ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ಈ ವರ್ಷದ ಸಮಾವೇಶ ಈಗಾಗಲೇ ಕೊನೆಗೊಂಡಿದೆ. ವಿಶ್ವ ಆರ್ಥಿಕತೆಯ ನಾಡಿಮಿಡಿತ ಅರಿಯಲು ಮತ್ತು ಜಾಗತಿಕ ಮುಖಂಡರ ಅಭಿಪ್ರಾಯ ಆಲಿಸಲು ಇದೊಂದು ಸದವಕಾಶವಾಗಿತ್ತು. ಈ ಬಾರಿಯ ಸಮಾವೇಶದಲ್ಲಿ ಭಾರತದ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾಯಿತು. ಈ ಹಿಂದಿನ ಕೆಲವು ವರ್ಷಗಳಲ್ಲಿ ವ್ಯಕ್ತವಾದ ಟೀಕೆ - ಟಿಪ್ಪಣಿಗಳಿಗಿಂತ ಭಿನ್ನವಾದ ಅನಿಸಿಕೆಯೂ ಕೇಳಿ ಬಂದಿತು.
ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಸ್ವಿಟ್ಜರ್ಲೆಂಡ್ ಮೂಲದ ಲಾಭಯೇತರ ಆರ್ಥಿಕ ಸಂಘಟನೆಯಾಗಿದೆ. ಜರ್ಮನಿಯಲ್ಲಿ ಜನಿಸಿದ ಬಿಸಿನೆಸ್ ಸ್ಕೂಲ್ ಪ್ರಾಧ್ಯಾಪಕ ಕ್ಲಾಸ್ ಶ್ವಾಬ್ ಅವರು ಈ ವೇದಿಕೆಯ ಸ್ಥಾಪಕರಾಗಿದ್ದಾರೆ. ವಿವಿಧ ದೇಶಗಳ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಚರ್ಚೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ವೇದಿಕೆಯಾಗಿದೆ. ಜಾಗತಿಕ ಮುಖಂಡರು ಮತ್ತು ಚಿಂತಕರು ಜಾಗತಿಕ ಅರ್ಥ ವ್ಯವಸ್ಥೆಯನ್ನು ಕಾಡುತ್ತಿರುವ ಹತ್ತು - ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ.
ಹಲವು ದಶಕಗಳ ಅವಧಿಯಲ್ಲಿ ಈ ವೇದಿಕೆಯಲ್ಲಿ ಆರ್ಥಿಕ ವಿಚಾರಗಳ ಬಗ್ಗೆಯೇ ಗಂಭೀರ ಸ್ವರೂಪದ ಚರ್ಚೆ ನಡೆಯುತ್ತ ಬಂದಿದೆ. ವರ್ಷಕ್ಕೊಮ್ಮೆ ನಡೆಯುವ ಈ ಸಮಾವೇಶಕ್ಕೆ ತುಂಬ ಮಹತ್ವವೂ ಒದಗಿದೆ.
ಸಮಾವೇಶದಲ್ಲಿ ವಿಶ್ವದ ರಾಜಕೀಯ, ಉದ್ದಿಮೆ ವಲಯದ ಮುಂಚೂಣಿ ಮುಖಂಡರು, ಬುದ್ಧಿಜೀವಿಗಳು, ಅಭಿಪ್ರಾಯ ರೂಪಿಸುವವರು ಮತ್ತು ಪತ್ರಕರ್ತರು ಒಳಗೊಂಡಂತೆ ಅಂದಾಜು 2,000ದಷ್ಟು ಪ್ರತಿನಿಧಿಗಳು ಭಾಗವಹಿಸುತ್ತಾರೆ. ಇವರೆಲ್ಲ ಒಂದೆಡೆ ಸೇರಿ ಹಲವಾರು ಸವಾಲುಗಳನ್ನು ಚರ್ಚಿಸಿ, ಕಾರ್ಯಸಾಧ್ಯವಾದ ಪರಿಹಾರಗಳನ್ನು ಸೂಚಿಸುತ್ತಾರೆ.
