ರಮದಲ್ಲಿ ಪೋಷಿಸಬೇಕಾದ ಸಂದರ್ಭವನ್ನು ವಾಲ್ಮೀಕಿ, ಕಾವ್ಯದೊಳಗಡೆಯೇ ಉಂಟು ಮಾಡಿಕೊಂಡದ್ದು – ಅಪೂರ್ವವಾದ ಕಾವ್ಯ ಸತ್ಯವೊಂದನ್ನು ಸೂಚಿಸುತ್ತದೆ.
ಅದೆಂದರೆ: ರಾಮನು ಸೀತೆಯನ್ನು ಬಿಡಬಹುದು, ನಾಯಕನು ತ್ಯಾಗ ಮಾಡಬಹುದು – ಆದರೆ ಕವಿ ಸೀತೆಯನ್ನು ಬಿಡುವಂತಿಲ್ಲ. ಕವಿ, ಯಾರನ್ನೂ ಯಾವುದನ್ನೂ ಬಿಡುವಂತಿಲ್ಲ. ಕವಿ ತನ್ನ ಸೃಷ್ಟಿಯನ್ನು ಪೋಷಿಸಲೇಬೇಕು. ಸ್ವಯಂಕವಿಯಾಗಿ ಈ ಸೂಕ್ಷ್ಮವನ್ನು ಚೆನ್ನಾಗಿ ಬಲ್ಲ ಕಾಳಿದಾಸ ತನ್ನ ‘ರಘುವಂಶ’ದಲ್ಲಿ ಹಕ್ಕಿಯ ಅಳಲಿಗೆ ಮಿಡಿದು ಕಾವ್ಯವನ್ನೇ ರಚಿಸಿದ ಕವಿಗೆ ಸೀತೆಯ ಅಳಲು ಕೇಳದಿರುತ್ತದೆಯೆ – ‘ಶ್ಲೋಕತ್ತ್ವಮಾ ಪದ್ಯತ ಯಸ್ಯ ಶೋಕಃ’ ಎನ್ನುತ್ತಾನೆ. ಒಳಗಿನ ದುಃಖವನ್ನೇ ಹಾಡುಗಬ್ಬವಾಗಿ ಹೊಮ್ಮಿಸಿದ ಕವಿ, ಸೀತೆಯ ಅಳಲನ್ನು ಕೇಳಿಯೂ ಕೇಳದಂತೆ ಕಾವ್ಯವನ್ನು ಮುಂದುವರೆಸಿದ್ದರೆ ಅದು ಕಾವ್ಯದ ಒಳಗಿನ ಊನವಾಗಿ ಬಿಡುತ್ತಿತ್ತು; ಹೊರಗಿನ ಊನ ಮಾತ್ರವಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.