ವಿಶ್ವದ ಮುಖಂಡರು ತಮ್ಮೆಲ್ಲ ಚಿಂತನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು, ಬಾಂಧವ್ಯ ವೃದ್ಧಿಸಿಕೊಳ್ಳಲೂ ಈ ಸಮಾವೇಶವು ಅಪೂರ್ವ ಅವಕಾಶ ಒದಗಿಸಿಕೊಡುತ್ತದೆ. ಅನೇಕ ದೇಶಗಳು ನೇರ ಬಂಡವಾಳ ಹೂಡಿಕೆ ಉತ್ತೇಜಿಸಲೂ ಸಮಾವೇಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತವೆ. ವಿಶ್ವದಾದ್ಯಂತ ಮಾಧ್ಯಮಗಳ ಸಂಪಾದಕರು ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂಪಕರು ಕೂಡ ಭಾಗವಹಿಸುತ್ತಾರೆ.
ಈ ಪ್ರತಿಷ್ಠಿತ ವೇದಿಕೆಯ ಸದಸ್ಯತ್ವವು ಕೂಡ ಸಂಘಟಕರ ಆಹ್ವಾನದ ಮೇರೆಗೆ ದೊರೆಯುತ್ತದೆ. ವರ್ಷಕ್ಕೆ 5 ಶತಕೋಟಿ ಡಾಲರ್ಗಳಷ್ಟು (₨ 30 ಸಾವಿರ ಕೋಟಿ) ವರಮಾನ ಇರುವ ಉದ್ದಿಮೆ ಸಂಸ್ಥೆಗಳ ಮುಖ್ಯಸ್ಥರಿಗೆ ಮಾತ್ರ ಸದಸ್ಯತ್ವ ನೀಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಒಂದು ಸಾವಿರ ಪ್ರತಿನಿಧಿಗಳು ಈ ವೇದಿಕೆಗೆ ಅಗತ್ಯವಾದ ಹಣಕಾಸು ನೆರವು ಒದಗಿಸುತ್ತಾರೆ. ಇವರು ಸಮಾವೇಶದಲ್ಲಿ ವಿಶೇಷ ಹಕ್ಕುಬಾಧ್ಯತೆಗಳಿಗೆ ಪಾತ್ರರಾಗುತ್ತಾರೆ. ವೇದಿಕೆಯು ಪ್ರತಿ ಬೇಸಿಗೆಯಲ್ಲಿ ಚೀನಾದಲ್ಲಿ ಸಮಾವೇಶ ಸಂಘಟಿಸಿದರೂ, ದಾವೋಸ್ನಲ್ಲಿ ನಡೆಯುವ ಚಳಿಗಾಲದ ಸಮಾವೇಶವು ಗರಿಷ್ಠ ಗಮನ ಸೆಳೆಯುತ್ತದೆ.
ಜಾಗತಿಕ ಮುಖಂಡರು ಪರಸ್ಪರ ನಡೆಸುವ ಚರ್ಚೆಯನ್ನು ವಿಶ್ವ ಉದ್ಯಮ ಸಮುದಾಯವು ಆಸಕ್ತಿಯಿಂದ ಆಲಿಸುತ್ತದೆ. ಸಮಾವೇಶದಲ್ಲಿ ಭಾಗವಹಿಸುವ ಉದ್ಯಮ ದಿಗ್ಗಜರು, ಜಾಗತಿಕ ಸರಕು ಮತ್ತು ಸೇವೆಗಳ ಒಟ್ಟು ಉತ್ಪಾದನೆಯ (ಜಿಡಿಪಿ) ಶೇ 25ರಷ್ಟನ್ನು ನಿಯಂತ್ರಿಸುತ್ತಾರೆ. ಪ್ರಾದೇಶಿಕ ಸಮಾವೇಶ, ಸಂಶೋಧನಾ ಯೋಜನೆ, ವಾರ್ಷಿಕ ಪ್ರಶಸ್ತಿ ಮತ್ತಿತರ ಕಾರ್ಯಕ್ರಮಗಳಿಗೂ ಈ ಸಮಾವೇಶವು ಚಾಲನೆ ನೀಡುತ್ತದೆ.
ವಿಶ್ವ ಆರ್ಥಿಕ ವೇದಿಕೆಯ ಈ ಸಾಂಪ್ರದಾಯಿಕ ಜಾಗತೀಕರಣದ ಮಾದರಿಯನ್ನು ಅನೇಕ ಟೀಕಾಕಾರರು ವಿರೋಧಿಸುತ್ತಲೇ ಬಂದಿದ್ದಾರೆ. ಸಮಾವೇಶ ವಿರೋಧಿಸಿ ದಾವೋಸ್ನಲ್ಲಿ ಪ್ರತಿಭಟನೆಗಳು ನಡೆಯುವುದೂ ಸಾಮಾನ್ಯ ದೃಶ್ಯವಾಗಿರುತ್ತದೆ.
ವಿಶ್ವ ಆರ್ಥಿಕ ವೇದಿಕೆಯ ಖ್ಯಾತಿಯ ಫಲವಾಗಿ ಕೆಲ ಸಮಾಜ ವಿಜ್ಞಾನಿಗಳು, ಗಣ್ಯ, ಸಿರಿವಂತ ಮತ್ತು ಜಾಗತಿಕ ಆರ್ಥಿಕತೆ ಬಗ್ಗೆ ತೀವ್ರ ಕುತೂಹಲ ತಳೆದಿರುವವರನ್ನು ‘ದಾವೋಸ್ ವ್ಯಕ್ತಿ’ ಎಂಬ ವಿಶೇಷ ಹೆಸರಿನಿಂದ ಕರೆಯುವುದನ್ನೂ ರೂಢಿಗೆ ತಂದಿದ್ದಾರೆ.
ಕಳೆದ ದಶಕದ ಕೊನೆಯ ಭಾಗದಲ್ಲಿ ಭಾರತವು ದಾವೋಸ್ ಸಮಾವೇಶದಲ್ಲಿ ಎಲ್ಲರ ಅಚ್ಚುಮೆಚ್ಚಿನ ದೇಶವಾಗಿ ಗಮನ ಸೆಳೆದಿತ್ತು. ಭಾರತವು ಕೆಲವೇ ವರ್ಷಗಳಲ್ಲಿ ಜಾಗತಿಕ ಸರ್ವಶಕ್ತ ರಾಷ್ಟ್ರವಾಗಿ ಚೀನಾಕ್ಕೆ ಸರಿಸಟಿಯಾಗಿ ಹೊರ ಹೊಮ್ಮುವ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದರು. ನಂತರದ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಕೆಲಮಟ್ಟಿಗೆ ಕಳಾಹೀನವಾಯಿತು. ಕಳೆದ ಹಲವು ವರ್ಷಗಳಲ್ಲಿ ಕಳಪೆ ಆರ್ಥಿಕ ಸಾಧನೆಯ ಫಲವಾಗಿ ಭಾರತದ ಪ್ರತಿಷ್ಠೆಗೆ ತೀವ್ರ ಹಿನ್ನಡೆ ಉಂಟಾಯಿತು. ಕೇಂದ್ರದಲ್ಲಿನ ಆಡಳಿತಾರೂಢ ‘ಯುಪಿಎ-–2’ ಸರ್ಕಾರದ ಅನೇಕ ಹಗರಣಗಳು ಬಯಲಿಗೆ ಬರುತ್ತಿದ್ದಂತೆ ದೇಶದ ಪ್ರತಿಷ್ಠೆ ಇನ್ನಷ್ಟು ಮಣ್ಣು ಪಾಲಾಯಿತು. ತೆರಿಗೆ ಕಾಯ್ದೆ ತಿದ್ದುಪಡಿಗಳನ್ನು ಪೂರ್ವಾನ್ವಯಗೊಳಿಸಿದ ಕ್ರಮದಿಂದ ಉದ್ದಿಮೆ ವಹಿವಾಟಿನಲ್ಲಿ ಕಂಡು ಬಂದ ಅನಿಶ್ಚಿತತೆಯು ಬೆಂಕಿಗೆ ತುಪ್ಪ ಸುರಿದಂತಾಯಿತು.
ಹೊಸ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರದ ನಿರಾಸಕ್ತಿ ಫಲವಾಗಿ ಭಾರತದ ಸ್ಥಾನಮಾನವು ಜಾಗತಿಕ ಆರ್ಥಿಕ ಭೂಪಟದಲ್ಲಿ ಇನ್ನಷ್ಟು ಮಸುಕಾಯಿತು. ದಾವೋಸ್ ಸಮುದಾಯವು ಕೂಡ ಇದಕ್ಕೆ ತ್ವರಿತವಾಗಿ ಸ್ಪಂದಿಸಿ ಭಾರತವನ್ನು ಮೂಲೆಗುಂಪು ಮಾಡಿತು.
2014ನೇ ವರ್ಷದ ಆರಂಭದಲ್ಲಿ ಬದಲಾವಣೆ ಗಾಳಿ ಬೇರೆ ದಿಕ್ಕಿನಲ್ಲಿ ಬೀಸಲಾರಂಭಿಸಿದೆ. ಈ ಬಾರಿಯ ಸಮಾವೇಶದಲ್ಲಿ ಭಾರತದ ಬಗ್ಗೆ ಮತ್ತೆ ಗಂಭೀರ ಚರ್ಚೆ ನಡೆಯಿತು.
ಕೆಲ ಆರ್ಥಿಕ ತಜ್ಞರು ಭಾರತದತ್ತ ಮತ್ತೆ ಆಶಾವಾದದಿಂದ ನೋಡತೊಡಗಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ಪ್ರಮುಖ ಸುದ್ದಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ, ಖ್ಯಾತ ಆರ್ಥಿಕತಜ್ಞ ಟಾಮ್ ಫ್ರೀಡ್ಮನ್, ಬದಲಾವಣೆಯ ಹೊಸ ನೀರು ಮತ್ತು ತೀವ್ರ ಸ್ವರೂಪದ ಆರ್ಥಿಕ ಚಟುವಟಿಕೆಗಳು ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುವ ಯುವ ಜನಾಂಗಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಿಕೊಡಲಿದ್ದು, ಅದರ ಲಾಭಗಳು ಅಪಾರ ಪ್ರಮಾಣದಲ್ಲಿ ದೊರೆಯಲಿವೆ ಎಂದು ಬಣ್ಣಿಸಿದ್ದಾರೆ.
ಭಾರತವು ಇತ್ತೀಚೆಗೆ ಎದುರಿಸಿದ ಅನೇಕ ಸವಾಲುಗಳು ಇತರ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬಂದಿಲ್ಲ. ಈ ಸವಾಲುಗಳನ್ನೆಲ್ಲ ಭಾರತ ಸಮರ್ಥವಾಗಿ ಎದುರಿಸುತ್ತಲೇ ಬಂದು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿದೆ. ಭಾರತೀಯರು ಸ್ವಯಂ ವಿಮರ್ಶಾಗುಣ ಹೊಂದಿದವರಾಗಿದ್ದು, ಅದರಿಂದ ವಿಷಣ್ಣ ಭಾವವು ತಕ್ಷಣಕ್ಕೆ ಎಲ್ಲೆಡೆ ಪಸರಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಇನ್ನೊಬ್ಬ ಆರ್ಥಿಕ ತಜ್ಞರೊಬ್ಬರು, ಭಾರತೀಯರಲ್ಲಿ ಇರುವ ಇಂತಹ ಎಚ್ಚರಿಕೆಯ ಪ್ರವೃತ್ತಿಯ ಫಲವಾಗಿ ಸರ್ಕಾರ ಯಾವಾಗಲೂ ತುದಿಗಾಲಲ್ಲಿಯೇ ನಿಂತಿರಬೇಕಾಗುತ್ತದೆ ಎಂದೂ ವಿಶ್ಲೇಷಿಸಿದ್ದಾರೆ.
ಭಾರತದ ಬಗ್ಗೆ ಜಾಗತಿಕ ದೃಷ್ಟಿಕೋನವು ಸಕಾರಾತ್ಮಕವಾಗಿರುವಾಗ, ಭಾರತದ ಅನೇಕ ಉದ್ಯಮಿಗಳು ಮಾತ್ರ ಎಚ್ಚರಿಕೆಯ ನಿಲುವು ತಳೆದಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡುವುದರ ಬಗ್ಗೆ ಅವರೆಲ್ಲ ಇನ್ನೂ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ ಎನ್ನುವುದು ಸಮಾವೇಶದಲ್ಲಿ ಶ್ರುತಪಟ್ಟಿತು.
ಸಮಾವೇಶದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹಣಕಾಸು ಸಚಿವ ಪಿ. ಚಿದಂಬರಂ ಅವರಂತೂ ತಮ್ಮ ಸರ್ಕಾರದ ಸಾಧನೆಯನ್ನು ಅತಿಶಯವಾಗಿ ಹೊಗಳಿದರು. ಒಂದು ವರ್ಷದ ಅವಧಿಯಲ್ಲಿ ಸರ್ಕಾರವು ಹಲವಾರು ವಲಯಗಳಿಗೆ ಸಂಬಂಧಿಸಿದಂತೆ ಅತ್ಯಂತ ತ್ವರಿತವಾಗಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದು, ಅದೇ ಧೋರಣೆ ಮುಂದುವರೆಯುವ ಭರವಸೆಯನ್ನೂ ನೀಡಿದರು. ಹಿತಾನುಭವ ಬರೀ ಭ್ರಮೆಯಲ್ಲ. ಅದೊಂದು ವಾಸ್ತವ ಎಂದು ಪ್ರತಿಪಾದಿಸಿದ ಚಿದಂಬರಂ, ಶೀಘ್ರದಲ್ಲಿಯೇ ಆರ್ಥಿಕ ವೃದ್ಧಿ ದರ ಶೇ 8ರಷ್ಟು ಆಗಲಿದೆ ಎಂದೂ ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದರು.
ಅನೇಕ ಅಂತರರಾಷ್ಟ್ರೀಯ ಮೌಲ್ಯಮಾಪನಾ ಸಂಸ್ಥೆಗಳೂ ಇತ್ತೀಚೆಗೆ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿವೆ. ‘ಮೂಡಿ’ ಸಂಸ್ಥೆಯೂ ಈಗ ಹೊಗಳಿಕೆಯ ಸಾಲಿಗೆ ಸೇರ್ಪಡೆಯಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿಯು ಕ್ರಮೇಣ ಬದಲಾವಣೆಯ ಹಾದಿಗೆ ಮರಳುತ್ತಿದೆ ಎಂದು ಭಾಸವಾದರೂ ಕೇಂದ್ರ ಸರ್ಕಾರದ ಆಡಳಿತ ವೈಖರಿ ಅದರಲ್ಲೂ ಬಯಲಿಗೆ ಬಂದಿರುವ ಭ್ರಷ್ಟಾಚಾರ ಪ್ರಕರಣಗಳು ವಿವಾದದ ಕೇಂದ್ರಬಿಂದುಗಳಾಗಿವೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿನ ಆಶಯ ಉಲ್ಲೇಖಿಸುವುದು ಇಲ್ಲಿ ಅಪ್ರಸ್ತುತವೇನೂ ಆಗಲಾರದು. ದಕ್ಷ ಆಡಳಿತಕ್ಕೆ ಒತ್ತು ನೀಡಿರುವ ಮುಖರ್ಜಿ ಅವರು, ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ಗಂಭೀರ ಸ್ವರೂಪದ ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಭಾರತ ತನ್ನೆಲ್ಲ ಸಂಪನ್ಮೂಲಗಳನ್ನು ಸದುಪಯೋಗ ಮಾಡಿಕೊಳ್ಳಲು ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಸಮರ್ಥ ನಾಯಕತ್ವದ ಪ್ರಶ್ನೆಯೇ ಈಗ ಮುಖ್ಯವಾಗಿದೆ.
ಈ ಎಲ್ಲ ಅನುಮಾನ, ಪ್ರಶ್ನೆಗಳು ಏನೇ ಇರಲಿ, 2015ರ ದಾವೋಸ್ ಸಮಾವೇಶದಲ್ಲಿ ಭಾರತವು ತನಗೆ ಸಿಗಬೇಕಾದ ನ್ಯಾಯಬದ್ಧವಾದ ಈ ಹಿಂದಿನ ಸ್ಥಾನಮಾನ ಮತ್ತೆ ಪಡೆಯುವಂತಾಗಲಿ ಎಂದು ಆಶಿಸೋಣ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.